ಇದೇ ಮೇ 10ರಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಚುನಾವಣಾ ರಣಕಹಳೆ ಮೊಳಗಿದ್ದು, ರಾಜಕೀಯ ನಾಯಕರು ಅಖಾಡಕ್ಕಿಳಿದು ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ (Arun Singh) ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ (Mysuru) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅರುಣ್ ಸಿಂಗ್, ಜನರ ಹಿತ, ದೇಶದ ಹಿತಕ್ಕೆ ಡಬಲ್ ಎಂಜಿನ್ ಸರ್ಕಾರ ಬರಬೇಕಿದೆ. ಕರ್ನಾಟಕದ ವಿಕಾಸದ ಜೊತೆ ದೇಶದ ವಿಕಾಸ ಸೇರಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಮದಾಸ್ 4 ಬಾರಿ ಶಾಸಕರಾಗಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ಈಗ ಅವರು ಶ್ರೀವತ್ಸ ಅವರಿಗೆ ಸ್ಥಾನ ಬಿಟ್ಟು ಕೊಟ್ಟಿದ್ದಾರೆ. ಇದು ಬಿಜೆಪಿಯಲ್ಲಿ (BJP) ಮಾತ್ರವೇ ಸಾಧ್ಯ ಎಂದು ಅರುಣ್ ಸಿಂಗ್ ಟಿಕೆಟ್ ಕೈತಪ್ಪಿದ ಶಾಸಕ ರಾಮದಾಸ್ ಅವರನ್ನು ಹಾಡಿ ಹೊಗಳಿದರು.

ಕಾಂಗ್ರೆಸ್ (Congress) ಕಾಲದಲ್ಲಿ ಹಿಂದೂಗಳ ಹತ್ಯೆಯಾಗಿತ್ತು. ಸಿದ್ದರಾಮಯ್ಯ ಸರ್ಕಾರ ಇದ್ದಾಗಲೂ ಅದೇ ಸ್ಥಿತಿ ಇತ್ತು. ಒಂದು ರೀತಿ ನೆಗೆಟಿವ್ ವಾತಾವರಣ ಇತ್ತು. ಪಿಎಫ್ಐ ಹಾವಳಿ ಹೆಚ್ಚಾಗಿತ್ತು. ಕಾಂಗ್ರೆಸ್ ಇಷ್ಟು ವರ್ಷ ಸಾಮಾಜಿಕ ನ್ಯಾಯಕ್ಕಾಗಿ ಏನೂ ಮಾಡಿಲ್ಲ. ನೀವು ಅಧಿಕಾರದಲ್ಲಿದ್ದಾಗ ಮೀಸಲಾತಿ ಏಕೆ ಹೆಚ್ಚಿಸಿರಲಿಲ್ಲ? 4% ಅಂಸವಿಧಾನತ್ಮಕವಾಗಿ ಮುಸ್ಲಿಮರಿಗೆ ನೀಡಲಾಗಿತ್ತು. ಅದನ್ನು ಲಿಂಗಾಯತ ಒಕ್ಕಲಿಗರಿಗೆ ತಲಾ 2% ನೀಡಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ವಾಪಸ್ಸು ಪಡೆಯುವುದಾಗಿ ಹೇಳಿದ್ದು, ಅದು ಯಾರಿಂದ ವಾಪಸ್ ಪಡೆಯುತ್ತದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಕಾಂಗ್ರೆಸ್ ಒಡೆದ ಮನೆಯಂತಾಗಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಏನೂ ಮಾಡಲಿಲ್ಲ. ಕೇವಲ ಪಿಎಫ್ಐ ಮಾತ್ರ ಅಭಿವೃದ್ಧಿ ಆಯಿತು ಅಂತ ವಾಗ್ದಾಳಿ ನಡೆಸಿದ್ರು.






