ರಾಜ್ಯದಲ್ಲಿ ಹೊಸ ಪಕ್ಷ ಒಂದು ಉದಯವಾಗಲಿದ್ದು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ (ಬಿಎಸ್ವೈ) ಹಾಗೂ ಎಚ್.ಡಿ ಕುಮಾರಸ್ವಾಮಿ ಅವರು ಆ ಹೊಸ ಪಕ್ಷದ ನೇತೃತ್ವ ವಹಿಸಲಿದ್ದಾರೆ ಎಂಬ ಸುದ್ದಿ ಈಗ ಹರಿದಾಡುತ್ತಿದೆ.
ಇದಕ್ಕೂ ಮುನ್ನ ಈ ಇಬ್ಬರೂ ನಾಯಕರು ಒಂದಾಗಲಿದ್ದಾರೆ ಎಂಬ ಮಾತುಗಳು 2019 ರಿಂದ ಕೇಳಿ ಬಂದಿದ್ದವು. ಇಂತಹದ್ದೊಂದು ಪ್ರಶ್ನೆ ಕಳೆದ ವಿಧಾನಸಭೆ ಚುನಾವಣೆಗೂ ಎರಡು ವರ್ಷದ ಹಿಂದೆಯೇ ಕೇಳಿ ಬಂದಿತ್ತು, ಆದರೆ ಈಗ ಈ ವಿಚಾರಕ್ಕೆ ಮತ್ತೆ ಜೀವ ಬಂದಿದೆ. ಅದಕ್ಕೆ ಮುಖ್ಯ ಕಾರಣ ರಾಜ್ಯದ ಇಬ್ಬರು ಮಾಜಿ ಮುಖ್ಯಮಂತ್ರಿಗಳ ವಿದೇಶ ಪ್ರವಾಸ.
ವಿದೇಶ ಪ್ರವಾಸದಲ್ಲಿ ಬಿಎಸ್ವೈ ಮತ್ತು ಎಚ್ಡಿಕೆ
ರಾಜ್ಯದ ಪ್ರಮುಖ ರಾಜಕೀಯ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಅವರು ವಿದೇಶ ಪ್ರವಾಸದಲ್ಲಿದ್ದಾರೆ. ಅವರ ಈ ವಿದೇಶ ಪ್ರವಾಸದ ಬಗ್ಗೆ ಈಗ ರಾಜಕೀಯ ಬಣ್ಣ ಪಡೆದುಕೊಂಡಿದೆ.
ಸಿಂಗಪುರದ ನಂತರ ಈಗ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಅವರು ಅಲ್ಲೇ ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ಲೆಕ್ಕಾಚಾರಗಳನ್ನು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇದರ ನಡುವೆ ಈಗ ಬಿಎಸ್ವೈ ಸಹ ವಿದೇಶ ಪ್ರವಾಸವನ್ನು ಬೆಳೆಸಿದ್ದು ಯುರೋಪ್ನಲ್ಲಿ ಎಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆಯನ್ನು ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಶಾಂತ್ ಕಿಶೋರ್ ಭೇಟಿಯಾಗಿದ್ದ ವಿಜಯೇಂದ್ರ..!
2022ರಲ್ಲಿ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪನವರನ್ನು ಕಡೆಗಣನೆ ಮಾಡಲಾಗುತ್ತಿದೆ ಎಂಬುದು ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಹೀಗಾಗಿ ವಿಜೇಂದ್ರ ಅವರು ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಅವರನ್ನು ಭೇಟಿ ಮಾಡಿ ಮಾತುಕತೆಯನ್ನು ನಡೆಸಿದ್ದರು ಎನ್ನಲಾಗಿತ್ತು.
ಈ ವೇಳೆ ಪ್ರಶಾಂತ್ ಕಿಶೋರ್, ರಾಜ್ಯದಲ್ಲಿ ಹೊಸ ಪಕ್ಷ ಅಸ್ತಿತ್ವಕ್ಕೆ ಬಂದರೆ ಅದು ಕೆಜೆಪಿ 2 ಆಗಲಿದೆ ಅದರ ಬದಲು ರಾಜ್ಯದಲ್ಲಿ ಈಗಾಗಲೇ ಅಸ್ತಿತ್ವದಲ್ಲಿ ಇರುವ ಜೆಡಿಎಸ್ ಪಕ್ಷದೊಂದಿಗೆ ಹೊಸ ಪಕ್ಷ ಮೈತ್ರಿ ಮಾಡಿಕೊಂಡರೆ ಮುಂಬರುವ ಚುನಾವಣೆಯಲ್ಲಿ ಒಂದಷ್ಟು ಯಶಸ್ಸು ಕಾಣಲು ಸಾಧ್ಯವಿದೆ ಎಂದು ಸಲಹೆ ನೀಡಿದ್ದರಂತೆ.
