• Home
  • About Us
  • ಕರ್ನಾಟಕ
Saturday, June 28, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಶಾಲಾ ಪಠ್ಯಗಳು  ಸಾಂಸ್ಕೃತಿಕ ಸಂಘರ್ಷದ ನೆಲೆಯಾಗಬಾರದು

ನಾ ದಿವಾಕರ by ನಾ ದಿವಾಕರ
May 23, 2022
in ಅಭಿಮತ
0
ಶಾಲಾ ಪಠ್ಯಗಳು  ಸಾಂಸ್ಕೃತಿಕ ಸಂಘರ್ಷದ ನೆಲೆಯಾಗಬಾರದು
Share on WhatsAppShare on FacebookShare on Telegram

ರಾಜ್ಯದಲ್ಲಿ ಸೃಷ್ಟಿಯಾಗಿರುವ ಶಾಲಾ ಪಠ್ಯ ಪರಿಷ್ಕರಣೆಯ ವಿವಾದದ ಸಂದರ್ಭದಲ್ಲಿ ಸನ್ಮಾನ್ಯ ಶಿಕ್ಷಣ ಸಚಿವರು ಹೀಗೆ ಹೇಳುತ್ತಾರೆ  “ ಪಠ್ಯ ಪುಸ್ತಕಗಳು ನಮ್ಮ ದೇಶ, ನೆಲ, ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಅಭಿಮಾನ ಮೂಡಿಸುವಂತಿರಬೇಕು. ನಮ್ಮ ದೇಶದಲ್ಲಿ ಆಗಿಹೋದ ಪುಣ್ಯಪುರುಷರು, ದಾರ್ಶನಿಕರು ರಾಷ್ಟ್ರಭಕ್ತರು, ಸ್ವಾತಂತ್ರ್ಯ ಯೋಧರ ಕತೆ ವಿಚಾರಗಳನ್ನು ಪಠ್ಯಪುಸ್ತಕಗಳು ಒಳಗೊಂಡಿರಬೇಕು. ಇತಿಹಾಸದಲ್ಲಿ ಗತಿಸಿದ ಅನ್ಯಾಯ ದಬ್ಬಾಳಿಕೆ ಆಕ್ರಮಣಗಳಿಗೆ ಸಂಬಂಧಿಸಿದ ಸಂಗತಿಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವಂತಿರಬೇಕು,,,,,” ಇತ್ಯಾದಿ.(ಪ್ರ.ವಾ. 21/5/2022). ಆರೆಸ್ಸೆಸ್‌ ಚಿಂತನಾ ಧಾರೆಯ ಪ್ರಮುಖರಲ್ಲೊಬ್ಬರಾದ ಡಾ ಹೆಡಗೇವಾರ್‌ ಅವರ ಭಾಷಣವೊಂದನ್ನು ಪಠ್ಯದಲ್ಲಿ ಅಳವಡಿಸುವುದನ್ನು ಸಮರ್ಥಿಸಿಕೊಳ್ಳಲು ಶಿಕ್ಷಣ ಸಚಿವರು ಈ ಮಾತುಗಳನ್ನಾಡಿರುವುದು ಸ್ಪಷ್ಟ.

