ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿ ಇವತ್ತಿಗೆ ಐದು ದಿನ. ಮಿಜೋರಾಂ ಚುನಾವಣಾ ಫಲಿತಾಂಶ ಪ್ರಕಟವಾಗಿ ಇಂದಿಗೆ ನಾಲ್ಕು ದಿನ.
ಫಲಿತಾಂಶ ಪ್ರಕಟವಾದ ನಾಲ್ಕೇ ದಿನದಲ್ಲಿ ತೆಲಂಗಾಣದಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಒಬ್ಬರು ದಲಿತ ಉಪ ಮುಖ್ಯಮಂತ್ರಿ, ಇಬ್ಬರು ಮಹಿಳಾ ಮಂತ್ರಿಗಳು ಒಳಗೊಂಡಂತೆ 12 ಮಂದಿಯ ಸರ್ಕಾರ ಕಾರ್ಯನಿರ್ವಹಣೆ ಶುರು ಮಾಡಿದೆ.
ಆದರೆ ಫಲಿತಾಂಶ ಬಂದು ಐದು ದಿನವಾದರೂ ಇನ್ನೂ ಗೆದ್ದಿರುವ ಮೂರು ರಾಜ್ಯಗಳಲ್ಲಿ ಬಿಜೆಪಿ ಇನ್ನೂ ತನ್ನ ಮುಖ್ಯಮಂತ್ರಿಗಳೆಂದು ಯಾರೆಂದು ತೀರ್ಮಾನಿಸಿಲ್ಲ. ಮಧ್ಯಪ್ರದೇಶ, ಛತ್ತೀಸ್ಗಢ, ರಾಜಸ್ಥಾನದಲ್ಲಿ ಕಮಲ ಪಕ್ಷ ಪ್ರಚಂಡ ಜಯ ಸಾಧಿಸಿದರೂ ಇನ್ನೂ ಹೊಸ ಮುಖ್ಯಮಂತ್ರಿ ಆಯ್ಕೆ ಸಂಬಂಧ ಶಾಸಕಾಂಗ ಪಕ್ಷದ ಸಭೆ ನಡೆದಿಲ್ಲ.
ಮೂರು ರಾಜ್ಯಗಳಲ್ಲಿ ಶಾಸಕಾಂಗ ಪಕ್ಷದ ಹೊಸ ನಾಯಕರ ಆಯ್ಕೆ ಸಂಬಂಧ ಬಿಜೆಪಿ ವೀಕ್ಷಕರನ್ನು ಆಯ್ಕೆ ಮಾಡಿದೆ.
ರಾಜಸ್ಥಾನಕ್ಕೆ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್, ಪ್ರಧಾನ ಕಾರ್ಯದರ್ಶಿಗಳಾದ ಸರೋಜ್ ಪಾಂಡೆ, ವಿನೋದ್ ತಾಡ್ವೆ ಅವರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ. ಮಧ್ಯಪ್ರದೇಶದ ವೀಕ್ಷಕರಾಗಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್, ಹಿಂದುಳಿದ ಮೋರ್ಚಾಗಳ ಅಧ್ಯಕ್ಷ ಕೆ ಲಕ್ಷ್ಮಣ್ ಮತ್ತು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಆಶಾ ಲಕ್ರಾ ಅವರನ್ನು ನೇಮಿಸಲಾಗಿದೆ. ಛತ್ತೀಸ್ಗಢಕ್ಕೆ ಕೇಂದ್ರ ಸಚಿವ ಅರ್ಜುನ್ ಮುಂಡಾ, ಸರ್ಬಾನಂದ್ ಸೋನಾವಾಲ್ ಮತ್ತು ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಕುಮಾರ್ ಅವರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ.
ವೀಕ್ಷಕರ ಕೆಲಸಗಳೇನು..?
