ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಅದರಲ್ಲಿ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವುದೂ ಆಗಿತ್ತು. ಅದರಂತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ತಲಾ 10 ಕೆಜಿ ಅಕ್ಕಿ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರದ ಅಧೀನ ಸಂಸ್ಥೆಗೆ ಪತ್ರ ಬರೆದು ಹೆಚ್ಚುವರಿ ಅಕ್ಕಿಗೆ ಮನವಿ ಮಾಡಿತ್ತು. ಮಾರುಕಟ್ಟೆ ದರ 32 ರೂಪಾಯಿ ನೀಡುವುದಾಗಿ ಪ್ರಸ್ತಾವನೆಯನ್ನೂ ಸಲ್ಲಿಸಿತ್ತು. ಮೊದಲಿಗೆ ಒಪ್ಪಿಕೊಂಡಿದ್ದ ಸಂಸ್ಥೆ, ಆ ಬಳಿಕ ಉಲ್ಟಾ ಹೊಡೆದಿತ್ತು. ಆ ನಿರ್ಧಾರದ ಹಿಂದೆ ಕೇಂದ್ರದ ಬಿಜೆಪಿ (Bjp) ಸರ್ಕಾರದ ಸೂಚನೆ ಇದೆ ಎನ್ನುವುದು ಎಲ್ಲರಿಗೂ ಗೊತ್ತಾಗಿತ್ತು. ಅನುಮತಿ ಕೊಟ್ಟು ನಂತರ ಇಲ್ಲ ಎಂದಿದ್ದನ್ನು ಸಿಎಂ ಸಿದ್ದರಾಮಯ್ಯ (Siddaramiah) ಟ್ವೀಟ್ ಮಾಡಿ ಬಹಿರಂಗ ಮಾಡಿದ್ದರು. ಇದೀಗ ಕೇಂದ್ರ ಸರ್ಕಾರ 29 ರೂಪಾಯಿಗೆ ಅಕ್ಕಿ ವಿತರಣೆ ಮಾಡುವ ನಿರ್ಧಾರ ಮಾಡಿದೆ.

ಆಹಾರ ಪದಾರ್ಥಗಳ ಬೆಲೆ ಗಗನಕ್ಕೆ ಏರಿದೆ ಎನ್ನುವ ಕೂಗು ಸಮಾಜದಲ್ಲಿ ಹೆಚ್ಚಾಗಿದೆ. ಇದನ್ನು ಮನಗಂಡಿರುವ ಕೇಂದ್ರ ಸರ್ಕಾರ ಲೋಕಸಭಾ ಚುನಾವಣೆಯಲ್ಲಿ ಬೆಲೆ ಏರಿಕೆ ಬಿಸಿ ತಟ್ಟದಂತೆ ಮಾಡಲು ಆಹಾರ ಪದಾರ್ಥಗಳನ್ನು ರಿಯಾಯ್ತಿ ದರದಲ್ಲಿ ಮಾರಾಟ ಮಾಡುವ ಕೆಲಸಕ್ಕೆ ಕೈಹಾಕಿದೆ. ಅದರಲ್ಲೂ ಮಧ್ಯಮ ವರ್ಗ ಹಾಗೂ ಬಡವರನ್ನು ಗುರಿಯಾಗಿಸಿ, 29 ರೂಪಾಯಿಗೆ ಅಕ್ಕಿ ನೀಡಲು ಮುಂದಾಗಿದ್ದು, ನಾಫೆಡ್ಸ್ ಬಳಿ ಚಾಲನೆ ನೀಡಲಾಗಿದೆ. ಮೊದಲ ಹಂತದಲ್ಲಿ 120 ಕ್ವಿಂಟಾಲ್ ಅಕ್ಕಿ ಬೆಂಗಳೂರಿಗೆ ಬಂದಿದ್ದು, ರೈತರು ಬೆಳೆಯುವ ಭತ್ತವನ್ನು ಖರೀದಿಸಿ ಜನರಿಗೆ ಕಡಿಮೆ ದರದಲ್ಲಿ ಅಕ್ಕಿ ಮಾರಾಟ ಮಾಡಲಾಗ್ತಿದೆ ಎನ್ನಲಾಗಿದೆ.