ADVERTISEMENT

ಇಲ್ಲಿ ʼ ನಮ್ಮ ದೇಶದ ನೆಲ, ಭಾಷೆ, ಸಂಸ್ಕೃತಿ ʼ ಎಂಬ ಪದಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ನೆಲ ಒಂದೇ ಆದರೂ ಭಾರತ ಸಾವಿರಾರು ಭಾಷೆಗಳ ತವರು. ಹಾಗೆಯೇ ಅಸಂಖ್ಯಾತ ಸಂಸ್ಕೃತಿಗಳ ಕರ್ಮಭೂಮಿ. ದೇಶ ಎಂದರೆ ಕೇವಲ ಭೌಗೋಳಿಕ ಅಖಂಡತೆಯನ್ನು ಪ್ರತಿನಿಧಿಸುವ ಒಂದು ಭೂ ಪ್ರದೇಶ ಎಂಬ ಪರಿಕಲ್ಪನೆಯನ್ನೇ ಎತ್ತಿಹಿಡಿಯುವ ಸಾಂಪ್ರದಾಯಿಕ ಮನಸ್ಥಿತಿಯುಳ್ಳವರಿಗೆ ಈ ವ್ಯತ್ಯಾಸಗಳು ಅರ್ಥವಾಗುವುದು ಕಷ್ಟ. ನಿಜ ಇಂದಿನ ಮಕ್ಕಳಿಗೆ ಗತ ಇತಿಹಾಸವನ್ನು ಪರಿಚಯಿಸುವುದು ಯಾವುದೇ ಒಂದು ಸಮಾಜದ ಆದ್ಯತೆಯಾಗಬೇಕು. ಆದರೆ ಈ ಇತಿಹಾಸದ ಪುಟಗಳಲ್ಲಿ ರಾರಾಜಿಸುವ ಕಲ್ಪಿತ ಅಥವಾ ಆರೋಪಿತ ವೈಭವಗಳನ್ನೇ ಪರಿಚಯಿಸುತ್ತಾ ಹೋದರೆ ಮಕ್ಕಳು ಬೌದ್ಧಿಕವಾಗಿ ಭ್ರಮಾಧೀನರಾಗುತ್ತಾರೆ. ವಿಷಯವನ್ನು ತಿಳಿದುಕೊಳ್ಳಬಲ್ಲರೇ ಹೊರತು, ಅವರ ಧಾರಣಾ ಶಕ್ತಿಯಾಗಲೀ, ಅಧ್ಯಯನ-ಸಂಶೋಧನೆಯ ಸಾಮರ್ಥ್ಯವಾಗಲೀ ಬೆಳೆಯುವುದಿಲ್ಲ.

ದಾಖಲಿತ ಇತಿಹಾಸದಲ್ಲಿರುವುದಕ್ಕಿಂತಲೂ ಆಚೆಗಿನ ಒಂದು ಪ್ರಪಂಚದಲ್ಲಿ ನಡೆದಿರಬಹುದಾದ ಅನ್ಯಾಯ, ದಬ್ಬಾಳಿಕೆ ಮತ್ತು ಆಕ್ರಮಣಗಳ ಬಗ್ಗೆ ಮಕ್ಕಳಿಗೆ ತಿಳಿಸುವುದು ಮುಖ್ಯ ಎಂದು ಸಚಿವರು ಹೇಳಿದ್ದಾರೆ. ನಿಜ ಆದರೆ ಅನ್ಯಾಯ, ದಬ್ಬಾಳಿಕೆ ಮತ್ತು ಆಕ್ರಮಣಗಳನ್ನು ನೋಡಲು ನಾವು ಬಳಸುವ ಮಸೂರಗಳು ಯಾವುದು ? ಇದನ್ನು ಅಧ್ಯಯನ ಮಾಡುವ ಚಾರಿತ್ರಿಕ ದೃಷ್ಟಿಕೋನ ಎಂತಹುದು ? ವೈಜ್ಞಾನಿಕ ತಳಹದಿಯ ಶಾಸನಾಧಾರಿತ ಇತಿಹಾಸ ಅಧ್ಯಯನಕ್ಕೂ, ʼ ಆವರಣ ʼದಂತಹ ಒಂದು ಕಲ್ಪಿತ ಚಾರಿತ್ರಿಕ ಕಾದಂಬರಿಗೂ ಇರುವ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಭಾರತೀಯ ನೆಲದ ಶತಮಾನಗಳ ಇತಿಹಾಸದಲ್ಲಿ ಯಾರಿಂದ, ಯಾರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆದಿದೆ ? ಯಾವ ಜನಸಮುದಾಯಗಳು ಶತಮಾನಗಳಿಂದ ಅನ್ಯಾಯಕ್ಕೊಳಗಾಗುತ್ತಿವೆ ? ಸಾಮಾಜಿಕ ನ್ಯಾಯದ ಪರಿಕಲ್ಪನೆಯೇ ಇಲ್ಲದ ಒಂದು ಜಾತಿ ಕೇಂದ್ರಿತ ಶ್ರೇಣೀಕೃತ ಸಮಾಜದಲ್ಲಿ ಈ ನೆಲದ ಒಂದು ಬೃಹತ್‌ ಜನಸಮೂಹ ಬದುಕುವ ಹಕ್ಕುಗಳೂ ಇಲ್ಲದೆ ಇದ್ದ ಇತಿಹಾಸಕ್ಕೆ ನಾವು ಸಾಕ್ಷಿಯಾಗಿದ್ದೇವೆ ಅಲ್ಲವೇ ?

