ದಿನ ಕಳೆಯುವುದು ಗೊತ್ತೇ ಆಗುವುದಿಲ್ಲ ಎಂಬ ಗೊಣಗಾಟದೊಡನೆಯೇ ದಿನಗಳು, ತಿಂಗಳುಗಳು, ವರುಷಗಳು ಉರುಳುವುದನ್ನು ನೋಡುತ್ತಾ, ಆಗಲೇ ಒಂದು ವರ್ಷ ಆಗಿಹೋಯಿತೇ ಎಂದು ಉದ್ಗರಿಸುತ್ತಾ ಬದುಕು ಸವೆಸುವ ಸಮಾಜದ ಹಿತವಲಯದ ಜನತೆಗೆ ಏಳು ದಿನ ಎನ್ನುವುದು ನಗಣ್ಯವಾಗುತ್ತದೆ. ಏಕೆಂದರೆ ಆಧುನಿಕ ತಂತ್ರಜ್ಞಾನದ ಜಗತ್ತು ಬಹು ವೇಗವಾಗಿ ಚಲಿಸುತ್ತಿರುವಂತೆ ಭಾಸವಾಗುತ್ತಿರುತ್ತದೆ. ತಂತ್ರಜ್ಞಾನದ ಬಳಕೆ ಮತ್ತು ಆಧುನಿಕ ಸಂಪರ್ಕ, ಸಂವಹನ, ಸಾರಿಗೆ ಸಾಧನಗಳ ಪರಿಣಾಮವಾಗಿ ಮನುಷ್ಯನ ಚಲನಶೀಲತೆಯೂ ಕ್ಷಿಪ್ರತೆಯನ್ನು ಪಡೆದುಕೊಂಡುಬಿಟ್ಟಿದೆ. ಮತ್ತೊಂದು ಮಜಲಿನಲ್ಲಿ ನೋಡಿದಾಗ, “ಏಳು ದಿನಗಳಲ್ಲಿ ಏನ ಸಾಧಿಸಬಲ್ಲೆ” ಎಂಬ ಪ್ರಶ್ನೆಗೆ ನಾವೇ ಸ್ವತಃ ಮುಖಾಮುಖಿಯಾಗುತ್ತೇವೆ ಅಥವಾ ಅಂತಹ ಸವಾಲುಗಳನ್ನು ಎದುರಿಸುತ್ತೇವೆ. ಮಾನವ ಸಮಾಜದ ಚಲನಶೀಲತೆ ಅಷ್ಟು ವೇಗೋತ್ಕರ್ಷವನ್ನು ಪಡೆದುಕೊಂಡಿದೆ.
ಹಾಗೆಯೇ ಭೂ ಖಂಡದ ಈ ತುದಿಯಿಂದ ಆ ತುದಿಯವರೆಗಿನ ಮಾನವ ಸಮಾಜಗಳಲ್ಲಿ ಉಂಟಾಗುತ್ತಿರುವ ಪಲ್ಲಟಗಳು, ತಲ್ಲಣಗಳು ಮತ್ತು ವಿಪ್ಲವಕಾರಿ ಬೆಳವಣಿಗೆಗಳು ಸದಾ ನಮ್ಮ ಬೆರಳ ತುದಿಯಲ್ಲೇ ಇದೆ ಎನ್ನುವ ರೀತಿ ಆಧುನಿಕ ಸಮಾಜದ ಬೌದ್ಧಿಕ ಪಯಣ ನಿತ್ಯ ಸಾಗಿರುತ್ತದೆ. ಮೊಬೈಲ್, ಅಂತರ್ಜಾಲ, ವಾಟ್ಸಾಪ್, ಇನ್ಸ್ಟಾಗ್ರಾಂ, ಟೆಲಿಗ್ರಾಂ, ಫೇಸ್ ಬುಕ್ ಮುಂತಾದ ಸಂವಹನ ಮಾಧ್ಯಮಗಳು ಎರಡೂ ಧೃವಗಳಲ್ಲಿನ ಜನರನ್ನು ಕ್ಷಣಮಾತ್ರದಲ್ಲಿ ಸಂಪರ್ಕಿಸಲು ಸಾಧ್ಯವಾಗುತ್ತಿದೆ. ಆಸ್ಟ್ರೇಲಿಯಾದ ಒಂದು ಹುಲ್ಲುಗಾವಲನ್ನು ವೀಕ್ಷಿಸಲು ತಂತ್ರಜ್ಞಾನ ಆಧಾರಿತ ಬೌದ್ಧಿಕ ಪಯಣವೇ ಸಾಕೆನಿಸುವಷ್ಟು ಮಟ್ಟಿಗೆ ಜಗತ್ತು ಚಿಕ್ಕದಾಗುತ್ತಿದೆ. ಇಂತಹ ಒಂದು ಆಧುನಿಕತೆಯ ನಡುವೆ 1232 ಕಿ.ಮೀ ಪಯಣ ಎಂದರೆ ಅನೇಕ ಶ್ರೀಮಂತ ಉದ್ಯಮಿಗಳ ಪಾಲಿಗೆ ಹಿತ್ತಲು-ಅಂಗಳದ ನಡುವೆ ಪಯಣಿಸಿದಂತೆಯೇ ತೋರುತ್ತದೆ.
ಮೂರನೆಯದಾಗಿ, ಜಗತ್ತಿನಲ್ಲಿ ಒಬ್ಬ ವ್ಯಕ್ತಿ ಹಸಿವಿನಿಂದ ಸತ್ತರೂ ಅದು ಮಾನವ ಸಮಾಜದಲ್ಲಿ ಬಡತನ, ದಾರಿದ್ರ್ಯತೆ ಇರುವ ಸೂಚಕವಾಗಿ ಕಾಣುವಂತಹ ಮನಸುಗಳು ನಮ್ಮ ನಡುವೆ ಇಂದಿಗೂ ಜೀವಂತವಾಗಿವೆ. “ಈ ಜಗತ್ತು ಎಷ್ಟು ಸುಂದರ” ಎಂಬ ಭ್ರಮೆಯನ್ನು ಸೃಷ್ಟಿಸುವಂತಹ ನವ ಉದಾರವಾದಿ ಮಾರುಕಟ್ಟೆ ಅರ್ಥವ್ಯವಸ್ಥೆಯಲ್ಲಿ ಝಗಮಗಿಸುವ ಷಾಪಿಂಗ್ ಮಾಲ್ಗಳು, ಗಗನದೆತ್ತರದ ಕಟ್ಟಡಗಳು, ಐಷಾರಾಮಿ ಮನರಂಜನಾ ತಾಣಗಳು, ಮಿನುಗುವ-ಹೊಳೆಯುವ ನುಣ್ಣನೆಯ ರಸ್ತೆ-ಮೇಲ್ಸೇತುವೆ-ಮೆಟ್ರೋಗಳು ಸಾಧಾರಣ ಮನುಷ್ಯನ್ನೂ ಸದಾ ಭ್ರಮಾಲೋಕದಲ್ಲಿ ವಿಹರಿಸುವಂತೆ ಮಾಡುತ್ತದೆ. ಇಂತಹ ಸನ್ನಿವೇಶದಲ್ಲಿ ಏಳು ಜನ ವಲಸೆ ಕಾರ್ಮಿಕರ ಬದುಕು ಒಂದು ಇಡೀ ಸಮಾಜಕ್ಕೆ ಕನ್ನಡಿ ಹಿಡಿಯಲು ಸಾಧ್ಯವೇ ? ಎಂಬ ಜಿಜ್ಞಾಸೆ ಮೂಡುವುದು ಸಹಜ.
![](https://pratidhvani.com/wp-content/uploads/2021/12/1232KMS-Disney-plus-hotstar-1024x569.jpg)
ಇದು ಸಾಧ್ಯ ಎನ್ನುವುದನ್ನು ಸಾಕ್ಷ್ಯಾಧಾರಗಳ ಸಮೇತ, ಸಂವೇದನಾತ್ಮಕವಾಗಿ, ಮಾನವೀಯ ನೆಲೆಗಳನ್ನು ಹಾದುಹೋಗುತ್ತಾ, ವ್ಯವಸ್ಥೆಯ ಆಳವಾದ ಕಂದಕಗಳನ್ನು ಪರಿಚಯಿಸುತ್ತಾ, ಮನುಷ್ಯನ ಬದುಕಿನ ಏಳುಬೀಳುಗಳನ್ನು ಏಳು ಜನರ ವಲಸೆ ಕಾರ್ಮಿಕರ ಕಣ್ಣುಗಳಲ್ಲಿ ನೋಡುವ ಸಾಹಸವನ್ನು ವಿನೋದ್ ಕಾಪ್ರಿ ಎಂಬ ಪತ್ರಕರ್ತರು ಮಾಡಿದ್ದಾರೆ. “ ಬೇಗನೆ ಮನೆ ಸೇರ್ಕೋಬಾರ್ದೇ ” ಎಂಬ ಮಧ್ಯಮ ವರ್ಗದ ಸಹಜ ಅಭಿವ್ಯಕ್ತಿಯನ್ನು ತಕ್ಕಡಿಯ ಒಂದು ತಟ್ಟೆಯಲ್ಲಿಟ್ಟು “1232 ಕಿ.ಮೀ ಮನೆ ಸೇರಲು ಸಾಗಿದ ದೂರ” ಮತ್ತೊಂದು ತಟ್ಟೆಯಲ್ಲಿಟ್ಟರೆ, ಈ ಕೃತಿಯ ಭಾರಕ್ಕೆ ತಕ್ಕಡಿಯೇ ಮುಕ್ಕಾಗುವ ಸಾಧ್ಯತೆಗಳನ್ನೂ ಅಲ್ಲಗಳೆಯಲಾಗುವುದಿಲ್ಲ. ಏಳು ಮಂದಿ ವಲಸೆ ಕಾರ್ಮಿಕರು, ಏಳು ದಿನಗಳು, ಏಳು ರಾತ್ರಿಗಳನ್ನು ಕನ್ನಡಕ್ಕೆ ಅತ್ಯದ್ಭುತವಾಗಿ ಅನುವಾದಿಸಿರುವ ಜಿ.ಟಿ ಸತೀಶ್ ಅವರ ಬೆನ್ನು ತಟ್ಟುತ್ತಲೇ ಈ ವಲಸೆ ಕಾರ್ಮಿಕರೊಂದಿಗೆ ನಾವೂ ಪಯಣಿಸಬಹುದು.
