“ರಾಜಕೀಯದಲ್ಲಿ ಶಾಶ್ವತ ಶತ್ರುಗಳು ಅಥವಾ ಸ್ನೇಹಿತರು ಇಲ್ಲ, ಅಧಿಕಾರದ ಮೇಲಿನ ಆಸೆಯೊಂದೇ ಶಾಶ್ವತ ಅಲ್ಲಿ” ಎಂದು ಹೇಳಲಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಮಹಾರಾಷ್ಟ್ರ ರಾಜಕಾರಣ. ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಲವು ದಶಕಗಳ ಸ್ನೇಹಕ್ಕೆ ಎಳ್ಳು ನೀರು ಬಿಟ್ಟು ಒಂದು ಕಾಲದಲ್ಲಿ ಬದ್ಧವಾಗಿ ವಿರೋಧಿಸುತ್ತಿದ್ದ ಪಕ್ಷದೊಂದಿಗೆ ಕೈ ಜೋಡಿಸಿ ಅಧಿಕಾರದ ಗದ್ದುಗೆಗೇರಿದ ವಿದ್ಯಮಾನಕ್ಕೆ ಕಳೆದ ವರ್ಷ ಇಡೀ ದೇಶ ಸಾಕ್ಷಿಯಾಗಿತ್ತು.
ಶಿವ ಸೇನೆ ಮತ್ತು ಬಿಜೆಪಿಯ ಸಖ್ಯ ಇಂದು ನಿನ್ನೆಯದಲ್ಲ. ರಾಮ್ ಜನ್ಮಭೂಮಿ ಆಂದೋಲನ, ಬಾಬರಿ ಮಸೀದಿಯನ್ನು ಉರುಳಿಸುವಿಕೆಯ ನಂತರ 1996 ರಲ್ಲಿ ಬಿಜೆಪಿ ಅಧಿಕಾರಕ್ಕೇರಿತು. ಆದರೂ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಹದಿಮೂರು ದಿನಗಳಿಗಿಂತ ಹೆಚ್ಚು ಕಾಲ ಅಧಿಕಾರದಲ್ಲಿರಲು ಶಕ್ತವಾಗಲಿಲ್ಲ. ಅಧಿಕಾರಕ್ಕೆ ತುಂಬಾ ಹತ್ತಿರ ಬಂದು ಅಧಿಕಾರಕ್ಕೇರಲಾಗದೇ ಇದ್ದಾಗ ವಾಜಪೇಯಿ ಅವರು ಲಾಲ್ ಕೃಷ್ಣ ಅಡ್ವಾಣಿ ಅವರ ಸಹಾಯದೊಂದಿಗೆ ಪ್ರಾದೇಶಿಕ ಪಕ್ಷಗಳೊಂದಿಗೆ ಸಂವಹನ ನಡೆಸಲು ಪ್ರಾರಂಭಿಸಿದರು. ಅದರ ಫಲಶ್ರುತಿಯೇ ‘ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್’ ಅಥವಾ ಎನ್ಡಿಎ.ಬಾಲ್ ಠಾಕ್ರೆ ಅವರ ಶಿವಸೇನೆ ಈ ಮೈತ್ರಿಕೂಟದ ಸಂಸ್ಥಾಪಕ ಸದಸ್ಯ. ವಾಜಪೇಯಿ ಕಾಲಾವಧಿಯಲ್ಲಿ, ಬಾಳ್ ಠಾಕ್ರೆ ಅವರ ಉಚ್ಛ್ರಾಯ ಸ್ಥಿತಿಯಲ್ಲಿ ಎರಡೂ ಪಕ್ಷಗಳ ಕೊಡುಕೊಳ್ಳುವಿಕೆಯು ಉತ್ತಮ ಸ್ಥಿತಿಯಲ್ಲಿತ್ತು.

