
—-ನಾ ದಿವಾಕರ—–
ಅಕ್ರಮ ಮಾರ್ಗಗಳಿಲ್ಲದ ಕಾರ್ಪೋರೇಟ್ ವ್ಯವಹಾರವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ
====
ಪ್ರಜಾಪ್ರಭುತ್ವದ ಔದಾತ್ಯ ಮತ್ತು ಉನ್ನತಾದರ್ಶಗಳು ಗ್ರಾಂಥಿಕವಾಗಿ ಎಷ್ಟೇ ಸುಂದರವಾಗಿ ಕಂಡರೂ, ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಕಾರ್ಪೋರೇಟ್ ಮಾರುಕಟ್ಟೆ ಶಕ್ತಿಗಳು ಆಳ್ವಿಕೆಗೆ ಹತ್ತಿರವಾದಷ್ಟೂ, ಅದರ ಆಂತರಿಕ ಸೌಂದರ್ಯ ವಿರೂಪಗೊಳ್ಳುತ್ತಾ ಹೋಗುತ್ತದೆ. ಇದು ಲಾಭಕೋರ ಬಂಡವಾಳ ವ್ಯವಸ್ಥೆ ಮತ್ತು ಅದರ ಆಸರೆಯಲ್ಲೇ ಬೆಳೆಯುವ ಕಾರ್ಪೋರೇಟ್ ಬಂಡವಾಳದ ಮಾರುಕಟ್ಟೆ ಪ್ರಾಬಲ್ಯ, ಆಡಳಿತ ಪ್ರಭಾವ ಮತ್ತು ಸಾಂಸ್ಥಿಕ ಅಡಿಪಾಯಗಳ ಮೂಲಕ ಎಲ್ಲ ದೇಶಗಳಲ್ಲೂ ಪ್ರಕಟವಾಗುತ್ತಲೇ ಹೋಗುತ್ತದೆ. ಸ್ವತಂತ್ರ ಭಾರತದ ಮೊದಲ ಮೂರು ದಶಕಗಳನ್ನು ಹೊರತುಪಡಿಸಿ, ಭಾರತದ ಆರ್ಥಿಕ ಬೆಳವಣಿಗೆಯನ್ನು ಗಮನಿಸಿದರೆ ಇದು ಮತ್ತಷ್ಟು ಸ್ಪಷ್ಟವಾಗುತ್ತದೆ. ಭಾರತ ನವ ಉದಾರವಾದವನ್ನು ಅಪ್ಪಿಕೊಂಡ 1980ರ ದಶಕದಿಂದ 2024ರವರೆಗೆ ಕಂಡಿರುವ ಕಾರ್ಪೋರೇಟ್ ಹಗರಣಗಳಿಗೆ ಈಗ ಅದಾನಿ ಗುಂಪಿನ ಮತ್ತೊಂದು ಪ್ರಸಂಗ ಸೇರ್ಪಡೆಯಾಗಿದೆ.
ಈ ಬಾರಿ ಹಣಕಾಸು ಭ್ರಷ್ಟಾಚಾರದ ಆರೋಪ ಬಂದಿರುವುದು ಅಮೆರಿಕದ ನ್ಯಾಯಾಲಯದಿಂದ. ಹಣಕಾಸು ಅವ್ಯವಹಾರ ಮತ್ತು ಪಿತೂರಿ ನಡೆಸಿರುವ ಗೌತಮ್ ಅದಾನಿ ಅವರ ಮೇಲಿನ ಆರೋಪವು ಕಳೆದ ವರ್ಷದ ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆಯ ಆರೋಪಗಳ ಹಿನ್ನೆಲೆಯಲ್ಲಿ ಮತ್ತಷ್ಟು ಸಂಚಲನ ಮೂಡಿಸಿದೆ. ಅಮೆರಿಕದ ಷೇರು ಪೇಟೆ ನಿಯಂತ್ರಣ ಸಂಸ್ಥೆ ಎಸ್ಇಸಿ, ಸಾರ್ವಜನಿಕ ಸಂಸ್ಥೆಯಾಗಿದ್ದು ಅದಾನಿ ಗ್ರೀನ್ ಎನರ್ಜಿ ಕಂಪನಿಯು ಭಾರತದಲ್ಲಿ ವಿದ್ಯುತ್ ಪೂರೈಕೆಯ ಒಪ್ಪಂದಗಳನ್ನು ಪಡೆದುಕೊಳ್ಳುವ ಸಲುವಾಗಿ ಇಲ್ಲಿನ ಕೆಲವು ರಾಜ್ಯಗಳ ಅಧಿಕಾರಿಗಳಿಗೆ 2100 ಕೋಟಿ ರೂಗಳಷ್ಟು ಲಂಚ ನೀಡಿದೆ ಎಂಬ ಆರೋಪಿಸಿರುವುದು ಅದಾನಿ ಸಮೂಹವನ್ನು ಮತ್ತೊಮ್ಮೆ ಭ್ರಷ್ಟಕೂಪದ ಸುಳಿಯಲ್ಲಿ ಸಿಲುಕಿಸಿದೆ.

