
ಖಟಕಚಿಂಚೋಳಿ: ಸಮೀಪದ ಮಲ್ಕಾಪುರ ವಾಡಿ ಗ್ರಾಮದ ರೈತ ರವಿ ಪ್ರಭಾನೋರ್ ತಮ್ಮ ಎರಡು ಎಕರೆ ಪ್ರದೇಶದಲ್ಲಿ ಹಿರೇಕಾಯಿ ಬೆಳೆದಿದ್ದಾರೆ. ಬೆಳೆ ಹುಲುಸಾಗಿ ಬೆಳೆದಿದ್ದು ಅದಕ್ಕೆ ತಕ್ಕಂತೆ ಬೆಲೆಯೂ ಸಿಗುತ್ತಿದೆ. ಪದವಿ ಮಾಡಿರುವ ರವಿ ಅವರು ಹಿರಿಯರಿಂದ ಬಂದ 8 ಎಕರೆ ಜಮೀನಿನಲ್ಲಿ ಸಾಂಪ್ರಾದಾಯಿಕ ಬೆಳೆಯೊಂದಿಗೆ ವಿವಿಧ ಬಗೆಯ ತರಕಾರಿ, ಪಪ್ಪಾಯಿ ಕೂಡ ಬೆಳೆದಿದ್ದಾರೆ.

ಸದ್ಯ ಒಂದು ಎಕರೆಯಲ್ಲಿ ಬೆಳೆದ ಹಿರೇಕಾಯಿ ಬೆಳೆ ತುಂಬಾ ಹುಲುಸಾಗಿ ಬೆಳೆದಿದೆ. ಕೇವಲ 45-50 ದಿನಗಳಲ್ಲಿ ಕಟಾವಿಗೆ ಬರುವ ಹಿರೇಕಾಯಿಗೆ ಬೇಡಿಕೆ ಹೆಚ್ಚಿದೆ. ಮಾರುಕಟ್ಟೆಯಲ್ಲಿ ಹಿರೇಕಾಯಿ ಪ್ರತಿ ಕೆ.ಜಿಗೆ ₹50 ರಂತೆ ಮಾರಾಟ ಆಗುತ್ತಿದೆ.ಹೊಲ ಹದ ಮಾಡುವುದು, ಬಿತ್ತನೆ ಬೀಜ, ರಸಗೊಬ್ಬರ ಔಷಧ ಸಿಂಪಡಣೆ ಸೇರಿ ಸುಮಾರು ₹20 ಸಾವಿರ ಖರ್ಚಾಗಿದೆ.’ಹೀರೆಕಾಯಿ ಬೆಳೆಯಲು ಸುಮಾರು ₹20 ಸಾವಿರ ಖರ್ಚು ಮಾಡಿದ್ದೇನೆ. 45 ದಿನಗಳ ನಂತರ ಪ್ರತಿ ಎರಡು ದಿನಗಳಿಗೊಮ್ಮೆ ಫಸಲನ್ನು ಕಟಾವು ಮಾಡುತ್ತೇನೆ. ಪ್ರತಿ ಬಾರಿ ಸುಮಾರು 300 ಕೆ.ಜಿ ಇಳುವರಿ ಬರುತ್ತಿದೆ’ ಎನ್ನುತ್ತಾರೆ.’ಮಾರುಕಟ್ಟೆಯಲ್ಲಿ ಹೀರೆಕಾಯಿ ಕ್ವಿಂಟಲ್ಗೆ ₹5,000 ದಿಂದ ₹5,500ನಂತೆ ಮಾರಾಟ ಆಗುತ್ತಿದೆ. ಸದ್ಯ ನಾಲ್ಕು ಬಾರಿ ಕಟಾವು ಮಾಡಿದ್ದು ಖರ್ಚು ಮಾಡಿದ ಹಣ ಲಭಿಸಿದೆ. ಮುಂದೆ ಬರುವ ಹಣವೆಲ್ಲಾ ಲಾಭ’ ಎಂದು ಸಂತಸ ವ್ಯಕ್ತಪಡಿಸಿದ ರವಿ, ‘ಸ್ವಂತ ಜಮೀನಿನಲ್ಲಿ ಕೃಷಿ ಚಟುವಟಿಕೆ ಮಾಡುವುದರೊಂದಿಗೆ ಗ್ರಾಮದ ಇತರ ರೈತರ ಜಮೀನು ಲಾವಣಿ ಮಾಡಿ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತೇನೆ. ಇದರಿಂದ ಹೆಚ್ಚಿನ ಆದಾಯ ಬರುತ್ತಿದೆ’ ಎಂದರು.