ಪರಕೀಯರ ಆಕ್ರಮಣವನ್ನೇ ಕೇಂದ್ರ ಬಿಂದುವನ್ನಾಗಿಸಿಕೊಂಡು ಇತಿಹಾಸದ ಅಧ್ಯಯನ ಮಾಡಲಾಗುವುದಿಲ್ಲ. ಏಕೆಂದರೆ ಭಾರತಕ್ಕೆ ಹೊರಗಿನಿಂದ ಬಂದ ಮೊಘಲರು ಇದೇ ನೆಲದ ಸಂಸ್ಕೃತಿ, ವಾಸ್ತುಶಿಲ್ಪ, ಸಂಗೀತ, ಕಲೆ, ಸಾಹಿತ್ಯ ಮತ್ತು ಭಾಷಿಕ ಪರಂಪರೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿದ್ದಾರೆ. ಕ್ರಿಶ ಏಳನೆಯ ಶತಮಾನದಿಂದಲೇ ಭಾರತದಲ್ಲಿ ಸೂಫಿ ಸಂತರು ತಮ್ಮ ಸಮನ್ವಯ ಸಂಸ್ಕೃತಿಯ ಬೇರುಗಳನ್ನು ಬಿತ್ತಿದ್ದಾರೆ. ಉಪನಿಷತ್ತುಗಳನ್ನು ಮೊಟ್ಟಮೊದಲು ಸಂಸ್ಕೃತದಿಂದ ಅನ್ಯ ಭಾಷೆಗೆ ತರ್ಜುಮೆ ಮಾಡಿದ ಕೀರ್ತಿ ಮೊಘಲ್‌ ದೊರೆ ಶಹಜಹಾನ್‌ ಮತ್ತು ಅವನ ಮಗ ದಾರಾ ಶಿಕೋಹ್‌ಗೆ ಸಲ್ಲುತ್ತದೆ. ಈ ಅವಧಿಯಲ್ಲಿ ಉಪನಿಷತ್ತು ಮತ್ತು ಭಗವದ್ಗೀತೆಯನ್ನು ಪರ್ಷಿಯನ್‌ ಭಾಷೆಗೆ ತರ್ಜುಮೆ ಮಾಡಿದ ನಂತರವೇ ಪ್ರಾಚೀನ ಭಾರತದ ಬೌದ್ಧಿಕ ಚಿಂತನೆಗಳು ವಿಶ್ವದೆಲ್ಲೆಡೆ ಪ್ರಚಾರ ಪಡೆಯಲು ಸಾಧ್ಯವಾಗಿತ್ತು.