ಆರೋಪಿ ಸ್ಥಾನದಲ್ಲಿ ಅದಾನಿ ಸಮೂಹ
ಅಮೆರಿಕದ ಕಾನೂನುಗಳನ್ನು ಉಲ್ಲಂಘಿಸಿರುವ ಆರೋಪದ ಮೇಲೆ ಫೆಡರಲ್ ಪ್ರಾಸಿಕ್ಯೂಟರ್ಗಳು ಭಾರತದ ಉದ್ದಿಮೆಯೊಂದರ ಮೇಲೆ ಆರೋಪ ಹೊರಿಸಿರುವುದನ್ನು ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ಈ ಹಿಂದೆ ಹಿಂಡನ್ಬರ್ಗ್ ಸಂಶೋಧನಾ ಸಂಸ್ಥೆಯು ಬಹಿರಂಗಪಡಿಸಿದ್ದ ಕೆಲವು ಭ್ರಷ್ಟಾಚಾರದ ಹಗರಣಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ಭಾರತ ಸರ್ಕಾರ ವಿಫಲವಾಗಿದೆ. ಈಗ ಅಮೆರಿಕದ ನ್ಯಾಯ ಇಲಾಖೆ ( Department of Justice) ಅದಾನಿ ಗ್ರೀನ್ ಎನರ್ಜಿ ಮತ್ತು ಅಜೂರ್ ಪವರ್ ಗ್ಲೋಬಲ್ ಲಿಮಿಟೆಡ್ ಕಂಪನಿಯ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಈ ಎರಡೂ ಉದ್ದಿಮೆಗಳು ಭಾರತೀಯ ಅಧಿಕಾರಿಗಳಿಗೆ ಲಂಚ ನೀಡುವ ಮೂಲಕ ಸೋಲಾರ್ ವಿದ್ಯುತ್ ಒಪ್ಪಂದಗಳನ್ನು ಪಡೆದುಕೊಳ್ಳಲು ಯತ್ನಿಸಿರುವುದಾಗಿ ಹೇಳಲಾಗಿದೆ. ಅಜೂರ್ ಪವರ್ ಗ್ಲೋಬಲ್ ಕಂಪನಿ ದೆಹಲಿಯಲ್ಲಿ ಮುಖ್ಯ ಕಚೇರಿಯನ್ನು ಹೊಂದಿದ್ದು ನ್ಯೂಯಾರ್ಕ್ನ ಷೇರು ಮಾರುಕಟ್ಟೆಯ ಲಿಸ್ಟ್ನಲ್ಲಿ ಸ್ಥಾನ ಗಳಿಸಿದೆ. 2019-20ರ ಅವಧಿಯಲ್ಲಿ ಭಾರತೀಯ ಸೌರ ಶಕ್ತಿ ನಿಗಮ (Solar Energy Corporation of India-SECI) ನೀಡಿದ್ದ ಟೆಂಡರ್ ಒಂದರಲ್ಲಿ ಅಜೂರ್ ಪವರ್ ಮತ್ತು ಅದಾನಿ ಗ್ರೀನ್ ಎನರ್ಜಿ ಕಂಪನಿಯ ಅಂಗಸಂಸ್ಥೆಯೊಂದು ಕರಾರು ಒಪ್ಪಂದವನ್ನು ತನ್ನದಾಗಿಸಿಕೊಂಡಿತ್ತು. ಸೌರ ಶಕ್ತಿಯ ಉತ್ಪಾದನೆ ಮತ್ತು ಪ್ರಸರಣದ ಹಕ್ಕುಗಳನ್ನು ಪಡೆದುಕೊಂಡಿತ್ತು.
