ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ತಯಾರಿಗಳು ಆರಂಭವಾಗಿವೆ. ಅದರಲ್ಲೂ ಆಡಳಿತ ಪಕ್ಷಕ್ಕಿಂತ ಪ್ರತಿಪಕ್ಷಗಳ ಪಾಳೆಯದಲ್ಲಿ ಚುನಾವಣಾ ತಯಾರಿಗಳು ಪೈಪೋಟಿಯ ಮೇಲೆ ಬಿರುಸುಗೊಂಡಿವೆ. ಆದರೆ, ಈ ಬಾರಿ ವಾಡಿಕೆಗಿಂತ ಭಿನ್ನವಾಗಿ ಆ ತಯಾರಿಗಳು ನಡೆಯುತ್ತಿವೆ ಎಂಬುದು ವಿಶೇಷ.
ರಾಜ್ಯದ ರಾಜಕಾರಣದ ದಿಕ್ಕು ಬದಲಿಸಿದ ಇತ್ತೀಚಿನ ಕೆಲವು ವಿಧಾನಸಭಾ ಚುನಾವಣೆಗಳಲ್ಲಿ ಮಣ್ಣು, ಹೊನ್ನು ಮತ್ತು ಮತಧರ್ಮಗಳು ಪ್ರಮುಖವಾಗಿ ಸದ್ದು ಮಾಡಿದ್ದವು. ಅದು 2013ರ ಚುನಾವಣೆಯ ಬಳ್ಳಾರಿ ಗಣಿಗಾರಿಕೆಯ ವಿಷಯ ಇರಬಹುದು, 2018ರ ಚುನಾವಣೆಯ ಕೋಮುವಾದ ಮತ್ತು ಭ್ರಷ್ಟಾಚಾರದ ವಿಷಯಗಳಿರಬಹುದು, ಪ್ರತ್ಯೇಕ ಲಿಂಗಾಯತ ಧರ್ಮವಿರಬಹುದು,.. ಪ್ರತಿ ಚುನಾವಣೆಯಲ್ಲೂ ಮಣ್ಣು, ಹೊನ್ನು ಮತ್ತು ಧರ್ಮ-ದೇವರುಗಳೇ ರಾಜಕೀಯ ಪಕ್ಷಗಳ ನಡುವಿನ ವಾಕ್ಸಮರದ ವಿಷಯಗಳಾಗಿದ್ದವು.
ಆದರೆ, ಮುಂದಿನ ಬಾರಿಯ ಚುನಾವಣೆ ಮಣ್ಣು, ಹೊನ್ನು, ದೇವರ ಬದಲಿಗೆ ನೀರಿನ ಮೇಲೆ ನಡೆಯುವ ಸೂಚನೆಗಳು ಈಗಾಗಲೇ ಸಿಕ್ಕಿವೆ. ಏಕೆಂದರೆ ಪ್ರಮುಖವಾಗಿ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳೆರಡೂ ಆಡಳಿತರೂಢ ಬಿಜೆಪಿಯ ವಿರುದ್ಧ ಜಲಾಸ್ತ್ರ ಪ್ರಯೋಗಕ್ಕೆ ಸಜ್ಜಾಗಿವೆ! ಕಾಂಗ್ರೆಸ್ಸಿನ ಬಹುಚರ್ಚಿತ ‘ಮೇಕೆದಾಟು ಪಾದಯಾತ್ರೆ’ ಹಾಗೂ ಅದಕ್ಕೆ ಪ್ರತಿಯಾಗಿ ಜೆಡಿಎಸ್ ಹಮ್ಮಿಕೊಂಡಿರುವ ‘ಜಲಧಾರೆ ಯಾತ್ರೆ’ಗಳು ಈಗಾಗಲೇ ಮುಂದಿನ ಚುನಾವಣೆಯ ಅಜೆಂಡಾ ಸೆಟ್ ಮಾಡುವ ದಿಕ್ಕಿನಲ್ಲಿ ಬಹುತೇಕ ಯಶಸ್ವಿಯಾಗಿವೆ. ಹಾಗಾಗಿ ಮುಂದಿನ ಚುನಾವಣೆ ರಾಜ್ಯದ ಮಟ್ಟಿಗಂತೂ ಮೂರೂ ಪಕ್ಷಗಳ ನಡುವಿನ ‘ಜಲ ಯುದ್ಧ’ವಾಗುವ ಸಾಧ್ಯತೆಗಳು ದಟ್ಟವಾಗಿವೆ.