ಆದರೆ 2014 ರಲ್ಲಿ ಮೈತ್ರಿ ಪಾಲುದಾರರಿಗೆ ಸೀಟು ಹಂಚಿಕೆ ಸಮೀಕರಣಗಳು ಹೆಚ್ಚು ಸಂಕೀರ್ಣವಾದವು. ಶಿವಸೇನೆ ಬಿಜೆಪಿಗೆ 119 ಸ್ಥಾನಗಳನ್ನು ಮತ್ತು ಇತರ ನಾಲ್ಕು ಮಿತ್ರರಾಷ್ಟ್ರಗಳಿಗೆ 18 ಸ್ಥಾನಗಳನ್ನು ನೀಡಿತು, 151 ಸ್ಥಾನಗಳನ್ನು ಸ್ವತಃ ಸ್ಪರ್ಧಿಸಲು ನಿರ್ಧರಿಸಿತು. ಹಲವಾರು ಸುತ್ತಿನ ಮಾತುಕತೆಗಳ ನಂತರವೂ ಎರಡೂ ಪಕ್ಷಗಳಿಗೆ ಒಂದು ತೀರ್ಮಾನಕ್ಕೆ ಬರಲಾಗಲಿಲ್ಲ. ಚುನಾವಣೆಯ ನಂತರದ ದಿನಗಳಲ್ಲಿ ಒಟ್ಟಿಗೆ ಅಧಿಕಾರ ನಡೆಸಲು ಆದರೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಹೋರಾಡಲು ನಿರ್ಧರಿಸಿದವು. ಮೋದಿ ಅಲೆಯ ಮೇಲೆ ಸವಾರಿ ಮಾಡುತ್ತಿದ್ದ ಬಿಜೆಪಿ 122 ಸ್ಥಾನಗಳನ್ನು ಗೆದ್ದು ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದಾಗ್ಯೂ, ಶಿವಸೇನೆ 63 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಇಬ್ಬರೂ ಒಗ್ಗೂಡಿ, ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾದರು.
2019 ರಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಸೇನೆ ಮತ್ತು ಬಿಜೆಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡವು. ಶಿವಸೇನೆ ಸ್ಥಾನಗಳ ಸಂಖ್ಯೆ ಮತ್ತಷ್ಟು ಕುಸಿಯಿತು. ಬಿಜೆಪಿ 164 ಸ್ಥಾನಗಳಿಗೆ ಸ್ಪರ್ಧಿಸಿದರೆ, ಸೇನೆಯು 126 ಸ್ಥಾನಗಳಲ್ಲಿ ಹೋರಾಡಿತು. ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ತನ್ನದೇ ಆದ ಸ್ವಂತ ಬಲದ ಮೇಲೆ ಗೆಲ್ಲುವ ಬಗ್ಗೆ ಫಡ್ನವೀಸ್ ಹೆಚ್ಚು ಆಶಾವಾದಿಯಾಗಿದ್ದರು. ಆದರೆ, ಫಲಿತಾಂಶ ಹೊರಬಂದಾಗ ಬಿಜೆಪಿ 105 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ ಮತ್ತೊಂದೆಡೆ ಶಿವಸೇನೆ 56 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಯಾವುದೇ ರಾಜಿ ಮಾಡಿಕೊಳ್ಳಲು ಸಿದ್ಧವಿಲ್ಲದ ಶಿವಸೇನೆಯು ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿತು. ಆದರೆ ಬಿಜೆಪಿ ಅದನ್ನು ಸ್ಪಷ್ಟವಾಗಿ ನಿರಾಕರಿಸಿತು.
ಮಹಾರಾಷ್ಟ್ರದಲ್ಲಿ ಮಾತ್ರ ಬಿಗಿ ಹಿಡಿತ ಹೊಂದಿರುವ ಶಿವ ಸೇನೆಗೆ ಮುಖ್ಯಮಂತ್ರಿ ಸ್ಥಾನ ಗಿಟ್ಟಿಸಿಕೊಳ್ಳುವುದು ಆ ಮೂಲಕ ರಾಜ್ಯ ರಾಜಕಾರಣದಲ್ಲಿ ತನ್ನ ಪ್ರಸ್ತುತತೆಯನ್ನು ಉಳಿಸಿಕೊಳ್ಳುವುದು ಅನಿವಾರ್ಯತೆಯಿತ್ತು. ಇತ್ತ ಬಿಜೆಪಿಗೂ ಮಹಾರಾಷ್ಟ್ರದಂತಹ ಪ್ರಮುಖ ರಾಜ್ಯದಲ್ಲಿ ತನ್ನ ನೆಲೆಯನ್ನು ಉಳಿಸಿಕೊಳ್ಳುವುದು, ಬೆಳೆಸಿಕೊಳ್ಳುವುದು ಅನಿವಾರ್ಯವಾಗಿತ್ತು. ಹಾಗಾಗಿ ಎರಡೂ ಪಕ್ಷಗಳು ತಾವು ಹಿಡಿದ ಪಟ್ಟು ಸಡಿಲಿಸಲಿಲ್ಲ.