ಈ ಒಪ್ಪಂದದ ಅನುಸಾರ ಅಜೂರ್ ಪವರ್ ಕಂಪನಿಯಿಂದ 4 ಗಿಗಾವ್ಯಾಟ್ ಮತ್ತು ಅದಾನಿ ಗ್ರೀನ್ ಅಂಗಸಂಸ್ಥೆಯಿಂದ 8 ಗಿಗಾವ್ಯಾಟ್ ಸೌರ ಶಕ್ತಿಯನ್ನು SECI ನಿಗಮಕ್ಕೆ ಪೂರೈಸಬೇಕಿತ್ತು. ಇದನ್ನು ನಿಗದಿತ ಬೆಲೆಗೆ ಖರೀದಿಸಿದ ನಂತರ SECI ವಿವಿಧ ರಾಜ್ಯಗಳ ವಿದ್ಯುತ್ ಪ್ರಸರಣ ಕಂಪನಿಗಳಿಗೆ ಸರಬರಾಜು ಮಾಡಬೇಕಿತ್ತು. ಆದರೆ ಈ ಎರಡೂ ಕಂಪನಿಗಳಲ್ಲಿ ನಮೂದಿಸಲಾಗಿದ್ದ ಅತಿಯಾದ ವಿದ್ಯುತ್ ದರಗಳ ಪರಿಣಾಮವಾಗಿ ಯಾವ ರಾಜ್ಯ ಸರ್ಕಾರಗಳೂ ಖರೀದಿಗೆ ಮುಂದಾಗಿರಲಿಲ್ಲ. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಗೌತಮ್ ಅದಾನಿ ಸಾಗರ್ ಅದಾನಿ, ವಿನೀತ್ ಜೈನ್ ಮತ್ತು ರಂಜಿತ್ ಗುಪ್ತಾ ಮುಂತಾದ ಕಂಪನಿ ಅಧಿಕಾರಿಗಳು ಭಾರತದ ಅಧಿಕಾರಿಗಳಿಗೆ ಲಂಚ ನೀಡುವ ಮೂಲಕ, SECI ನೊಡನೆ ವಿದ್ಯುತ್ ಮಾರಾಟ ಒಪ್ಪಂದಗಳನ್ನು (Power Sale Agreement) ಮಾಡಿಕೊಳ್ಳಲು ಪ್ರಚೋದಿಸಿದ್ದರು ಎಂದು ಅಮೆರಿಕದ ನ್ಯಾಯ ಇಲಾಖೆ ಆರೋಪಿಸಿದೆ.

ಈ ಒಪ್ಪಂದಗಳನ್ನು ಆಧರಿಸಿ ಅದಾನಿ ಗ್ರೀನ್ ಮತ್ತು ಅಜೂರ್ ಕಂಪನಿಗಳು SECI ನೊಡನೆ ವಿದ್ಯುತ್ ಖರೀದಿ ಒಪ್ಪಂದಗಳನ್ನು ಮಾಡಿಕೊಳ್ಳಲು ಸಾಧ್ಯವಾಗಿತ್ತು. ಈ ಅಕ್ರಮ ವ್ಯವಹಾರದಲ್ಲಿ ಭಾರತದ ಸರ್ಕಾರಿ ಅಧಿಕಾರಿಗಳಿಗೆ 2029 ಕೋಟಿ ರೂಗಳ ಲಂಚ ನೀಡಲಾಗಿದೆ ಎಂದು ಆರೋಪಿಸಲಾಗಿದೆ. 2021ರ ಜುಲೈ ಮತ್ತು 2022ರ ಫೆಬ್ರವರಿಯ ಅವಧಿಯಲ್ಲಿ ಒಡಿಷಾ, ಜಮ್ಮು ಕಾಶ್ಮೀರ, ತಮಿಳುನಾಡು, ಛತ್ರಿಸ್ ಘಡ್ ಮತ್ತು ಆಂಧ್ರಪ್ರದೇಶ ಸರ್ಕಾರಗಳು SECI ನೊಡನೆ ವಿದ್ಯುತ್ ಮಾರಾಟ ಒಪ್ಪಂದಗಳನ್ನು ಮಾಡಿಕೊಂಡಿದ್ದವು. ಡಿಸೆಂಬರ್ 2021ರಲ್ಲಿ ಆಂಧ್ರಪ್ರದೇಶದ ವಿದ್ಯುತ್ ಪ್ರಸರಣ ಕಂಪನಿಗಳು SECIನೊಡನೆ ವಿದ್ಯುತ್ ಮಾರಾಟ ಒಪ್ಪಂದಗಳನ್ನು ಮಾಡಿಕೊಂಡ ಹಿನ್ನೆಲೆಯಲ್ಲಿ 7 ಗಿಗಾವ್ಯಾಟ್ ಸೌರಶಕ್ತಿಯನ್ನು ಖರೀದಿಸಿದ್ದವು.