ಅಕ್ಕಿ ಮಾರಾಟಕ್ಕೆ 25 ವಾಹನಗಳನ್ನ ನಿಯೋಜನೆ ಮಾಡಲಾಗಿದ್ದು, ಬೆಂಗಳೂರಿನಲ್ಲಿ 5 ಕಡೆಗಳಲ್ಲಿ ಮೊಬೈಲ್ ವಾಹನಗಳು ಅಕ್ಕಿ ಮಾರಾಟ ಮಾಡಲಿವೆ. ಜನರು ಕೆಜಿಗೆ 29 ರೂಪಾಯಿ ಅಂತೆ ಅಕ್ಕಿ ಖರೀದಿ ಮಾಡಬಹುದು. ಜೊತೆಗೆ ಬೇರೆ ಜಿಲ್ಲೆಗಳಲ್ಲೂ ಕೂಡಾ ಅಕ್ಕಿ ವಿತರಣೆಗೆ ಸಿದ್ಧತೆ ಮಾಡಿಕೊಂಡಿದ್ದು ಮೊಬೈಲ್ ವಾಹನಗಳು ಸಂಚಾರ ಮಾಡಲಿವೆ ಎನ್ನಲಾಗಿದೆ. ಕೇವಲ ಮೊಬೈಲ್ ವಾಹನಗಳಲ್ಲದೆ, ರಿಲಯನ್ಸ್ ಮಾರ್ಟ್, ಫ್ಲಿಪ್ ಕಾರ್ಡ್, ಬ್ಲಿಂಕಿಟ್ ಸೇರಿದಂತೆ ಅನೇಕ ಆನ್ಲೈನ್ ಶಾಪಿಂಗ್ ಆ್ಯಪ್ಗಳಲ್ಲೂ ಭಾರತ್ ಅಕ್ಕಿ 29 ರೂಪಾಯಿಗೆ ಸಿಗಲಿದೆ. ಅಕ್ಕಿ ಖರೀದಿಸುವವರು ತಮ್ಮ ಮೊಬೈಲ್ ನಂಬರ್ ರಿಜಿಸ್ಟರ್ ಮಾಡಿಸಿ, ಅಕ್ಕಿಯನ್ನ ಪಡೆಯಬಹುದು. ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿಯನ್ನ ನೀಡಲಾಗುವುದು ಎಂದಿದ್ದಾರೆ.

ಭಾರತ್ ಬ್ರಾಂಡ್ನ ಅಕ್ಕಿ ಎಲ್ಲಿ ಸಿಗ್ತಿದೆ..? ಎಲ್ಲಿ ಮಾರಾಟ ಆಗ್ತಿದೆ ಅನ್ನೋದು ಮಾತ್ರ ಯಾರಿಗೂ ಗೊತ್ತಾಗ್ತಿಲ್ಲ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಡಾಲರ್ಸ್ ಕಾಲೋನಿಯಲ್ಲಿ ಅಕ್ಕಿ ವಿತರಣೆಗೆ ಚಾಲನೆ ನೀಡಿದ್ದರು. ಕಡಿಮೆ ಬೆಲೆಯಲ್ಲಿ 10 ಕೆ.ಜಿ ಅಕ್ಕಿ ಸಿಗ್ತಿರೋದು ಜನರಿಗೆ ಸಂತಸ ತಂದಿದೆ ಎಂದಿದ್ದರು. ಆದರೆ ಡಾಲರ್ಸ್ ಕಾಲೋನಿಯನ್ನು ಅತಿ ಬಡ ಜನರು ವಾಸ ಮಾಡ್ತಾರಾ..? ಎನ್ನುವುದನ್ನು ಸ್ವತಃ ಮಾಜಿ ಸಿಎಂ ಅವರೇ ಹೇಳಬೇಕು. ಇನ್ನು ಕೇಂದ್ರ ಸರ್ಕಾರ ಚುನಾವಣಾ ಪ್ರಚಾರಕ್ಕೆ ಬೇಕಿರುವ ವಿಚಾರವಾಗಿ ಕಡಿಮೆ ಬೆಲೆಗೆ ಅಕ್ಕಿ ವಿತರಣೆ ಅನ್ನೋದನ್ನು ಸುದ್ದಿ ಮಾಡಿಸಿದ್ಯಾ ಅನ್ನೋ ಅನುಮಾನ ಸಹಜವಾಗಿಯೇ ಜನರನ್ನು ಕಾಡುತ್ತಿದೆ. ಇನ್ನು ಪ್ರಧಾನಿ ಮೋದಿ ಅವರು ಕಡಿಮೆ ಬೆಲೆಗೆ ಅಕ್ಕಿ, ಬೇಳೆ ವಿತರಣೆ ಮಾಡಿದ್ದೇವೆ ಎಂದು ಮಾರುದ್ದ ಭಾಷಣ ಮಾಡ್ತಾರೆ. ಅಷ್ಟು ಟನ್, ಇಷ್ಟು ಟನ್ ಅಂತಾನೂ ಹೇಳ್ತಾರೆ. ಆದರೆ ಅದ್ಯಾರು ಖರೀದಿ ನೆಪದಲ್ಲಿ ರೈಸ್ಮಿಲ್ಗಳಿಗೆ ಸಾಗಿಸಿಕೊಳ್ತಾರೋ ಅನ್ನೋದನ್ನು ಪೊಲೀಸ್ರು ಅಥವಾ ಸಂಬಂಧ ಪಟ್ಟ ಅಧಿಕಾರಿಗಳು ಪತ್ತೆ ಮಾಡಿ ಜನರ ಮುಂದಿಡಬೇಕು. ಸದ್ಯಕ್ಕಂತ ಆನ್ಲೈನ್ನಲ್ಲೂ ಇಲ್ಲ, ಎಲ್ಲೂ ಅಕ್ಕಿ ಮಾರಾಟ ಕಣ್ಣಿಗೂ ಬೀಳ್ತಿಲ್ಲ.
#Siddaramiah #Modi #Centralgovernament #Rice