ಪರಿಣಾಮ, ಅಭೂತಪೂರ್ವ ರಾಜಕೀಯ ತಿರುವೊಂದರಲ್ಲಿ, ಹಿಂದುತ್ವವಾದಿ ಶಿವಸೇನೆಯು ಪ್ರಗತಿಪರ, ಜಾತ್ಯತೀತವಾದಿ ಅನ್ನಿಸಿಕೊಂಡಿರುವ ಕಾಂಗ್ರೆಸ್ ಮತ್ತು ಎನ್ಸಿಪಿಯಂತಹ ಪಕ್ಷಗಳೊಂದಿಗೆ ಕೈಜೋಡಿಸಿತು.
ಅದಾದನಂತರ ಮಹಾರಾಷ್ಟವು ಹಲವು ರಾಜಕೀಯ ಕೆಸರೆರಚಾಟಗಳಿಗೆ ಸಾಕ್ಷಿಯಾಗಿದೆ. ಶಿವಸೇನೆ ಮತ್ತು ಬಿಜೆಪಿ ಎರಡೂ ಪಕ್ಷಗಳ ರಾಜಕೀಯ ಹುಳುಕುಗಳು, ಜಿದ್ದಾಜಿದ್ದಿಗಳಿಂದ ಹಲವು ಹಳೆಯ ಪ್ರಕರಣಗಳು ಮರುಜೀವ ಪಡೆದುಕೊಂಡಿದೆ. ಆದರೆ ಭಾನುವಾರ ಬಿಜೆಪಿಯ ಹಿರಿಯ ಮುಖಂಡ ಹಾಗೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಮ್ಮ ಪಕ್ಷ ಮತ್ತು ಮಾಜಿ ಮಿತ್ರ ಶಿವಸೇನೆ ‘ಶತ್ರುಗಳಲ್ಲ’ ಆದರೆ ಅವರ ನಡುವೆ ಕೆಲವು ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯಗಳಿವೆ ಮತ್ತು ರಾಜಕೀಯದಲ್ಲಿ ಯಾವುದೇ “ಇಫ್ಸ್ ಮತ್ತು ಬಟ್ಸ್” ಇಲ್ಲ ಎಂದು ಹೇಳಿ ರಾಜಕೀಯದ ಹೊಸ ಸಾಧ್ಯತೆಗಳ ಬಗ್ಗೆ ಚರ್ಚೆ ಹುಟ್ಟುಹಾಕಿದ್ದಾರೆ. ಇಬ್ಬರು ಮಾಜಿ ಮಿತ್ರ ಪಕ್ಷಗಳು ಮತ್ತೆ ಒಟ್ಟಿಗೆ ಸೇರುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಫಡ್ನವಿಸ್, ಪರಿಸ್ಥಿತಿಯನ್ನು ಅವಲಂಬಿಸಿ “ಸೂಕ್ತ ನಿರ್ಧಾರ” ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯ ಮಾನ್ಸೂನ್ ಅಧಿವೇಶನದ ಮುನ್ನಾದಿನದಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಇತ್ತೀಚಿನ ಸಭೆ ಮತ್ತು ಬಿಜೆಪಿ ಮತ್ತು ಶಿವಸೇನೆ ಮತ್ತೆ ಒಟ್ಟಿಗೆ ಸೇರುವ ಸಾಧ್ಯತೆಯ ಬಗ್ಗೆ ಕೇಳಿದಾಗ, ಫಡ್ನವೀಸ್, “ರಾಜಕೀಯದಲ್ಲಿ ಯಾವುದೇ ರೀತಿಯ ಈಫ್ ಮತ್ತು ಬಟ್ ಇಲ್ಲ. ಚಾಲ್ತಿಯಲ್ಲಿರುವ ಸಂದರ್ಭಗಳಿಗೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ” ಎಂದು ಹೇಳಿದ್ದಾರೆ.