ಈ ವ್ಯವಹಾರಗಳು ನಡೆಯುತ್ತಿದ್ದ ಸಂದರ್ಭದಲ್ಲೇ ಸಾಗರ್ ಅದಾನಿ ತಮ್ಮ ಮೊಬೈಲ್ ಮೂಲಕ ಸರ್ಕಾರಿ ಅಧಿಕಾರಿಗಳಿಗೆ ನೀಡಲಾಗುವ ಲಂಚದ ಮೊತ್ತದ ವಿವರಗಳನ್ನು ಸಂಗ್ರಹಿಸುತ್ತಿದ್ದುದಾಗಿಯೂ, ಈ ಟಿಪ್ಪಣಿಗಳಲ್ಲಿ ಲಂಚ ನೀಡಲಾದ ಅಧಿಕಾರಿಯ ಹೆಸರು ಮತ್ತು ಅವರು ಪ್ರತಿನಿಧಿಸುವ ಪ್ರದೇಶ, ಹಣದ ಮೊತ್ತ ಹಾಗೂ ರಾಜ್ಯವು ಖರೀದಿಸುವ ಒಟ್ಟು ಸೌರವಿದ್ಯುತ್ ಪ್ರಮಾಣ ಇವೆಲ್ಲವನ್ನೂ ದಾಖಲಿಸಲಾಗಿದೆ ಎಂದೂ ಆಪಾದಿಸಲಾಗಿದೆ. ಗೌತಮ್ ಅದಾನಿ, ವಿನೀತ್ ಜೈನ್ ಮತ್ತು ಪಿತೂರಿಯಲ್ಲಿ ಭಾಗವಹಿಸಿರುವವರ ನಡುವೆ ಹಲವು ಸಮಾಲೋಚನೆಗಳು ನಡೆದಿರುವುದನ್ನೂ ಆರೋಪದಲ್ಲಿ ದಾಖಲಿಸಲಾಗಿದೆ. ಅಜೂರ್ ಪವರ್ ಕಂಪನಿಯು ಅದಾನಿ ಗ್ರೀನ್ ಕಂಪನಿಗೆ 650 ಮೆಗಾವ್ಯಾಟ್ ಖರೀದಿ ಒಪ್ಪಂದ ಪಡೆಯಲು 55 ಕೋಟಿ ರೂಗಳನ್ನೂ, 2 ಗಿಗಾವ್ಯಾಟ್ ಒಪ್ಪಂದ ಪಡೆಯಲು 583 ಕೋಟಿ ರೂಗಳನ್ನೂ ಲಂಚದ ರೂಪದಲ್ಲಿ ನೀಡಲು ಸಮ್ಮತಿಸಿತ್ತು ಎಂದು ಆಪಾದಿಸಲಾಗಿದೆ.

ಅಪರಾಧಿ ನಾನಲ್ಲ ಎನ್ನುವ ಪರಂಪರೆ
ಈ ಆಪಾದನೆಗಳಲ್ಲಿ ಹೇಳಿರುವಂತೆ ಆಂಧ್ರಪ್ರದೇಶದ ಅಂದಿನ ವೈಎಸ್ಆರ್ ಕಾಂಗ್ರೆಸ್ ಸರ್ಕಾರ ಮತ್ತು ತಮಿಳುನಾಡು ಸರ್ಕಾರಗಳು, ಈ ವ್ಯವಹಾರದಲ್ಲಿ ತಮ್ಮ ಪಾತ್ರವೇನೂ ಇಲ್ಲವೆಂದೂ ಹೇಳಿಯಾಗಿದೆ. ಭಾರತದ ರಾಜಕೀಯ ಸಂಸ್ಕೃತಿಯಲ್ಲಿ ಈ ರೀತಿಯ ಪ್ರತಿಕ್ರಿಯೆ ಅಪರೂಪವೇನಲ್ಲ. ತಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದ ಕೂಡಲೇ “ ಅಪರಾಧಿ ನಾನಲ್ಲ –ನಾನಲ್ಲ ” ಎಂದು ದೃಢೀಕರಿಸುವ ಮೂಲಕ ರಾಜಕೀಯ ಪಕ್ಷಗಳು ತಮ್ಮ ಪ್ರಾಮಾಣಿಕತೆಯನ್ನು ಬಿಂಬಿಸಲು ಯತ್ನಿಸುತ್ತವೆ. ಆದರೆ ಹಿಂಡನ್ಬರ್ಗ್ ಸಂಶೋಧನಾ ಸಂಸ್ಥೆಯ ವರದಿಯನ್ನು ತನಿಖೆ ಮಾಡುವಾಗಲೇ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಲಿ ( ಸೆಬಿ) ಸರಿಯಾದ ತನಿಖೆ ನಡೆಸಿ ಕ್ರಮ ಕೈಗೊಂಡಿದ್ದಲ್ಲಿ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಮಾನ ಎದುರಿಸುವುದಾದರೂ ತಪ್ಪುತ್ತಿತ್ತು.