ಆದರೆ, ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇದೆ. ಈ ನಡುವೆ ಈ ಜಲ ಸಮರ ರಾಜ್ಯದ ರಾಜಕಾರಣದಲ್ಲಿ ಏನೆಲ್ಲಾ ಸದ್ದು ಮಾಡಬಹುದು? ಯಾವೆಲ್ಲಾ ಪಕ್ಷದಲ್ಲಿ ಯಾವ ಅಲೆಗಳನ್ನು ಸೃಷ್ಟಿಸಬಹುದು? ಆ ಅಲೆಗಳನ್ನು ಯಾರನ್ನೆಲ್ಲಾ ಕೊಚ್ಚಿಕೊಂಡು ಹೋಗಬಹುದು ? ಎಂಬ ಚರ್ಚೆಗಳು ಈಗಾಗಲೇ ಆರಂಭವಾಗಿವೆ. ವಾಸ್ತವವಾಗಿ 2023ರ ಚುನಾವಣೆಯ ಅಖಾಡದಲ್ಲಿ ಈ ಜಲ ಯುದ್ಧದ ಪರಿಣಾಮಗಳಿಗಿಂತ ಹೆಚ್ಚು ಕುತೂಹಲ ಮೂಡಿಸಿರುವುದು ಈ ನಡುವಿನ ಅವಧಿಯಲ್ಲಿ ಅದು ಎಬ್ಬಿಸಬಹುದಾದ ಅಲೆಗಳು ಮತ್ತು ಆ ಅಲೆಗಳು ಕೊಚ್ಚಿ ಒಯ್ಯಬಹುದಾದ ರಾಜಕೀಯ ಮಹತ್ವಾಕಾಂಕ್ಷೆಗಳೇ ಹೆಚ್ಚು ಕುತೂಹಲ ಕೆರಳಿಸಿವೆ.
Also Read : ಸಿ ಟಿ ರವಿ ಕನ್ನಡ ವಿರೋಧಿ ಧೋರಣೆಗೆ ಹೊಸ ಸೇರ್ಪಡೆ ಮೇಕೆದಾಟು ಹೇಳಿಕೆ ವಿವಾದ!
ಏಕೆಂದರೆ; ಕಾಂಗ್ರೆಸ್ ಅಂಗಳದಲ್ಲಂತೂ ಇನ್ನೂ ಜಲ ಸಮರದ ಅಲೆಗಳು ಮೂಡುವ ಮುನ್ನವೇ ಕಂಪನ ಆರಂಭವಾಗಿದೆ. 2013ರ ಚುನಾವಣೆಗೆ ಮುನ್ನ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಗಣಿ ಅಕ್ರಮ ವಿರೋಧಿ ಬಳ್ಳಾರಿ ಪಾದಯಾತ್ರೆ ಆ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಜಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎಂಬುದು ಈಗ ಇತಿಹಾಸ. ಜೊತೆಗೆ ಆ ಪಾದಯಾತ್ರೆಯ ವರ್ಚಸ್ಸು ಕೂಡ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಗಿರಿ ಒಲಿಯಲು ದೊಡ್ಡ ಕೊಡುಗೆ ನೀಡಿತು ಎಂಬುದು ಕೂಡ ತಳ್ಳಿಹಾಕಲಾಗದು. ಅಂದರೆ; ಒಂದು ಪ್ರಮುಖ ವಿಷಯವನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಆಗಿನ ಅಧಿಕಾರರೂಢ ಪಕ್ಷ ಬಿಜೆಪಿಯ ವಿರುದ್ಧ ನಡೆಸಿದ ಆ ಪಾದಯಾತ್ರೆ ಏಕ ಕಾಲಕ್ಕೆ ಬಿಜೆಪಿಯ ಧೂಳೀಪಟಕ್ಕೂ, ಕಾಂಗ್ರೆಸ್ ದಿಗ್ವಿಜಯಕ್ಕೂ ಕಾರಣವಾಯಿತು. ಅದಕ್ಕಿಂತ ಹೆಚ್ಚಾಗಿ ಆ ಪಾದಯಾತ್ರೆಯ ಯಶಸ್ಸು ಸಿದ್ದರಾಮಯ್ಯ ಅವರಿಗೆ ದಶಕಗಳ ನಿರೀಕ್ಷೆಯ ಮುಖ್ಯಮಂತ್ರಿ ಪಟ್ಟವನ್ನು ಸಲೀಸುಗೊಳಿಸಿತು ಎಂಬುದು ಗಮನಾರ್ಹ.