“ಭಿನ್ನಾಭಿಪ್ರಾಯಗಳಿದ್ದರೂ ಬಿಜೆಪಿ ಮತ್ತು ಶಿವಸೇನೆ ಶತ್ರುಗಳಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು “ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.
“ನಮ್ಮ ಸ್ನೇಹಿತರಾಗಿದ್ದ ಶಿವಸೇನೆ ನಮ್ಮೊಂದಿಗೆ 2019 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಮತದಾನದ ನಂತರ ಅವರು ಜನರ ತೀರ್ಪಿಗೆ ವಿರುದ್ಧವಾಗಿ ಎನ್ಸಿಪಿ ಮತ್ತು ಕಾಂಗ್ರೆಸ್ ಜೊತೆ ಕೈಜೋಡಿಸಿದ್ದಾರೆ” ಎಂದು ಫಡ್ನವೀಸ್ ಹೇಳಿದ್ದಾರೆ. ಅಲ್ಲದೆ ಶನಿವಾರ ಶಿವಸೇನೆಯ ಸಂಸದ ಸಂಜಯ್ ರಾವತ್ ಅವರು ಬಿಜೆಪಿ ಮುಖಂಡ ಆಶಿಶ್ ಶೆಲಾರ್ ಅವರನ್ನೂ ಭೇಟಿಯಾಗಿದ್ದರು. ಆದರೆ ಈ ಬಗ್ಗೆ ಹರಡಿರುವ ವದಂತಿಗಳನ್ನು ತಳ್ಳಿ ಹಾಕಿರುವ ಸಂಜಯ್ “ಇಂತಹ ವದಂತಿಗಳು ಹೆಚ್ಚು ಹರಡಿದರೆ ನಮ್ಮ ಮೈತ್ರಿ ಮತ್ತಷ್ಟು ಬಲಗೊಳ್ಳುತ್ತದೆ. ನಮಗೆ ರಾಜಕೀಯ ಮತ್ತು ಸೈದ್ಧಾಂತಿಕ ಭಿನ್ನತೆಗಳು ಇರಬಹುದು, ಆದರೆ ಸಾರ್ವಜನಿಕ ಸಮಾರಂಭಗಳಲ್ಲಿ ನಾವು ಮುಖಾಮುಖಿಯಾಗಬೇಕಾಗಿ ಬಂದರೆ, ನಾವು ಪರಸ್ಪರ ಸೌಹಾರ್ದಯುತವಾಗಿ ವರ್ತಿಸುತ್ತೇವೆ. ನಾನು ಶೆಲಾರ್ ಅವರೊಂದಿಗೆ ಬಹಿರಂಗವಾಗಿ ಕಾಫಿಯನ್ನೂ ಸೇವಿಸಿದ್ದೇನೆ ” ಎಂದು ಅವರು ಹೇಳಿಕೆ ನೀಡಿದ್ದಾರೆ.
ಇತ್ತೀಚಿಗೆ ಕೇಂದ್ರ ತನಿಖಾ ಸಂಸ್ಥೆಗಳು ಮಹಾರಾಷ್ಟ್ರದ ಹಲವು ರಾಜಕೀಯ ನೇತಾರರನ್ನು ಗುರಿಯಾಗಿಸಿ ನಡೆಸಿದ ದಾಳಿಯು ಶುದ್ಧ ರಾಜಕೀಯ ಪ್ರೇರಿತ ಎಂದು ಟೀಕೆಗೊಳಗಾಗಿತ್ತು. ಈಗ ಫಡ್ನವಿಸ್ ಅವರ ಹೇಳಿಕೆಯು ಹೊಸ ರಾಜಕೀಯ ಸಾಧ್ಯತೆಗಳ ಹುಟ್ಟಿಗೆ ಕಾರಣವಾಗಲಿದೇಯೇ ಎಂಬ ಕುತೂಹಲ ಮೂಡಿಸಿದೆ.