ಆದರೆ ಇದು ಆ ಸಂದರ್ಭದಲ್ಲಿ ಸಾಧ್ಯವಾಗದ ಮಾತಾಗಿತ್ತು. ಏಕೆಂದರೆ ಚುನಾವಣೆಗೆ ಆಗ ಒಂದು ವರ್ಷ ಬಾಕಿ ಇದ್ದ ಸಂದರ್ಭದಲ್ಲಿ ಹೊಸ ಪಕ್ಷ ಅಸ್ತಿತ್ವಕ್ಕೆ ಬಂದರೆ ಅದು ಜೆಡಿಎಸ್ನೊಂದಿಗೆ ಮೈತ್ರಿ ಮಾಡಿಕೊಂಡರೆ ಚುನಾವಣಾ ಪ್ರಚಾರದಿಂದ ಹಿಡಿದು ಸಾಕಷ್ಟು ಸಮಸ್ಯೆಗಳು ತಲೆದೋರುತ್ತವೆ ಎಂದು ಅಂದಾಜಿಸಲಾಗಿತ್ತು. ಹೀಗಾಗಿಯೇ ಬಿವೈ ವಿಜಯೇಂದ್ರ ಮತ್ತು ಬಿಎಸ್ವೈ ಅವರು ಹೊಸ ಪಕ್ಷದ ಕನಸು ಸದ್ಯಕ್ಕೆ ಬೇಡವೆಂದು ದೂರ ಉಳಿದಿದ್ದರು ಎಂದು ಮೂಲಗಳು ಹೇಳುತ್ತವೆ.
ಮತ್ತೆ ಮುನ್ನೆಲೆಗೆ ಬಂದ ನೂತನ ಪಕ್ಷದ ಸ್ಥಾಪನೆ ವಿಚಾರ
ಈಗ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮುಗಿದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಬಿಜೆಪಿಯಲ್ಲಿ ಇದೀಗ ಅಲ್ಲೋಲಕಲ್ಲ ಸೃಷ್ಟಿಯಾಗಿದ್ದು ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷರು ಇಲ್ಲದೆ ಬಿಜೆಪಿ ಹಲವು ಸಂಕಷ್ಟಗಳನ್ನು ಎದುರಿಸುತ್ತಿದೆ. ಜತೆಗೆ ಜೆಡಿಎಸ್ ಕೂಡ ಈಗ ಸದ್ಯದ ಮಟ್ಟಿಗೆ ಹಲವು ಸಂಕಷ್ಟಗಳನ್ನು ಎದುರಿಸುತ್ತಿದೆ. ಹೀಗಾಗಿ ಈ ಸಂದರ್ಭದಲ್ಲಿ ರಾಜ್ಯದಲ್ಲಿ ಹೊಸ ಪಕ್ಷ ಅಧಿಕಾರಕ್ಕೆ ಬಂದು ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡರೆ ಕರ್ನಾಟಕದಲ್ಲಿ ತೃತೀಯರಂಗದ ರಾಜಕಾರಣ ಸಾಧ್ಯವಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಬಿಎಸ್ವೈ ನೇತ್ರದಲ್ಲಿ ಹೊಸ ಪಕ್ಷ ಉದಯವಾದರೆ ರಾಜ್ಯದಲ್ಲಿ ಏನಾಗುತ್ತದೆ?
ಸದ್ಯದ ಮಟ್ಟಿಗೆ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಹೊಸ ಪಕ್ಷ ಬಂದರೆ, ಅವುಗಳಿಂದ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳಿಗೂ ಬಹಳ ದೊಡ್ಡ ನಷ್ಟ ಉಂಟಾಗಲಿದೆ. ಯಡಿಯೂರಪ್ಪ ಅವರು ಬಿಜೆಪಿಯನ್ನು ತೊರೆದರೆ ಬಿಜೆಪಿಯಲ್ಲಿ ಪ್ರಬಲ ಲಿಂಗಾಯಿತ ನಾಯಕರು ಇಲ್ಲದಂತೆ ಆಗುತ್ತದೆ. ಇದರಿಂದ ಬಿಜೆಪಿಗೆ ಅತಂತ್ರ ಪರಿಸ್ಥಿತಿ ಬರಲಿದೆ. ಅಲ್ಲದೆ ಬಿಜೆಪಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಡಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಏಕೆಂದರೆ ಇದೀಗ ಪ್ರಬಲ ಸಮುದಾಯದ ನಾಯಕರು ಕಾಂಗ್ರೆಸ್ ಮತ್ತು ಜೆಡಿಎಸ್ನಲ್ಲಿ ಇದ್ದಾರೆ.
