ಬೆಳಗಾವಿ : ಬೆಳಗಾವಿಯಿಂದ ಪ್ರಜಾಧ್ವನಿ ಯಾತ್ರೆ ಮುಗಿಸಿ ಬಸ್ಸಿನಲ್ಲಿ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ 500 ರೂಪಾಯಿ ಕೊಟ್ಟು ಸಮಾವೇಶಕ್ಕೆ ಜನರನ್ನು ಸೇರಿಸುತ್ತಾರೆ ಎಂದು ಹೇಳಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಮಾತ್ರವಲ್ಲದೇ ರಾಜಕೀಯ ಚರ್ಚೆಗೂ ವೇದಿಕೆಯಾಗಿತ್ತು. ತಮ್ಮ ವೈರಲ್ ಆದ ವಿಡಿಯೋದ ಬಗ್ಗೆ ಇದೀಗ ಸ್ವತಃ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದ ಸಂದರ್ಭದಲ್ಲಿ ಈ ವಿಡಿಯೋ ವಿಚಾರವಾಗಿ ಸ್ಪಷ್ಟನೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ನಾನು ಆ ರೀತಿ ನಮ್ಮ ಪಕ್ಷದವರು ಮಾಡುತ್ತಾರೆ ಎಂದು ಹೇಳಿಲ್ಲ. ಬಿಜೆಪಿಯವರು ಸಮಾವೇಶಕ್ಕೆ ಜನರನ್ನು ಹೇಗೆ ಸೇರಿಸುತ್ತಾರೆ ಎಂದು ಹೇಳಿದ್ದೇನೆ. ಈ ವಿಡಿಯೋವನ್ನು ನಮ್ಮ ಪಕ್ಷದವರೇ ರೆಕಾರ್ಡ್ ಮಾಡಿ ಹರಿಬಿಟ್ಟಿದ್ದಾರೆ. ಈ ವಿಡಿಯೋದ ಮೂಲಕ ಜನರಿಗೆ ಬಿಜೆಪಿ ಕಳ್ಳಾಟದ ಬಗ್ಗೆ ತಿಳಿಸಲು ನಾವು ಯತ್ನಿಸಿದ್ದೇವೆ ಎಂದು ಹೇಳಿದರು.
ಪ್ರಧಾನಿ ಮೋದಿ ಸಮಾವೇಶಕ್ಕೆ ಬಿಜೆಪಿಯವರು ಪ್ರತಿಯೊಬ್ಬರಿಗೂ 500 ರೂಪಾಯಿ ನೀಡಿ ಜನರನ್ನು ಕರೆಸಿದ್ದರು. ನಾನು ಇದೇ ವಿಚಾರವನ್ನು ಮಾತನಾಡಿದ್ದೇನೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ. ನಿಮ್ಮ ಮೇಲೆ ಪಿತೂರಿ ಮಾಡೋಕೆ ಸ್ವಪಕ್ಷದವರೇ ಈ ವಿಡಿಯೋ ಹರಿಬಿಟ್ಟಿದ್ದಾರಾ ಎಂಬ ಪ್ರಶ್ನೆಗೆ ಇದೇ ವೇಳೆ ಉತ್ತರಿಸಿದ ಸಿದ್ದರಾಮಯ್ಯ, ಇದು ಯಾವುದೇ ದುರುದ್ದೇಶ ಇಟ್ಟುಕೊಂಡು ಹರಿಬಿಟ್ಟ ವಿಡಿಯೋವಲ್ಲ. ಬಿಜೆಪಿಯ ಬುದ್ಧಿ ಏನು ಅನ್ನೋದನ್ನು ಜನರಿಗೆ ಮನದಟ್ಟು ಮಾಡಬೇಕು ಎಂಬ ಸದುದ್ದೇಶವನ್ನ ಇಟ್ಟುಕೊಂಡು ನಮ್ಮ ಪಕ್ಷದವರೇ ಈ ವಿಡಿಯೋ ಹರಿಬಿಟ್ಟಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.