ಈ ಕೃತಿ ವಲಸೆ ಕಾರ್ಮಿಕರ ಪಾಲಿಗೆ ಅನುಭವ ಕಥನ, ಹಿತವಲಯದ ಜನರ ಪಾಲಿಗೆ ಅನುಭಾವದ ಕಥನ, ವ್ಯವಸ್ಥೆಯ ಕ್ರೌರ್ಯಕ್ಕೆ ಬಲಿಯಾಗುವ ಶ್ರಮಜೀವಿಗಳ ಪಾಲಿಗೆ ಆತ್ಮಕಥನ. ಈ ಮೂರೂ ಆಯಾಮಗಳನ್ನು ಒಳಗೊಂಡಿರುವ ಕೃತಿಯ ಆರಂಭದಲ್ಲೇ ಲೇಖಕರು ತಮ್ಮ ಮೊದಲ ಮಾತಿನಲ್ಲೇ ನಮ್ಮೊಳಗಿನ ಪಾಪಪ್ರಜ್ಞೆಯನ್ನು ಬಡಿದೆಬ್ಬಿಸಿಬಿಡುತ್ತಾರೆ. “ ನಿಮ್ಮ ಮನೆಗೆ ನಿತ್ಯ ಪೇಪರ್ ಹಾಕುವ ಹುಡುಗ ಯಾರು ?,,,, ಕಸ ತೆಗೆದುಕೊಂಡುಹೋಗುವವರು ಯಾರು ?,,,,,” ಈ ಪ್ರಶ್ನೆಗಳೇ ನಮ್ಮೊಳಗಿನ ಅಸೂಕ್ಷ್ಮತೆಗಳನ್ನು ಎತ್ತಿ ತೋರಿಸುವಂತಿದೆ. ಈ ಪ್ರಶ್ನೆಗಳ ಮೂಲಕವೇ ಲೇಖಕರು ಏಳು ಮಂದಿ ವಲಸೆ ಕಾರ್ಮಿಕರು ತಮ್ಮ ಬದುಕಿನ ನೆಲೆಗಳನ್ನು ಅರಸುತ್ತಾ ಪಯಣಿಸುವ ಹಾದಿಯನ್ನು ವಿವರಿಸುತ್ತಾ ಹೋಗುತ್ತಾರೆ. ಈ ಏಳು ಜನರು ಕುಳಿತು ತಿನ್ನುವವರಲ್ಲ, ದುಡಿದು ತಿನ್ನುವವರು. ತಮ್ಮ ದುಡಿಮೆಯ ನೆಲೆ ಕಳೆದುಕೊಂಡಾಗ ತಮ್ಮನ್ನೇ ಅವಲಂಬಿಸಿ ಬದುಕುವ ಕುಟುಂಬಗಳತ್ತ ತೆರಳುತ್ತಾರೆ. ಈ ಏಳು ಜನರನ್ನು ಹೇಗೆ ನೋಡುವುದು ? ನಿತ್ಯ ದುಡಿಮೆಯಿಲ್ಲದೆ ಬದುಕಲು ಸಾಧ್ಯವೇ ಇಲ್ಲದ ಒಂದು ಸಮುದಾಯವಾಗಿಯೋ ಅಥವಾ ಮತ್ತೊಬ್ಬರ ಮುಂದೆ ಕೈಚಾಚದ ಸ್ವಾವಲಂಬಿ ಕಾರ್ಮಿಕ ಸಮಾಜವಾಗಿಯೋ ? ಈ ಜಿಜ್ಞಾಸೆ ಪುಸ್ತಕದುದ್ದಕ್ಕೂ ಕಾಡುತ್ತದೆ.