ಬಿಎಸ್ವೈ ಮತ್ತೊಂದು ಹೊಸ ಪಕ್ಷ ಕಟ್ಟಿದರೆ, ಬಿಜೆಪಿಯ ಮೇಲಿನ ಅಸಮಾಧಾರಿತರೆಲ್ಲರೂ ಯಡಿಯೂರಪ್ಪನವರ ಹೊಸ ಪಕ್ಷಕ್ಕೆ ಸೇರಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಈಗಾಗಲೇ ರಾಜ್ಯ ಬಿಜೆಪಿಯಲ್ಲಿ ಬಿ.ಎಲ್ ಸಂತೋಷ್ ಬಣ ಮತ್ತು ಬಿ.ಎಸ್ ಯಡಿಯೂರಪ್ಪನವರ ಬಣ ಇಂದು ಇಬ್ಬಾಗವಾಗಿದೆ.
ಇನ್ನು ಸದ್ಯದ ಮಟ್ಟಿಗೆ ರಾಜ್ಯ ರಾಜಕಾರಣದಲ್ಲಿ ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷನ ಸ್ಥಾನಕ್ಕೆ ಸಂತೋಷ ಬಣದ ಪ್ರಮುಖರು ಆಯ್ಕೆಯಾಗುವ ಸಾಧ್ಯತೆಯಿದೆ. ಇಲ್ಲಿ ಯಡಿಯೂರಪ್ಪನವರ ಬಣಕ್ಕೆ ಹಿನ್ನಡೆಯಾಗುವ ಸಾಧ್ಯತೆಗಳು ದಟ್ಟವಾಗಿದೆ. ಹೀಗಾಗಿ ಯಡಿಯೂರಪ್ಪನವರು ಮತ್ತೊಂದು ಪಕ್ಷ ಕಟ್ಟಲಿದ್ದಾರೆ ಎಂಬ ಮಾತು ಪ್ರಬಲವಾಗಿ ಕೇಳಿ ಬರುತ್ತಿದೆ.
ಜೆಡಿಎಸ್ ತನ್ನ ಜಾತ್ಯತೀತ ಸಿದ್ದಾಂತವನ್ನು ಮುಂದುವರಿಸಿಕೊಂಡು ಹೋದರೆ ಕಾಂಗ್ರೆಸ್ಸಿಗೆ ಕೊಡಲಿ ಪೆಟ್ಟು ಬೀಳುವುದರಲ್ಲಿ ಯಾವುದೇ ರೀತಿಯಾದ ಅನುಮಾನವಿಲ್ಲ, ಈಗಾಗಲೇ ಆಡಳಿತರೂಢ ಕಾಂಗ್ರೆಸ್ ಪಕ್ಷದ ಒಳಗೆ ದಳ್ಳುರಿ ಪ್ರಾರಂಭವಾಗಿದ್ದು ಸಾಕಷ್ಟು ಜನ ಕಾಂಗ್ರೆಸ್ ಶಾಸಕರು ತಮ್ಮ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮುಂದಿನ ದಿನಗಳಲ್ಲಿ ಇವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಕೂಡ ಇದೆ. ಹೀಗಾಗಿ, ಹೊಸ ಪಕ್ಷ ಅಸ್ತಿತ್ವಕ್ಕೆ ಬಂದರೆ ಯಡಿಯೂರಪ್ಪನವರಿಗೆ ಹೆಚ್ಚು ಲಾಭ ಕೂಡ ಆಗಲಿದೆ ಎಂಬ ಮಾತುಗಳು ಸಹ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.
ಈ ಸುದ್ದಿ ಓದಿದ್ದೀರಾ? KRS ಜಲಾಶಯದಲ್ಲಿ ನೀರು ನಾಯಿಗಳು ಪ್ರತ್ಯಕ್ಷ, ಅಚ್ಚರಿ ವ್ಯಕ್ತ ಪಡಿಸಿದ ಸ್ಥಳೀಯರು
ಒಟ್ಟಾರೆಯಾಗಿ ಈಗ ವಿದೇಶದಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಭೇಟಿ ಮಾಡಿ ಮಾತುಕತೆಯನ್ನು ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಇದು ನಡೆದರೆ ರಾಜ್ಯದಲ್ಲಿ ನೂತನ ಪಕ್ಷ ಅಸ್ತಿತ್ವಕ್ಕೆ ಬರುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದು ಹಲವರು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಸದ್ಯಕ್ಕೆ ಈ ಎಲ್ಲಾ ಅನುಮಾನಗಳು ಬಗೆಹರಿಯಬೇಕಾದರೆ ಮುಂದಿನ ದಿನಗಳಲ್ಲಿ ಇಬ್ಬರು ಬಿಎಸ್ವೈ ಮತ್ತು ಎಚ್ಡಿಕೆ ಈ ಬಗ್ಗೆ ಸ್ಪಷ್ಟತೆಯನ್ನು ನೀಡಿದರೆ ಮಾತ್ರ ಎಲ್ಲಾ ರೀತಿಯಾದ ಅನುಮಾನಗಳು ಬಗೆಹರಿಯಲಿವೆ.