ಎತ್ತಿನಹೊಳೆ ಯೋಜನೆ ಕಾಮಗಾರಿಗಳನ್ನು ವೀಕ್ಷಿಸುವ ಮುನ್ನ ಸಕಲೇಶಪುರದಲ್ಲಿ ಮಾತನಾಡಿದ ಅವರು; “2014ರಲ್ಲಿ ಆರಂಭವಾದ ಯೋಜನೆಯನ್ನು ಮೂರೇ ವರ್ಷದಲ್ಲಿ ಮುಗಿಸಿ ಎರಡೂ ಜಿಲ್ಲೆಗಳಿಗೆ ನೀರು ಹರಿಸುವುದಾಗಿ ಹೇಳಿದ್ದ ಅಂದಿನ ಮುಖ್ಯಮಂತ್ರಿಗಳು ಈಗ ಎಲ್ಲಿದ್ದಾರೆ” ಎಂದು ಕೇಳಿದ್ದಾರೆ.
“ಯೋಜನೆ ಕುಂಟುತ್ತಾ ಸಾಗುತ್ತಿದೆ. ಕಳೆದ ಎರಡು ವರ್ಷಗಳ ಮಳೆಗಾಲದಲ್ಲಿ ಆಗಿರುವ ಉತ್ತಮ ಮಳೆಯನ್ನು ನಿಖರವಾಗಿ ಡಿ.4ನೇ ಪಾಯಿಂಟ್’ಗೆ ತಂದು ಮಾಪನ ಮಾಡಬೇಕಿತ್ತು. ಎಷ್ಟು ಮಳೆ ಸುರಿಯಿತು? ಎಷ್ಟು ಪ್ರಮಾಣದ ನೀರು ಸಮುದ್ರಕ್ಕೆ ಹರಿದುಹೋಯಿತು ಎಂಬ ಬಗ್ಗೆ ಮಾಹಿತಿ ಕಲೆ ಹಾಕುವಲ್ಲಿ ಸರ್ಕಾರ ಕೈಚೆಲ್ಲಿದೆ ಎಂದು ಹೇಳಿದ್ದಾರೆ.
“2014ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಈ ಯೋಜನೆಗೆ ಅಡಿಗಲ್ಲು ಹಾಕಲಾಯಿತು. ಈಗ 2021. ಯೋಜನೆ ಮುಗಿಸಿ ನೀರು ಹರಿಸಲು ಇನ್ನೆಷ್ಟು ವರ್ಷ ಬೇಕು? ಮೊದಲು 8,000 ಕೋಟಿ, ನಂತರ 13,000 ಕೋಟಿಯಿಂದ ಶುರುವಾದ ಈ ಯೋಜನಾ ವೆಚ್ಚ ಈಗ 23,000 ಕೋಟಿಗೆ ಬಂದು ಮುಟ್ಟಿದ್ದು, ಅದಕ್ಕೆ ಸರ್ಕಾರದಿಂದ ಕ್ಲಿಯೆರೆನ್ಸ್ ಪಡೆದುಕೊಳ್ಳಲು ವಿಶ್ವೇಶ್ವರಯ್ಯ ಜಲ ನಿಗಮದ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.
“ಭೂಸ್ವಾಧೀನ ಪ್ರಕಿಯೆ ವಿವಾದದಲ್ಲಿದೆ. ಈಗಾಗಲೇ ಭೂಮಿ ಕಳೆದುಕೊಂಡ ರೈತರಿಗೆ ವರ್ಷಗಳೇ ಉರುಳಿದರೂ ಪರಿಹಾರ ನೀಡಿಲ್ಲ. ಗುತ್ತಿಗೆದಾರರಿಗೆ ಹಣ ನೀಡಲು ಇರುವ ಆತುರ ರೈತರಿಗೆ ನೀಡಲು ಇಲ್ಲ. ಅದಕ್ಕೆ ದುಡ್ಡಿಲ್ಲ ಅನ್ನುತ್ತಿದೆ ಸರ್ಕಾರ. ಆದರೆ, ಗುತ್ತಿಗೆದಾರರಿಗೆ ಪ್ಯಾಕೇಜುಗಳ ಲೆಕ್ಕದಂತೆ ಮೊದಲ ಹಂತದಲ್ಲಿ 4,115 ಕೋಟಿ ರೂ. ಹಾಗೂ ಎರಡನೇ ಹಂತದಲ್ಲಿ 12,000 ಕೋಟಿ ರೂ. ಕೊಡಲು ಪ್ಯಾಕೇಜ್ ಮಾಡಿಕೊಂಡಿದೆ” ಎಂದು ಕಿಡಿಕಾರಿದ್ದಾರೆ.

“ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಜನರ ಹೆಸರಿನಲ್ಲಿ ಯಥೇಚ್ಛವಾಗಿ ಹಣ ಖರ್ಚು ಮಾಡಲಾಗುತ್ತಿದೆ. ನನಗೆ ಅಧಿಕಾರಿಗಳಿಂದ ಸಿಕ್ಕಿದ ಮಾಹಿತಿ ಪ್ರಕಾರ ಈಗಾಗಲೇ ಏಳು ಅಡ್ಡಕಟ್ಟೆ (ವೈಯರ್) ಗಳನ್ನು ನಿರ್ಮಾಣ ಮಾಡಲಾಗಿದ್ದು, ಎಂಟನೇ ಅಡ್ಡಕಟ್ಟೆಯ ಕಾಮಗಾರಿ 70% ಮುಗಿದಿದೆಯಂತೆ. ಇಷ್ಟು ಹೊತ್ತಿಗೆ ಎಂಟೂ ಅಡ್ಡಕಟ್ಟೆಗಳನ್ನು ಪೂರ್ಣ ಮಾಡಿ ನೀರನ್ನು ಪಂಪ್ ಮಾಡಬೇಕಿತ್ತು. ಏಳು ಅಡ್ಡಕಟ್ಟೆಗಳು ಸಿದ್ಧವಿದ್ದು, ಹರವನಹಳ್ಳಿ ಬಳಿ ನಾಲ್ಕು ನೀರಿನ ಸಂಗ್ರಹಗಾರಗಳು ಸಿದ್ಧ ಇವೆ. ಈ ಮಳೆಗಾಲದಲ್ಲೇ ನೀರು ಪಂಪ್ ಮಾಡಿದ್ದರೆ ನೀರಿನ ಲಭ್ಯತೆಯ ಪ್ರಮಾಣ ತಿಳಿಯುತ್ತಿತ್ತು. ಅದನ್ನು ಸರ್ಕಾರ ಮಾಡಿಲ್ಲ ಎಂದು ಹೇಳಿದ್ದಾರೆ.
“ಎತ್ತಿನಹೊಳೆ ಅಡ್ಡಕಟ್ಟೆಗಳಿಂದ ಹರವನಹಳ್ಳಿಗೆ ನೀರು ಸಾಗಣೆ ಮಾಡುವ ಮಾರ್ಗದಲ್ಲಿನ 9 ಕಿ.ಮೀ. ಉದ್ದದ ಲೈನ್ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಭೂಸ್ವಾಧೀನ ಸಮಸ್ಯೆಯಿಂದ ಅದು ವಿಳಂಬವಾಗಿದ್ದು, ಅದನ್ನು ಕ್ಲಿಯರ್ ಮಾಡುವ ಕೆಲಸವನ್ನು ಸರಕಾರ ಮಾಡಿಲ್ಲ ಎಂದು ಹೇಳಿದ್ದಾರೆ.