ಈ ಇತಿಹಾಸವನ್ನು ನಮ್ಮ ಮಕ್ಕಳಿಗೆ ಹೇಳಬೇಕಲ್ಲವೇ ? ಸಮಕಾಲೀನ ಚರಿತ್ರೆಯನ್ನೇ ಮಕ್ಕಳಿಗೆ ಬೋಧಿಸಬೇಕು ಎಂದಾದರೆ ಸಂತಾಲ್‌ ಬುಡಕಟ್ಟು ಜನರ ಹೋರಾಟ, ಬಿರ್ಸಾ ಮುಂಡಾ ನಡೆಸಿದ ಕ್ರಾಂತಿಕಾರಿ ಸಂಘರ್ಷ, ತೆಲಂಗಾಣ ರೈತರ ಹೋರಾಟ ಮತ್ತು ಚರಿತ್ರೆಯಲ್ಲಿ ಆಗಿಹೋಗಿರುವ ನೂರಾರು ಜನಾಂದೋಲನಗಳನ್ನು ಪರಿಚಯಿಸಬೇಕಲ್ಲವೇ ? ಇತಿಹಾಸದಲ್ಲಿ ಆಗಿ ಹೋದ ಪುಣ್ಯಪುರುಷ, ದಾರ್ಶನಿಕರ ಪರಿಚಯ ಮಾಡಿಸುವುದೇ ಆದರೆ ಇಂದಿನ ಮಕ್ಕಳಿಗೆ ಶರತ್‌ ಚಂದ್ರ ಚಟರ್ಜಿ, ಈಶ್ವರ ಚಂದ್ರ ವಿದ್ಯಾಸಾಗರ್‌, ರವೀಂದ್ರ ನಾಥ ಠಾಗೋರ್‌ ಮುಂತಾದ ಯುಗ ಪ್ರವರ್ತಕ ಚಿಂತಕರ ಜೀವನವನ್ನು ಪರಿಚಯಿಸಬೇಕು. ತಂತ್ರಜ್ಞಾನ ಯುಗದಲ್ಲಿ ಮುನ್ನುಗ್ಗುತ್ತಿರುವ ಭಾರತದ ಮಕ್ಕಳ ಮಿದುಳಿನಲ್ಲಿ  ಗಣೇಶನಿಗೆ ಪ್ಲಾಸ್ಟಿಕ್‌ ಸರ್ಜರಿ ಮಾಡಿದಂತಹ ಕಪೋಲಕಲ್ಪಿತ ಅವೈಜ್ಞಾನಿಕ ಸರಕುಗಳನ್ನು ತುರುಕುವುದಕ್ಕಿಂತಲೂ, ಭಾರತಕ್ಕೆ ರಾಕೆಟ್‌ ತಂತ್ರಜ್ಞಾನ ಪರಿಚಯಿಸಿದ ಮತ್ತು ಮದ್ದು ಗುಂಡುಗಳ ಬಳಕೆಗೆ ನಾಂದಿ ಹಾಡಿದ ಟಿಪ್ಪು ಸುಲ್ತಾನನ ಚರಿತ್ರೆಯನ್ನು ಹೇಳುವುದು ಉಚಿತ ಅಲ್ಲವೇ ? ಟಿಪ್ಪು ಸುಲ್ತಾನನ ಮತಾಂಧತೆಯೇ ಮುಖ್ಯವಾಗುವುದಾದರೆ ಪೇಶ್ವೆ ಆಡಳಿತದಲ್ಲಿ, ಕೇರಳದ ಇತಿಹಾಸದಲ್ಲಿ  ಅಸ್ಪೃಶ್ಯ ಸಮುದಾಯದ ಮೇಲೆ ದಬ್ಬಾಳಿಕೆ ನಡೆಸಿದ ಜಾತಿ  ಶ್ರೇಷ್ಠತೆ ಮತ್ತು ಜಾತ್ಯಾಂಧತೆ ಏಕೆ ಮುಖ್ಯವಾಗಬಾರದು ?

