• Home
  • About Us
  • ಕರ್ನಾಟಕ
Saturday, June 28, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಪ್ರಜೆಗಳ ಕರ್ತವ್ಯ ಪಾಲನೆಗಿಂತಲೂ ಪ್ರತಿನಿಧಿಗಳ ಕರ್ತವ್ಯ ನಿಷ್ಠೆ ದೇಶಕ್ಕೆ ಮುಖ್ಯ (ಭಾಗ-೨)

ನಾ ದಿವಾಕರ by ನಾ ದಿವಾಕರ
February 2, 2022
in ಅಭಿಮತ
0
ಪ್ರಜೆಗಳ ಕರ್ತವ್ಯ ಪಾಲನೆಗಿಂತಲೂ ಪ್ರತಿನಿಧಿಗಳ ಕರ್ತವ್ಯ ನಿಷ್ಠೆ ದೇಶಕ್ಕೆ ಮುಖ್ಯ :  ಭಾಗ – ೧
Share on WhatsAppShare on FacebookShare on Telegram

ಈ ದೃಷ್ಟಿಯಿಂದ ನೋಡಿದಾಗ, “ಹಕ್ಕುಗಳಿಗೆ ಹೋರಾಡಿ ಸಮಯ ವ್ಯರ್ಥವಾಯಿತು, ಇನ್ನು ಕರ್ತವ್ಯದ ಕಡೆ ಗಮನ ಕೊಡಿ ” ಎಂಬ ಪ್ರಧಾನಿ ಮೋದಿಯವರ ಕರೆಯನ್ನು ವಸ್ತುನಿಷ್ಠವಾಗಿಯೇ ಪರಿಶೀಲಿಸಬೇಕಾಗುತ್ತದೆ. ಕಳೆದ ಏಳು ದಶಕಗಳ ಆಡಳಿತ ವ್ಯವಸ್ಥೆಯಲ್ಲಿ ಆಡಳಿತಾರೂಢ ಪಕ್ಷಗಳು, ಕೇಂದ್ರ ಹಾಗೂ ರಾಜ್ಯ ಮಟ್ಟದಲ್ಲಿ ತಮ್ಮ ಸಾಂವಿಧಾನಿಕ ನೈತಿಕತೆ ಮತ್ತು ಜವಾಬ್ದಾರಿ ಎರಡನ್ನೂ ಮರೆತು ಹಲವಾರು ಜನವಿರೋಧಿ ನೀತಿಗಳನ್ನು ಜಾರಿಗೊಳಿಸಿರುವುದನ್ನು ಗಮನಿಸಬಹುದು. ಅನೇಕ ಸಂದರ್ಭಗಳಲ್ಲಿ ಪ್ರಜಾ ಸಮೂಹದಲ್ಲಿನ ಒಂದು ಗುಂಪು, ಅಥವಾ ಸಂಘಟನೆ ಅಥವಾ ಸಂಸ್ಥೆ ಈ ಕರ್ತವ್ಯದಿಂದ ವಿಮುಖವಾಗಿರುವುದು ಕಟುವಾಸ್ತವವೇ ಆದರೂ, ಈ ಉಲ್ಲಂಘನೆಯನ್ನು ನಿರ್ಬಂಧಿಸಲು, ನಿಗ್ರಹಿಸಲು ಮತ್ತು ಶಿಕ್ಷಿಸಲು ಕಾನೂನು ವ್ಯವಸ್ಥೆಯಲ್ಲಿ ಸಾಕಷ್ಟು ಮಾರ್ಗಗಳೂ ಇವೆ. 1976ರಲ್ಲಿ ಅಳವಡಿಸಲಾದ ಮೂಲಭೂತ ಕರ್ತವ್ಯಗಳು ಹೀಗಿವೆ.

