
ತಮಿಳುನಾಡಿನಲ್ಲಿ ಮುಂದಿನ ವರ್ಷ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳು ಚುನಾವಣಾ ರಣತಂತ್ರ ಮಾಡುವಲ್ಲಿ ನಿರತರಾಗಿದ್ದಾರೆ. ಈಗಾಗಲೇ ಎಐಡಿಎಂಕೆ (AIDMK) ಜೊತೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಬಿಜೆಪಿ(BJP), ಸೀಟು ಹಂಚಿಕೆ ಕಸರತ್ತು ಮಾಡುತ್ತಿದೆ. ಎಐಡಿಎಂಕೆ ಜೊತೆಗಿನ ಮೈತ್ರಿಗಾಗಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾ ಮಲೈ (Ex IPS Anna Malai) ಅವರನ್ನು ತಮಿಳುನಾಡು ರಾಜಕೀಯದಿಂದ ದೂರ ಇಡುವ ಕೆಲಸ ಮಾಡಿದೆ. ಇದೀಗ ಬಿಜೆಪಿ ಹಾಗು ಎಐಡಿಎಂಕೆ ರಣತಂತ್ರಕ್ಕೆ ಪ್ರತಿತಂತ್ರ ಮಾಡಲು ಹಾಲಿ ಅಧಿಕಾರದಲ್ಲಿ ಇರುವ ಡಿಎಂಕೆ (DMK) ಮುಂದಾಗಿದೆ. ಸಂಪುಟ ಪುನಾರಚನೆ ಮಾಡಲು ಎಂ.ಕೆ ಸ್ಟಾಲಿನ್ (MK Stalin) ಮುಂದಾಗಿದ್ದಾರೆ.
ಕರುಣಾನಿಧಿ ಪುತ್ರ ಎಂ.ಕೆ ಸ್ಟಾಲಿನ್ ಮುಖ್ಯಮಂತ್ರಿ ಆಗಿ ಯಶಸ್ವಿಯಾಗಿ ಆಡಳಿತ ನಡೆಸುತ್ತಿದ್ದು, ಮುಂದಿನ ಬಾರಿಯ ಚುನಾವಣೆಗೂ ಮುನ್ನ ಅಸಮಾಧಾನಿತ ಸಣ್ಣ ಪುಟ್ಟ ಸಮುದಾಯಗಳನ್ನು ಸಮಾಧಾನ ಮಾಡುವ ಕೆಲಸಕ್ಕೆ ಕೈಹಾಕಿದ್ದಾರೆ. ಈಗ ಹಾಲಿ ಸಂಪುಟದಲ್ಲಿ ಕೆಲಸ ಮಾಡಿರುವ ಸಚಿವರನ್ನು ಪಕ್ಷದ ಕಾರ್ಯಕ್ಕೆ ನಿಯೋಜನೆ ಮಾಡಿ ಅವಕಾಶ ಸಿಗದೆ ಇರುವ ಜಾತಿಗಳ ಶಾಸಕರನ್ನು ಸಚಿವರನ್ನಾಗಿ ಮಾಡಿ, ಮತಗಳಿಕೆಗೆ ಯೋಜನೆ ರೂಪಿಸಿದ್ದಾರೆ. ಇದೇ ಕಾರಣಕ್ಕೆ ಇಬ್ಬರು ಸಚಿವರು ಈಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅರಣ್ಯ ಸಚಿವ ಕೆ ಪೊನ್ಮುಡಿ ಹಾಗು ವಿದ್ಯುತ್, ಅಬಕಾರಿ ಸಚಿವ ವಿ. ಸೆಂಥಿ ಬಾಲಾಜಿ (Senthi Balaji) ಭಾನುವಾರ ರಾತ್ರಿ ರಾಜೀನಾಮೆ ನೀಡಿದ್ದಾರೆ.