ಈ ದೃಷ್ಟಿಯಿಂದ ನೋಡಿದರೆ ಭಾರತೀಯ ಇತಿಹಾಸದಲ್ಲಿ ಭವ್ಯ ಪರಂಪರೆ ಇರುವಂತೆಯೇ ಕರಾಳ ಅಧ್ಯಾಯಗಳೂ ಇವೆ. ಈ ಕರಾಳತೆಗೆ ಮುಖಾಮುಖಿಯಾಗಿ, ವಸಾಹತು ಆಳ್ವಿಕೆಯ ವಿರುದ್ಧವೂ ಹೋರಾಡುತ್ತಾ ಈ ದೇಶದ ಬಹುಸಂಖ್ಯಾತ ಸಮುದಾಯಗಳ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಚಾರಿತ್ರಿಕ ವ್ಯಕ್ತಿಗಳನ್ನು ಶಾಲಾ ಪಠ್ಯಗಳ ಮೂಲಕ ಮಕ್ಕಳಿಗೆ ಪರಿಚಯಿಸಬೇಕಾಗುತ್ತದೆ. ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸವನ್ನು ಪರಿಚಯಿಸುವಾಗಲೂ ಈ ಎಚ್ಚರ ನಮ್ಮಲ್ಲಿರಬೇಕಾಗುತ್ತದೆ. ಸಾಮಾಜಿಕ ನ್ಯಾಯಕ್ಕಾಗಿ ಮತ್ತು ಶ್ರೇಣೀಕೃತ ಜಾತಿ ವ್ಯವಸ್ಥೆಯ ನಿರ್ಮೂಲನೆಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟ ಯಾವುದೇ ಚಿಂತಕರು ಈ ಸಂದರ್ಭದಲ್ಲಿ ಮುಖ್ಯವಾಗುತ್ತಾರೆ. ರಾಜಕೀಯ ಪಕ್ಷಗಳ ಸೈದ್ಧಾಂತಿಕ ನಿಲುವುಗಳನ್ನೂ ಮೀರಿದ ಒಂದು ಬಹುಸಾಂಸ್ಕೃತಿಕ ನೆಲೆಯನ್ನು ಸ್ಥಾಪಿಸುವುದು ಮತ್ತು ಕಾಪಾಡುವುದು ವರ್ತಮಾನದ ತುರ್ತು. ಚರಿತ್ರೆಯ ವಿಭಿನ್ನ ಕಾಲಘಟ್ಟಗಳಲ್ಲಿ ಸಂಭವಿಸಿರಬಹುದಾದಂತಹ ಚಾರಿತ್ರಿಕ ಪ್ರಮಾದಗಳಿಗೆ ರಾಜಕೀಯ ಕಾರಣಗಳಿರುವಂತೆಯೇ ಸಾಂಸ್ಕೃತಿಕ ಮತ್ತು ಮತಧಾರ್ಮಿಕ ಕಾರಣಗಳೂ ಇರುವುದನ್ನು ಇಂದಿನ ಕಾಲಘಟ್ಟದಲ್ಲಿ ಗಂಭೀರವಾಗಿ ಪರಿಗಣಿಸಬೇಕಿದೆ. ಈ ಪ್ರಮಾದಗಳನ್ನು ಶೋಧಿಸುತ್ತಲೇ, ಭವಿಷ್ಯ ಭಾರತದಲ್ಲಿ ಇಂತಹ ಒಂದು ಸಾಂಸ್ಕೃತಿಕ ಕ್ರೌರ್ಯ ಮರುಕಳಿಸದಂತೆ, ರಾಜಕೀಯ ದಬ್ಬಾಳಿಕೆ, ಸಾಮಾಜಿಕ ನಿರ್ಬಂಧಗಳು, ಮತಧಾರ್ಮಿಕ ಶೋಷಣೆಗಳು ತಲೆದೋರದಂತೆ ಎಚ್ಚರ ವಹಿಸುವುದು ಇಂದು ಅತ್ಯವಶ್ಯವಾಗಿದೆ.