ರಾಜ್ಯ ಮಟ್ಟದ ಘಟಕಗಳಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ರಾಷ್ಟ್ರೀಯ ಪಕ್ಷಗಳು ಆಯಾಯ ರಾಜ್ಯಗಳಿಗೆ ವೀಕ್ಷಕರನ್ನು ಕಳುಹಿಸಿಕೊಡುವುದು ವಾಡಿಕೆ. ವೀಕ್ಷಕರ ಸಮ್ಮುಖದಲ್ಲಿ, ಪಕ್ಷದ ರಾಜ್ಯ ಉಸ್ತುವಾರಿಗಳ ಸಮ್ಮುಖದಲ್ಲಿ ರಾಜ್ಯ ನಾಯಕರ ಅಭಿಪ್ರಾಯಗಳನ್ನು ಪಡೆದು ತೀರ್ಮಾನಗಳನ್ನು ಕೈಗೊಳ್ಳಲಾಗುತ್ತದೆ.
ವಿಧಾನಸಭಾ ಚುನಾವಣೆ ನಡೆದ ಬಳಿಕ ಮುಖ್ಯಮಂತ್ರಿ ಹುದ್ದೆಯ ಸ್ಪರ್ಧೆಯಲ್ಲಿರುವವರ ಜೊತೆಗೆ ಚರ್ಚಿಸಿ, ಅಸಮಾಧಾನಿತರನ್ನು ಸಮಾಧಾನಗೊಳಿಸಿ, ಶಾಸಕರ ಅಭಿಪ್ರಾಯ ಪಡೆದು ಶಾಸಕಾಂಗ ಪಕ್ಷದ ಹೊಸ ನಾಯಕ (ಮುಖ್ಯಮಂತ್ರಿ)ಯನ್ನು ಆಯ್ಕೆ ಮಾಡುವ ಪ್ರಕ್ರಿಯೆ ಎಲ್ಲವೂ ವೀಕ್ಷಕರ ಮೇಲುಸ್ತುವಾರಿಯಲ್ಲಿ ನಡೆಯುತ್ತದೆ.
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು ಮೇ 13ರಂದು. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಮತ್ತು ಉಳಿದ ಎಂಟು ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದು ಮೇ 20ರಂದು. ಅಂದರೆ ಫಲಿತಾಂಶ ಬಂದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲು ತೆಗೆದುಕೊಂಡ ಸಮಯ 7 ದಿನ.
ಈ ವೇಳೆ ಪ್ರಮುಖ ವಿರೋಧ ಪಕ್ಷ ಬಿಜೆಪಿ ಮತ್ತು ಜೆಡಿಎಸ್ ಮುಖ್ಯಮಂತ್ರಿ ಆಯ್ಕೆ ವಿಳಂಬದ ಬಗ್ಗೆ ಕಾಂಗ್ರೆಸ್ನ್ನು ಛೇಡಿಸಿದ್ದವು. ಈಗ ಮೂರು ರಾಜ್ಯಗಳ ಮುಖ್ಯಮಂತ್ರಿ ಆಯ್ಕೆ ವಿಳಂಬವನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಈಗ ಬಿಜೆಪಿಗೆ ಕಟುವಾಗಿ ಕುಟುಕಿದೆ.
ಚುನಾವಣಾ ಫಲಿತಾಂಶ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಸಿಎಂ ಆಯ್ಕೆ ಮಾಡಿದ್ದಾಯ್ತು, ಸಿಎಂ ಹಾಗೂ ಸಚಿವರ ಪ್ರಮಾಣವಚನ ಸ್ವೀಕರಿಸಿಯೂ ಆಯ್ತು.
ಆದರೆ ಇತರ ಮೂರು ರಾಜ್ಯಗಳಲ್ಲಿ ಒಂದು ರಾಜ್ಯದಲ್ಲೂ ಮುಖ್ಯಮಂತ್ರಿ ಆಯ್ಕೆ ಮಾಡಲು ಬಿಜೆಪಿಗೆ ಸಾಧ್ಯವಾಗಿಲ್ಲ.
ಕರ್ನಾಟಕದಲ್ಲಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು 6 ತಿಂಗಳು ತೆಗೆದುಕೊಂಡಂತೆ ಅಲ್ಲೂ 6 ತಿಂಗಳ ನಂತರ ಸಿಎಂ ಆಯ್ಕೆಯಾಗಬಹುದೇನೋ..!
ಎಂದು ಬಿಜೆಪಿಗೆ ಕಾಂಗ್ರೆಸ್ ಮೊಟಕಿದೆ.