ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಸತತ 3 ವರ್ಷಗಳು ಪ್ರವಾಹ, ಅತಿವೃಷ್ಟಿ ಹಾಗೂ ಕೆಲವು ಜಿಲ್ಲೆಗಳು ಬರ ಪರಿಸ್ಥಿತಿಯನ್ನು ಕಂಡಿವೆ. ನಾನು ಹೋದ ಕಡೆಗಳಲೆಲ್ಲಾ ಜನ ಬೆಳೆ ಪರಿಹಾರದ ಹಣ ಸಿಗೋಕೆ ನೀವೇ ಏನಾದ್ರೂ ಮಾಡಿ ಎಂದು ಒತ್ತಾಯ ಮಾಡುತ್ತಿದ್ದಾರೆ. ನಾಡಿನ ರೈತರ ಕಷ್ಟ ಹೇಳತೀರದಾಗಿದ್ದು, ಕೇಂದ್ರ ಸರ್ಕಾರದಿಂದ ಈ ವರ್ಷ ರಾಜ್ಯಕ್ಕೆ ನಯಾಪೈಸೆ ಪರಿಹಾರದ ಹಣ ಸಿಕ್ಕಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸದನದ ಗಮನಕ್ಕೆ ತಂದರು.
ಇಂದಿನ ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ ಅವರು, ಮಳೆ, ಪ್ರವಾಹ, ಅತಿವೃಷ್ಟಿಯಿಂದಾಗಿ ನಾಡಿನ ರೈತರು ಎದುರಿಸುತ್ತಿರುವ ಕಷ್ಟ ನಷ್ಟಗಳ ಬಗ್ಗೆ ಸರ್ಕಾರ ಕಿವಿಗೊಡಬೇಕು. ಮೇ ತಿಂಗಳಲ್ಲಿ ಚೌಕ್ತೆ ಚಂಡಮಾರುತ, ಜುಲೈ- ಆಗಸ್ಟ್ ನಲ್ಲಿ ಪ್ರವಾಹ ಹಾಗೂ ಅಕ್ಟೋಬರ್ – ನವೆಂಬರ್ ನಲ್ಲಿ ಅತಿವೃಷ್ಟಿ ಆಗಿದೆ. 60 ವರ್ಷಗಳಲ್ಲೇ ನವೆಂಬರ್ ತಿಂಗಳಲ್ಲಿ ಈ ರೀತಿಯ ಮಳೆಯಾಗಿರಲಿಲ್ಲ. ರಾಜ್ಯದ 31 ಜಿಲ್ಲೆಗಳಲ್ಲಿ 23 ಜಿಲ್ಲೆಗಳು ಅತಿವೃಷ್ಟಿಗೀಡಾಗಿವೆ ಎಂದರು.
ರಾಜ್ಯಾದ್ಯಂತ ರೈತರು 78 ಲಕ್ಷದ 83 ಸಾವಿದ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದರು. ಇದರಲ್ಲಿ ಶೇ. 75 ರಷ್ಟು ಬೆಳೆ ಹಾನಿಯಾಗಿದೆ. ಭತ್ತ, ರಾಗಿ, ಶೇಂಗಾ, ಮೆಕ್ಕೆಜೋಳ, ಕಾಫಿ, ಮೆಣಸು, ಅಡಿಕೆ ಮುಂತಾದ ಹಣ್ಣು, ತರಕಾರಿ, ಹೂವು ಬೆಳೆದ ರೈತರು ಬೆಳೆ ಕಳೆದುಕೊಂಡು ಕಷ್ಟದಲ್ಲಿದ್ದಾರೆ ಎಂದು ವಿವರಿಸಿದರು.

ಒಟ್ಟು ಈ ವರ್ಷ 12.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಪ್ರವಾಹ, ಅತಿವೃಷ್ಟಿಗಳಿಂದಾಗಿ ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ರೂ. 2.5 ಲಕ್ಷ ಕೋಟಿ ನಷ್ಟವಾಗಿದೆ. ಅಕ್ಟೋಬರ್ – ನವೆಂಬರ್ ನಲ್ಲಿ ವಾಡಿಕೆಯಂತೆ 166 ಮಿ.ಮೀ ಮಳೆ ಆಗಬೇಕಿತ್ತು, ಆದರೆ ಈ ವರ್ಷ 307 ಮಿ.ಮೀ ಮಳೆಯಾಗಿದೆ. ಮುಂಗಾರು ಈ ತಿಂಗಳುಗಳಲ್ಲಿ ಕೈಸೇರಬೇಕಿದ್ದ ಮುಂಗಾರು ಬೆಳೆಯ ಫಸಲು ಸಂಪೂರ್ಣ ನಷ್ಟವಾಗಿದೆ ಎಂದು ತಿಳಿಸಿದರು.
ಹಿಂದಿನ ಯು.ಪಿ.ಎ ಸರ್ಕಾರದ ಬಜೆಟ್ ಗಾತ್ರ, ಇಂದಿನ ಬಜೆಟ್ ಗಾತ್ರ, 2014-15 ರಲ್ಲಿ ರಾಜ್ಯದಿಂದ ಪೆಟ್ರೋಲ್, ಡೀಸೆಲ್ ಮೇಲೆ ಸಂಗ್ರಹವಾಗುತ್ತಿದ್ದ ತೆರಿಗೆ ಹಾಗೂ ಈ ಸಾಲಿನಲ್ಲಿ ಸಂಗ್ರಹವಾಗಿರುವ ತೆರಿಗೆ, ಹಿಂದಿನ ಯು.ಪಿ.ಎ ಸರ್ಕಾರ ನೀಡಿದ್ದ ಪ್ರವಾಹ ಪರಿಹಾರ ಹಾಗೂ ನರೇಂದ್ರ ಮೋದಿ ಅವರ ಸರ್ಕಾರ ನೀಡಿರುವ ಪರಿಹಾರ ಮುಂತಾದ ವಿಷಯಗಳನ್ನು ನಾಳೆ ವಿವರವಾಗಿ ಚರ್ಚಿಸುವುದಾಗಿ ತಿಳಿಸಿದ್ದಾರೆ.