ಕೇವಲ ಲೈನ್ ಅಂದಾಜು ಮಾಡಿ ಕಾಮಗಾರಿ
“ಯಾವುದೇ ಯೋಜನೆ ಕಾರ್ಯಗತ ಮಾಡಬೇಕಾದರೆ, DPR (ಸಮಗ್ರ ಯೋಜನಾ ವರದಿ) ತಯಾರಿಸಿಯೇ ಮಾಡಬೇಕು. ಆದರೆ, ಎತ್ತಿನಹೊಳೆ ಬಗ್ಗೆ ಹಾಗೆ ಮಾಡದೇ ಕೇವಲ ಲೈನ್ ಅಂದಾಜು ಮಾಡಿ ಕಾಮಗಾರಿ ಮಾಡಲಾಗುತ್ತಿದೆ. ನಿರಂತರವಾಗಿ ಯೋಜನಾ ವೆಚ್ಚವನ್ನು ಮನಸೋಇಚ್ಛೆ ಹಿಗ್ಗಿಸಲಾಗುತ್ತಿದೆ. ಮುಂದೊಂದು ದಿನ ಇದೇ ದೊಡ್ಡ ಕರ್ಮಕಾಂಡ ಆಗುವ ಸಾಧ್ಯತೆ ಇದೆ” ಎಂದು ಹೇಳಿದ್ದಾರೆ
“ಈಗಾಗಲೇ 9,000 ಕೋಟಿಗೂ ಹೆಚ್ಚು ಹಣ ವೆಚ್ಚವಾಗಿದೆ ಎಂದು ಸರ್ಕಾರವೇ ಹೇಳಿಕೊಂಡಿದೆ. ಆದರೆ, ಭೂಮಿ ಕಳೆದುಕೊಂಡವರ ಬಗ್ಗೆ ಈ ನಿರ್ಲಕ್ಯ ಏಕೆ? ಗುತ್ತಿಗೆದಾರರ ಮೇಲೆ ಇರುವಷ್ಟು ಪ್ರೀತಿ ರೈತರ ಮೇಲೆ ಏಕಿಲ್ಲ? ಗುತ್ತಿಗೆದಾರರ ಕಣ್ಣಿಗೆ ಬೆಣ್ಣೆ, ರೈತರ ಕಣ್ಣಿಗೆ ಸುಣ್ಣ ಏಕೆ?” ಎಂದು ಪ್ರಶ್ನಿಸಿದ್ದಾರೆ.

“ಕೊನೆಪಕ್ಷ ಮುಂದಿನ ಮುಂಗಾರಿನ ಹೊತ್ತಿಗಾದರೂ ನೆನೆಗುದಿಗೆ ಬಿದ್ದಿರುವ 9 ಕಿ.ಮೀ. ದೂರದ ಲೈನ್ ಕಾಮಗಾರಿ ಮುಗಿಸಿ ಹರವನಹಳ್ಳಿ ಜಲ ಸಂಗ್ರಹಗಾರಗಳಿಗೆ ನೀರು ಹರಿಸಲೇಬೇಕು. ಇದು ನನ್ನ ಆಗ್ರಹ. ಕೇವಲ 2-3 ತಿಂಗಳಲ್ಲಿ ಮಾತ್ರ ಸುರಿಯುವ ಮಳೆಯನ್ನೇ ಹಿಡಿದಿಟ್ಟುಕೊಳ್ಳದಿದ್ದರೆ ಈ ಯೋಜನೆಯ ಉದ್ದೇಶವೇ ಬುಡಮೇಲಾಗುತ್ತದೆ” ಎಂದು ತಿಳಿಸಿದ್ದಾರೆ
“ಭೂ ಪರಿಹಾರ ವಿಳಂಬವಾದರೂ ಸಕಲೇಶಪುರ ಜನರು ಹೃದಯ ವೈಶಾಲ್ಯತೆ ತೋರಿದ್ದಾರೆ. ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳ ಜನರೂ ತಮ್ಮ ಅಣ್ಣ ತಮ್ಮಂದಿರೆಂದು ಭಾವಿಸಿ ಯೋಜನೆ ಕಾಮಗಾರಿ ನಡೆಯಲು ಬಿಟ್ಟಿದ್ದಾರೆ. ಅದಕ್ಕಾಗಿ ಇಲ್ಲಿನ ಜನರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಹೇಳಿದ್ದಾರೆ
ವಿರೋಧವಿಲ್ಲ, ಆದರೆ ನೀರು ಹರಿಯಲೇಬೇಕು:
“ಯೋಜನೆಯನ್ನು ಆರಂಭ ಮಾಡಿದಾಗ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳಿಗೆ ತಲಾ 5 ಟಿಎಂಸಿ ನೀರು ಹರಿಸುವುದಾಗಿ ಅಂದಿನ ಕಾಂಗ್ರೆಸ್ ಸರ್ಕಾರ ಹೇಳಿತ್ತು. ಅದರಂತೆ ನೀರು ಹರಿಸಲೇಬೇಕು. ನೀರಾವರಿ ಯೋಜನೆಗಳಿಗೆ ನಮ್ಮ ವಿರೋಧವಿಲ್ಲ. ಆದರೆ, ಕೋಲಾರ ಜಿಲ್ಲೆಯ ಕಟ್ಟಕಡೆಯ ಜಾಗಕ್ಕೂ ನೀರು ಹರಿಯಬೇಕು. ಇಲ್ಲವಾದರೆ, ನಾವು ಸುಮ್ಮನಿರುವುದಿಲ್ಲ” ಎಂದು ಎಚ್ಚರಿಸಿದ್ದಾರೆ.
