ಭಾರತೀಯ ದಂಡ ಸಂಹಿತೆ ಸೆಕ್ಷನ್ 124A ಯನ್ನು (ದೇಶದ್ರೋಹ ಕಾನೂನನ್ನು) ಮರುಪರಿಶೀಲಿಸುವುದಾಗಿ ಕೇಂದ್ರ ಸರ್ಕಾರ ಸೋಮವಾರ ಹೇಳಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.
ಮಾನವ ಹಕ್ಕುಗಳ ಕಾಳಜಿ ಸೇರಿದಂತೆ (ದೇಶದ್ರೋಹ) ಕಾನೂನಿಗೆ ಸಂಬಂಧಿಸಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳ ಬಗ್ಗೆ ಸರ್ಕಾರವು ತಿಳಿದಿದೆ ಎಂದು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ಸರ್ಕಾರ ಹೇಳಿದೆ. ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ರಕ್ಷಿಸಲು ಸರ್ಕಾರ ಬದ್ಧವಾಗಿದೆ ಮತ್ತು ಕಾನೂನನ್ನು ಮರುಪರಿಶೀಲಿಸಲು ನಿರ್ಧರಿಸಿದೆ ಎಂದು ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
“ಭಾರತದಲ್ಲಿ ಕಾನೂನಿನ ಮೂಲಕ ಸ್ಥಾಪಿಸಲಾದ ಸರ್ಕಾರದ ಬಗ್ಗೆ ದ್ವೇಷ ಅಥವಾ ತಿರಸ್ಕಾರವನ್ನು ತರಲು ಪ್ರಯತ್ನಿಸುವ ಅಥವಾ ಪ್ರಚೋದಿಸುವ ಅಥವಾ (ಸರ್ಕಾರದ ವಿರುದ್ಧ) ಅಸಮಾಧಾನವನ್ನು ಪ್ರಚೋದಿಸಲು ಪ್ರಯತ್ನಿಸುವುದನ್ನು ʼದೇಶದ್ರೋಹದ ಅಪರಾಧʼವನ್ನು ಎಸಗಿದ್ದಾರೆ ಎಂದು ಪರಿಗಣಿಸಬಹುದು” ಎಂದು ಸೆಕ್ಷನ್ 124ಎ ಹೇಳುತ್ತದೆ.
ಆದರೆ, ಈ ಕಾನೂನು ದುರುಪಯೋಗವಾಗಿರುವುದರಿಂದ ಅದನ್ನು ತೆಗೆದು ಹಾಕಬೇಕು ಎಂದು ವಾದಿಸಿ ಪತ್ರಕರ್ತರು, ಕಾರ್ಯಕರ್ತರು ಮತ್ತು ರಾಜಕೀಯ ಮುಖಂಡರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಶನಿವಾರ, ಕೇಂದ್ರವು ದೇಶದ್ರೋಹ ಕಾನೂನನ್ನು ಮರುಪರಿಶೀಲಿಸುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿತ್ತು.
ಸುಪ್ರೀಂ ಕೋರ್ಟ್ಗೆ ಲಿಖಿತ ಸಲ್ಲಿಕೆ ನೀಡಿದ್ದ ಸರ್ಕಾರವು, ಸೆಕ್ಷನ್ 124 ಎ ಅನ್ನು ಪರಿಶೀಲಿಸಲು ಸಾಧ್ಯವಿಲ್ಲ, ಏಕೆಂದರೆ ಈಗಾಗಲೇ 1962 ರ ತೀರ್ಪಿನಲ್ಲಿ ಅದನ್ನು ಸಮರ್ಥಿಸಿದೆ ಎಂದು ಕೇದಾರನಾಥ್ ಸಿಂಗ್ ಮತ್ತು ಬಿಹಾರ ರಾಜ್ಯ ನಡುವಿನ ಪ್ರಕರಣದಲ್ಲಿ ನ್ಯಾಯಾಲಯವು ದೇಶದ್ರೋಹ ಕಾನೂನನ್ನು ಎತ್ತಿಹಿಡಿಯುವ ತೀರ್ಪು ನೀಡಿದ್ದನ್ನು ಕೇಂದ್ರ ಉಲ್ಲೇಖಿಸಿ ಸೆಕ್ಷನ್ 124 ಎ ಮರುಪರಿಶೀಲಿಸುವ ಅಗತ್ಯವಿಲ್ಲ ಎಂದು ಹೇಳಿತ್ತು.

“ನಿಬಂಧನೆಗಳ ದುರುಪಯೋಗದ ನಿದರ್ಶನಗಳು ಸಂವಿಧಾನ ಪೀಠದ ಬದ್ಧ ತೀರ್ಪನ್ನು ಮರುಪರಿಶೀಲಿಸಲು ಎಂದಿಗೂ ಸಮರ್ಥನೆಯಾಗುವುದಿಲ್ಲ” ಎಂದು ಕೇಂದ್ರವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಾಡಿದ್ದರು.
ದೇಶದ್ರೋಹ ಕಾನೂನನ್ನು ರದ್ದುಪಡಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಹಲವು ಅರ್ಜಿಗಳ ವಿಚಾರಣೆಯನ್ನು ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠವು ಕೈಗೆತ್ತಿಕೊಂಡಿದೆ.
ಇದಕ್ಕೂ ಮುನ್ನ ಈ ಅರ್ಜಿಗಳನ್ನೇ ವಜಾ ಮಾಡಬೇಕು ಎಂದು ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ವಾದಿಸಿದ್ದರು.
ಈ ಕಾನೂನು ಸಂವಿಧಾನಬದ್ಧವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ರಾಷ್ಟ್ರೀಯ ಭದ್ರತೆಯನ್ನು ಕೇದಾರನಾಥ್ ಪ್ರಕರಣದಲ್ಲೇ ಸ್ಪಷ್ಟಪಡಿಸಲಾಗಿದೆ. ಈ ಕಾನೂನಿನ ದುರ್ಬಳಕೆಯನ್ನು ತಡೆಯಲು ನ್ಯಾಯಾಲಯವು ಮಾರ್ಗಸೂಚಿಗಳನ್ನು ಹೊರಡಿಸಬಹುದು ಎಂದು ಸರ್ಕಾರದ ಪರವಾಗಿ ಅವರು ಪ್ರತಿಪಾದಿಸಿದ್ದರು. ಅಲ್ಲದೆ, ಅರ್ಜಿಗಳನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವುದನ್ನು ವಿರೋಧಿಸಿದ್ದರು.
ಅರ್ಜಿದಾರರ ಪರವಾಗಿ ಕಪಿಲ್ ಸಿಬಲ್ ವಾದ ಮಂಡಿಸಿದ್ದು, ‘ಈ ಕಾನೂನಿನ ಹಲವು ಅಂಶಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸುತ್ತವೆ. ಕೇದಾರನಾಥ್ ಪ್ರಕರಣದ ತೀರ್ಪಿನ ನಂತರ ಹಲವು ದಶಕಗಳು ಕಳೆದಿವೆ, ಸಾಕಷ್ಟು ಬದಲಾವಣೆಯಾಗಿದೆ’ ಎಂದು ಹೇಳಿದ್ದರು.






