ಸಿಎಂ ಸಿದ್ದರಾಮಯ್ಯ (Siddaramiah) ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj bommai) ನಡುವೆ ಟ್ವಿಟರ್ ವಾರ್ ನಡೆಯುತ್ತಿದೆ. ಕೇಂದ್ರ ಸರ್ಕಾರದ ಅನುದಾನದ ವಿಚಾರ ಇಟ್ಕೊಂಡು ಇಬ್ಬರು ನಾಯಕರ ನಡುವೆ ಆರೋಪ ಪ್ರತ್ಯಾರೋಪ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮಲಗಿದ್ದರ ಬಗ್ಗೆ ಟ್ವಿಟ್ (Tweet) ಮಾಡಿದ್ದ ಸಿಎಂ ಸಿದ್ದರಾಮಯ್ಯಗೆ ಕೌಂಟರ್ ಮಾಡಿದ್ದರು ಬಸವರಾಜ ಬೊಮ್ಮಾಯಿ. ಬಸವರಾಜ ಬೊಮ್ಮಾಯಿಗೆ ಪ್ರತಿಯಾಗಿ ಕೇಂದ್ರ ಸರ್ಕಾರದ ಅನುದಾನದ ನಿರ್ಲಕ್ಷ್ಯ ಮೂಲಕ ಸಿಎಂ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ಮಾತಿಗೆ ಮತ್ತೆ ದಾಖಲೆ ಸಮೇತ ಬಸವರಾಜ ಬೊಮ್ಮಾಯಿ ಕೌಂಟರ್ ಕೊಟ್ಟಿದ್ದಾರೆ.
![](https://pratidhvani.com/wp-content/uploads/2024/01/PTI04-05-2023-000130A-0_1683365616586_1696055888485-2-jpg.webp)
ರಾಜ್ಯದಲ್ಲಿ ಬರಗಾಲ ಬಂದು ಆರು ತಿಂಗಳಾಗಿದೆ. ಕೇಂದ್ರ ಸರ್ಕಾರ ಮೊದಲ ಕಂತು 360 ಕೋಟಿ ಬಿಡುಗಡೆ ಮಾಡಿದೆ. ಇನ್ನೊಂದು ಕಂತು ಕೂಡ ಬಿಡುಗಡೆ ಮಾಡಲಿದೆ. ಬರ ಪರಿಹಾರಕ್ಕೆ ರಾಜ್ಯದಿಂದ ನಯಾಪೈಸೆಯನ್ನು ಬಿಡುಗಡೆ ಮಾಡಿಲ್ಲ. ರಾಜ್ಯದ ಆಪತ್ತು ನಿಧಿಯ ಹಣವನ್ನು ಬಿಡುಗಡೆ ಮಾಡದೇ ಕೇಂದ್ರದ ಕಡೆಗೆ ರಾಜಕೀಯವಾಗಿ ಬೊಟ್ಟು ಮಾಡಲಾಗುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ. ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ಕೇಂದದ ಅನುದಾನಕ್ಕೆ ಕಾಯದೆ 2,500 ಕೋಟಿ ರೂಪಾಯಿ ಬಿಡುಗಡೆ ಮಾಡಿರುವುದು ನಮ್ಮ ಕಣ್ಣ ಮುಂದಿದೆ. ಹೀಗಿದ್ದರೂ ರಾಜ್ಯ ಸರ್ಕಾರ ಯಾಕೆ ಹಣ ಬಿಡುಗಡೆ ಮಾಡಬಾರದು..? ತಮ್ಮ ಮೇಲಿನ ಜವಾಬ್ದಾರಿಯನ್ನು ಕೇಂದ್ರದ ಮೇಲೆ ಹಾಕಿದರೆ ರಾಜ್ಯದ ಜನರು ಇವರಿಗೆ ಯಾಕೆ ಅಧಿಕಾರ ಕೊಡಬೇಕು..? ಎಂದು ಪ್ರಶ್ನಿಸಿದ್ದಾರೆ.