![](https://pratidhvani.com/wp-content/uploads/2022/01/Mekedatu-e16371527255141.jpg)
ಈ ಹಿನ್ನೆಲೆಯಲ್ಲಿಯೇ ಇದೀಗ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಮೇಕೆದಾಟು ಪಾದಯಾತ್ರೆ ಯೋಜಿಸಿದ್ದಾರೆ. ಐದು ಜಿಲ್ಲೆಗಳ ಕುಡಿಯುವ ನೀರಿನ ಪ್ರಶ್ನೆಯಾದ ಈ ಮುಂದಿನ ಚುನಾವಣೆಯವರೆಗೆ ಜೀವಂತವಾಗಿಟ್ಟು, ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಪ್ರಭಾವ ವೃದ್ದಿಸಲು ಈ ಪಾದಯಾತ್ರೆಯನ್ನು ಊರುಗೋಲಾಗಿ ಬಳಸಿಕೊಳ್ಳುವುದು ಡಿ ಕೆ ಶಿವಕುಮಾರ್ ಲೆಕ್ಕಾಚಾರ ಎಂಬುದು ಸಾಮಾನ್ಯವಾಗಿ ಕೇಳಿಬರುತ್ತಿರುವ ಮಾತು. ಹಳೇ ಮೈಸೂರು ಭಾಗದಲ್ಲಿ ಪ್ರಾಬಲ್ಯ ಹೊಂದಿರುವ ಜೆಡಿಎಸ್ ಬಲಗುಂದಿಸುವ ಮೂಲಕ ಕಾಂಗ್ರೆಸ್ ಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಈ ಮೇಕೆದಾಟು ಪಾದಯಾತ್ರೆ ಸಫಲವಾಗಲೂಬಹುದು. ಮುಂದಿನ ಬಾರಿ ಅಧಿಕಾರ ಹಿಡಿಯಲು ಹಳೇಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನ ಗಳಿಸುವುದು ಕಾಂಗ್ರೆಸ್ಸಿಗೆ ಅನಿವಾರ್ಯ ಎಂಬ ಹಿನ್ನೆಲೆಯಲ್ಲಿ ಪಾದಯಾತ್ರೆಯ ಮಹತ್ವ ಅರಿವಾಗದೇ ಇರದು.
ಆದರೆ, ಇದಿಷ್ಟೇ ಆಗಿದ್ದರೆ ಬಹುಶಃ ಡಿಕೆ ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಈ ಪಾದಯಾತ್ರೆ ಇಷ್ಟೊಂದು ಸುದ್ದಿಯಾಗುತ್ತಿರಲಿಲ್ಲ. ಮುಖ್ಯವಾಗಿ 2013ರ ಬಳ್ಳಾರಿ ಪಾದಯಾತ್ರೆಯ ಮಾದರಿಯಲ್ಲೇ ಸಾಗುತ್ತಿರುವ ಮೇಕೆದಾಟು ಪಾದಯಾತ್ರೆ, ಆ ಪಾದಯಾತ್ರೆಯ ಹಾದಿಯಲ್ಲೇ ಸಾಗಿ, ಯಶಸ್ಸು ಕಂಡು, ಅಂತಹದ್ದೇ ಪಲಿತಾಂಶವನ್ನು ಮತ್ತು ಪರಿಣಾಮವನ್ನು ನೀಡಲಿದೆ ಎಂಬುದು ಇಲ್ಲಿರುವ ಲೆಕ್ಕಾಚಾರ! ಅಂದರೆ; ಮೇಕೆದಾಟು ಪಾದಯಾತ್ರೆ ಇಡೀ ಕರ್ನಾಟಕದಾದ್ಯಂತ ಅಲ್ಲದೇ ಹೋದರೂ ಕನಿಷ್ಟ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಮತ್ತು ಮೈಸೂರು ಭಾಗದ ಮೈಸೂರು, ಮಂಡ್ಯ, ಚಾಮರಾಜನಗರ ಭಾಗದಲ್ಲಿ ಪಕ್ಷಕ್ಕೆ ಬಲ ತುಂಬಲಿದೆ. ಹೆಚ್ಚು ಸ್ಥಾನಗಳನ್ನು ಗೆಲ್ಲಲು ನೆರವಾಗಲಿದೆ. ಆ ಬಲದ ಮೇಲೆಯೇ ಪಕ್ಷ ಅಧಿಕಾರಕ್ಕೂ ಬಂದಲ್ಲಿ, ಆ ಗೆಲುವಿನ ಸಿಂಹಪಾಲು ತಮ್ಮದಾಗಲಿದೆ ಮತ್ತು ಪ್ರತಿಫಲವಾಗಿ ಸಿಎಂ ಕುರ್ಚಿಗೆ ಹಕ್ಕು ಮಂಡಿಸುವ ಅರ್ಹತೆ ತಮ್ಮದಾಗಲಿದೆ ಎಂಬುದು ಶಿವಕುಮಾರ್ ಲೆಕ್ಕಾಚಾರ ಎನ್ನಲಾಗುತ್ತಿದೆ!
ಪ್ರದೇಶ ಕಾಂಗ್ರೆಸ್ ನಾಯಕರ ಇಂತಹ ಲೆಕ್ಕಾಚಾರಗಳ ಕಾರಣದಿಂದಾಗಿಯೇ ಮಂಡ್ಯ, ಮೈಸೂರು ಭಾಗದ ಸಿದ್ದರಾಮಯ್ಯ ಬೆಂಬಲಿಗರು ಮತ್ತು ಅಭಿಮಾನಿಗಳು ಮೇಕೆದಾಟು ಪಾದಯಾತ್ರೆಯ ವಿಷಯದಲ್ಲಿ ಆಕ್ಷೇಪವೆತ್ತುತ್ತಿದ್ದಾರೆ. ಬಹಿರಂಗವಾಗಿಯೂ ಅವರು ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ. ಜೊತೆಗೆ ಸ್ವತಃ ಸಿದ್ದರಾಮಯ್ಯ ಕೂಡ ಪಾದಯಾತ್ರೆಯ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಿಲ್ಲ ಎಂಬುದು ಗುಟ್ಟೇನಲ್ಲ. ಸಿದ್ದರಾಮಯ್ಯ ಪ್ರಾಬಲ್ಯದ ಮೈಸೂರು ಭಾಗದಲ್ಲಿ ನಾಳೆ ಕಾಂಗ್ರೆಸ್ ಪಾದಯಾತ್ರೆಯ ಬಲದ ಮೇಲೆ ಬಲವೃದ್ಧಿಸಿಕೊಂಡು ಹೆಚ್ಚು ಸ್ಥಾನ ಗಳಿಸಿದರೆ ಅದು ಖಂಡಿತವಾಗಿಯೂ ಮತ್ತೊಮ್ಮೆ ಸಿಎಂ ಸ್ಥಾನಕ್ಕೇರುವ ಸಿದ್ದರಾಮಯ್ಯ ಮಹತ್ವಾಕಾಂಕ್ಷೆಯನ್ನು ಮಣ್ಣುಪಾಲು ಮಾಡಲಿದೆ ಎಂಬುದು ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರ ಆತಂಕ.
Also Read : ಮೇಕೆದಾಟು: ರಾಜಕೀಯ ಕುತಂತ್ರಕ್ಕೆ ಬಲಿಯಾಗುತ್ತಿರುವ ಕಾನೂನು ಸಮರದಿಂದ ಬಗೆಹರಿಯಬೇಕಾದ ವಿವಾದ
ಹಾಗಾಗಿ, ಸ್ವತಃ ಡಿ ಕೆ ಶಿವಕುಮಾರ್ ಅವರ ಮಹಾತ್ವಾಕಾಂಕ್ಷೆ ಮತ್ತು ಆ ಮಹಾತ್ವಾಕಾಂಕ್ಷೆಗೆ ಪೂರಕವಾಗಿ ಯೋಜಸಿರುವ ಮೇಕೆದಾಟು ಪಾದಯಾತ್ರೆ ಪ್ರತಿಪಕ್ಷಗಳಲ್ಲಿ ಕಂಪನ ಹುಟ್ಟಿಸುವ ಮುನ್ನವೇ ಸ್ವಪಕ್ಷ ಕಾಂಗ್ರೆಸ್ಸಿನ ಒಳಗೇ ಕಂಪನ ಹುಟ್ಟಿಸಿದೆ. ಆ ಕಂಪನದ ತೀವ್ರತೆ ಎಷ್ಟು ಎಂಬುದರ ಮೇಲೆ ಅದು ಭೂಕಂಪನವಾಗುವುದೋ ಅಥವಾ ಕೇವಲ ಲಘು ಕಂಪನವಾಗಿ ಮುಗಿದುಹೋಗುವುದು ಎಂಬುದು ನಿಂತಿದೆ!
ಅದೇ ಹೊತ್ತಿಗೆ, ಹಳೇ ಮೈಸೂರು ಭಾಗದಲ್ಲಿ ಮಾತ್ರ ಸದ್ಯಕ್ಕೆ ಅಸ್ತಿತ್ವ ಉಳಿಸಿಕೊಂಡಿರುವ ಜಾತ್ಯತೀತ ಜನತಾ ದಳದ ಮೇಲೆ ಡಿ ಕೆ ಶಿವಕುಮಾರ್ ಅವರ ಈ ಮೇಕೆದಾಟು ಪಾದಯಾತ್ರೆ ಹೇಗೆ ಪರಿಣಾಮ ಬೀರಲಿದೆ? ಜೆಡಿಎಸ್ ಅಸ್ತಿತ್ವಕ್ಕೇ ಅದು ಪೆಟ್ಟುಕೊಡುವ ಸಾಧ್ಯತೆ ಇದೆಯೇ ಎಂಬ ಚರ್ಚೆಯೂ ಇದೆ. ಸ್ವತಃ ಜೆಡಿಎಸ್ ನಾಯಕ ಎಚ್ ಡಿ ಕುಮಾರ ಸ್ವಾಮಿ ಅವರು ಮೇಕೆದಾಟು ಪಾದಯಾತ್ರೆಯ ಕುರಿತು ನೀಡುತ್ತಿರುವ ಉಗ್ರ ಹೇಳಿಕೆಗಳು ಮತ್ತು ಆತಂಕದ ಪ್ರತಿಕ್ರಿಯೆಗಳು ಕೂಡ ಅಂತಹ ಅಪಾಯದ ಮುನ್ಸೂಚನೆ ಈಗಾಗಲೇ ‘ದಳಪತಿ’ಗಳಿಗೆ ಸಿಕ್ಕಿದೆ ಎಂಬ ಸುಳಿವು ನೀಡುತ್ತಿವೆ. ಜೆಡಿಎಸ್ ನಾಯಕರ ಟ್ವೀಟ್ ಸಮರ ಮತ್ತು ಮಾಧ್ಯಮ ಹೇಳಿಕೆಗಳಲ್ಲಿ ಮೇಕೆದಾಟು ಯಾತ್ರೆ ಜೆಡಿಎಸ್ ನಲ್ಲಿ ಹುಟ್ಟಿಸಿರುವ ಆತಂಕ ಸ್ಪಷ್ಟವಾಗುತ್ತಿದೆ.
ಆ ಹಿನ್ನೆಲೆಯಲ್ಲೇ ಜೆಡಿಎಸ್ ಕೂಡ ಜಲಧಾರೆ ಯಾತ್ರೆ ಘೋಷಿಸಿದೆ. ವಾಸ್ತವವಾಗಿ ಕಳೆದ ಆಗಸ್ಟ್ ನಲ್ಲಿಯೇ ಜೆಡಿಎಸ್ ನಾಯಕರು ಜಲಧಾರೆ ಯಾತ್ರೆಯ ಬಗ್ಗೆ ಪ್ರಸ್ತಾಪಿಸಿದ್ದರೂ, ಅದನ್ನು ಗಂಭೀರವಾಗಿ ಪರಿಗಣಿಸಿ ತುರ್ತಾಗಿ ಯೋಜಿಸಿ ಅನುಷ್ಠಾನಕ್ಕೆ ಸಿದ್ಧತೆ ಆರಂಭಿಸಿರುವುದು ಮೇಕೆದಾಟು ಪಾದಯಾತ್ರೆ ಘೋಷಣೆಯಾದ ಬಳಿಕವಷ್ಟೇ. ಹಾಗಾಗಿ ‘ಮೇಕೆದಾಟು’ಗೆ ಪ್ರತಿಯಾಗಿ ಜೆಡಿಎಸ್ ‘ಜಲಧಾರೆ’ ದಾಳ ಉರುಳಿಸಿದೆ.
ಮೇಕೆದಾಟು ಯೋಜನೆಯ ಮುಖ್ಯ ಉದ್ದೇಶವೇ ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವುದಾದ್ದರಿಂದ ಸಹಜವಾಗಿಯೇ ಆ ವಿಷಯ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮಹತ್ವದ ರಾಜಕೀಯ ಸಂಗತಿಯಾಗಲಿದೆ. ಬೆಂಗಳೂರಿಗೆ ಕುಡಿಯುವ ನೀರು ನೀಡುವ ಇಂತಹ ಯೋಜನೆಗೆ ಡಿಪಿಆರ್ ತಯಾರಿಸಿ ಕೇಂದ್ರದ ಅನುಮತಿ ಕೋರಿದ್ದೆವು. ಬಿಜೆಪಿಯ ಕೇಂದ್ರ ಸರ್ಕಾರ ಸಕಾಲದಲ್ಲಿ ಅನುಮತಿ ನೀಡಲಿಲ್ಲ. ಅಷ್ಟರಲ್ಲಿ ನಮ್ಮ ಅಧಿಕಾರವಧಿಯೇ ಮುಗಿದುಹೋಯಿತು. ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ಯೋಜನೆ ಜಾರಿಗೆ ಮನಸ್ಸು ಮಾಡುತ್ತಿಲ್ಲ ಎಂಬುದನ್ನು ಕಾಂಗ್ರೆಸ್ ಪ್ರಮುಖವಾಗಿ ಬಿಂಬಿಸುವ ಮೂಲಕ ಬೆಂಗಳೂರಿಗರ ಕಣ್ಣಲ್ಲಿ ಬಿಜೆಪಿಯನ್ನು ಭಿನ್ನವಾಗಿ ಚಿತ್ರಿಸಲು ಯತ್ನಿಸುತ್ತಿದೆ. ಯೋಜನೆಗೆ ಕೇಂದ್ರದ ಅನುಮತಿ ಮತ್ತು ಯೋಜನೆ ಅನುಷ್ಠಾನದ ವಿಷಯದಲ್ಲಿ ಕೂಡ ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಜನತಾ ಕಟಕಟೆಯಲ್ಲಿ ನಿಲ್ಲಿಸುವುದು ಕಾಂಗ್ರೆಸ್ಸಿನ ಲೆಕ್ಕಾಚಾರ.
