ಕಂದಾಯ ದಾಖಲೆಗಳಾದ ಆರ್ ಟಿಸಿ, ಅಟ್ಲಾಸ್, ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ವಿನೂತನ ಯೋಜನೆ “ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ” ಕಾರ್ಯಕ್ರಮ ಮಾರ್ಚ್ 12 ಕ್ಕೆ ಚಿಕ್ಕಬಳ್ಳಾಪುರದ ಜಿಲ್ಲೆಯ ಗುಂಗೀರ್ಲಹಳ್ಳಿಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಕಂದಾಯ ಸಚಿವ ಆರ್ ಅಶೋಕ್ ಚಾಲನೆ ನೀಡಿ, ರೈತರ ಮನೆ ಮನೆಗೆ ತೆರಳಿ ದಾಖಲೆಯನ್ನು ನೀಡಲಿದ್ದಾರೆ.
ಅದೇ ರೀತಿ ರಾಜ್ಯಾದ್ಯಂತ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಡಳಿತದ ಎಲ್ಲ ಅಧಿಕಾರಿಗಳು ರೈತರ ಮನೆಗೆ ತೆರಳಿ ಕಂದಾಯ ದಾಖಲೆ ನೀಡಲಿದ್ದಾರೆ. ಸುಮಾರು 50 ಲಕ್ಷಕ್ಕೂ ಅಧಿಕ ರೈತರಿಗೆ ದಾಖಲೆ ನೀಡಲು ಕಂದಾಯ ಇಲಾಖೆ ಸಿದ್ದತೆ ನಡೆಸಿದೆ.
“ರೈತನ ಜಮೀನಿಗೆ ಸಂಬಂದಿಸಿದ ಭೂದಾಖಲೆಗಳನ್ನು “ರೈತನ ಮನೆ ಬಾಗಿಲಿಗೆ” ತಲುಪಿಸುವುದು ಒಂದು ಅತ್ಯುತ್ತಮ ಸೇವೆಯಾಗಿದೆ. ಜಮೀನಿನ ಈ ದಾಖಲೆಗಳು ರೈತನಿಗೆ ಸುರಕ್ಷಿತ ಭಾವನೆ ಮೂಡಿಸುತ್ತದೆ. ಈ ಪ್ರಕ್ರಿಯೆಯು ಅತ್ಯಮೂಲ್ಯ ಆಸ್ತಿಯನ್ನು ರಕ್ಷಿಸಲು ಸಹಕಾರಿಯಾಗುತ್ತದೆ”
“ಜಾತಿ ಮತ್ತು ಆದಾಯ ಪ್ರಮಾಣಪತ್ರಗಳು ಕೂಡ ಪ್ರಮುಖ ದಾಖಲೆಗಳಾಗಿದ್ದು, ಅದರ ಆಧಾರದ ಮೇಲೆ ನಾಗರಿಕರು ಶೈಕ್ಷಣಿಕ, ಉದ್ಯೋಗ ಮತ್ತು ಇತರೆ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಸಕಾಲದಲ್ಲಿ ಪಡೆಯಲು ಸಾಧ್ಯವಾಗುತ್ತದೆ”
“ನಮ್ಮ ಸರ್ಕಾರವು ಕರ್ನಾಟಕದಾದ್ಯಂತ ರೈತರಿಗೆ ಸೇವೆ ಸಲ್ಲಿಸಲು ಮತ್ತು ರೈತರ ಸಬಲೀಕರಣಕ್ಕಾಗಿ ದಿ:12-03-2022 ರಂದು ರಾಜ್ಯಾದ್ಯಂತ (1) ಆರ್ಟಿಸಿ (2) ಜಮೀನಿನ ಅಟ್ಲಾಸ್ ನಕ್ಷೆ (3) ಜಾತಿ ಪ್ರಮಾಣಪತ್ರ (4) ಆದಾಯ ಪ್ರಮಾಣ ಪತ್ರಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಐತಿಹಾಸಿಕ ಯೋಜನೆಯನ್ನು ಪ್ರಾರಂಭಿಸಿ 50 ಲಕ್ಷಕ್ಕೂ ಹೆಚ್ಚು ರೈತ ಕುಟುಂಬಗಳ ಮನೆಗೆ ತಲುಪಿಸಲಾಗುತ್ತದೆ. ಈ ಮೂಲಕ ರೈತ ಕುಟುಂಬಗಳಿಗೆ ಆಂದೋಲನ ರೀತಿಯಲ್ಲಿ 5 ಕೋಟಿಗೂ ಹೆಚ್ಚು ದಾಖಲೆಗಳನ್ನು ತಲುಪಿಸಲಾಗುತ್ತದೆ” ಎಂದು ಆರ್ ಅಶೋಕ್ ಹೇಳಿದರು.