“ತುಮಕೂರಿನಿಂದ ಕೋಲಾರದವರೆಗೆ ಯೋಜನೆ ವ್ಯಾಪ್ತಿಗೆ ತಂದಿರುವ ಜಿಲ್ಲೆಗಳ ಒಟ್ಟು 170 ಕೆರೆಗಳನ್ನು ತುಂಬಿಸುವುದು ಸೇರಿ ಎಲ್ಲ ಭಾಗಗಳಿಗೆ ಕುಡಿಯುವ ನೀರೊದಗಿಸುವ ವಿಚಾರದಲ್ಲಿ ನಾವು ರಾಜಿ ಆಗುವುದಿಲ್ಲ.

ದೇವರಾಯನದುರ್ಗದ ಬಳಿ 10 ಟಿಎಂಸಿ ಸಾಮರ್ಥ್ಯದ ಜಲ ಸಂಗ್ರಹಗಾರ ಮಾಡುತ್ತೇವೆ ಎಂದರು. ಅಲ್ಲಿ ಅರಣ್ಯ ಮುಳುಗಡೆ ಆಗುತ್ತದೆ ಎಂದ್ಹೇಳಿ ಭೈರಗೊಂಡ್ಲು ಸಮೀಪ 5 ಟಿಎಂಸಿ ಸಂಗ್ರಹಕಾರ ನಿರ್ಮಿಸುವುದಾಗಿ ಸರ್ಕಾರ ಹೇಳಿತು. ಆದರೆ, ಈಗ ಅದೇ ಸರ್ಕಾರವು ಭೈರಗೊಂಡ್ಲುವಿನಲ್ಲಿ 1.5-2 ಟಿಎಂಸಿ ಸಾಮರ್ಥ್ಯದ ಸಂಗ್ರಹಗಾರ ನಿರ್ಮಿಸಲು ತೀರ್ಮಾನ ಮಾಡಿಕೊಂಡಿದೆ. ಇದಕ್ಕೆ ನಮ್ಮ ಪಕ್ಷದ ವಿರೋಧವಿದೆ ಹಾಗೂ ನೀರಿನ ಸಂಗ್ರಹ ಕಡಿಮೆ ಮಾಡಿದರೆ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ನೀರು ಸಿಗುವುದಿಲ್ಲ. ಅಂಥ ಅನ್ಯಾಯ ಮಾಡಿದರೆ ಜೆಡಿಎಸ್ ಸುಮ್ಮನಿರುವುದಿಲ್ಲ ಎಂದು ಹೇಳಿದ್ದಾರೆ.
ನೋಡೆಲ್ ಅಧಿಕಾರಿ ನೇಮಿಸಿ:
ಎತ್ತಿನಹೊಳೆ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಸಮರ್ಥ ಆಧಿಕಾರಿಯೊಬ್ಬರನ್ನು ನೋಡೆಲ್ ಆಫಿಸರ್ ಆಗಿ ನೇಮಕ ಮಾಡುವಂತೆ ಮಾಜಿ ಮುಖ್ಯಮಂತ್ರಿಗಳು ಸರಕಾರಕ್ಕೆ ಸಲಹೆ ಮಾಡಿದ್ದಾರೆ.

ದೇವೇಗೌಡರು ಕೃಷ್ಣ ಮೇಲ್ದಂಡೆ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಐಎಎಸ್ ಅಧಿಕಾರಿ ಜಾಮ್ದಾರ್ ಅವರನ್ನು ನೋಡೆಲ್ ಅಧಿಕಾರಿಯಾಗಿ ನೇಮಿಸಿದ್ದರು. ಅವರಿಗೆ ಪೂರ್ಣ ಅಧಿಕಾರ ನೀಡಿ ಯೋಜನೆ ಶೀಘ್ರವಾಗಿ ಕಾರ್ಯಗತ ಆಗುವಂತೆ ನೋಡಿಕೊಂಡಿದ್ದರು ಎಂದು ಅವರು ತಿಳಿಸಿದ್ದಾರೆ.