ಇಂತಹ ಒಂದು ಸಮಾಜವನ್ನು ಕಟ್ಟಲು ಬೇಕಾದ ಬೌದ್ಧಿಕ ಆಲೋಚನೆಗಳೊಂದಿಗೆ, ಸಾಂಸ್ಕೃತಿಕ ಚಿಂತನೆಗಳೊಂದಿಗೆ ವರ್ತಮಾನದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಬೇಕಿದೆ. ನಮ್ಮ ನೆಲ, ದೇಶ ಮತ್ತು ಸಂಸ್ಕೃತಿಯ ಬಗ್ಗೆ ಮಕ್ಕಳಲ್ಲಿ ಅಭಿಮಾನ ಮೂಡಬೇಕಾದರೆ, ಚರಿತ್ರೆಯ ಕರಾಳ ಅಧ್ಯಾಯಗಳನ್ನು ವಿಸ್ಮೃತಿಗೆ ಜಾರಲು ಬಿಡದೆ, ಈ ಅಧ್ಯಾಯಗಳ ಒಳಸುಳಿಗಳನ್ನು ಸಮಕಾಲೀನ ಸಂದರ್ಭದಲ್ಲಿ ವ್ಯಾಖ್ಯಾನಿಸುವ ಅವಶ್ಯಕತೆಯೂ ಇದೆ. ಹಾಗೆಯೇ ಈ ಸಾಮಾಜಿಕ-ಸಾಂಸ್ಕೃತಿಕ ಕ್ರೌರ್ಯವನ್ನು ಮೀರಿ ಮುನ್ನಡೆದು, ಒಂದು ಅಧುನಿಕ ನಾಗರಿಕ ದೇಶವಾಗಿ ರೂಪುಗೊಳ್ಳಲು ನೆರವಾದ ಮಹಾನ್‌ ದಾರ್ಶನಿಕರನ್ನು ಸ್ಮರಿಸುವ ಅವಶ್ಯಕತೆಯೂ ಇದೆ. ಈ ನಿಟ್ಟಿನಲ್ಲಿ ನಮಗೆ ವಿವೇಕಾನಂದ, ಠಾಗೋರ್‌, ಅರಬಿಂದೋ ಅವರೊಂದಿಗೇ 19 ಮತ್ತು 20ನೆಯ ಶತಮಾನದ ಸಮಾಜ ಸುಧಾರಕರಾದ ಮಹಾತ್ಮ ಫುಲೆ, ಸಾವಿತ್ರಿ ಬಾಯಿ ಫುಲೆ, ನಾರಾಯಣಗುರು, ಅಯೋತಿ ದಾಸ್‌, ಪೆರಿಯಾರ್‌, ಅಂಬೇಡ್ಕರ್‌, ಗಾಂಧಿ ಮುಂತಾದವರೂ ಮುಖ್ಯರಾಗುತ್ತಾರೆ. ಈ ಎಲ್ಲ ಚಿಂತಕರು ತಾತ್ವಿಕವಾಗಿ ಹಿಂದೂ ಧರ್ಮವನ್ನು ಒಪ್ಪಿಕೊಂಡವರೇ ಆಗಿದ್ದರೂ, ಭಾರತದ ಬಹುಸಾಂಸ್ಕೃತಿಕ ನೆಲೆಗಳನ್ನು ಸುರಕ್ಷಿತವಾಗಿ ಮುಂದೊಯ್ಯಲು ಶ್ರಮಿಸಿದವರು ಮತ್ತು ಭಾರತದಲ್ಲಿ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಲು ಯತ್ನಿಸಿದವರು.  ಈ ಚಿಂತಕರ ಬೋಧನೆಗಳನ್ನು ಮತ್ತು ಆಲೋಚನೆಗಳನ್ನು ಸಮಾಜಕ್ಕೆ ತಲುಪಿಸುವ ಮಹತ್ಕಾರ್ಯವನ್ನು ಕನ್ನಡ ಸಾಹಿತ್ಯ ಲೋಕದ ದಿಗ್ಗಜರು ಮಾಡಿದ್ದಾರೆ. ಕುವೆಂಪು, ಬೇಂದ್ರೆ ಅವರಿಂದ ಲಂಕೇಶ್‌ , ದೇವನೂರು ಅವರವರೆಗೆ ಈ ಪ್ರಯತ್ನ ನಡೆದಿದೆ.

ಭಾರತ ತನ್ನ ಬಹುತ್ವ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾದರೆ ಈ ಪ್ರಯತ್ನಗಳನ್ನು ಮತ್ತು ಅದರ ಹಿಂದಿನ ಸಾಮಾಜಿಕ-ಸಾಂಸ್ಕೃತಿಕ ನೆಲೆಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಅವಶ್ಯಕತೆ ಇದೆ. ಹಾಗಾಗಿಯೇ ಶಾಲಾ ಪಠ್ಯಗಳಲ್ಲಿ ಈ ಚಿಂತನೆಗಳನ್ನು ಅಳವಡಿಸಲು ಕಾಲದಿಂದ ಕಾಲಕ್ಕೆ ಪ್ರಯತ್ನಿಸಲಾಗುತ್ತಿದೆ. ಇಲ್ಲಿ ಎಡಪಂಥೀಯತೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಬದಲಾಗಿ ಸಮಕಾಲೀನ ಸಂದರ್ಭದಲ್ಲಿ ಅತ್ಯವಶ್ಯವಾದ ಬಹುಸಾಂಸ್ಕೃತಿಕ ಆಲೋಚನಾ ಕ್ರಮ ಮುಖ್ಯವಾಗುತ್ತದೆ. ಹೆಡಗೇವಾರ್‌ ಅವರ ಚಿಂತನೆಗಳು ಈ ದಿಕ್ಕಿನಲ್ಲಿ ಸಾಗುವುದಿಲ್ಲ ಎನ್ನುವುದು ನಿರ್ವಿವಾದಿತ ಅಂಶ. ವಿವಿಧ ಸಂಸ್ಕೃತಿಗಳ ಚಿಂತನಾವಾಹಿನಿಗಳಿಗೆ ಅವಕಾಶ ನೀಡುವ ಹಿಂದೂ ಧರ್ಮದ ಬದಲು, ಏಕ ಸಂಸ್ಕೃತಿಯನ್ನು ಕ್ರೋಢೀಕರಿಸುವ ಮತ್ತು ಭಾರತದ ನೆಲದಲ್ಲೇ ಕಾಣಬಹುದಾದ ಸಾಂಸ್ಕೃತಿಕ ನೆಲೆಗಳನ್ನು ನಿರಾಕರಿಸುವ ನಿಟ್ಟಿನಲ್ಲಿ ಹೆಡ್ಗೇವಾರ್‌ ಅವರ ಚಿಂತನೆಗಳು ಸಾಗುತ್ತವೆ. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲೇ ಹೆಡ್ಗೇವಾರ್‌ ಅವರ ಚಿಂತನೆಗಳು  ಬಹುತ್ವ ಸಂಸ್ಕೃತಿಯಿಂದಾಚೆಗಿನ ಏಕಸಂಸ್ಕೃತಿಯನ್ನು ಪೋಷಿಸುವ  ನಿಟ್ಟಿನಲ್ಲಿ ಸಾಗಿದ್ದುದನ್ನೂ ಗಮನಿಸಬೇಕಲ್ಲವೇ ?

