
‘ಲೋಕ’ ಎಲೆಕ್ಷನ್ ಬೆನ್ನಲ್ಲೇ ಒಕ್ಕಲಿಗ ಜಾತಿ ಅಸ್ತ್ರ ಸಾಕಷ್ಟು ಸದ್ದು ಮಾಡ್ತಿದೆ. ಒಕ್ಕಲಿಗ ವೋಟ್ ಪಡೆಯಲು ಎಲ್ಲಾ ಪಕ್ಷಗಳು ನಾನಾ ರೀತಿಯ ಕಸರತ್ತು ಮಾಡ್ತಿವೆ. ಇದೇ ವಿಚಾರವಾಗಿ ನಾನಾ ರೀತಿಯ ಟೀಕಾಸ್ತ್ರಗಳು ನಡೆಯುತ್ತಿವೆ. ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ತೇಜಸ್ವಿನಿ ಗೌಡ ಬಿಜೆಪಿ ನಾಯಕರಿಗೆ ಸಕ್ಕತ್ತಾಗಿಯೇ ಟಾಂಗ್ ನೀಡಿದ್ದಾರೆ.
ಯಾವುದೇ ಅವಕಾಶ ದೊರೆತರೂ ಒಕ್ಕಲಿಗ ವಿರೋಧಿತನ ತೋರಿದ್ದು, ಒಕ್ಕಲಿಗರ ನಾಯಕರನ್ನ ಬೆಳೆಸುವ ಬದಲು ತುಳಿಯುವ ಕೆಲಸವನ್ನು ಬಿಜೆಪಿ ಮಾಡುತ್ತದೆ ಎಂದು ಮಾಜಿ ಸಂಸದೆ ತೇಜಸ್ವಿನಿಗೌಡ ದೂಷಿಸಿದರು.
ಸಿ.ಟಿ .ರವಿ, ಆರ್. ಅಶೋಕ್, ಸದಾನಂದಗೌಡ ಸೇರಿದಂತೆ ಹಲವಾರು ಒಕ್ಕಲಿಗ ನಾಯಕರ ಏಳಿಗೆಯನ್ನ ಬಿಜೆಪಿ ತುಳಿಯುವ ಕೆಲಸ ಮಾಡಿದೆ ಎಂದರು.
ಕಾಂಗ್ರೆಸ್ ನಲ್ಲಿ ಮಾತ್ರ ಒಕ್ಕಲಿಗರಿಗೆ ಅವಕಾಶವಿದೆ. ಒಕ್ಕಲಿಗರಿಗೆ ಮೈಸೂರಲ್ಲಿ ಸ್ಥಾನಮಾನ ಕೇಳದೇ, ಸಮುದಾಯ ಇಲ್ಲದಿರುವ ಜಾಗದಲ್ಲಿ ಕೇಳಲು ಸಾಧ್ಯವಿದೆಯೇ? ಎಂದು ಹೇಳುವ ಮೂಲಕ ಎಂ.ಲಕ್ಷ್ಮಣ್ ಅವರಿಗೆ ಟಿಕೆಟ್ ಕೊಟ್ಟ ಪಕ್ಷದ ಕ್ರಮವನ್ನು ಸಮರ್ಥಿಸಿಕೊಂಡರು.ಸುಧಾಮೂರ್ತಿಯವರಿಗೆ ಪ್ರಶಸ್ತಿ, ರಾಜ್ಯಸಭಾ ಸ್ಥಾನ ನೀಡುವ ಬಿಜೆಪಿ ಯದುವೀರ್ ಅವರಿಗೂ ನೀಡಬೇಕಿತ್ತು ಎಂದರು. ಡಿ.ಕೆ.ಸುರೇಶ್ ರಾಜ್ಯದ ಪರ ಸಂಸತ್ತಿನಲ್ಲಿ ಮಾತನಾಡಿದವರು, ಮತ್ತೊಂದು ಗಟ್ಟಿ ಧ್ವನಿಯಾಗಿ ಎಂ.ಲಕ್ಷ್ಮಣ್ ಅವರನ್ನು ಸಂಸತ್ತಿಗೆ ಕಳುಹಿಸಬೇಕು,ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರು ಉಂಡು ಹೋದ, ಕೊಂಡು ಹೋದ ಅನ್ನುವ ಮಾತಿಗೆ ಅನ್ವಯವಾಗುವ ವ್ಯಕ್ತಿ. ಪಕ್ಷಗಳಿಂದ, ಪಕ್ಷಕ್ಕೆ ಅಧಿಕಾರ ಅರಸಿ ಹೋಗುವ ಅವರಿಂದ ಸಮುದಾಯ ಏನನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.ನಾನು ಕೂಡ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೆ ಎಂದು ಮಾಜಿ ಸಂಸದೆ ತೇಜಸ್ವಿನಿಗೌಡ ಹೇಳಿದರು.
ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ತೇಜಸ್ವಿನಿಗೌಡ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾನು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ನನಗೆ ಟಿಕೆಟ್ ಕೊಡಲಿಲ್ಲ. ಬಿಜೆಪಿಯ ಕಾರ್ಯವೈಖರಿಗಳಿಂದ ಬೇಸತ್ತು ನಾನು ಕಾಂಗ್ರೆಸ್ ಸೇರ್ಪಡೆ ಆಗಿದ್ದೇನೆಂದು ಹೇಳಿದರು.




