ಭಜರಂಗ ದಳದ (Bajarang Dal) ಕಾರ್ಯಕರ್ತ ಹರ್ಷ ಹತ್ಯೆಯಿಂದ ಉದ್ವಿಗ್ನಗೊಂಡಿದ್ದ ಶಿವಮೊಗ್ಗ ಜಿಲ್ಲೆ (Shivamogha District) ಸದ್ಯ ಶಾಂತವಾಗಿದ್ದು, ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದೆ. ಹತ್ಯೆಯ ಸಂಬಂಧ ತೀವ್ರ ನಿಗಾ ವಹಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ (araga jnanendra), ಮಹಾನೀರ್ದೇಶಕರು ಮತ್ತು ಆರಕ್ಷಕರ ಮಹಾ ನೀರಿಕ್ಷಕರಿಗೆ ಖಡಕ್ ಆದೇಶ ಹೊಡಿಸಿದ್ದಾರೆ.
ಶಿವಮೊಗ್ಗ, ಜಿಲ್ಲೆಯ ದೊಡ್ಡಪೇಟೆ ಹಾಗೂ ಕೋಟೆ ಪೊಲೀಸ್ ಠಾಣೆಗಳಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ ಅಧಿಕಾರಿ / ಸಿಬ್ಬಂದಿಗಳು ತೆಗೆದುಕೊಂಡ ಕ್ರಮಗಳೇನು? ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷಿಸಲಾದ ಲೋಪಗಳ ಬಗ್ಗೆ ವಿಸ್ತೃತವಾದ ವರದಿ ನೀಡುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚಿಸಿದ್ದಾರೆ.
ಆದೇಶ ಪತ್ರದಲ್ಲಿ, ಶಿವಮೊಗ್ಗದಲ್ಲಿ ನಡೆದ ಹಿಂದೂ ಕಾರ್ಯಕರ್ತರಾದ ಹರ್ಷ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕಿತರನ್ನು ಬಂಧಿಸಿ, ಘನ ನ್ಯಾಯಾಲಯದ ಮುಂದು ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದು ತೀವ್ರ ಗತಿಯಲ್ಲಿ ವಿಚಾರಣೆ ನಡೆಸುತ್ತಿರುವುದು ಸರಿಯಷ್ಟೇ. ಆದರೆ ಈ ಹಿಂದೆ ಬಂಧಿತ ಆರೋಪಿಗಳ ಮೇಲೆ ಶಿವಮೊಗ್ಗ, ಜಿಲ್ಲೆಯ ದೊಡ್ಡಪೇಟೆ ಹಾಗೂ ಕೋಟೆ ಪೊಲೀಸ್ ಠಾಣೆಗಳಲ್ಲಿ ಹಲವಾರು ತೀವ್ರತರಹದ ಪ್ರಕರಣಗಳು ದಾಖಲೆಯಾಗಿದ್ದವು ಎಂಬ ಮಾಹಿತಿಯಿದೆ. ಕ್ರಿಮಿನಲ್ ಹಿನ್ನೆಲೆಯುಳ್ಳ ಈ ಆರೋಪಿಗಳ ಮೇಲೆ ಈ ಎರಡೂ ಠಾಣೆಗಳಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ ಅಧಿಕಾರಿ / ಸಿಬ್ಬಂದಿಗಳು ತೆಗೆದುಕೊಂಡ ಕ್ರಮಗಳೇನು ಹಾಗೂ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷಿಸಲಾದ ಲೋಪಗಳ ಬಗ್ಗೆ ಹಾಗೂ ಈ ಸಂಬಂಧ ಮೇಲಾಧಿಕಾರಿಗಳು ನೀಡಿರುವ ನಿರ್ದೇಶನಗಳು ಸರಿಯಾಗಿ ಪಾಲನೆಯಾಗಿವೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸಿ, ಒಂದು ವಾರದಲ್ಲಿ ವಿಸ್ತೃತವಾದ ವರದಿ ನೀಡುವಂತೆ ಸೂಚಿಸಿದ್ದಾರೆ.
ಮುಂದುವರೆದು, ಶಿವಮೊಗ್ಗ ನಗರದಲ್ಲಿ ಸಮಾಜಘಾತುಕ ಶಕ್ತಿಗಳ ಬೆಳವಣಿಗೆಯಲ್ಲಿ ಪೊಲೀಸರ ಪಾತ್ರದ ಬಗ್ಗೆಯೂ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಈ ಬಗ್ಗೆಯೂ ತನಿಖೆ ನಡೆಸಿ, ಒಂದು ವಾರದಲ್ಲಿಯೇ ವಿಸ್ತೃತವಾದ ವರದಿ ನೀಡುವಂತೆ ಸೂಚಿಸಿದೆ ಎಂದು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
![](https://pratidhvani.com/wp-content/uploads/2022/02/WhatsApp-Image-2022-02-23-at-11.26.33-AM-924x1024.jpeg)
ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಹರ್ಷ ಕೊಲೆ ಪ್ರಕರಣದ ಆರೋಪಿಗಳು ಬಂಧನವಾಗಿದೆ. ಅವರ ಹಿನ್ನೆಲೆಯ ಬಗ್ಗೆ ತನಿಖೆಯಾಗುತ್ತಿದೆ. ಸದ್ಯಕ್ಕೆ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಆರೋಪಿಗಳು ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದವರು. ಅವರ ವಿರುದ್ಧ ಅನೇಕ ಪ್ರಕರಣಗಳು ಇದೆ ಎಂದು ವಿವರಿಸಿದ್ದಾರೆ.
ಹತ್ಯೆಗೆ ಕಾರಣ ಏನು ಎಂಬುವುದು ಸಂಪೂರ್ಣವಾಗಿ ತನಿಖೆಯಿಂದ ಹೊರಬಬೇಕು. ಕಾರಣ ಏನು ಎಂಬ ನಿಟ್ಟಿನಲ್ಲಿ ಎಲ್ಲ ಆಯಾಮದಿಂದ ಶೋಧನೆ ನಡೆಯುತ್ತಿದೆ. ಆರೋಪಿಗಳು ಯಾವ ಸಂಘಟನೆ, ಯಾವ ಲಿಂಕ್ ಇದೆ ಎಂಬ ಬಗ್ಗೆ ಪೊಲೀಸರು ಶೋಧನೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.