Tag: bar and restaurant

ಮಕ್ಕಳ ಮನವಿಗೆ ಮಣಿದ ಜಿಲ್ಲಾಧಿಕಾರಿ: ಶಾಲೆಯ ಸಮೀಪದ ಬಾರ್ ಎತ್ತಂಗಡಿ

ಮಕ್ಕಳ ಮನವಿಗೆ ಮಣಿದ ಜಿಲ್ಲಾಧಿಕಾರಿ: ಶಾಲೆಯ ಸಮೀಪದ ಬಾರ್ ಎತ್ತಂಗಡಿ

ಸರ್ಕಾರಿ ಅಧಿಕಾರಿಗಳಿಗೆ ಯಾವುದೇ ಮನವಿ ಸಲ್ಲಿಸಿದರೆ ಆ ಬೇಡಿಕೆ ಈಡೇರಲು ತಿಂಗಳುಗಳೇ ಕಳೆಯುತ್ತವೆ. ಕಚೇರಿಗಳಿಗೆ ಅಲೆದು ಚಪ್ಪಲಿ ಸವೆದರೂ ಆಗಬೇಕಾದ ಕೆಲಸಗಳು ಮಾತ್ರ ಮನವಿ ರೂಪದಲ್ಲಿಯೇ ಉಳಿಯುತ್ತವೆ. ಆದರೆ, ತಮಿಳುನಾಡಿನ ಅರಿಯಲೂರು ಜಿಲ್ಲೆಯ ಜಿಲ್ಲಾಧಿಕಾರಿಮಕ್ಕಳ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಈಗ ಸುದ್ದಿಯಲ್ಲಿದ್ದಾರೆ.  ಕೆಲವು ತಿಂಗಳ ಹಿಂದೆ ಕರ್ನಾಟಕದ ಹಲವು ಹಳ್ಳಿಗಳಲ್ಲಿ ಮದ್ಯದಂಗಡಿಗಳ ಸ್ಥಳಾಂತರಕ್ಕೆ ಹಾಗೂ ಗ್ರಾಮಗಳಲ್ಲಿ ಮದ್ಯ ನಿಷೇಧಕ್ಕೆ ಆಗ್ರಹಿಸಿ ಮಹಿಳೆಯರು ಮತ್ತು ಮಕ್ಕಳು ಪ್ರತಿಭಟನೆ ನಡೆಸಿದ್ದರು. ವಾರಗಳ ಕಾಲ  ಪ್ರತಿಭಟನೆ ನಡೆದರೂ, ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದ್ದ ಮದ್ಯದಂಗಡಿಗಳು ಹಲವೆಡೆಗಳಲ್ಲಿ ಮತ್ತೆ ಕಾರ್ಯಾಚರಿಸಲು ಆರಂಭಿಸಿವೆ.  ತಮಿಳುನಾಡಿನಲ್ಲಿ ನಡೆದ ಘಟನೆ ಇದಕ್ಕೆ ತದ್ವಿರುದ್ದವಾದದ್ದು. ಇ ಎಂ ಇಲಂತೆಂಡ್ರಲ್ ಹಾಗೂ ಅರಿವರಸನ್ ಎಂಬ ಇಬ್ಬರು ವಿದ್ಯಾರ್ಥಿಗಳು ತಮ್ಮ ಶಾಲೆಯ ಸಮೀಪವಿರುವ ಮದ್ಯದಂಗಡಿ ಸ್ಥಳಾಂತರಿಸುವಂತೆ ಮನವಿ ಮಾಡಿಕೊಂಡಿದ್ದರು. ಭೌತಿಕ ತರಗತಿಗಳು ಆರಂಭವಾಗುವ ಮುನ್ನ ಶಾಲೆಗಳ ಸ್ಥಳಾಂತರವಾಗಬೇಕೆಂದು ಆರನೇ ಮತ್ತು ನಾಲ್ಕನೇ ತರಗತಿಯ ಮಕ್ಕಳ ಕೋರಿಕೆಯಾಗಿತ್ತು. ಮಕ್ಕಳ ಸುರಕ್ಷತೆ ಹಾಗೂ ಶಾಲಾ ಪರಿಸರದಲ್ಲಿ ಮದ್ಯಪ್ರಿಯರ ಅನುಚಿತ ನಡವಳಿಕೆಯನ್ನು ಉಲ್ಲೇಖಿಸಿ ಈ ಮನವಿ ನೀಡಲಾಗಿತ್ತು.  ಇದಕ್ಕೆ ತಕ್ಷಣ ಸ್ಪಂದಿಸಿರುವ ಜಿಲ್ಲಾಧಿಕಾರಿಗಳು ಕೂಡಲೇ ಶಾಲೆಯ ಬಳಿಯಿರುವ ಮದ್ಯದಂಗಡಿಯ ತೆರವಿಗೆ ಆದೇಶ ಹೊರಡಿಸಿದ್ದಾರೆ. ಈ ಬೆಳವಣಿಗೆಯಿಂದ ಪ್ರೇರೇಪಿತರಾಗಿ, ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಇಲಂತೆಂಡ್ರಲ್ ಹಾಗೂ ಅರಿವರಸನ್, ರಾಜ್ಯದ ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ಪತ್ರ ಬರೆದು, ರಾಜ್ಯದಲ್ಲಿರುವ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಿಸುವಂತೆ ಮನವಿ ಮಾಡಿಕೊಂಡಿದ್ದಾರೆ.  ಈ ಕುರಿತಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಇಲಂತೆಂಡ್ರಲ್, ಮದ್ಯದಂಗಡಿ ಬಳಿ ಕುಡುಕರು ಕುಳಿತು ಅಶ್ಲೀಲವಾಗಿ ಮಾತನಾಡುತ್ತಿರುತ್ತಾರೆ. ಇದನ್ನು ಕಂಡು ಭಯವಾಗುತ್ತಿತ್ತು. ಕುಡಿತದ ಚಟಕ್ಕೆ ಒಳಗಾದ ಹಲವು ಪೋಷಕರು ತಮ್ಮ ಮಕ್ಕಳನ್ನು ಕೆಲಸಕ್ಕೆ ಅಥವಾ ಭಿಕ್ಷಾಟನೆಗೆ ಕಳುಹಿಸುತ್ತಿದ್ದಾರೆ. ಎಲ್ಲಾ ಮದ್ಯದಂಗಡಿಗಳು ಮುಚ್ಚಿದರೆ ಈ ಸಮಸ್ಯೆ ಇರುವುದಿಲ್ಲ, ಎಂದು ಹೇಳಿದ್ದಾರೆ.  ಸುಪ್ರಿಂ ಕೋರ್ಟ್ 2015ರಲ್ಲಿ ನೀಡಿರುವ ಆದೇಶದ ಪ್ರಕಾರ ಯಾವುದೇ ಶಾಲೆಯ ನೂರು ಮೀಟರ್ ಸುತ್ತಳತೆಯಲ್ಲಿ ಮದ್ಯದಂಗಡಿಗಳು ಇರುವಂತಿಲ್ಲ. ನೂರು ಮೀಟರ್ ನಂತರವೂ ಮದ್ಯದಂಗಡಿಗಳನ್ನು ಶಾಲೆಯ ಬಳಿ ತೆರೆಯುವುದು ಪ್ರಶ್ನಾರ್ಹವೇ ಆದರೂ, ಈ ಕುರಿತ ಗೊಂದಲಗಳಿಗೆ ಇನ್ನೂ ಉತ್ತರ ದೊರೆತಿಲ್ಲ. ಇಲಂತೆಂಡ್ರಲ್ ಓದುತ್ತಿರುವ ಶಾಲೆಯ ಪಕ್ಕದ ಮದ್ಯದಂಗಡಿಯೂ ನೂರು ಮೀಟರ್ ದೂರದಲ್ಲಿ ಇದ್ದರೂ, ಮಕ್ಕಳ ಮನವಿಯ ಮೇರೆಗೆ ಅದನ್ನು ಸ್ಥಳಾಂತರಿಸಲು ಆದೇಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ ರಮಣ ಸರಸ್ವತಿ ಅವರು ಹೇಳಿದ್ದಾರೆ. ಮಕ್ಕಳು ಮನವಿ ಸಲ್ಲಿಸಿದ ವಿಚಾರ ರಾಜ್ಯ ಮುಖ್ಯ ಕಾರ್ಯದರ್ಶಿ ಕಚೇರಿಗೂ ತಲುಪಿದ್ದು, ಅವರು ಕೂಡಾ ಮದ್ಯದಂಗಡಿಯ ಸ್ಥಳಾಂತರಕ್ಕೆ ಆದೇಶ ನೀಡಿದ್ದಾರೆ.  ಸದ್ಯಕ್ಕೆ ಈ ಇಬ್ಬರು ಮಕ್ಕಳ ಪ್ರಯತ್ನಕ್ಕೆ ತಮಿಳುನಾಡಿನಲ್ಲಿ ಉತ್ತಮ ಬೆಂಬಲ ಲಭಿಸುತ್ತಿದೆ. ಇಂತಹ ಮಕ್ಕಳೇ ಮುಂದೆ ಉತ್ತಮ ನಾಯಕರಾಗಲು ಸಾಧ್ಯ. ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಇಂತಹವರಿಂದಲೇ ಸಾಧ್ಯ ಎಂಬ ಚರ್ಚೆಗಳು ನಡೆಯುತ್ತಿವೆ.