ADVERTISEMENT
  1. ಸಂವಿಧಾನಕ್ಕೆ ಬದ್ಧವಾಗಿರಬೇಕು, ಸಂವಿಧಾನದ ಆದರ್ಶಗಳನ್ನು ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸಬೇಕು.
  2. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಅನುಸರಿಸಲಾದ ಉದಾತ್ತ ಚಿಂತನೆಗಳನ್ನು ಮತ್ತು ಧ್ಯೇಯೋದ್ದೇಶಗಳನ್ನು ಸಂರಕ್ಷಿಸಿ ಅನುಸರಿಸಬೇಕು.
  3. ದೇಶದ ಸಾರ್ವಭೌಮತ್ವ, ಏಕತೆ ಮತ್ತು ಅಖಂಡತೆಯನ್ನು ಕಾಪಾಡಬೇಕು.
  4. ಅಗತ್ಯವೆನಿಸಿದಲ್ಲಿ ದೇಶದ ರಕ್ಷಣೆಗೆ ಸೇವೆ ಸಲ್ಲಿಸಲು ಸಜ್ಜಾಗಿರಬೇಕು.
  5. ಭಾರತದ ಸಮಸ್ತ ಪ್ರಜೆಗಳ ನಡುವೆ ಸೌಹಾರ್ದತೆ, ಭ್ರಾತೃತ್ವ ಮತ್ತು ಸಮಾನತೆಯನ್ನು ಕಾಪಾಡಬೇಕು ಮತ್ತು ಮತ,, ಧರ್ಮ, ಜಾತಿಯ ವೈವಿಧ್ಯತೆಗಳನ್ನು ಸಮ್ಮಾನಿಸಬೇಕು, ಮಹಿಳೆಯರ ಘನತೆಯನ್ನು ಸಮ್ಮಾನಿಸಬೇಕು.
  6. ನಮ್ಮ ದೇಶದ ಬಹುತ್ವ ಸಂಸ್ಕೃತಿಯ ಪರಂಪರೆಯನ್ನು ರಕ್ಷಿಸಬೇಕು.
  7. ಅರಣ್ಯ, ನಿಸರ್ಗ ಸಂಪತ್ತು ಮತ್ತು ಸಂಪನ್ಮೂಲಗಳನ್ನು, ಜೀವ ವೈವಿಧ್ಯತೆಯನ್ನು ಸಂರಕ್ಷಿಸಬೇಕು.
  8. ವೈಜ್ಞಾನಿಕ ಮನೋಭಾವ, ಮಾನವೀಯತೆ, ವೈಚಾರಿಕತೆ ಮತ್ತು ಸುಧಾರಣಾ ಮನೋಭಾವವನ್ನು ರೂಢಿಸಿಕೊಳ್ಳಬೇಕು
  9. ಸಾರ್ವಜನಿಕ ಆಸ್ತಿಪಾಸ್ತಿಯನ್ನು ರಕ್ಷಿಸುವುದೇ ಇಲ್ಲದೆ, ಹಿಂಸಾತ್ಮಕ ಮಾರ್ಗಗಳನ್ನು ತೊರೆಯಬೇಕು.
  10. ಎಲ್ಲ ಕ್ಷೇತ್ರಗಳಲ್ಲೂ ಉನ್ನತ ಸಾಧನೆ ಮಾಡಲು ಅನುಕೂಲಕರವಾದ ವಾತಾವರಣ ಸೃಷ್ಟಿಸಬೇಕು.
  11. ತಂದೆ ತಾಯಿಯರು ಮತ್ತು ಪೋಷಕರು ತಮ್ಮ ಮಕ್ಕಳಿಗೆ 6 ರಿಂದ 14 ವರ್ಷದ ಒಳಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು.

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತಾರೂಢ ಸರ್ಕಾರವೂ ಸಹ ಸಾರ್ವಭೌಮ ಪ್ರಜೆಗಳಷ್ಟೇ ಹಕ್ಕು ಮತ್ತು ಬಾಧ್ಯತೆಗಳನ್ನು ಹೊಂದಿರುತ್ತದೆ. ಜನರಿಂದಲೇ ಆಯ್ಕೆಯಾಗುವ ಸರ್ಕಾರವನ್ನು ಒಂದು ಕಾನೂನಾತ್ಮಕ, ಸಾಂವಿಧಾನಿಕ ವ್ಯಕ್ತಿ ಎಂದೇ ಪರಿಗಣಿಸಲಾಗುತ್ತದೆ. ಹಾಗಾಗಿ ಸಂವಿಧಾನ ರೂಪಿಸಿರುವ ಮೂಲಭೂತ ಕರ್ತವ್ಯಗಳನ್ನು ಪಾಲಿಸುವುದು ಸರ್ಕಾರದ ಆದ್ಯತೆಯೂ ಆಗಿರಬೇಕಲ್ಲವೇ ? ಆದರೆ ಕಳೆದ ಏಳು ವರ್ಷಗಳ ನರೇಂದ್ರ ಮೋದಿ ಸರ್ಕಾರದ ಆಡಳಿತವನ್ನು ಗಮನಿಸಿದಾಗ, ಈ ಎಲ್ಲ ಕರ್ತವ್ಯಗಳಲ್ಲೂ ವಿಫಲವಾಗಿರುವುದೇ ಹೆಚ್ಚು. ಸಂವಿಧಾನಕ್ಕೆ ಬದ್ಧವಾಗಿರಬೇಕು ಮತ್ತು ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆಯನ್ನು ಸಂರಕ್ಷಿಸಬೇಕು ಎನ್ನುವುದು ಸರ್ಕಾರಕ್ಕೂ ಅನ್ವಯಿಸುತ್ತದೆ. ಮೋದಿ ಸರ್ಕಾರ ತನ್ನ ಈ ಕರ್ತವ್ಯವನ್ನು ನಿರ್ಲಕ್ಷಿಸುತ್ತಲೇ ಬಂದಿದ್ದು, ನ್ಯಾಯಾಂಗವನ್ನೂ ಒಳಗೊಂಡಂತೆ ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನೂ ದುರ್ಬಲಗೊಳಿಸುತ್ತಾ ಬಂದಿದೆ.

