ಬೆಂಗಳೂರು: ಶಿರಾ ನಗರಕ್ಕೆ ಸಮರ್ಪಕ ಒಳಚರಂಡಿ ನಿರ್ಮಾಣ ಮಾಡಲು ಶಿರಾ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ದೆಹಲಿ ವಿಶೇಷ ಪ್ರತಿನಿಧಿ ಟಿಬಿ ಜಯಚಂದ್ರ ಅವರಿಂದ ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆಯಿತು.
ಶಿರಾ ನಗರಕ್ಕೆ ಒಳಚರಂಡಿ ವ್ಯವಸ್ಥೆ ನಿರ್ಮಾಣ ಮಾಡಲು 10 ವರ್ಷಗಳ ಹಿಂದೆ ಸಮಗ್ರ ಯೋಜನೆಯನ್ನು ರೂಪಿಸಲಾಗಿತ್ತು. ಆದರೆ ಕೆಲವು ಬಡಾವಣೆಗಳಲ್ಲಿ ಒಳಚರಂಡಿ ಪೈಪ್ ಅಳವಡಿಸಲು ನಗರ ಸಭೆಯ ಜಾಗವಿಲ್ಲದ ಕಾರಣ ಹಾಗೂ ರಸ್ತೆಗಳಿಲ್ಲದ್ದರಿಂದ ಶಿರಾ ನಗರಕ್ಕೆ ಪೂರ್ತಿಯಾಗಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದೆ ಕೆಲವು ಕಡೆ ಕೆಲಸ ನಿಂತಿತ್ತು .ಈ ನಿಟ್ಟಿನಲ್ಲಿ ಈ ಎಲ್ಲಾ ತೊಡಕುಗಳನ್ನ ನಿವಾರಿಸಲು ವಿಧಾನಸೌಧದಲ್ಲಿ ಮಹತ್ವದ ಸಭೆ ಕರೆಯಲಾಗಿತ್ತು. ಒಳಚರಂಡಿ ಹಾಗೂ ಕೊಳಚೆ ನಿರ್ಮೂಲನ ಮಂಡಳಿ ವ್ಯವಸ್ಥಾಪಕ ನಿರ್ದೇಶಕರಾದ ಶರತ್, ಶಿರಾ ನಗರಸಭೆ ಆಯುಕ್ತರಾದ ಪಲ್ಲವಿ ,ನಗರಸಭೆ ಅಧ್ಯಕ್ಷರಾದ ಪೂಜಾ, ಎಕ್ಸಿಕ್ಯೂಟಿವ್ ಇಂಜಿನಿಯರ್ ಗಂಗಾಧರ್ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಕೆಂಚಪ್ಪ ಸೇರಿದಂತೆ ನಗರಸಭೆಯ ಹಲವಾರು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು .
ಶಿರಾದಲ್ಲಿ 26,000 ಮನೆಗಳಿದ್ದು ಎಲ್ಲ ಮನೆಗಳಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ರೂಪಿಸಲಾಗಿರುವ ಸಮಗ್ರ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಜಯಚಂದ್ರ ಅವರು ಕಟ್ಟುನಿಟ್ಟಾಗಿ ಆದೇಶಿಸಿದರು.
ಈ ಒಳಚರಂಡಿ ಯೋಜನೆಗೆ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಗತ್ಯವಿರುವ ಹಣಕಾಸಿನ ನೆರವನ್ನು ನಗರಾಭಿವೃದ್ಧಿ ಇಲಾಖೆಯಿಂದ ಕೊಡಿಸುವುದಾಗಿ ಜಯಚಂದ್ರ ಅವರು ಹೇಳಿದರು .ಕಾಲಮಿತಿಯಲ್ಲಿ ಈ ಒಳಚರಂಡಿ ಯೋಜನೆಯನ್ನು ಪೂರ್ಣಗೊಳಿಸಿ ಎಲ್ಲ ಮನೆಗಳಿಗೆ ಕಡ್ಡಾಯವಾಗಿ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸುವಂತೆ ಆದೇಶಿಸಿದರು. ಈಗಾಗಲೇ ಸಾಕಷ್ಟು ವಿಳಂಬವಾಗಿದ್ದು ಇನ್ನು ಮುಂದೆ ಯಾವುದೇ ಕಾರಣಕ್ಕೂ ನಿಧಾನವಾಗದೆ ಬಾಕಿ ಕಾಮಗಾರಿಗಳನ್ನ ಸಮರೋಪಾದಿಯಲ್ಲಿ ಮಾಡಿ ಮುಗಿಸುವಂತೆ ಆದೇಶಿಸಿದರು. ಮೊದಲು ಪ್ರಾಯೋಗಿಕವಾಗಿ ಯೋಜನೆಯನ್ನು ಅನುಷ್ಠಾನಗೊಳಿಸಿ ನಂತರ ಕಡ್ಡಾಯವಾಗಿ ಎಲ್ಲಾ ಮನೆಗಳಿಗೂ ಒಳಚರಂಡಿ ಸಂಪರ್ಕ ಕಲ್ಪಿಸುವಂತೆ ಸೂಚಿಸಿದರು. ಮುಂದಿನ ವಾರದಲ್ಲಿ ತಾವೇ ಖುದ್ದಾಗಿ ಕಾಮಗಾರಿ ಪರಿಶೀಲನೆ ಮಾಡುವುದಾಗಿ ಜಯಚಂದ್ರ ಅವರು ತಿಳಿಸಿದರು. ಒಳಚರಂಡಿ ಯೋಜನೆಯ ಅನುಷ್ಠಾನಕ್ಕೆ ಹತ್ತು ವರ್ಷ ತೆಗೆದುಕೊಂಡಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದರು.