ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಸೂಪರ್ ಹಿಟ್ ಸಿನಿಮಾಗಳ ಪ್ರದರ್ಶನ ಇತ್ತೀಚೆಗೆ ಯುರೋಪ್ ಕಂಟ್ರಿಯಲ್ಲಿ ನಡೆದಿದ್ದು ಎಲ್ಲರಿಗೂ ಗೊತ್ತಿದೆ. ಅಲ್ಲಿ ಸುದೀಪ್ ಅಭಿನಯದ ಈಗ ಸಿನಿಮಾ ಕೂಡ ಸಖತ್ ಮೆಚ್ಚುಗೆಗೆ ಕಾರಣವಾಗಿತ್ತು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಅಲ್ಲಿ, ʼಈಗʼ ಸಿನಿಮಾದಲ್ಲಿ ಖಳನಾಯಕ ಪಾತ್ರಕ್ಕೆ ಸುದೀಪ್ ಆಯ್ಕೆ ಮಾಡಿದ್ದು ಯಾಕೆ ಮತ್ತು ಅಮಿತಾಬ್ ಬಚ್ಚನ್ ಎದುರು ಸುದೀಪ್ ನಟನೆ ನೋಡಿ ಬೆರಗಾಗಿದ್ದ ವಿಷಯವನ್ನು ರಾಜಮೌಳಿ ಹೇಳಿದ ಮಾತು ಜೋರು ಸದ್ದು ಮಾಡುತ್ತಿದೆ.

“ಈಗ ” ಸಿನಿಮಾದಲ್ಲಿ ಸುದೀಪ್ ಖಳನಾಯಕರಾಗಿ ಕಾಣಿಸಿಕೊಂಡಿದ್ದರು. ಅವರ ನಟನೆಗೆ ಇಡೀ ಭಾರತೀಯ ಚಿತ್ರರಂಗ ತಲೆದೂಗಿತ್ತು. ಇತ್ತೀಚೆಗೆ ಈಗ ಸಿನಿಮಾದ ವಿಶೇಷ ಪ್ರದರ್ಶನ ವಿದೇಶದಲ್ಲಿ ನಡೆದಿತ್ತು. ಅಲ್ಲಿನ ಪ್ರೇಕ್ಷಕರು ಸುದೀಪ್ ನಟನೆಗೆ ಫಿದಾ ಆಗಿದ್ದರು ಕೂಡ. ಹಳೆಯ ಸಂದರ್ಶನದ ವಿಡಿಯೋವೊಂದರಲ್ಲಿ ರಾಜಮೌಳಿ ಅವರು, ‘ಈಗ’ ಚಿತ್ರಕ್ಕೆ ಸುದೀಪ್ ಅವರನ್ನು ಖಳನಟನ ಪಾತ್ರಕ್ಕೆ ಆಯ್ಕೆ ಮಾಡಿದ ಕಾರಣವನ್ನು ಬಹಿರಂಗಪಡಿಸಿದ್ದರು. ಅದೀಗ ವೈರಲ್ ಆಗುತ್ತಿದೆ.

ಸುದೀಪ್ ಅವರಂತಹ ದೊಡ್ಡ ನಟನನ್ನು ಕೇವಲ ಒಬ್ಬ ವುಮನೈಸರ್ ಪಾತ್ರಕ್ಕೆ ಆಯ್ಕೆ ಮಾಡಲು ಕಾರಣವೇನು?’ ಎಂಬ ಪ್ರಶ್ನೆಗೆ, ರಾಜಮೌಳಿ ಅವರ ಸ್ಪಷ್ಟನೆ ಹೀಗಿತ್ತು. ‘ವುಮನೈಸರ್ ಎಂಬುದು ಆ ಪಾತ್ರದ ಒಂದು ಸಣ್ಣ ಭಾಗ ಅಷ್ಟೇ. ಆದರೆ ಆ ಪಾತ್ರದ ಆಳ ದೊಡ್ಡದ್ದಾಗಿತ್ತು. ಚಿತ್ರದಲ್ಲಿ ಅಷ್ಟು ಭಯಾನಕ ವಿಲನ್ ಆಗಿರುವ ವ್ಯಕ್ತಿ, ತನ್ನ ಮೊದಲ ಡೈಲಾಗ್ನಲ್ಲೇ ‘ಪ್ರತಿ ವಿಷಯಕ್ಕೂ ವೈಲೆನ್ಸ್ ಯಾಕೆ?’ ಅಂತಾನೆ. ಆಮೇಲೆ ಆತ ತುಂಬಾ ವೈಲೆಂಟ್ ಆಗಿ ಬದಲಾಗುತ್ತಾನೆ. ನಡುವೆ ಅಲ್ಲಲ್ಲಿ ಹಾಸ್ಯ ಮಾಡುತ್ತಾನೆ. ಇನ್ನೊಂದು ಕಡೆ ರೋಮ್ಯಾಂಟಿಕ್ ಆಗುತ್ತಾನೆ, ನಂತರ ಹುಚ್ಚನ ರೀತಿ ವರ್ತಿಸುತ್ತಾನೆ. ಇಷ್ಟೂ ಶೇಡ್ಗಳನ್ನು ನಟನೆಯಲ್ಲಿ ತೋರಿಸುವುದು ಕತ್ತಿಯ ಮೇಲಿನ ನಡಿಗೆ ಇದ್ದಂತೆ. ಸ್ವಲ್ಪ ಆಚೀಚೆ ಆದರೂ ಅದು ಓವರ್ ಆಕ್ಟಿಂಗ್ ಅನಿಸುತ್ತೆ. ಎಂದು ರಾಜಮೌಳಿ ಆ ಪಾತ್ರದ ಗಂಭೀರತೆ ಬಗ್ಗೆ ಹೇಳಿದ್ದಾರೆ.

ಇನ್ನು, ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ರಣ್ʼ ಚಿತ್ರದಲ್ಲಿ ಸುದೀಪ್ ಅವರ ನಟನೆ ನೋಡಿ ಖುಷಿಗೊಂಡಿದ್ದೆ ಎಂದು ರಾಜಮೌಳಿ ಹೇಳಿದ್ದಾರೆ. ಆ ಸಿನಿಮಾದಲ್ಲಿ ಸುದೀಪ್ ಅವರ ಮ್ಯಾನರಿಸಂ ಚೆನ್ನಾಗಿತ್ತು. ಅದರಲ್ಲೂ ಬಾಲಿವುಡ್ ಮಹಾನಾಯಕ ಅಮಿತಾಬ್ ಬಚ್ಚನ್ ಅವರ ಮುಂದೆ ಅಷ್ಟು ಭರ್ಜರಿಯಾಗಿ ನಟಿಸುವುದನ್ನು ಕಂಡು, ಸುದೀಪ್ ನಿಜಕ್ಕೂ ಒಬ್ಬ ಗ್ರೇಟ್ ಆಕ್ಟರ್ ಎಂದು ನನಗೆ ಅನಿಸಿತ್ತು. ‘ಈಗ’ ಚಿತ್ರದ ಪಾತ್ರ ರೆಡಿಯಾದಾಗ ಸುದೀಪ್ ನೆನಪಾಗಿದ್ದರು ಎಂದು ಹೇಳಿದ್ದಾರೆ ರಾಜಮೌಳಿ. ಇನ್ನು, ಆ ಪಾತ್ರಕ್ಕೆ ಮೊದಲ ಆಯ್ಕೆ ಸುದೀಪ್ ಅವರೇನಾ?’ ಎಂಬ ಪ್ರಶ್ನೆಗೆ ರಾಜಮೌಳಿ, ‘ಫಸ್ಟ್ ಚಾಯ್ಸ್ ಅವರೇ, ಲಾಸ್ಟ್ ಚಾಯ್ಸ್ ಕೂಡ ಅವರೇ ಅಂದಿದ್ದಾರೆ. ಅವರ ಅ ಮಾತುಗಳು ಸುದೀಪ್ ಮೇಲಿರುವ ನಂಬಿಕೆಯನ್ನು ತೋರಿಸುತ್ತದೆ.






