ಬಹುಭಾಷಾ ಹಿನ್ನೆಲೆ ಗಾಯಕಿ, ಗಾನಕೋಗಿಲೆ ಎಸ್. ಜಾನಕಿ ಅವರಿಗೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಕಣಿಯನಹುಂಡಿಯ ಫಾರಂ ಹೌಸ್ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿದಾಯ ಸಲ್ಲಿಸಲಾಯಿತು. ವಯೋಸಹಜ ಅನಾರೋಗ್ಯದಿಂದ ಶನಿವಾರ ರಾತ್ರಿ ನಿಧನರಾದ ಜಾನಕಿ ಅವರ ಅಂತ್ಯಸಂಸ್ಕಾರವು ಅವರ ಇಚ್ಛೆಯಂತೆ ಮೈಸೂರಿನ ನೆಲದಲ್ಲೇ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿತು.
ಜೀವನದ ಕೊನೆಯ ದಿನಗಳಲ್ಲಿ ಮೈಸೂರನ್ನೇ ತಮ್ಮ ನೆಲೆಯಾಗಿ ಆರಿಸಿಕೊಂಡಿದ್ದ ಎಸ್. ಜಾನಕಿ, ತಾವು ಅಗಲಿದ ಬಳಿಕವೂ ಇದೇ ನೆಲದಲ್ಲಿ ಅಂತ್ಯಸಂಸ್ಕಾರ ನಡೆಯಬೇಕು ಎಂದು ಅಪೇಕ್ಷಿಸಿದ್ದರು. ಕುಟುಂಬಸ್ಥರು ಅವರ ಆ ಕೊನೆಯ ಇಚ್ಛೆಯನ್ನು ಗೌರವಿಸಿ ಕಣಿಯನಹುಂಡಿಯಲ್ಲಿರುವ ಫಾರಂ ಹೌಸ್ನಲ್ಲೇ ಅಂತ್ಯಕ್ರಿಯೆ ನೆರವೇರಿಸಿದರು.ಅವರ ಮೊಮ್ಮಗಳು ಅಪ್ಸರಾ ಅಜ್ಜಿಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಶ್ರೀರಂಗಪಟ್ಟಣದ ರಮೇಶ್ ಶರ್ಮಾ ಹಾಗೂ ಶಾಶ್ವತಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಅಂತಿಮ ಧಾರ್ಮಿಕ ವಿಧಿವಿಧಾನಗಳು ನಡೆದವು. ಮೈಸೂರು ಜಿಲ್ಲಾಡಳಿತ ಪೊಲೀಸ್ ಗೌರವ ಸಲ್ಲಿಸುವ ಮೂಲಕ ಕನ್ನಡ ಸೇರಿದಂತೆ ಭಾರತೀಯ ಸಂಗೀತ ಲೋಕದ ಮಹಾನ್ ಗಾಯಕಿಗೆ ಭಾವಪೂರ್ಣ ನಮನ ಸಲ್ಲಿಸಿತು.
ಎಸ್. ಜಾನಕಿ ಅವರ ಜೀವನದ ಕೊನೆಯ ಕ್ಷಣದಲ್ಲಿಯೂ ಅವರ ಕೈಯಲ್ಲಿ ಪುಟ್ಟ ಶ್ರೀಕೃಷ್ಣನ ವಿಗ್ರಹವಿತ್ತು ಎನ್ನಲಾಗಿದೆ. ವಿಶೇಷವೆಂದರೆ, ಅಂತ್ಯಸಂಸ್ಕಾರದ ವೇಳೆಯಲ್ಲಿಯೂ ಅದೇ ವಿಗ್ರಹವನ್ನು ಅವರ ಕೈಯಲ್ಲಿ ಇರಿಸಲಾಗಿತ್ತು. ಈ ದೃಶ್ಯ ಅಂತಿಮ ದರ್ಶನಕ್ಕೆ ಆಗಮಿಸಿದ್ದ ಸಾವಿರಾರು ಅಭಿಮಾನಿಗಳ ಮನಸ್ಸನ್ನು ಭಾವುಕರನ್ನಾಗಿಸಿತು.
ಭಾನುವಾರ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಅವರ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು. ಈ ವೇಳೆ ಅವರ ಕೈಯಲ್ಲಿದ್ದ ಶ್ರೀಕೃಷ್ಣನ ವಿಗ್ರಹ ಎಲ್ಲರ ಗಮನ ಸೆಳೆದಿದ್ದು, ಅವರ ಕೃಷ್ಣ ಭಕ್ತಿಯ ಪ್ರತೀಕವಾಗಿ ಕಂಡುಬಂತು.
ಅಂತ್ಯಕ್ರಿಯೆ ಹಾಗೂ ಸಾರ್ವಜನಿಕ ದರ್ಶನದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಬಿಗಿ ಬಂದೋಬಸ್ತ್ ಕೈಗೊಂಡಿತ್ತು. ಪಾರ್ಥಿವ ಶರೀರವನ್ನು ಇರಿಸಿದ್ದ ಸ್ಥಳದಲ್ಲಿ ಶಾಮಿಯಾನ, ನೆರಳಿನ ವ್ಯವಸ್ಥೆ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿತ್ತು.ಸಾವಿರಾರು ಅಭಿಮಾನಿಗಳು ಸರದಿ ಸಾಲಿನಲ್ಲಿ ಅಂತಿಮ ದರ್ಶನ ಪಡೆಯಲು ಅನುಕೂಲವಾಗುವಂತೆ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ಯಾವುದೇ ನೂಕುನುಗ್ಗಲು ಅಥವಾ ಗೊಂದಲ ಉಂಟಾಗದೇ, ಎಸ್. ಜಾನಕಿ ಅವರಿಗೆ ಅಭಿಮಾನಿಗಳು ಶಾಂತಿಯುತವಾಗಿ ಅಂತಿಮ ನಮನ ಸಲ್ಲಿಸಿದರು.






