ರಾಜ್ಯ ರಾಜಕೀಯದಲ್ಲಿ ಮತ್ತೆ ಜಾತಿಗಣತಿ ಸಮರ ಜೋರಾಗುವ ಲಕ್ಷಣ ಕಾಣಿಸಿದೆ. ಜಾತಿಗಣತಿ ವರದಿ ಬಿಡುಗಡೆಗೆ ಒಕ್ಕಲಿಗರು ಹಾಗೂ ಲಿಂಗಾಯತರ ತೀವ್ರ ವಿರೋಧ ವ್ಯಕ್ತವಾಗ್ತಿದೆ. ಒಂದು ಕಡೆ ಜಾತಿಗಣತಿ ರಿಲಿಸ್ ಮಾಡೋದಕ್ಕೆ ರಾಜ್ಯ ಸರ್ಕಾರ ತುದಿಗಾಲಿನಲ್ಲಿ ನಿಂತಿದೆ. ಕಾಂಗ್ರೆಸ್ ಹೈಕಮಾಂಡ್ ಕೂಡ ಸಿದ್ದರಾಮಯ್ಯ ನಿರ್ಧಾರದ ಪರವಾಗಿಯೇ ಇದೆ. ಆದರೂ ಜಾತಿಗಣತಿ ರಿಲೀಸ್ ಆಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಸರ್ಕಾರ ಸ್ವೀಕಾರಕ್ಕೆ ಸಿದ್ಧವಾಗಿರುವ ಜಾತಿಗಣತಿ ವರದಿಯನ್ನು ಮರು ಪರಿಶೀಲನೆ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಮೇಲೆ ಲಿಂಗಾಯತ ಸಮುದಾಯ ಪಕ್ಷಬೇಧ ಮರೆತು ಒತ್ತಡ ಹೇರಿಕೆ ಮಾಡಿದೆ.
ಸಿಎಂಗೆ 49 ಶಾಸಕರಿಂದ ಒತ್ತಡ ಪತ್ರ ಸಲ್ಲಿಕೆ
ಕಾಂತರಾಜ್ ಆಯೋಗದ ವರದಿ ಸ್ವೀಕಾರ ಮಾಡದೆ ಮರು ಪರಿಶೀಲಿಸುವಂತೆ ವೀರಶೈವ ಲಿಂಗಾಯತ ಸಚಿವರು, ಶಾಸಕರು ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ. ಬೆಳಗಾವಿ ಅಧಿವೇಶನದ ಕೊನೆಯ ದಿನ ಶಾಮನೂರು ಶಿವಶಂಕರಪ್ಪ ನೇತೃತ್ವದ ಸರ್ವಪಕ್ಷ ನಿಯೋಗ ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದೆ. ಶಾಮನೂರು ಶಿವಶಂಕರಪ್ಪ, ಈಶ್ವರ್ ಖಂಡ್ರೆ, ವಿಜಯಾನಂದ ಕಾಶಪ್ಪನವರ್, ವಿನಯ್ ಕುಲಕರ್ಣಿ, ಎಂ ಬಿ ಪಾಟೀಲ್, ಲಕ್ಷ್ಮಣ ಸವದಿ ಸೇರಿದಂತೆ ಬಿಜೆಪಿಯ ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ ಯತ್ನಾಳ್, ಅರವಿಂದ ಬೆಲ್ಲದ, ಬಿ ವೈ ವಿಜಯೇಂದ್ರ, ಸಿ ಸಿ ಪಾಟೀಲ್ ಕೂಡ ಸಹಿ ಹಾಕಿದ್ದಾರೆ.

ಸಿಎಂಗೆ ಬರೆದ ಪತ್ರದಲ್ಲಿ ಏನೇನಿದೆ ಗೊತ್ತಾ..?
