ದಸರಾ ವೇಳೆ ಹಸಿರು ಬೆಳೆ ಪೋಷಿಸುವ ಸಂಕೇತವಾಗಿ ಬುಡಕಟ್ಟು ಜನಾಂಗ ಆಚರಣೆ ಮಾಡುವ ತೀಜ್ ಹಬ್ಬವನ್ನು ಗದಗ ತಾಲ್ಲೂಕಿನ ಬೆಳದಡಿ ತಾಂಡಾದಲ್ಲಿ ಲಂಬಾಣಿಗರು ಶುಕ್ರವಾರ ಸಂಜೆ ಸಂಭ್ರಮದಿಂದ ಆಚರಿಸಿದರು. ಸಕಾಲಕ್ಕೆ ಮಳೆ ಬಂದು, ಸಮೃದ್ದಿ ಬೆಳೆ ಬರಲಿ ತಾಂಡಾದಲ್ಲಿ ಆರೋಗ್ಯ ನೆಲೆಸಲಿ ಎಂದು ತೀಜ್(ಹುಲ್ಲಿನ ಬುಟ್ಟಿ) ಹೊತ್ತ ಯುವತಿಯರು ಹಾಡಿನ ಮೂಲಕ ಪ್ರಾರ್ಥನೆ ಮಾಡುವ ದೃಶ್ಯಗಳು ನಾಗಾವಿ, ಬೆಳದಡಿ ತಾಂಡಾಗಳಲ್ಲಿ ವಿಶೇಷವಾಗಿ ಕಂಡುಬಂದವು.
ತಾಂಡಾಗಳಲ್ಲಿ ತೀಜ್ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ದುಡಿಯಲು ಗುಳೆಹೋದ, ನೌಕರಿಗಾಗಿ, ವ್ಯಾಪರಕ್ಕಾಗಿ ದೂರದ ಪಟ್ಟಣಗಳಿಗೆ ಹೋದ ಜನರು ದಸರಾ ಹಬ್ಬದ ಮುಂಚಿತವಾಗಿ ತಾಂಡಾಗಳಿಗೆ ಬರುತ್ತಾರೆ. ಮನೆಗೆ ಬಣ್ಣಹಚ್ಚಿ ಮಡಿ ಮಾಡುತ್ತಾರೆ. ದಸರಾ ಆಚರಣೆಯ 9 ದಿನ ಮುಂಚಿತವಾಗಿ ತಾಂಡಾದ ನಾಯಕ ಅಥವಾ ಸೇವಾಲಾಲ್ ಮಹಾರಾಜ್ ಭಗತ್ (ಪೂಜಾರಿ) ದೇವಿಗೆ ಹಾಗೂ ಸೇವಾಲಾಲರಿಗೆ ಪೂಜೆ ಮಾಡಿ 9 ಗೋಧಿ ಕಾಳುಗಳನ್ನು ತಾಂಡಾದ ಹಿರಿಯ ಮಹಿಳೆಯರಿಗೆ ನೀಡುತ್ತಾರೆ. ನಂತರ ಅದರ ಜೊತೆಗೆ ಹೆಚ್ಚಿನ ಕಾಳುಗಳನ್ನು ಸೇರಿಸಿ ಪ್ರತಿಯೊಂದು ಮನೆಯಲ್ಲಿ ಬಿದುರಿನ ಪುಟ್ಟಿಯಲ್ಲಿ ಮಣ್ಣು, ದೇಶಿ ಆಕಳ ಸಗಣಿ ಗೊಬ್ಬರ ಹಾಕಿ ಗೋಧಿ ಬೀಜಗಳನ್ನು ನೆಡುತ್ತಾರೆ ಹಾಗೂ ಅದಕ್ಕೆ ಸೂರ್ಯನ ಬೆಳಕು ತಾಗದಂತೆ ಮುಚ್ಚಿ ಇಡುತ್ತಾರೆ ಮತ್ತು ಪ್ರತಿದಿನ ಪ್ರಮಾಣಕ್ಕೆ ತಕ್ಕಷ್ಟು ನೀರು ಹಾಕುತ್ತಾರೆ. ಇದಕ್ಕೆ ತೀಜ್ ಬುರೆರೋ (ಮುಚ್ಚಿಡುವುದು) ಎಂದು ಕರೆಯುತ್ತಾರೆ.