![](https://pratidhvani.com/wp-content/uploads/2024/01/cr-20230621en649287eb1f809-1-jpg.webp)
15ನೇ ಹಣಕಾಸಿನ ಆಯೋಗ ತನ್ನ ರೂಪುರೇಷೆಗಳನ್ನು ತಯಾರು ಮಾಡಿತ್ತು. ಅವಾಗ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇತ್ತು. ಆಗ ರಾಜ್ಯದ ಪರಿಸ್ಥಿತಿ ಮನವರಿಕೆ ಮಾಡಿಕೊಡದೇ ಇವತ್ತು ರಾಜ್ಯದ ತೆರಿಗೆ ಪಾಲು ಶೇಕಡ 4.7 ನಿಂದ ಶೇ 3.6ಕ್ಕೆ ಇಳಿದಿದ್ದರೆ ಅದಕ್ಕೆ ಕಾಂಗ್ರೆಸ್ ಸರ್ಕಾರವೇ ಕಾರಣ. ಹಣಕಾಸಿನ ಆಯೋಗ ಸಂವಿಧಾನ ಬದ್ಧವಾಗಿ ರಚಿತವಾಗಿರುವ ಸ್ವತಂತ್ರ ಆಯೋಗ. ಅದಕ್ಕೂ ಕೇಂದ್ರ ಸರ್ಕಾರಕ್ಕೆ ಯಾವುದೇ ನೇರವಾದ ಸಂಬಂಧ ಇರುವುದಿಲ್ಲ. ಇದು ಗೊತ್ತಿದ್ದರೂ ಮುಖ್ಯಮಂತ್ರಿಗಳು ರಾಜಕಾರಣ ಮಾಡುತ್ತಿದ್ದಾರೆ. ಆದಾಗ್ಯೂ 14ನೇ ಹಣಕಾಸಿನಲ್ಲಿ 14,996 ಕೋಟಿ ರೂಪಾಯಿ ಮಾತ್ರ ಬಂದಿದೆ. 15ನೇ ಹಣಕಾಸಿನ ಆಯೋಗ ಇದುವರೆಗೂ 1,16,828 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. 15ನೇ ಹಣಕಾಸು ಆಯೋಗದ ಅವಧಿ 2026ರವರೆಗೂ ಇರುತ್ತದೆ. ಒಟ್ಟು 2.5 ಲಕ್ಷ ಕೋಟಿಗೂ ಮೀರಿ ತೆರಿಗೆ ಹಂಚಿಕೆ ಪಾಲು ಬರಲಿದೆ ಎಂದಿದ್ದಾರೆ.
![](https://pratidhvani.com/wp-content/uploads/2024/01/basavaraj-bommai-karnataka-cm-1019x573-3-jpg.webp)
ಕೇಂದ್ರ ಸರ್ಕಾರವು ಸಹಭಾಗಿತ್ವದ ಯೋಜನೆಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡುತ್ತಿದೆ. ಇದರಿಂದ ರಾಜ್ಯದ ಸಂಚಿತ ನಿಧಿಯಿಂದ ನೆರವು ಕೊಡುವ ವಿಧಾನ ಬದಲಾಗಿರುವುದು ನಿಮಗೆ ಗೊತ್ತಿದೆ. ಆದ್ದರಿಂದ ಸಂಚಿತ ನಿಧಿ ಮತ್ತು ನೇರವಾಗಿ ಬರುತ್ತಿರುವ ಅನುದಾನವನ್ನು ಸೇರಿಸಿ ರಾಜ್ಯಕ್ಕೆ ಒಟ್ಟು ಸರಿಯಾದ ಲೆಕ್ಕ ಸಿಗುತ್ತದೆ. ಮುಖ್ಯಮಂತ್ರಿಗಳಿಗೆ ಈ ವಿಚಾರ ಗೊತ್ತಿದ್ದು, ಸಂಚಿತ ನಿಧಿಗೆ ಬಂದ ಹಣವನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಂಡು ಅರ್ಧ ಸತ್ಯವನ್ನು ಹೇಳುತ್ತಿದ್ದಾರೆ. ಕರ್ನಾಟಕಕ್ಕೆ ವಿಶೇಷ ಅನುದಾನ ಹಣಕಾಸಿನ ಆಯೋಗದ ಅಂತಿಮ ವರದಿಯಲ್ಲಿ ಶಿಫಾರಸ್ಸು ಆಗಿರುವುದಿಲ್ಲ. ಕಳೆದ 5 ವರ್ಷದಿಂದ ಮಧ್ಯಂತರ ವರದಿಯನ್ನೇ ಇಟ್ಟುಕೊಂಡು ಮುಖ್ಯಮಂತ್ರಿಗಳು ತಮ್ಮ ರಾಜಕೀಯ ವಾದಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದು ವಿಪರ್ಯಾಸ ಎಂದಿದ್ದಾರೆ.
ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂಪಾಯಿ ನೀಡಿರುವುದನ್ನು ಮುಖ್ಯಮಂತಿಗಳು ಎಲ್ಲಿಯೂ ಉಲ್ಲೇಖ ಮಾಡುವುದಿಲ್ಲ. ಬೆಂಗಳೂರಿನ ಔಟರ್ ರಿಂಗ್ ರೋಡಿಗೆ 5,500 ಕೋಟಿಗೂ ಹೆಚ್ಚು ಹಣವನ್ನು ಕೇಂದ್ರ ಸರ್ಕಾರ ನೀಡಿದೆ. ಆ ಯೋಜನೆಯನ್ನು ಇನ್ನೂ ಪ್ರಾರಂಭ ಮಾಡಿಲ್ಲ. ಕೃಷ್ಣಾ ಹಾಗೂ ಮಹಾದಾಯಿ ಯೋಜನೆಗಳು ಕೋರ್ಟ್ನಲ್ಲಿ ಇರುವ ವಿಚಾರ ಗೊತ್ತಿದ್ದರೂ, ಮುಖ್ಯಮಂತ್ರಿಗಳು ಅನಗತ್ಯವಾಗಿ ಆರೋಪ ಮಾಡುತ್ತಿರುವುದು ಸೋಜಿಗ. ಇದೇ ಪ್ರಥಮ ಬಾರಿಗೆ ಕೇಂದ್ರದಿಂದ ನಾಲ್ಕು ಮೆಡಿಕಲ್ ಕಾಲೇಜುಗಳನ್ನು ಕೊಟ್ಟಿರುವಂಥದ್ದು. ಚಿಕ್ಕಬಳ್ಳಾಪುರ, ಹಾವೇರಿ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗೆ ಮೆಡಿಕಲ್ ಕಾಲೇಜುಗಳನ್ನು ನೀಡಿದ್ದು ಮೋದಿ ಸರ್ಕಾರ. ಇದುವರೆಗೂ ಕಾಂಗ್ರೆಸ್ ಸರ್ಕಾರದಿಂದ ಒಂದೂ ಮೆಡಿಕಲ್ ಕಾಲೇಜು ಕೊಡಲು ಆಗಿಲ್ಲ.
![](https://pratidhvani.com/wp-content/uploads/2024/01/1stgbbq_siddaramaiah_625x300_29_December_23-1-1024x630.png)
ಏಮ್ಸ್ ಸಂಸ್ಥೆಯನ್ನು ಹೊರ ರಾಜ್ಯಗಳಿಗೆ ಕೊಡಬಾರದು ಎಂಬ ನಿಯಮ ಮಾಡಿರುವುದರಿಂದ ಏಮ್ಸ್ಗೆ ಸಮನಾದಂತಹ ಸಂಸ್ಥೆಯನ್ನು ಕೊಡಲು ಕೇಂದ್ರ ಸರ್ಕಾರ ಸಿದ್ಧವಿದೆ. ರಾಜ್ಯ ಸರ್ಕಾರ ಪಸ್ತಾವನೆ ಕಳಿಸಿದರೆ, ಕೇಂದ್ರ ಸರ್ಕಾರ ನೀಡಲಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಆರಂಭದಿಂದಲೂ ಖಾಸಗಿ ವಲಯದಿಂದಲೇ ಆರಂಭಿಸಬೇಕು ಎಂದು ಕಾಂಗ್ರೆಸ್ ಸರ್ಕಾರದ ಕಾಲದಲ್ಲಿಯೇ ನಿರ್ಧಾರ ಆಗಿತ್ತು. ಟಾಟಾ, ಎಲ್ಆಂಡ್ಟಿ ನಂತರ ಜಿವಿಕೆ ಸಂಸ್ಥೆ ತೆಗೆದುಕೊಂಡಿರುವುದು ಕಾಂಗ್ರೆಸ್ ಅವಧಿಯಲ್ಲಿ. ನಡೆದಿರುವ ಸತ್ಯವನ್ನು ಮುಖ್ಯಮಂತಿಗಳು ಮುಚ್ಚಿಟ್ಟು, ಸುಳ್ಳನ್ನೇ ಹೇಳಿ ದಾರಿ ತಪ್ಪಿಸುತ್ತಿದ್ದಾರೆ. ಸಬರ್ಬನ್ ರೈಲಿಗೆ ಈಗಾಗಲೇ ಮೊದಲ ಅಂತದ ಯೋಜನೆಗೆ 700 ಕೋಟಿ ರೂಪಾಯಿ ಟೆಂಡರ್ ಆಗಿದೆ. ಇದರಿಂದ ನೀರಾವರಿ ಯೋಜನೆಗಳು, ರಸ್ತೆ, ಕುಡಿಯುವ ನೀರು, ಶಾಲೆ, ಆಸ್ಪತ್ರೆಗಳ ನಿರ್ಮಾಣ ಪಗತಿ ಎಲ್ಲವೂ ಕುಂಠಿತಗೊಂಡಿವೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 3000 ಕೋಟಿ ರೂ. ಅನುಮೋದನೆಯಾಗಿದ್ದು, ಜನವರಿವರೆಗೂ ನಯಾ ಪೈಸೆ ಖರ್ಚಾಗಿಲ್ಲ. ಅಭಿವೃದ್ಧಿ ವಿಷಯದಲ್ಲಿ ರಾಜ್ಯ ಸರ್ಕಾರ ಗಾಢವಾದ ನಿದ್ರೆಯಲ್ಲಿ ಇರುವುದು ಜನ ಸಾಮಾನ್ಯರ ಮಾತಾಗಿದೆ. ಇನ್ನಾದರೂ ಎಚ್ಚೆತ್ತುಕೊಳ್ಳಿ ಎಂದು ಗುದ್ದು ಕೊಟ್ಟಿದ್ದಾರೆ ಬಸವರಾಜ ಬೊಮ್ಮಾಯಿ.