8 ವರ್ಷಗಳ ಹಿಂದಿನ ವರದಿಯಲ್ಲಿ ಹಲವು ವೈರುಧ್ಯ ಮತ್ತು ಲೋಪಗಳಾಗಿವೆ ಎನ್ನುವ ಅಂಶವನ್ನು ಪ್ರಮುಖವಾಗಿ ತೋರಿಸಿರುವ ಲಿಂಗಾಯತ ನಾಯಕರು, ಜಾತಿಗಣತಿ ಸರ್ವೇಗೆ ಅಧಿಕಾರಿಗಳೇ ಬಂದಿಲ್ಲ, ಮಾಹಿತಿ ಪಡೆದಿಲ್ಲ ಎನ್ನುವ ಆರೋಪ ಮಾಡಿದ್ದಾರೆ. ಕಚೇರಿಯಲ್ಲೇ ಕುಳಿತು ಜಾತಿ ಜನಗಣತಿ ವರದಿ ತಯಾರು ಆಗಿದೆ ಎಂಬ ಆರೋಪವೂ ಸೇರಿದೆ. ವೀರಶೈವ ಲಿಂಗಾಯತ ಸಮುದಾಯದವರಿಂದಲೂ ಒಳಪಂಗಡ ಎಂದು ನಮೂದು ಮಾಡಲಾಗಿದೆ. ಘೋಷಿತ ಜಾತಿ ಜನರ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ಅಥವಾ ಪರಾಮರ್ಶೆ ಆಗಿಲ್ಲ. ವಂಚಿತರು, ಶೋಷಿತರು, ಮಧ್ಯಮ ವರ್ಗದ ಆರ್ಥಿಕ ದುರ್ಬಲರಿಗೆ ಅನ್ಯಾಯ ಆಗುತ್ತದೆ. ಎಲ್ಲಾ ಸಮುದಾಯಗಳಿಗೂ ಅನುಕೂಲವಾಗಬೇಕು, ಹಕ್ಕುಗಳ ರಕ್ಷಣೆ ಆಗ್ಬೇಕು. ಹೀಗಾಗಿ ವೈಜ್ಞಾನಿಕವಾಗಿ ಮತ್ತು ವಾಸ್ತವಾಂಶ ಆಧಾರಿತ ಜಾತಿ ಜನಗಣತಿ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.
ಸರ್ಕಾರಕ್ಕೆ ಇಚ್ಛಾಶಕ್ತಿ ಇದೆಯೋ ಇಲ್ಲವೋ..?
ರಾಜಕಾರಣದಲ್ಲಿ ಸಾಕಷ್ಟು ಆಯಾಮಗಳಲ್ಲಿ ಲೆಕ್ಕಾಚಾರ ಹಾಕುವುದು ನಮ್ಮನ್ನಾಳುವ ನಾಯಕರ ಜಾಯಮಾನ. ಜಾತಿಗಣತಿ ವರದಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲೇ ಸ್ವೀಕಾರ ಆಗಿದ್ದರೆ ಇಷ್ಟೆಲ್ಲಾ ರಾದ್ಧಾಂತ ನಡೆಯುತ್ತಿರಲಿಲ್ಲ. ಆದರೆ 2018ರಲ್ಲಿ ಸಿದ್ದರಾಮಯ್ಯ ಸ್ವೀಕಾರ ಮಾಡಲಿಲ್ಲ ಅನ್ನೋ ಒಂದೇ ಕಾರಣಕ್ಕೆ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ, ಆ ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಕೂಡ ವರದಿ ಪಡೆಯುವ ಗೋಜಿಗೇ ಹೋಗಲಿಲ್ಲ. ಇದಿಗ ಸ್ವತಃ ಸಿದ್ದರಾಮಯ್ಯ, ಜಾತಿಗಣತಿ ವರದಿ ಸ್ವೀಕಾರ ಮಾಡ್ತೇನೆ ಎಂದಿದ್ದಾರೆ. ಆದರೆ ಲಿಂಗಾಯತ ಹಾಗು ಒಕ್ಕಲಿಗ ಸಮುದಾಯ ತಿರುಗಿಬೀಳುವ ಲಕ್ಷಣಗಳು ಗೋಚರಿಸಿವೆ. ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಎದುರಾಗಲಿದ್ದು, ಲಾಭ ನಷ್ಟದ ಚರ್ಚೆ ನಡೆಯುತ್ತಿದೆ. ಕೇವಲ ಮತಬ್ಯಾಂಕ್ ಅಷ್ಟೇ ಅಲ್ಲದೆ ಚುನಾವಣೆಗೆ ಬೇಕಾದ ಮನಿಬ್ಯಾಂಕ್ ಬಗ್ಗೆಯೂ ಚಿಂತಿಸುವಂತೆ ಮಾಡಿದೆ. ಸದ್ಯಕ್ಕಂತು ಜಾತಿಗಣತಿ ಸಲ್ಲಿಕೆ ಆಗಲ್ಲ ಎನ್ನುತ್ತಿವೆ ಆಪ್ತ ಮೂಲಗಳು.
ಕೃಷ್ಣಮಣಿ