ಅರಣ್ಯ ಮತ್ತಿತರ ನಿಸರ್ಗ ಸಂಪತ್ತು, ಸಂಪನ್ಮೂಲಗಳನ್ನು, ಸಾರ್ವಜನಿಕ ಆಸ್ತಿಪಾಸ್ತಿಯನ್ನು ಸಂರಕ್ಷಿಸುವುದು ಪ್ರಜೆಗಳ ಕರ್ತವ್ಯವಾದಷ್ಟೇ ಸರ್ಕಾರದ ಕರ್ತವ್ಯವೂ ಆಗಿರುತ್ತದೆ. ಹಾಗೆಯೇ ಸಮಾಜದಲ್ಲಿ ವೈಜ್ಞಾನಿಕ ಮನೋಭಾವ, ವೈಚಾರಿಕತೆಯನ್ನು ಪ್ರೋತ್ಸಾಹಿಸುವುದೂ ಸಹ ಸರ್ಕಾರದ ಆದ್ಯತೆಯಾಗಿರಬೇಕಾಗುತ್ತದೆ. ಭಾರತದ ಬಹುತ್ವ ಸಂಸ್ಕೃತಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ, ಸಾಮಾಜಿಕ ಸೌಹಾರ್ದತೆ ಮತ್ತು ಭ್ರಾತೃತ್ವವನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಜೆಗಳಿಗಿಂತಲೂ ಹೆಚ್ಚಿನ ಜವಾಬ್ದಾರಿ ಸರ್ಕಾರಗಳ ಮೇಲಿರುತ್ತದೆ. ನರೇಂದ್ರ ಮೋದಿ ಸರ್ಕಾರ ಈ ಕರ್ತವ್ಯಗಳನ್ನು ಪಾಲಿಸುವಲ್ಲಿ ಸಂಪೂರ್ಣ ವಿಫಲವಾಗಿರುವುದು, ಇತ್ತೀಚಿನ ಧರ್ಮಸಂಸತ್ತಿನಲ್ಲಿ ಮೊಳಗಿದ “ ಮುಸ್ಲಿಮರ ಸಾಮೂಹಿಕ ಹತ್ಯಾಕಾಂಡ ”ದ ಕರೆಯಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಈ ಬಗ್ಗೆ ಸರ್ಕಾರದ ಮತ್ತು ನಾಯಕರ ಮೌನ ಮತ್ತಷ್ಟು ಆತಂಕಕಾರಿಯಾಗಿ ಕಾಣುತ್ತದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಸಾಂವಿಧಾನಿಕ ಹಕ್ಕುಗಳೇ ಸಾರ್ವಭೌಮ ಎನಿಸಿಕೊಳ್ಳುತ್ತವೆ. ಸಾಂವಿಧಾನಿಕವಾಗಿ ಮೂಲಭೂತ ಕರ್ತವ್ಯಗಳನ್ನು ರೂಪಿಸಲಾಗಿದ್ದರೂ, ಈ ಕರ್ತವ್ಯಗಳನ್ನು ನಿಭಾಯಿಸುವುದನ್ನೇ ಹಕ್ಕು ಪ್ರತಿಪಾದನೆಗೆ ಪೂರ್ವ ಷರತ್ತಿನಂತೆ ಪರಿಗಣಿಸಲಾಗುವುದಿಲ್ಲ. ಈ ಧೋರಣೆಯೇ ನಿರಂಕುಶಾಧಿಕಾರಕ್ಕೆ ಎಡೆಮಾಡಿಕೊಡುತ್ತದೆ. ತನ್ನ ಕರ್ತವ್ಯ ಪಾಲನೆಯಲ್ಲಿ ವಿಫಲನಾದ ಯಾವುದೇ ಪ್ರಜೆ ತನ್ನ ಸಾಂವಿಧಾನಿಕ ಮೂಲಭೂತ ಹಕ್ಕುಗಳನ್ನು ಕಳೆದುಕೊಳ್ಳುವುದಿಲ್ಲ. ಈ ಅಂಶವನ್ನು ಭಾರತದ ಸಂವಿಧಾನ ರಚನೆಯ ಸಂದರ್ಭದಲ್ಲೇ ಸ್ಪಷ್ಟವಾಗಿ ಹೇಳಲಾಗಿದೆ. ಪ್ರಜೆಗಳ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದನ್ನು, ಕರ್ತವ್ಯ ನಿರ್ವಹಣೆಯ ಚೌಕಟ್ಟಿನಲ್ಲಿ ನಿಷ್ಕರ್ಷೆ ಮಾಡುವುದು ಸಂವಿಧಾನಕ್ಕೆ ಅಪಚಾರ ಎಸಗಿದಂತಾಗುತ್ತದೆ. ಪ್ರಜೆಗಳ ಹಕ್ಕುಗಳ ಉಲ್ಲಂಘನೆಯಲ್ಲಿ ಸರ್ಕಾರದ ಉತ್ತರದಾಯಿತ್ವ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಕರ್ತವ್ಯಪಾಲನೆಯ ನೆಪದಲ್ಲಿ ಈ ಉತ್ತರದಾಯಿತ್ವವನ್ನು ಮರೆಮಾಚುವ ಪ್ರಯತ್ನಗಳು ಸಂವಿಧಾನ ವಿರೋಧಿ ಎನಿಸಿಕೊಳ್ಳುತ್ತವೆ.

“ ಜನರು ತಮ್ಮ ಹಕ್ಕುಗಳ ಬಗ್ಗೆ ಮಾತನಾಡುವುದು ಒಂದು ಹಂತದವರೆಗೆ, ಒಂದು ಕಾಲಘಟ್ಟದಲ್ಲಿ, ಕೆಲವು ಸನ್ನಿವೇಶಗಳಲ್ಲಿ ಸರಿ ಎನಿಸಬಹುದು, ಆದರೆ ಇದೇ ವೇಳೆ ತಮ್ಮ ಮೂಲಭೂತ ಕರ್ತವ್ಯಗಳನ್ನು ನಿರ್ಲಕ್ಷಿಸುತ್ತಿರುವುದರಿಂದಲೇ ದೇಶ ದುರ್ಬಲವಾಗುತ್ತಿದೆ ” ಎಂದು ಪ್ರಧಾನಿ ಮೋದಿ ಹೇಳಿರುವುದನ್ನು ಈ ಹಿನ್ನೆಲೆಯಲ್ಲೇ ಪರಾಮರ್ಶಿಸಬೇಕಿದೆ. ವಾಸ್ತವವಾಗಿ ಭಾರತದ ದುರ್ಬಲವಾಗಿದ್ದರೆ ಅದಕ್ಕೆ ಕಾರಣ ಕಳೆದ ಏಳು ದಶಕಗಳ ಆಡಳಿತದಲ್ಲಿ ಸರ್ಕಾರಗಳು ತಮ್ಮ ಕರ್ತವ್ಯದಿಂದ ವಿಮುಖವಾಗಿರುವುದೇ ಕಾರಣವಾಗಿದೆ. ಪ್ರಸ್ತುತ ನರೇಂದ್ರ ಮೋದಿ ಸರ್ಕಾರವೂ ಇದಕ್ಕೆ ಹೊರತಾಗಿಲ್ಲ. ಸಂವಿಧಾನದ ಆಶಯಗಳನ್ನು ಪೂರೈಸುವ ನಿಟ್ಟಿನಲ್ಲಿ ಎಲ್ಲ ಸರ್ಕಾರಗಳು ತಮ್ಮ ಹೊಣೆಗಾರಿಕೆಯನ್ನು ಅರಿತು ಆಡಳಿತನೀತಿಗಳನ್ನು ರೂಪಿಸಿದ್ದಲ್ಲಿ ಇಂದು ಭಾರತ ಅನಕ್ಷರತೆ, ದಾರಿದ್ರ್ಯ, ಬಡತನ, ಹಸಿವು, ನಿರುದ್ಯೋಗ, ಶೋಷಣೆ, ಅಸ್ಪೃಶ್ಯತೆ, ಮಹಿಳಾ ದೌರ್ಜನ್ಯ ಮುಂತಾದ ಸಮಸ್ಯೆಗಳ ಆಗರವಾಗುತ್ತಿರಲಿಲ್ಲ. ಇಂದಿಗೂ ಸಹ ಈ ಸಮಸ್ಯೆಗಳು ಉಲ್ಬಣಿಸಲು ಸರ್ಕಾರಗಳ ಆಡಳಿತ ನೀತಿಗಳು, ಆರ್ಥಿಕ ನೀತಿಗಳೇ ಕಾರಣ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ.