ಈ ಹಿನ್ನೆಲೆಯಲ್ಲಿ ನೋಡಿದಾಗ ಹೆಡಗೇವಾರ್‌ ಅವರನ್ನು ಪಠ್ಯಕ್ರಮದಲ್ಲಿ ಅಳವಡಿಸುವುದು ಉಚಿತವೇ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಹಾಗೆಯೇ ಕೆಲವು ಸಮಕಾಲೀನ ಸಾಹಿತಿಗಳ ಕತೆ, ಕವಿತೆಗಳನ್ನು ಪಠ್ಯದಿಂದ ಕೈಬಿಟ್ಟಿರುವುದು ಉಚಿತವೇ ಎಂದೂ ಪ್ರಶ್ನಿಸಬೇಕಾಗುತ್ತದೆ. ಈ ಎರಡೂ ಪ್ರಶ್ನೆಗಳನ್ನು ನಿಷ್ಕರ್ಷೆ ಮಾಡಬೇಕಾದರೆ, ಪಠ್ಯ ಪರಿಷ್ಕರಣೆಯ ಸಮಿತಿಯಲ್ಲಿ ಇತಿಹಾಸಕಾರರು, ಶಿಕ್ಷಣ ತಜ್ಞರು ಮತ್ತು ಎಲ್ಲ ರೀತಿಯ ಚಿಂತನೆಗಳನ್ನೂ ಪ್ರತಿನಿಧಿಸುವ ಸಾಹಿತಿಗಳು, ಚಿಂತಕರು ಇರಬೇಕಾಗುತ್ತದೆ. ಈ ಬೌದ್ಧಿಕ ಸಮತೋಲನವನ್ನು ಕಾಪಾಡಿಕೊಂಡೇ ರಾಜ್ಯ ಸರ್ಕಾರ ಪಠ್ಯ ಪರಿಷ್ಕರಣ ಸಮಿತಿಯನ್ನು ರಚಿಸಬೇಕಿದೆ. ಪ್ರಸಕ್ತ ಸಮಿತಿಯಲ್ಲಿ ಈ ಕೊರತೆ ಎದ್ದು ಕಾಣುತ್ತದೆ. ಬದಲಾಗಿ ಆಡಳಿತಾರೂಢ ಪಕ್ಷದ ಸೈದ್ಧಾಂತಿಕ ಚಿಂತನೆಗಳ ಪ್ರಾತಿನಿಧ್ಯ ವಹಿಸುವವರನ್ನು ಸಮಿತಿ ಒಳಗೊಂಡಿದೆ. ಸನ್ಮಾನ್ಯ ಶಿಕ್ಷಣ ಸಚಿವರು ಈ ಅಸಮತೋಲನವನ್ನು ಸರಿಪಡಿಸುವ ನಿಟ್ಟಿನಲ್ಲಿ ಯೋಚನೆ ಮಾಡಿದರೆ, ಬಹುಶಃ ಈಗ ಭುಗಿಲೆದ್ದಿರುವ ವಿವಾದವನ್ನು ಸರಿಪಡಿಸಲು ಸಾಧ್ಯ.