Also Read : ಮೇಕೆದಾಟು ಯೋಜನೆ : ಬಿಜೆಪಿ ಡಬಲ್ ಗೇಮ್ ; ತಮಿಳುನಾಡು, ಕರ್ನಾಟಕ ಎರಡು ರಾಜ್ಯಗಳಲ್ಲೂ ವೋಟ್ ಬ್ಯಾಂಕ್ ಪಾಲಿಟಿಕ್ಸ್
ಹಾಗಾಗಿ ರಾಜ್ಯದ ಅಧಿಕಾರ ಹಿಡಿಯಲು ನಿರ್ಣಾಯಕವಾಗಿರುವ ಬೆಂಗಳೂರಿನ ವಿಧಾನಸಭಾ ಕ್ಷೇತ್ರಗಳ ಪೈಕಿ ಹೆಚ್ಚಿನ ಸ್ಥಾನಗಳನ್ನು ಪಡೆದಿರುವ ಬಿಜೆಪಿಗೆ ಇದು ಬಿಕ್ಕಟ್ಟಿನ ಪರಿಸ್ಥಿತಿ. ಅದೇ ಕಾರಣಕ್ಕೆ ಕಾಂಗ್ರೆಸ್ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಲಾಗದ ಬಿಜೆಪಿ, ತಾಂತ್ರಿಕ ಅಂಶಗಳನ್ನು, ಡಿಪಿಆರ್ ವಿಷಯವನ್ನು ಮುಂದಿಟ್ಟು ಪ್ರತಿಪಕ್ಷಕ್ಕೆ ತಿರುಗೇಟು ನೀಡುವ ಯತ್ನ ಮಾಡುತ್ತಿದೆ. ಜೊತೆಗೆ ಪಾದಯಾತ್ರೆ ಯಶಸ್ಸಿಯಾಗದಂತೆ ಮಾಡಲು ಹಲವು ಪ್ರತಿತಂತ್ರಗಳನ್ನೂ ಹೆಣೆಯುತ್ತಿದೆ.
ಒಟ್ಟಾರೆ, ಮೇಕೆದಾಟು ಪಾದಯಾತ್ರೆ ಕೇವಲ ಮುಂದಿನ ಸಿಎಂ ಗಾದಿಯ ಪೈಪೋಟಿಗೆ ಸೀಮಿತವಾದ ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಹಾವು ಏಣಿ ಆಟವಾಗಿ ಮುಗಿದುಹೋಗುವುದೆ? ಅಥವಾ ಹಳೇ ಮೈಸೂರು ಭಾಗದ ಜೆಡಿಎಸ್ ತಾಯಿಬೇರನ್ನೇ ಕಿತ್ತು ಹಾಕಿ ಪ್ರಾದೇಶಿಕ ಪಕ್ಷವನ್ನು ಬುಡಮೇಲು ಮಾಡುವುದೆ? ಅಥವಾ ಬೆಂಗಳೂರಿನಲ್ಲಿ ಬಿಜೆಪಿಗೆ ಮರ್ಮಾಘಾತ ನೀಡುವ ಮೂಲಕ ಮುಂದಿನ ಬಾರಿ ಅಧಿಕಾರ ಹಿಡಿಯಲು ದಾಳವಾಗುವುದೇ ? ಎಂಬ ಹಲವು ಪ್ರಶ್ನೆಗಳು ಮೇಕೆದಾಟು ಪಾದಯಾತ್ರೆಯ ಸುತ್ತ ಎದ್ದಿವೆ. ಪಾದಯಾತ್ರೆ ಜ.9ರಂದು ಆರಂಭವಾಗಿ 19ಕ್ಕೆ ಮುಕ್ತಾಯವಾಗುವ ಮುನ್ನವೇ ಬಹುತೇಕ ಈ ಪ್ರಶ್ನೆಗಳಿಗೆ ಒಂದು ಮಟ್ಟದ ಉತ್ತರಗಳೂ ಸಿಗಬಹುದು!