ಭಾರತ ಅನುಸರಿಸುತ್ತಿರುವ ಆಪ್ತ ಬಂಡವಾಳಶಾಹಿ (Croney Capitalism) ಮಾರ್ಗದಲ್ಲಿ ಕಾರ್ಪೋರೇಟ್ ಉದ್ಯಮಿಗಳನ್ನು ಸರ್ಕಾರಗಳು ರಕ್ಷಿಸುವುದು ಹೊಸ ವಿದ್ಯಮಾನವೇನಲ್ಲ. ಇದು ಕಳೆದ ಮೂರು ನಾಲ್ಕು ದಶಕಗಳ ಅಧಿಕಾರ ರಾಜಕಾರಣದಲ್ಲಿ ಢಾಳಾಗಿ ಕಾಣಬಹುದಾದ ವಿದ್ಯಮಾನ. ತಮ್ಮ ಸಮೂಹದ ವಿರುದ್ಧ ಮಾಡಿರುವ ಆರೋಪಗಳೆಲ್ಲವೂ ನಿರಾಧಾರ ಎಂದು ಅದಾನಿ ಸಮೂಹ ಹೇಳಿದ್ದರೂ, ಈ ಮಾತುಗಳ ಸತ್ಯಾಸತ್ಯತೆಗಳು ತನಿಖೆಯ ನಂತರವಷ್ಟೇ ತಿಳಿಯುತ್ತದೆ. ಆರೋಪ ಎದುರಿಸುತ್ತಿರುವ ರಾಜ್ಯ ಸರ್ಕಾರಗಳಲ್ಲಿ ಬಿಜೆಪಿ ಆಡಳಿತದಲ್ಲಿರಲಿಲ್ಲ ಎಂಬ ಕಾರಣಕ್ಕೆ ಕೇಂದ್ರ ಬಿಜೆಪಿ ಸರ್ಕಾರ ಈ ಆರೋಪವನ್ನು ವಿರೋಧ ಪಕ್ಷಗಳ ಹೆಗಲಿಗೇರಿಸಿ ಸುಮ್ಮನಿರಲಾಗುವುದಿಲ್ಲ. ಏಕೆಂದರೆ ಇದು ದೇಶದ ಪ್ರತಿಷ್ಠೆ ಮತ್ತು ಘನತೆಯ ಪ್ರಶ್ನೆ.