74 ವರ್ಷಗಳ ಆಡಳಿತದಲ್ಲಿ ಭಾರತದ ಸರ್ಕಾರಗಳು ಸಾರ್ವಭೌಮ ಪ್ರಜೆಗಳ ಸಾಂವಿಧಾನಿಕ ಮೂಲಭೂತ ಹಕ್ಕುಗಳನ್ನೇ ಪರಿಪೂರ್ಣವಾಗಿ ಪೂರೈಸಲಾಗಿಲ್ಲ ಎನ್ನುವುದನ್ನು ಈ ಸಂದರ್ಭದಲ್ಲಿ ಗಮನಿಸಬೇಕಿದೆ. ಇಂದಿಗೂ ಸಹ ಒಂದು ಸ್ವಸ್ಥ ಸಮಾಜದ ಉನ್ನತಿಗೆ ಮತ್ತು ಬೆಳವಣಿಗೆಗೆ ಅತ್ಯವಶ್ಯವಾದ ಆರೋಗ್ಯ, ಉದ್ಯೋಗ ಮತ್ತು ಶಿಕ್ಷಣ ಭಾರತದ ಜನತೆಯ ಮೂಲಭೂತ ಹಕ್ಕುಗಳಲ್ಲ. ಈ ಹಕ್ಕುಗಳನ್ನು ದಶಕಗಳ ಹೋರಾಟದ ಮೂಲಕ ಪಡೆಯಲಾಗಿದೆ. ಆದಿವಾಸಿಗಳ ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡಲು ಆರು ದಶಕಗಳೇ ಬೇಕಾದವು. ಶಿಕ್ಷಣದ ಹಕ್ಕು ಕಾಯ್ದೆ ಜಾರಿಯಲ್ಲಿದ್ದರೂ ಅದು ಕಾರ್ಪೋರೇಟ್ ಔದ್ಯಮಿಕ ಹಿತಾಸಕ್ತಿಗಳ ಪರವಾಗಿರುವುದೇ ಹೊರತು, ತಳಸಮುದಾಯಗಳ ಪರ ಇಲ್ಲ. ಆರೋಗ್ಯ ಮತ್ತು ಉದ್ಯೋಗ ಜನರ ಮೂಲಭೂತ ಹಕ್ಕು ಎಂದಾಗಿದ್ದಲ್ಲಿ, ಕೋವಿದ್ ಸಂದರ್ಭದಲ್ಲಿನ ಅನೇಕ ಸಮಸ್ಯೆಗಳು ಉದ್ಭವಿಸುತ್ತಲೇ ಇರಲಿಲ್ಲ. ಜನತೆ ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ಪಾಲಿಸುವ ಮೂಲಕ ದೇಶದ ಪ್ರಗತಿಗೆ ಸಹಕಾರಿಯಾಗಬೇಕು ನಿಜ, ಆದರೆ ತಮ್ಮ ಘನತೆಯ ಜೀವನಕ್ಕೇ ಧಕ್ಕೆ ಉಂಟುಮಾಡುವಂತೆ ಜೀವನೋಪಾಯದ ಹಕ್ಕುಗಳನ್ನು ಕಳೆದುಕೊಳ್ಳುತ್ತಿರುವ ಜನತೆಯಿಂದ ಕರ್ತವ್ಯಪಾಲನೆಯನ್ನು ಪ್ರತಿಶತ ನಿರೀಕ್ಷಿಸುವುದೂ ಸಾಧ್ಯವಾಗುವುದಿಲ್ಲ ಅಲ್ಲವೇ?