ಇತ್ತೀಚಿಗಷ್ಟೇ ವಿ. ಸೆಂಥಿ ಬಾಲಾಜಿ ವಿರುದ್ಧ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಪ್ರಕರಣ ದಾಖಲು ಮಾಡಿದ್ದರು. ಜಾರಿ ನಿರ್ದೇಶನಾಲಯ (ED) ವಿಚಾರಣೆಯನ್ನೂ ಎದುರಿಸಿದ್ದರು. ಇನ್ನು ಸುಪ್ರೀಂಕೋರ್ಟ್ ಕೂಡ ಸಚಿವ ಸ್ಥಾನ ಅಥವಾ ವೈಯಕ್ತಿಕ ಸ್ವಾತಂತ್ರ್ಯ ಎರಡಲ್ಲಿ ಒಂದನ್ನು ಆಯ್ಕೆ ಮಾಡುವಂತೆ ಸೂಚನೆ ಕೊಟ್ಟಿತ್ತು. ಒಂದು ವೇಳೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ ಎಂದರೆ ಬೇಲ್ ಹಿಂಪಡೆಯುವುದಾಗಿಯೂ ಸೂಚನೆ ಕೊಟ್ಟಿತ್ತು. ಹೀಗಾಗಿಯೇ ಸಚಿವ ಸ್ಥಾನಕ್ಕೆ ವಿ ಸೆಂಥಿ ಬಾಲಾಜಿ ರಾಜೀನಾಮೆ ಕೊಡುವುದು ಅನಿವಾರ್ಯ ಆಗಿತ್ತು ಅನ್ನೋ ಚರ್ಚೆಗಳು ನಡೆಯುತ್ತಿವೆ.
ಇನ್ನು ಡಾ ಕೆ. ಪೊನ್ಮುಡಿ ಕೂಡ ಇತ್ತೀಚಿಗೆ ಶೈವಾಸ್ ಹಾಗು ವೈಷ್ಣವಾಸ್ ನಡುವೆ ನೀಡಿದ್ದ ಹೇಳಿಕೆ ಚರ್ಚೆಗೆ ಗ್ರಾಸವಾಗಿತ್ತು. ವಿವಾದದ ಸ್ವರೂಪವನ್ನೂ ಪಡೆದಿತ್ತು. ಹೇಳಿಕೆಗೆ ಭಾರೀ ವಿರೋಧ ಹಾಗು ಟೀಕೆಗೆ ಒಳಗಾದ ಬಳಿಕ ಪ್ರಕರಣ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ. ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇರುವ ಕಾರಣಕ್ಕೆ ಪಾರ್ಟಿಯಲ್ಲಿ ನೀಡಿದ್ದ ಸ್ಥಾನಮಾನ ಹಾಗು ಸಚಿವ ಸ್ಥಾನವನ್ನು ವಾಪಸ್ ಪಡೆಯುವ ನಿರ್ಧಾರ ಮಾಡಲಾಗಿದೆ. ಇದ್ರ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಮಾಡಿ ಹಿರಿಯ ನಾಯಕರನ್ನು ಪಕ್ಷದ ಜವಾಬ್ದಾರಿ ನೀಡಿ, ಸ್ವಚ್ಛ ಸಂಪುಟ ಇಟ್ಟುಕೊಂಡು ಚುನಾವಣೆ ಮಾಡಲು ಸ್ಟಾಲಿನ್ ಮುಂದಾಗಿದ್ದಾರೆ. ವಿರೋಧ ಪಕ್ಷಗಳ ಬಾಯಿಗೆ ಆಹಾರ ಆಗದಂತೆ ಗೆಲುವು ಪಡೆಯುವ ತಂತ್ರಗಾರಿಕೆ ಮಾಡುತ್ತಿದ್ದಾರೆ ಎನ್ನುವುದು ಸದ್ಯಕ್ಕೆ ನಡೆಯುತ್ತಿರೋ ಚರ್ಚೆ.
