ರಾಜ್ಯ ಕಾಂಗ್ರೆಸ್(Congress) ಪಕ್ಷದಲ್ಲಿ ಪಂಗಡಗಳು ಉಪ ಪಂಗಡಗಳು ಏನೇ ಇದ್ದರೂ ಚುನಾವಣೆಯಲ್ಲಿ ಒಗ್ಗಟ್ಟಿನ ಕೀರ್ತಿ ಪತಾಕೆ ಹಾರಿಸುತ್ತಿದ್ದಾರೆ. ವಿಧಾನಸಭಾ ಚುನಾವಣೆಗೆ ಹೋಗುವ ಮೊದಲು ಸಿದ್ದರಾಮಯ್ಯ(Siddaramaiah) ಅವರ ಹುಟ್ಟುಹಬ್ಬದ ಹೆಸರಲ್ಲಿ ಸಿದ್ದರಾಮೋತ್ಸವ ಮಾಡಲಾಗಿತ್ತು. ದಾವಣಗೆರೆಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್(DK Shivakumar) ಸೇರಿದಂತೆ ಪ್ರಮುಖ ನಾಯಕರು ಭಾಗಿಯಾಗಿ ಒಗ್ಗಟ್ಟು ಪ್ರದರ್ಶನ ಮಾಡಿದ್ದರು. ರಾಜ್ಯ ವಿಧಾನಸಭಾ ಚುನಾವಣೆಗೆ ಹೋಗುವ ಮೊದಲು ಕಾಂಗ್ರೆಸ್ ಪಕ್ಷಕ್ಕೆ ಪ್ರೋಟಿನ್ ಸಿಕ್ಕಂತಾಗಿತ್ತು. ಇದೀಗ ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಇದೆ ಎನ್ನುವಾಗ ಶೋಷಿತ ಸಮುದಾಯಗಳ ಹೆಸರಿನಲ್ಲಿ ಬೃಹತ್ ಸಮಾವೇಶ ನಡೆಸಲಾಗಿದೆ. ಕೋಟೆನಾಡು ಚಿತ್ರದುರ್ಗದಲ್ಲಿ ಮೊಳಗಿದೆ ಕಾಂಗ್ರೆಸ್ ಕಹಳೆ.
![](https://pratidhvani.com/wp-content/uploads/2024/01/1stgbbq_siddaramaiah_625x300_29_December_23-3-1024x630.png)
ಲೋಕಸಭಾ ಚುನಾವಣೆಗೆ ಕೈ ‘ಅಹಿಂದ’ ಅಸ್ತ್ರ:
ಲೋಕಸಭೆ ಚುನಾವಣೆಗೆ ಬಿಜೆಪಿ ತಯಾರಿ ನಡೆದಿರುವ ಬೆನ್ನಲ್ಲೇ ಕಾಂಗ್ರೆಸ್ ಕೂಡ ಅಖಾಡವನ್ನು ಸಜ್ಜುಮಾಡುವ ಕೆಲಸಕ್ಕೆ ಕೈ ಹಾಕಿದೆ.. ಕೋಟೆನಾಡಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಕಾಂಗ್ರೆಸ್ ರಣಕಹಳೆ ಮೊಳಗಿಸಿದೆ. ಚಿತ್ರದುರ್ಗದ ಮಾದಾರ ಚನ್ನಯ್ಯ ಮಠದ ಮೈದಾನದಲ್ಲಿ ನಡೆದ ಶೋಷಿತ ವರ್ಗಗಳ ಜಾಗೃತಿ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕರು ಲೋಕಸಭಾ ಚುನಾವಣೆಗೆ ಮುನ್ನುಡಿ ಬರೆದಿದ್ದಾರೆ. ಸಿದ್ದರಾಮಯ್ಯ ಶಕ್ತಿಪ್ರದರ್ಶನ ಅನ್ನೋ ಚರ್ಚೆಗಳೂ ನಡೆದಿವೆ. ಆದರೆ ಅಂತಿಮವಾಗಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡುತ್ತಾರೆ. ಮತಗಳು ಕಾಂಗ್ರೆಸ್ ಪಾಲು ಎನ್ನುವುದು ಕಾಂಗ್ರೆಸ್ ನಾಯಕರ ಮಾತು. ಕಳೆದ ಬಾರಿ ಕೂಡ ಸಿದ್ದರಾಮಯ್ಯ ಸಿಎಂ ಆಗಲು ಸಿದ್ದರಾಮೋತ್ಸವ ಹೆಸರಲ್ಲಿ ಶಕ್ತಿಪ್ರದರ್ಶನ ಎನ್ನಲಾಗಿತ್ತು. ಕಾಂಗ್ರೆಸ್ ಗೆಲುವಿನ ಬಳಿಕ ಸಿದ್ದರಾಮಯ್ಯ ಸಿಎಂ ಆಗಿದ್ದರು.