ವಿದೇಶದ ಸಂಸ್ಥೆಯೊಂದರಿಂದ ಬಂದಿರುವ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಬೇಕಾದ್ದು ಜವಾಬ್ದಾರಿಯುತ ಸರ್ಕಾರದ ಕರ್ತವ್ಯ. ಅಮೆರಿಕದ ನ್ಯಾಯ ವ್ಯವಸ್ಥೆಯು ಬಿಗಿಯಾಗಿದ್ದು, ಒಂದು ವೇಳೆ ಅದಾನಿ ಸಮೂಹದ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು ಎಂದು ಸಾಬೀತಾದಲ್ಲಿ, ಆರೋಪ ಮಾಡಿದ ಸಂಸ್ಥೆ ಮತ್ತು ವ್ಯಕ್ತಿಯನ್ನು ಶಿಕ್ಷೆಗೊಳಪಡಿಸಲಾಗುತ್ತದೆ. ಅವರ ಪರವಾನಗಿಯನ್ನು ರದ್ದುಪಡಿಸಲಾಗುತ್ತಿದೆ. ಅಮೆರಿಕದಲ್ಲಿ ಕಾನೂನು ಲೆಕ್ಕಪರಿಶೋಧನೆಯ (Legal Audit) ವ್ಯವಸ್ಥೆ ಕ್ರಿಯಾಶೀಲವಾಗಿರುವುದಿಂದ, ಸುಲಭವಾಗಿ ಸುಳ್ಳು ಆರೋಪಗಳನ್ನು ಮಾಡಲಾಗುವುದಿಲ್ಲ. ಆದಾಗ್ಯೂ ಈ ಅಂಶಗಳನ್ನು ಬದಿಗಿಟ್ಟು ಭಾರತ ಸರ್ಕಾರವು ಸೂಕ್ತ ಕಾನೂನು ಕ್ರಮಗಳನ್ನು ಜರುಗಿಸಿ, ಸಮಗ್ರ ತನಿಖೆಯನ್ನು ನಡೆಸಬೇಕಿದೆ. ವಿರೋಧ ಪಕ್ಷಗಳು ಆಗ್ರಹಿಸಿರುವಂತೆ ಜಂಟಿ ಸಂಸದೀಯ ಸಮಿತಿಯು ತನಿಖೆ ನಡೆಸುವುದು ಸೂಕ್ತ ಎನಿಸುತ್ತದೆ.
ಭ್ರಷ್ಟ ಪರಂಪರೆ ಮತ್ತು ಭಾರತದ ಘನತೆ
ಬೋಫೋರ್ಸ್ನಿಂದ ಈಗಿನ ಅದಾನಿ ಹಗರಣದವರೆಗೆ ಭಾರತದ ಕಾರ್ಪೋರೇಟ್ ಆರ್ಥಿಕತೆ ಎದುರಿಸಿರುವ ಭ್ರಷ್ಟಾಚಾರದ ಹಗರಣಗಳು ಮಾರುಕಟ್ಟೆ ಆರ್ಥಿಕತೆಯೊಳಗಿನ ಅನೈತಿಕತೆಯನ್ನು ಎತ್ತಿತೋರಿಸುತ್ತದೆ. ಭಾರತದ ರಾಜಕೀಯ ಪಕ್ಷಗಳು ತಮ್ಮ ಮೂಗಿನ ನೇರಕ್ಕೆ ತಮ್ಮ ಆಡಳಿತಾವಧಿಯ ಹಗರಣಗಳನ್ನು ಸಮರ್ಥಿಸಿಕೊಳ್ಳುವುದರಲ್ಲಿ ನಿಷ್ಣಾತವಾಗಿವೆ. ಆದರೆ ಇದು ಅಂತಿಮ ಪರಿಹಾರ ಆಗುವುದಿಲ್ಲ. ಏಕೆಂದರೆ ಈ ಹಗರಣಗಳ ಭಾರವನ್ನು ತಡೆಯಲಾಗದೆ ಷೇರು ಮಾರುಕಟ್ಟೆಗಳು ಕುಸಿಯುವಾಗ ನಷ್ಟ ಅನುಭವಿಸುವುದು ಸಾಮಾನ್ಯ ಹೂಡಿಕೆದಾರರು. ತಮ್ಮ ಭವಿಷ್ಯಕ್ಕಾಗಿ ಇಂತಹ ಜಾಗತಿಕ ಕಂಪನಿಗಳ ಷೇರುಗಳಲ್ಲಿ ಹಣ ಹೂಡುವ ಮಧ್ಯಮ ವರ್ಗಗಳು ಅಪಾರ ನಷ್ಟ ಅನುಭವಿಸುತ್ತವೆ. ಹರ್ಷದ್ ಮೆಹ್ತಾ ಹಗರಣ ನಮ್ಮ ನೆನಪಿನಲ್ಲಿ ಇನ್ನೂ ಹಸಿರಾಗಿದೆ.

