ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ವಸತಿ ಸಚಿವ ಸೋಮಣ್ಣ ನಡುವೆ ವಾಕ್ಸಮರ ಶುರುವಾಗಿದ್ದು ಭಾನುವಾರ ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿದ ಆರೋಪಕ್ಕೆ ತಿರುಗೇಟು ನೀಡಿರುವ ವಸತಿ ಸಚಿವ ಸೋಮಣ್ಣ ನೀವು ಯಾರ ಯಾರ ಹೆಸರಿನಲ್ಲಿ ಆಸ್ತಿ ಮಾಡಿದ್ದೀರಿ ಎಂಬುದು ನನ್ನಗೆ ಗೊತ್ತಿದೆ ಎಂದು ತಿರುಗೇಟು ನೀಡಿದ್ದಾರೆ.
ಕೆಲವು ನಾಯಿ ನರಿಗಳ ಜೊತೆ ಸೇರಿಕೊಂಡು ಬಾಯಿಗೆ ಬಂದಂಗೆ ಮಾತನಾಡುವ ಮೂಲಕ ಸಿದ್ದರಾಮಯ್ಯ ತಮ್ಮ ಗೌರವ ಹಾಗೂ ಘನತೆಗೆ ಧಕ್ಕೆ ಉಂಟು ಮಾಡಿಕೊಂಡಿದ್ದಾರೆ. ಅವರು ಈ ರೀತಿ ಮಾತನಾಡಿರುವುದು ನನ್ನಗೆ ನೋವುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರಾಜಕೀಯದಲ್ಲಿ ಅವರಷ್ಟೇ ಸರ್ವೀಸ್ ನನ್ನಗೂ ಆಗಿದೆ ಅವರು ಮಾಡಿರುವ ಆಸ್ತಿ ಬಗ್ಗೆ ನನ್ನಗೂ ಮಾಹಿತಿ ಇದೆ ಯಾರದ್ದೋ ಮಾತು ಕೇಳಿಕೊಂಡು ನನ್ನ ಮೇಲೆ ಕಮಿಷನ್ ಆರೋಪ ಮಾಡಿದ್ದಾರೆ. ನಾನು ಸಿದ್ದಗಂಗಾ ಹಾಗೂ ಆದಿಚುಂಚನಗಿರಿ ಶ್ರೀಗಳ ಹೆಸರನ್ನು ಹೇಳಿಕೊಂಡು ರಾಜಕೀಯ ಮಾಡಿದನ್ನು. ಯಾರ ಬಗ್ಗೆಯೂ ಏಕವಚನದಲ್ಲಿ ಮಾತನಾಡಿಲ್ಲ ಹಿರಿಯರು ಕಿರಿಯರು ಎಂಬ ವ್ಯತ್ಯಾಸವಿಲ್ಲದೆ ಎಲ್ಲರಿಗೂ ಏಕವಚನದಲ್ಲೇ ಮಾತನಾಡುವ ಸಿದ್ದರಾಮಯ್ಯನವರಿಗೆ ಇದು ಶೋಭೆ ತರುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಮುಂದಿನ ಚುನಾವಣೆಯಲ್ಲಿ ನನ್ನನು ಸೋಲಿಸಿ ಎಂದು ಕರೆ ಕೊಟ್ಟಿದ್ದಾರೆ ಕಳೆದ ಚುನಾವಣೆಯಲ್ಲಿ ಅವರೇ ಸೋತಿದ್ದರು ರಾಜ್ಯದಲ್ಲಿ ಅವರೊಬ್ಬರೇ ಮಾಸ್ ಲೀಡರ್ ಎಂಬ ಭ್ರಮೆಯಲ್ಲಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕನಕ ಭವನ ಕಟ್ಟಿಸಿ, ಅದರ ಹಣದಲ್ಲೇ ಮನೆ ಕಟ್ಟಿಸಿಕೊಂಡ ಆಂತ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಬಗ್ಗೆ ನನಗೂ ಹೆಚ್ಚಿನ ಮಾಹಿತಿ ಗೊತ್ತು. ನನ್ನ ಕ್ಷೇತ್ರದಲ್ಲೇ ಅವರ ಬಂಗಲೆ ಇದೆ, ಅದರ ಬಗ್ಗೆ ನಾನು ಮಾತನಾಡಲ್ಲ. ಯಾವ್ಯಾವ ರಸ್ತೆಯಲ್ಲಿ ಆಸ್ತಿ ಇದೆ ಅಂತ ನಾನೂ ಹೇಳಲಾ ಎಂದಿದ್ದಾರೆ.