![](https://pratidhvani.com/wp-content/uploads/2024/01/siddaramaiah-18-1510979675-1024x576.webp)
ಜಾತಿಗಣತಿ ವರದಿ ಸ್ವೀಕಾರ ಮಾಡ್ತೇನೆ ಎಂದು ಘೋಷಣೆ..!:
ರಾಜ್ಯದಲ್ಲಿ ಹಿಂದುಳಿತ ಜಾತಿ ಸಮುದಾಯಗಳ ನಾಯಕ ಎಂದೇ ಗುರುತಿಸಿಕೊಂಡಿರುವ ಸಿದ್ದರಾಮಯ್ಯ, ಈ ಹಿಂದಿನಿಂದಲೂ ಜಾತಿಗಣತಿ ಪರವಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲೇ ವಿರೋಧ ಕೇಳ ಬಂದರೂ ಸಿದ್ದರಾಮಯ್ಯ ಮಾತ್ರ ಜಾತಿಗಣತಿ ವರದಿ ಸ್ವೀಕಾರ ಎಂದೇ ಹೇಳುತ್ತಿದ್ದಾರೆ. ಇದೀಗ ಹಿಂದುಳಿದ ವರ್ಗಗಳ ಮತಬ್ಯಾಂಕ್ ಮೇಲೆ ಕಣ್ಣಿಟ್ಟಿರುವ ಸಿದ್ದರಾಮಯ್ಯ ಜಾತಿಗಣತಿ ವರದಿ ಸ್ವೀಕಾರ ಮಾಡ್ತಾರೆ ಎನ್ನುವ ಘೋಷಣೆ ಸಮಾವೇಶದಲ್ಲೇ ಹೊರಬಿದ್ದಿದೆ. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಾಂತರಾಜು ಆಯೋಗದ ವರದಿ ಸ್ವೀಕಾರ ಮಾಡೋದಾಗಿ ಘೋಷಿಸಿದ್ದಾರೆ. ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆಯವರಲ್ಲಿ ವರದಿ ಕೊಡಲು ಕೇಳಿದ್ದೇನೆ ಎಂದಿದ್ದಾರೆ. ಇನ್ನು ಯಥಾಪ್ರಕಾರ ಸಿದ್ದರಾಮಯ್ಯ ಬಿಜೆಪಿ ಹಾಗು ಆರ್ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಪಕ್ಷದ ನಾಯಕರು ಶ್ರೀರಾಮನನ್ನ ರಾಜಕೀಯವಾಗಿ ಬಳಸಿಕೊಂಡು ಯಾತ್ರೆ ಮಾಡಿದ್ರು.. ಸಮಾಜದ ಅಸಮಾನತೆಗೆ RSS ಕಾರಣ. ಕುರಿ ಕಾಯೋನ ಮಗ ರಾಜ್ಯದಲ್ಲಿ ಸಿಎಂ ಆದ ಅನ್ನೋ ಕಾರಣಕ್ಕೆ ನನ್ನನ್ನ ವಿರೋಧ ಮಾಡ್ತಾರೆ ಎಂದು ಕುಟುಕಿದ್ರು. ಇನ್ನು ಸಿಎಂ ಸಿದ್ದರಾಮಯ್ಯ ಭಾಷಣಕ್ಕೂ ಮುನ್ನವೇ ಮಾತನಾಡಿದ್ದ ಡಿಸಿಎಂ ಡಿ.ಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಯಶಸ್ಸು ಯಾರೊಬ್ಬರ ಆಸ್ತಿಯಲ್ಲ.. ಎಲ್ಲರಿಗೂ ರಾಜನಾಗುವ, ಶ್ರೀಮಂತನಾಗುವ ಶಕ್ತಿಯಿದೆ. ಅಂಬೇಡ್ಕರ್ ಎಲ್ಲರಿಗೂ ಈ ಅವಕಾಶ ಕೊಟ್ಟಿದ್ದಾರೆ. ಸಂವಿಧಾನವೇ ಎಲ್ಲರಿಗೂ ಶ್ರೀರಕ್ಷೆ. ಸಾಯೋತನಕ ಹೋರಾಟ ಮಾಡ್ಬೇಕು ಎಂದ್ರು. ಚಿತ್ರದುರ್ಗದಲ್ಲಿ ಶೋಷಿತರ ಸಮಾವೇಶ ನಡೆಸುವ ಮೂಲಕ ಕಾಂಗ್ರೆಸ್ ಅಹಿಂದಾ ಮತವನ್ನ ಬೇಟೆಯಾಡುವ ಲೆಕ್ಕಾಚಾರ ಹಾಕಿಕೊಂಡಿದೆ. ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬೀಗುವ ಹಂಬಲದಲ್ಲಿದೆ.
ಕೃಷ್ಣಮಣಿ