ಜನವರಿ 3 2024ರ ತನ್ನ ಆದೇಶದಲ್ಲಿ ಸುಪ್ರೀಂಕೋರ್ಟ್, ಹಿಂಡನ್ಬರ್ಗ್ ವರದಿಯ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಿ, ಭಾರತದ ಹೂಡಿಕೆದಾರರು ನಷ್ಟ ಅನುಭವಿಸಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ SEBI ಸಂಸ್ಥೆಗೆ ಆದೇಶ ನೀಡಿತ್ತು. ಬಹುಶಃ ಈ ತನಿಖೆಯನ್ನು SEBI ವಸ್ತುನಿಷ್ಠವಾಗಿ ನಡೆಸಿದ್ದಲ್ಲಿ, ಷೇರು ಮಾರುಕಟ್ಟೆಯನ್ನು ಅವಲಂಬಿಸಿರುವ ಭಾರತದ ತಳಸಮಾಜದ ಸಾಮಾನ್ಯ ಜನತೆಗೆ ಮಾರುಕಟ್ಟೆ ಆರ್ಥಿಕತೆಯಲ್ಲಿ ವಿಶ್ವಾಸ ಹೆಚ್ಚಾಗುತ್ತಿತ್ತು. ಷೇರು ಮಾರುಕಟ್ಟೆಯ ವ್ಯತ್ಯಯಗಳಿಗಿಂತಲೂ ಯೋಚಿಸಬೇಕಾದ್ದು, ಭಾರತದ ಕಾರ್ಪೋರೇಟ್ ಉದ್ದಿಮೆಯ ವಿಶ್ವಾಸಾರ್ಹತೆ ಮತ್ತು ಅಂತಾರಾಷ್ಟ್ರೀಯ ಸ್ಥಾನಮಾನಗಳನ್ನು. ಅದಾನಿ ಸಮೂಹವನ್ನು ಕಾಪಾಡುವ ಸಲುವಾಗಿ ಇದನ್ನು ಬಲಿಕೊಡಲಾಗುವುದಿಲ್ಲ ಎಂಬ ವಾಸ್ತವವನ್ನು ಕೇಂದ್ರ ಸರ್ಕಾರ ಅರ್ಥಮಾಡಿಕೊಳ್ಳಬೇಕಿದೆ.
ಅದಾನಿ ಎಂದರೆ ಭಾರತ ಏನಲ್ಲ. ತಮ್ಮ ಔದ್ಯಮಿಕ ಸಾಮ್ರಾಜ್ಯ ವಿಸ್ತರಣೆಗಾಗಿ ಭಾರತ ನೀಡಿರುವ ಅವಕಾಶಗಳನ್ನು ಪ್ರಾಮಾಣಿಕವಾಗಿ ಬಳಸಿಕೊಳ್ಳುವುದು ಅದಾನಿ ಆಗಲೀ ಯಾವುದೇ ಉದ್ಯಮಿಗಾಗಲೀ ನೈತಿಕತೆಯ ಪ್ರಶ್ನೆಯಾಗಬೇಕು. ಇಂತಹ ಉದ್ಯಮಗಳು ಅಕ್ರಮ ವ್ಯವಹಾರಗಳಲ್ಲಿ ತೊಡಗಿದಾಗ ಅದನ್ನು ಖಂಡಿಸುವ ನೈತಿಕತೆಯನ್ನು ರಾಜಕೀಯ ಪಕ್ಷಗಳೂ ರೂಢಿಸಿಕೊಳ್ಳಬೇಕು. ದೇಶದ ಭದ್ರತೆ, ಸುರಕ್ಷತೆ, ಅಖಂಡತೆಯ ಬಗ್ಗೆ ಸದಾ ಜಪಿಸುವ ಬಿಜೆಪಿಯಂತಹ ಪಕ್ಷಗಳು ಇದನ್ನು ವಿಶೇಷವಾಗಿ ಗಮನಿಸಬೇಕು. ಅಮೆರಿಕದ ನ್ಯಾಯ ಇಲಾಖೆ ಮಾಡಿರುವ ಗುರುತರ ಆರೋಪಗಳು ನಿರಾಧಾರ ಎಂದು ನಿರೂಪಿಸುವ ಜವಾಬ್ದಾರಿ ಆರೋಪಿ ಉದ್ಯಮಿಯ ಮೇಲಿರುತ್ತದೆ. ಈ ಅಕ್ರಮ ವ್ಯವಹಾರಗಳಲ್ಲಿ ಭಾಗಿಯಾಗಿರುವ, ಪಿತೂರಿಯಲ್ಲಿ ಸಹಕರಿಸಿರುವ ಭಾರತೀಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಜವಾಬ್ದಾರಿ ಭಾರತ ಸರ್ಕಾರದ ಮೇಲಿರುತ್ತದೆ.