ಪ್ರಧಾನಿ ನರೇಂದ್ರಮೋದಿ ಹೇಳಿದಂತೆ ಭಾರತದ ದುರ್ಬಲವಾಗಿರುವುದೇ ಆದರೆ ಅದು ಜನತೆಯ ಹಕ್ಕೊತ್ತಾಯಗಳಿಂದ ಆಗಿರುವುದಿಲ್ಲ, ಆಳುವವರ ಕರ್ತವ್ಯ ವಿಮುಖತೆ ಮತ್ತು ಭ್ರಷ್ಟತೆಯಿಂದ ಆಗಿರುವುದು. ಜನರು ತಮ್ಮ ಆರೋಗ್ಯ, ಶಿಕ್ಷಣ, ಉದ್ಯೋಗ, ಸಮಾನತೆ ಮತ್ತು ಘನತೆಯ ಬದುಕಿಗಾಗಿ ಹಕ್ಕೊತ್ತಾಯಗಳನ್ನು ಮಂಡಿಸುತ್ತಲೇ ಇರುತ್ತಾರೆ. ಇದು ಪ್ರಜೆಗಳ ಸಾಂವಿಧಾನಿಕ ಹಕ್ಕು. “ಇನ್ನು ಸಾಕು ಮಾಡಿ ಕರ್ತವ್ಯಗಳೆಡೆಗೆ ಗಮನಕೊಡಿ ” ಎಂದು ಹೇಳುವ ನೈತಿಕತೆ ಇರಬೇಕಾದರೆ ಸರ್ಕಾರಗಳು ತಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ಸಮರ್ಪಕವಾಗಿ , ಪ್ರಾಮಾಣಿಕವಾಗಿ ನಿರ್ವಹಿಸಬೇಕಾಗುತ್ತದೆ. ಭ್ರಷ್ಟಾಚಾರ, ಕೋಮುವಾದ, ಜಾತೀಯತೆ, ಜಾತಿ-ಮತ ದ್ವೇಷ, ಸ್ತ್ರೀದ್ವೇಷ, ಅಸಮಾನತೆ, ಶೋಷಣೆ ಈ ಎಲ್ಲ ಜ್ವಲಂತ ಸಮಸ್ಯೆಗಳಿಂದ ಮುಕ್ತವಾದ ಒಂದು ಸೌಹಾರ್ದಯುತ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದಲ್ಲಿ ಮಾತ್ರವೇ ಆಳುವ ವರ್ಗಗಳಿಗೆ ಹೀಗೆ ಆದೇಶಿಸುವ ನೈತಿಕ ಹಕ್ಕು ಇರಲು ಸಾಧ್ಯ.

Tags: BJPCongress PartyThe duty of the representatives is more important to the country than the duty of the citizensನರೇಂದ್ರ ಮೋದಿಬಿಜೆಪಿ
Previous Post

ಆಂಧ್ರಪ್ರದೇಶದ ಜಿನ್ನಾ ಟವರ್ ಹೆಸರು ಬದಲಾವಣೆಗೆ ಬಿಜೆಪಿ ಒತ್ತಾಯ : ತ್ರಿವರ್ಣ ಬಣ್ಣ ಬಳಿದು ವಿವಾದಕ್ಕೆ ತೆರೆ ಎಳೆದ YSR ಕಾಂಗ್ರೆಸ್

Next Post

ಚುನಾವಣಾ ಆಯೋಗ, ಪೆಗಾಸಸ್, ಇವೆಲ್ಲವೂ ಜನರ ಧ್ವನಿಯನ್ನು ಅಡಗಿಸುವ ಮೋದಿ ಸರ್ಕಾರದ ಅಸ್ತ್ರಗಳು : ರಾಹುಲ್ ಗಾಂಧಿ

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ್ದು ಹಿಂದುತ್ವವಾದಿಗಳು : ರಾಹುಲ್ ಗಾಂಧಿ

ಚುನಾವಣಾ ಆಯೋಗ, ಪೆಗಾಸಸ್, ಇವೆಲ್ಲವೂ ಜನರ ಧ್ವನಿಯನ್ನು ಅಡಗಿಸುವ ಮೋದಿ ಸರ್ಕಾರದ ಅಸ್ತ್ರಗಳು : ರಾಹುಲ್ ಗಾಂಧಿ

Please login to join discussion

Recent News

Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
Top Story

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
June 27, 2025
Top Story

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

by ಪ್ರತಿಧ್ವನಿ
June 27, 2025
Top Story

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

by ಪ್ರತಿಧ್ವನಿ
June 27, 2025
Top Story

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

by ಪ್ರತಿಧ್ವನಿ
June 27, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

June 27, 2025

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada