ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ.ರೂಪಾ ಹಾಗೂ ಡಿ.ರೂಪಾ ಅವರ ಪತಿ ಮನೀಶ್ ಮೌದ್ಗಿಲ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮಂಗಳವಾರ ಬೆಳಿಗ್ಗೆಯಷ್ಟೇ ಸರ್ಕಾರದ ಮುಖ್ಯಕಾರ್ಯದರ್ಶಿಗಳು ರೋಹಿಣಿ ಸಿಂಧೂರಿ ಹಾಗೂ ಡಿ.ರೂಪಾ ಅವರಿಗೆ ನೋಟಿಸ್ ನೀಡಿ ಖಡಕ್ ಸೂಚನೆ ನೀಡಿತ್ತು.
ರೋಹಿಣಿ ಸಿಂಧೂರಿ ಮತ್ತು ಡಿ.ರೂಪಾ ಅವರಿಗೆ ಯಾವುದೇ ಸ್ಥಳ ನಿಯೋಜನೆ ಮಾಡಿಲ್ಲ. ಈ ಮೂಲಕ ಇಬ್ಬರನ್ನು ಒಂದಿಷ್ಟು ದಿನಗಳ ಮಟ್ಟಿಗೆ ಯಾವುದೇ ಇಲಾಖೆಯ ಅಧಿಕಾರದಿಂದ ದೂರವಿಟ್ಟಿದೆ. ಮುಂದಿನ ದಿನಗಳಲ್ಲಿ ಸ್ಥಳ ನಿಯೋಜನೆ ಮಾಡುವ ಸಾಧ್ಯತೆಗಳಿವೆ.
ಸರ್ವೆ ಮತ್ತು ಲ್ಯಾಂಡ್ ರೆಕಾರ್ಡ್ ಇಲಾಖೆಯ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಮನೀಶ್ ಮೌದ್ಗಿಲ್ ಅವರನ್ನು ಆಡಳಿತ ಸುಧಾರಣೆ ಇಲಾಖೆಗೆ ವರ್ಗಾವಣೆ ಮಾಡಿದೆ. ಸರ್ವೆ ಮತ್ತು ಲ್ಯಾಂಡ್ ರೆಕಾರ್ಡ್ ಇಲಾಖೆಗೆ ಅಲ್ಲಿಯೇ ಹೆಚ್ಚುವರಿ ನಿದೇಶಕರಾಗಿದ್ದ ಸಿ.ಎನ್.ಸುಧೀಂದ್ರ ಅವರನ್ನು ನೇಮಿಸಿದೆ.

ಇತರ ಅಧಿಕಾರಿಗಳ ವರ್ಗಾವಣೆ
ರೋಹಿಣಿ ಸಿಂಧೂರಿ ಅವರು ಧಾರ್ಮಿಕ ದತ್ತಿ ಇಲಾಖೆಯ ಆಯಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸದ್ಯ ಅವರ ಜಾಗಕ್ಕೆ ಕೌಶಲ್ಯ ಅಭಿವೃದ್ಧಿ ಇಲಾಖೆಯ ಬಸವರಾಜೇಂದ್ರ ಎಚ್ ಅವರನ್ನು ನೇಮಕ ಮಾಡಿದೆ. ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗದ್ದ ಡಿ.ರೂಪಾ ಅವರನ್ನು ವರ್ಗಾವಣೆ ಮಾಡಿದ್ದು, ಭಾರತಿ.ಡಿ ಎಂಬುವವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸ್ಥಳ ನಿಯೋಜನೆಗೆ ಕಾಯುತ್ತಿದ್ದ ಎಚ್.ವಿ.ದರ್ಶನ್ ಎಂಬುವವರನ್ನು ತುಮಕೂರು ಮಹಾನಗರ ಪಾಲಿಕೆಗೆ ಆಯುಕ್ತರಾಗಿ ನೇಮಿಸಿದೆ. ಆಡಳಿತ ಸುಧಾರಣೆ ಇಲಾಖೆಯ ಡಿ.ಶ್ರೀವತ್ಸಾ ಕೃಷ್ಣಾ ಅವರನ್ನು ಸ್ಥಳ ನಿಯೋಜನೆಗೆ ಕಾಯ್ದಿರಿಸಿದೆ.