ಈ ಪ್ರಕರಣದ ತಾರ್ಕಿಕ ಅಂತ್ಯ ಏನೇ ಆದರೂ, ನವ ಉದಾರವಾದ ಪೋಷಿಸುವ ಬಂಡವಾಳಶಾಹಿ ಆರ್ಥಿಕತೆಯಲ್ಲಿ ಕಾರ್ಪೋರೇಟ್ ಮಾರುಕಟ್ಟೆಯ ಪ್ರಭಾವ ಹೆಚ್ಚಾದಷ್ಟೂ, ಔದ್ಯಮಿಕ ವ್ಯಾವಹಾರಿಕ ಭ್ರಷ್ಟಾಚಾರ ಮತ್ತು ಆಡಳಿತ ವ್ಯವಸ್ಥೆಯೊಳಗಿನ ಹಣಕಾಸು ಭ್ರಷ್ಟಾಚಾರ ಹೆಚ್ಚಾಗುತ್ತಲೇ ಹೋಗುತ್ತದೆ ಎನ್ನುವುದು ವಾಸ್ತವ. ಕರ್ನಾಟಕದ ವಾಲ್ಮೀಕಿ, MUDA ಹಗರಣಗಳು ಇದನ್ನೇ ನಿರೂಪಿಸುತ್ತಿವೆ. ಭಾರತದ “ ರಾಜಕೀಯ ವಾಷಿಂಗ್ ಮೆಷಿನ್ಗಳು ಅಮೆರಿಕದಲ್ಲಿ ಕೆಲಸಕ್ಕೆ ಬರುವುದಿಲ್ಲ”. ಭಾರತವನ್ನು ಭ್ರಷ್ಟಾಚಾರ ಮುಕ್ತವಾಗಿಸುವ ಔದಾತ್ಯವಾಗಲೀ, ಉನ್ನತ ಧ್ಯೇಯವಾಗಲೀ ಮುಖ್ಯವಾಹಿನಿಯ ಯಾವುದೇ ಪಕ್ಷದ ಪ್ರಣಾಳಿಕೆಯಲ್ಲಿ ಇಲ್ಲದಿರುವುದರಿಂದ, ಈ ಕೆಲವು ಹಗರಣಗಳ ತಾರ್ತಿಕ ಅಂತ್ಯ ಭ್ರಷ್ಟಾಚಾರದ ಕೂಪವನ್ನು ಶುದ್ಧೀಕರಿಸುತ್ತದೆ ಎಂಬ ಭ್ರಮೆ ಇರಬೇಕಿಲ್ಲ. ಬಂಡವಾಳಶಾಹಿ ಅರ್ಥವ್ಯವಸ್ಥೆ ಭ್ರಷ್ಟಾಚಾರದ ಸಹಯೋಗದಲ್ಲೇ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತದೆ. ರಾಜಕೀಯ ಪಕ್ಷಗಳ ಪರಸ್ಪರ ದೋಷಾರೋಪಗಳು ಈ ವಿಸ್ತರಣೆಯ ಹಿಂದಿನ ಕರಾಳ ಜಗತ್ತನ್ನು ಮರೆಮಾಚುವ ಪರದೆಗಳಾಗಿ ಕಾರ್ಯನಿರ್ವಹಿಸುತ್ತವೆ.
ಭಾರತದ ಜನತೆಯಾದ ನಾವು ಈ ಭ್ರಷ್ಟ ಕೂಪದಿಂದ ಹೊರಬರುವ ಬಗೆ ಹೇಗೆ ಎಂದು ಯೋಚಿಸಬೇಕಿದೆ. ಸಂವಿಧಾನ ದಿನ, ನವಂಬರ್ 26, ಸಮೀಪಿಸುತ್ತಿದೆ. ಈ ಸಂದರ್ಭದಲ್ಲಾದರೂ ಇದರ ಬಗ್ಗೆ ಗಂಭೀರವಾಗಿ ಯೋಚಿಸೋಣ.
(ಈ ಲೇಖನದ ಮಾಹಿತಿಗಳನ್ನು : A bribery scheme to bag lucrative solar power deal – ದ ಹಿಂದೂ ವರದಿ 22 ನವಂಬರ್ 2024- ಇಲ್ಲಿಂದ ಪಡೆದುಕೊಳ್ಳಲಾಗಿದೆ.)
-೦-೦-೦-೦-