ಸೇನಾ ಸಮವಸ್ತ್ರ ಧರಿಸಿ ದೇಶದ ಪ್ರಮುಖ ಸೇನಾ ಪ್ರದೇಶಗಳ ಫೋಟೋಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಆರೋಪ ಹೊತ್ತಿರುವ ಬಟ್ಟೆ ವ್ಯಾಪಾರಿ ಜಿತೇಂದರ್ ಸಿಂಗ್ ನ ಜಾಮೀನು ಅರ್ಜಿಯನ್ನು ರಾಜ್ಯ ಹೈಕೋರ್ಟ್ ವಜಾಗೊಳಿಸಿದೆ.
ಪ್ರಕರಣದಲ್ಲಿ ಜಾಮೀನು ಕೋರಿ ಜಿತೇಂದರ್ ಸಿಂಗ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠವು, ದೇಶದ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿದ್ದರಿಂದ ಭದ್ರತೆಗೆ ಧಕ್ಕೆಯಾಗಲಿದೆ. ಈ ಸ್ಥಳಗಳನ್ನು ಗುರಿಯಾಗಿಸಿಕೊಳ್ಳಬಹುದು. ಹೀಗಾಗಿ, ಜಾಮೀನು ನೀಡುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಭಾರತೀಯ ಸೇನೆಯ ರಹಸ್ಯ ಮಾಹಿತಿಯ ಫೋಟೋಗಳನ್ನು ಪಾಕಿಸ್ತಾನದೊಂದಿಗೆ ಹಂಚಿಕೊಂಡ ಪ್ರಕರಣ ಕುರಿತಂತೆ ರಾಜಸ್ತಾನ ಮೂಲದ ಜಿತೇಂದರ್ ಸಿಂಗ್ನನ್ನು ಭಯೋತ್ಪಾದನೆ ನಿಗ್ರಹ ದಳ ಬಂಧಿಸಿತ್ತು. ಆದರೆ, ತಾನು ಕೇವಲ ಪಾಕಿಸ್ತಾನ ಯುವತಿಯೊಂದಿಗೆ ಚಾಟ್ ಮಾಡಿದ್ದೇನೆ ಎಂದು ಬಂಧಿತ ಆರೋಪಿ ಹೇಳಿದ್ದ.
ಪ್ರಕರಣದ ಹಿನ್ನೆಲೆ:
ಜೀತೆಂದರ್ ಸಂಬಂಧಿಯೊಬ್ಬರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಅವರನ್ನು ಕಂಡು ಈತನೂ ಮಿಲಿಟರಿಗೆ ಸೇರುವ ಆಕಾಂಕ್ಷೆ ಹೊಂದಿದ್ದ. ಜವಾನ ಹುದ್ದೆಗೂ ಅರ್ಜಿಯನ್ನೂ ಹಾಕಿದ್ದ. ಆದರೆ, ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ.
ಸೇನೆಯಲ್ಲಿ ಸೈನಿಕನಾಗಲು ಕನಿಷ್ಠ 10ನೆ ತರಗತಿ ವ್ಯಾಸಂಗ ಮಾಡಿರಬೇಕು. ಆದರೆ, ಜಿತೇಂದರ್ ಓದಿದ್ದು ಕೇವಲ 6ನೆ ತರಗತಿ ಮಾತ್ರ. ಹೀಗಾಗಿ ಸೇನೆಯಲ್ಲಿ ಖಾಲಿಯಿದ್ದ ಸಣ್ಣ-ಪುಟ್ಟ ಹುದ್ದೆಗಳಾದ ಬಾಣಸಿಗ, ದೋಬಿ ಮೊದಲಾದ ಸಣ್ಣಪುಟ್ಟ ಹುದ್ದೆಗಳನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನ ನಡೆಸಿದ್ದ, ಇಂತಹ ಹುದ್ದೆಗಳಿಗೆ ಯಾವುದೇ ರೀತಿಯ ಶಿಕ್ಷಣ ಬೇಕಾಗಿಲ್ಲದಿದ್ದರೂ, ಜಿತೇಂದರ್ ಈ ಹುದ್ದೆಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ವಿಫಲನಾಗಿದ್ದ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ನೆಪದಲ್ಲಿ ಮಿಲಿಟರಿ ನೆಲೆಯ ಆವರಣಕ್ಕೆ ಹೋಗುತ್ತಿದ್ದ ಆತ ಅಲ್ಲಿನ ಸೇನಾನೆಲೆಗಳ ಬಂಕರ್, ಮಿಲಿಟರಿ ವಾಹನಗಳು ಹಾಗೂ ಸುತ್ತಮುತ್ತಲಿರುವ ಪ್ರದೇಶಗಳನ್ನು ಯಾರಿಗೂ ತಿಳಿಯದಂತೆ ಮೊಬೈಲ್ನಲ್ಲಿ ಸೆರೆಹಿಡಿದಿದ್ದ. ಅದೇ ಫೋಟೊಗಳನ್ನು ಐಎಸ್ಐ ಏಜೆಂಟ್ಗಳಿಗೆ ಕಳುಹಿಸುತ್ತಿದ್ದ ಎಂದು ಆರೋಪಿಸಲಾಗಿದೆ.