ಪಂಜಾಬಿನಲ್ಲಿ ಮೊದಲಿಗೆ ಕಾಂಗ್ರೆಸ್ (Congress) ಪಕ್ಷ ಗೆದ್ದೇಬಿಡುವ ವಿಶ್ವಾಸದಲ್ಲಿತ್ತು. ಆದರೆ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ಆಮ್ ಆದ್ಮಿ ಪಕ್ಷ (Aam Admi Party) ಗೆಲ್ಲುವ ಮುನ್ಸೂಚನೆ ನೀಡಿವೆ. ಈ ನಡುವೆ ಗೆದ್ದೇ ಗೆಲ್ಲುತ್ತೇವೆ ಎಂಬ ಅಪಾರವಾದ ಭರವಸೆಯ ಮೇಲೆಯೋ ಅಥವಾ ನಿರ್ಣಾಯಕವಾದ ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಭಯದಿಂದಲೋ ಏನೋ ವಿಧಾನಸಭಾ ಚುನಾವಣೆಯ ಮತಎಣಿಕೆ ದಿನವೇ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು (Navjot Singh Sidhu) ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯನ್ನು ಕರೆದಿದ್ದಾರೆ. ಮತ ಎಣಿಕೆ ದಿನ ಶಾಸಕಾಂಗ ಪಕ್ಷದ ಸಭೆ ನಡೆದ ಉದಾಹರಣೆ ಇಲ್ಲ. ಇದಕ್ಕೆ ಅಪವಾದ ಎಂಬಂತೆ ನವಜೋತ್ ಸಿಂಗ್ ಸಿಧು ಶಾಸಕಾಂಗ ಪಕ್ಷದ ಸಭೆ ಕರೆದಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಪಿಸಿಸಿ) ಮುಖ್ಯಸ್ಥ ಸಿಧು ಅವರು ಗುರುವಾರ ಸಂಜೆ 5 ಗಂಟೆಗೆ ಚಂಡೀಗಢದಲ್ಲಿರುವ ತಮ್ಮ ಕಚೇರಿಯಲ್ಲಿ ಎಲ್ಲಾ ಚುನಾಯಿತ ಶಾಸಕರ ಮೊದಲ ಸಿಎಲ್ಪಿ ಸಭೆಯನ್ನು ಕರೆದಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಚಂಡೀಗಢದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ವೀಕ್ಷಕ ಅಜಯ್ ಮಾಕನ್ ಮತ್ತು ಪಂಜಾಬ್ ವ್ಯವಹಾರಗಳ ಉಸ್ತುವಾರಿ ಹರೀಶ್ ಚೌಧರಿ ಅವರ ಜೊತೆ ಸಭೆ ನಡೆಸಿದ ಬಳಿಕ ನವಜೋತ್ ಸಿಂಗ್ ಸಿಧು ಸಭೆ ಕರೆದಿದ್ದಾರೆ. ಹಾಗಾಗಿ ಕಾಂಗ್ರೆಸ್ ಹೈಕಮಾಂಡಿಗೆ ಗೊತ್ತಿಲ್ಲದೆ ಕರೆದಿರುವ ಸಭೆ ಇದಲ್ಲ ಎಂದು ಹೇಳಲಾಗುತ್ತಿದೆ.
ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಅನ್ನು ಅಧಿಕಾರದಿಂದ ಕೆಳಗಿಳಿಸಲು ಸಜ್ಜಾಗಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿರುವುದರಿಂದ ಒಂದು ವೇಳೆ 117 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ ಬೇಕಿರುವ 59 ಶಾಸಕರು ಗೆಲ್ಲದಿದ್ದರೆ ಮುಂದೇನು ಮಾಡಬೇಕೆಂದು ಚರ್ಚೆ ನಡೆಸಲಾಗುತ್ತದೆ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತಿವೆ. ಅಂತಹ ಸಂದರ್ಭದಲ್ಲಿ ಯಾವ ಪಕ್ಷದ ಶಾಸಕರನ್ನು ಕಾಂಗ್ರೆಸಿನತ್ತ ಸೆಳೆಯಬಹುದು ಎಂಬುದರ ಜೊತೆಗೆ ಕಾಂಗ್ರೆಸ್ ಶಾಸಕರು ಬೇರೆ ಪಕ್ಷಗಳತ್ತ ಮುಖಮಾಡದಂತೆ ತಡೆಯುವ ಕಾರ್ಯತಂತ್ರವೂ ಇದಾಗಿದೆ ಎನ್ನಲಾಗುತ್ತಿದೆ.

ನಾಯಕರೊಬ್ಬರ ಪ್ರಕಾರ ಕಾಂಗ್ರೆಸ್ ಪಕ್ಷ ಕನಿಷ್ಠ 40 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತದೆ. ಆಗ ಅತಂತ್ರ ವಿಧಾನಸಭೆ ನಿರ್ಮಾಣವಾಗುತ್ತದೆ. ಆಗ ಬೇರೆ ಪಕ್ಷಗಳು ನಮ್ಮ ಶಾಸಕರನ್ನು ಸೆಳೆಯಲು ಪ್ರಯತ್ನ ಮಾಡುತ್ತವೆ. ಈ ಹಿನ್ನಲೆಯಲ್ಲಿ ಒಗ್ಗಟ್ಟು ಕಾಯ್ದುಕೊಳ್ಳಲು ಮತ್ತು ಬೇರೆ ಪಕ್ಷಗಳ ‘ಶಾಸಕರನ್ನು ಸೆಳೆಯುವ ಕಾರ್ಯತಂತ್ರ’ ವಿಫಲಗೊಳಿಸಲು ಶಾಸಕಾಂಗ ಸಭೆ ಕರೆಯಲಾಗಿದೆ. ಇದೇ ವೇಳೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನಿರಾಕರಿಸಲ್ಪಟ್ಟು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದವರ ಪೈಕಿ ಗೆಲ್ಲುವವರನ್ನು ಸಂಪರ್ಕಿಸಲು ಪಕ್ಷವು ಪ್ರಯತ್ನಿಸುತ್ತಿದೆ ಎಂದು ತಿಳಿದುಬಂದಿದೆ. ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿರುವಂತೆ ಆಮ್ ಆದ್ಮಿ ಪಕ್ಷ ಬಹುಮತಗಳಿಸಿದರೆ ಕಾಂಗ್ರೆಸ್ ಕಾರ್ಯತಂತ್ರಗಳೆಲ್ಲವೂ ವಿಫಲವಾಗಬಹುದು ಎಂಬುದನ್ನೂ ಕೆಲ ಕಾಂಗ್ರೆಸ್ ನಾಯಕರು ಒಪ್ಪಿಕೊಂಡಿದ್ದಾರೆ.
ಈ ನಡುವೆ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಮೌನವಾಗಿದ್ದಾರೆ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರೇ ಸೋಲುವ ಭಯದಲ್ಲಿದ್ದಾರೆ. ಇವರ ನಡೆಗಳು ಕೂಡ ಕುತೂಹಲ ಹುಟ್ಟಿಸಿವೆ.