9 ದಿನಗಳ ಕಾಲ ಸಂಜೆ ವೇಳೆ ನಡೆಯುವ ಈ ಹಬ್ಬದಲ್ಲಿ ಮದುವೆಯಾಗದ ತಾಂಡಾದ ಬಂಜಾರ ಬೆಡಗಿಯರು ಪ್ರಮುಖ ಪಾತ್ರವಹಿಸುತ್ತಾರೆ. ಅವರಿಗೆ ಹಿರಿಯ ಮಹಿಳೆಯರು ಮಾರ್ಗದರ್ಶನ ನೀಡುತ್ತಾರೆ. ಪ್ರತಿ ದಿನವೂ ರಾತ್ರಿ ಪೂಜೆಯ ನಂತರ ವೃತ್ತಾಕಾರದಲ್ಲಿ ಹೆಣ್ಣುಮಕ್ಕಳು ಕುಣಿದು ಕುಪ್ಪಳಿಸುತ್ತಾರೆ. ಬಂಜಾರ ಸಂಪ್ರದಾಯದ ಬಗ್ಗೆ, ದಸಾರ ಹಬ್ಬದ ಹಿನ್ನಲೆ ಬಗ್ಗೆ, ತೀಜ್ ಹಬ್ಬದ ಬಗ್ಗೆ ಹಾಡಿನ ರೂಪದಲ್ಲಿ ಹೇಳುತ್ತಾರೆ. ಕೆಲವೊಮ್ಮೆ ಒಡಪು ಇಟ್ಟು ಹಾಡುವಾಗ ಸ್ಪರ್ಧೆಗಳು ನಡೆಯುತ್ತವೆ ಹಾಗಾಗಿ ದಸರಾ ಒಂಭತ್ತು ದಿನವೂ ತಾಂಡಾಗಳಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಕೊನೆಯ ದಿನ ಸಮೀಪದ ನದಿಗೆ ಅಥವಾ ಹಳ್ಳಕ್ಕೆ ಹೋಗಿ ಸಸಿಗಳನ್ನು ನೀರಿನಲ್ಲಿ ಬಿಡುತ್ತಾರೆ ಹಾಗೂ ಗಂಗಾಮಾತಗೆ ಪ್ರಾರ್ಥಿಸುತ್ತಾರೆ ನಂತರ ಬನ್ನಿ ಮುಡಿಯುತ್ತಾರೆ ಎಂದು ಬೆಳದಡಿ ತಾಂಡಾದ ನಾಯಕಣಿಯರಾದ ಗಿರಿಜವ್ವ ಚಂದು ನಾಯಕ, ಶೀಲವ್ವ ಮಾಂತೇಶ ಚವಾಣ, ಶಾಂತವ್ವ ಸೋಮನಾಥ ಮಾಳಗಿಮನಿ ಮಾಹಿತಿ ನೀಡಿದರು.

ಹಬ್ಬದ ಆಚರಣೆಯಲ್ಲಿ ಪರಸ್ಪರರಿಗೆ ತೀಜ್ ಹಂಚಿಕೊಂಡು ಬಾಳು ಯಾವತ್ತೂ ಹಸಿರಾಗಲಿ, ಒಳ್ಳೆಯದಾಗಲಿ ಎಂದು ಹಾರೈಸಲಾಗುತ್ತದೆ. ಬಂಜಾರ ಶೈಲಿಯ ಹೊಸ ಉಡುಗೆ ತೊಡುಗೆಗಳಿಂದ ಗಮನ ಸೆಳೆಯುತ್ತಾರೆ. ಹೀಗಾಗಿ ಇಂದಿಗೂ ನಮ್ಮ ಜನಾಂಗದ ಮಹಿಳೆಯರು ಉಡುಗೆ-ತೊಡುಗೆ ಬಿಟ್ಟಿಲ್ಲ ಎಂದು ಹಿರಿಯ ಮಹಿಳೆಯರಾದ ಸುವರ್ಣ ಟಿಕಪ್ಪ ನಾಯಕ, ಶೀಲವ್ವ ಕೇಶಪ್ಪ ಕಾರಭಾರಿ ಹೇಳಿದರು.