ಸಿದ್ದರಾಮಯ್ಯ 15 ಲಕ್ಷ ಮನೆ ಕಟ್ಟಿದೆ ಅಂದ್ರು. ಆದ್ರೆ ಅವರು ನಿರ್ಮಾಣ ಮಾಡಿದ್ದು ಕೇವಲ 7 ಲಕ್ಷ ಮನೆ ಮಾತ್ರ. ಕೊನೆಯದಾಗಿ 2 ಕೋಟಿ ಬಿಟ್ಟು 18 ಲಕ್ಷ ಮನೆ ಕಟ್ಟಲು ಸ್ಯಾಂಕ್ಷನ್ ಮಾಡಿ ಹೋಗಿದ್ದೀರಾ. ಏನೂ ಮಾಡಲಿಲ್ಲ ಅಂತ ಆರೋಪ ಮಾಡ್ತೀರಾ. ಯಾವ ಮಾನದಂಡವನ್ನು ಇಟ್ಟುಕೊಂಡು ನೀವೂ ಆರೋಪ ಮಾಡ್ತೀರಾ. ನೀವೇ ದಿನಾಂಕ ನಿಗದಿ ಮಾಡಿ, ಸಾರ್ವಜನಿಕವಾಗಿ ಚರ್ಚೆ ನಡೆಸಲು ನಾನು ಸಿದ್ಧನಿದ್ದೇನೆ ಅಂತ ಸಚಿವರು ಬಹಿರಂಗವಾಗೇ ಸವಾಲು ಹಾಕಿದ್ದಾರೆ.
ಕೃಷ್ಣಪ್ಪ ಹಾಗೂ ಅವರ ಪುತ್ರ ಪ್ರಿಯಾಕೃಷ್ಣಾ ಪೂರ್ವಾಪರ ಏನು ಅನ್ನೋದು ಎಲ್ಲರಿಗೂ ಗೊತ್ತು. 10,000 ಕೋಟಿ ರೂ.ಬೆಲೆ ಬಾಳುವ 800 ಎಕರೆ ಶ್ರೀರಂಗನಾಥಸ್ವಾಮಿ ದೇವಸ್ಥಾನಕ್ಕೆ ಸೇರಿದ ಜಾಗವನ್ನು ಕಬಳಿಸಿದ ಮಾಜಿ ವಸತಿ ಮಂತ್ರಿ ವಿರುದ್ಧ ಕಳೆದ ವಿಧಾನಸಭಾ ಅಧಿವೇಶನದಲ್ಲಿ ವಿಶೇಷ ಕಾರ್ಯಪಡೆ ರಚನೆಗೆ ಆದೇಶವಾಗಿದೆ. ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ.
ಜಮೀನು ತಮ್ಮ ಹೆಸರಿಗೆ ಬರೆಸಿಕೊಂಡು ಅದನ್ನ ಹಂಚೋ ಕೆಲಸ ಮಾಡಿದ್ರು. ಇವರ ಕಾಲದಲ್ಲಿ ಆದ ಹಗರಣ ಅದು. ನಾನು ಯಾವುದು ಕ್ಯಾನ್ಸಲ್ ಮಾಡಿದ್ದೇನೆ ತೋರಿಸಲಿ, ಒಂದೇ ಒಂದು ಮನೆ ಕೂಡ ಕಟ್ಟಿಲ್ಲ. ಅವರ ಜೊತೆ ನೀವು ಕೂತು ಮಾತನಾಡೋದು ಎಷ್ಟರ ಮಟ್ಟಿಗೆ ಸರಿ ಎಂದು ವಸತಿ ಸಚಿವ ಸೋಮಣ್ಣ ಪ್ರಶ್ನಿಸಿದ್ದಾರೆ.