ಪಠ್ಯ ಪರಿಷ್ಕರಣೆ ಸಮಿತಿಯ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ಅವರೇ ಹೇಳಿರುವಂತೆ “ ಭಾಷೆಯ ಪಠ್ಯದ ಹೆಸರಿನಲ್ಲಿ ಸಿದ್ಧಾಂತ ಪ್ರಚಾರಕ್ಕೆ ಅವಕಾಶವಾಗಬಾರದು,,,,,,”. ಆದರೆ ಚಕ್ರತೀರ್ಥ ಅವರ ನೇತೃತ್ವದಲ್ಲಿ ಸಮಿತಿಯು ನೀಡಿರುವ ಶಿಫಾರಸುಗಳು ಈ ಮಾತುಗಳನ್ನೇ ಅಲ್ಲಗಳೆಯುವ ದಿಕ್ಕಿನಲ್ಲಿವೆ. ಶಾಲಾ ಕಾಲೇಜುಗಳ ಇತಿಹಾಸ ಮತ್ತು ಭಾಷಾ ಪಠ್ಯಗಳು -ವೈಚಾರಿಕತೆ, ವೈಜ್ಞಾನಿಕ ಮನೋಭಾವ ಮತ್ತು ಭಾರತದ ಸಂವಿಧಾನದ ಆಶಯದಂತೆ ಬಹುತ್ವ ಹಾಗೂ ಸಮಾನತೆಯ ಧೋರಣೆಯನ್ನು ಪೋಷಿಸುವ ದೃಷ್ಟಿಯಿಂದ ರಚನೆಯಾಗಬೇಕು. ಏಕೆಂದರೆ ಈ ಪಠ್ಯಗಳೇ ಭವಿಷ್ಯ ಭಾರತದ ಪ್ರಜೆಗಳನ್ನು ರೂಪಿಸುವ ಆಕರಗಳಾಗುತ್ತವೆ. ಈ ಹಿನ್ನೆಲೆಯಲ್ಲೇ ಶಾಲಾ ಪಠ್ಯಕ್ರಮಗಳು ಹಿಂದುತ್ವ ಅಥವಾ ಮತ್ತಾವುದೇ ಸೀಮಿತ ರಾಷ್ಟ್ರೀಯತೆಯ ಕಾರ್ಯಸೂಚಿಗಳಾಗುವುದನ್ನು ವಿರೋಧಿಸಬೇಕಿದೆ.

Tags: BJPCongress PartyCovid 19ನರೇಂದ್ರ ಮೋದಿಬಿಜೆಪಿ
Previous Post

9 ಗಂಟೆ ಕಾರ್ಯಚರಣೆ ನಂತರವೂ 6 ವರ್ಷದ ಮಗು ನಿಧನ

Next Post

ಪ್ರತಿದಿನ ಮಧ್ಯಪ್ರದೇಶದಲ್ಲಿ 29 ಮತ್ತು ರಾಜಸ್ಥಾನದಲ್ಲಿ 14 ಮಕ್ಕಳು ಕಾಣೆಯಾಗುತ್ತಿದ್ದಾರೆ: NGO ವರದಿ

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಪ್ರತಿದಿನ ಮಧ್ಯಪ್ರದೇಶದಲ್ಲಿ 29 ಮತ್ತು ರಾಜಸ್ಥಾನದಲ್ಲಿ 14 ಮಕ್ಕಳು ಕಾಣೆಯಾಗುತ್ತಿದ್ದಾರೆ: NGO ವರದಿ

ಪ್ರತಿದಿನ ಮಧ್ಯಪ್ರದೇಶದಲ್ಲಿ 29 ಮತ್ತು ರಾಜಸ್ಥಾನದಲ್ಲಿ 14 ಮಕ್ಕಳು ಕಾಣೆಯಾಗುತ್ತಿದ್ದಾರೆ: NGO ವರದಿ

Please login to join discussion

Recent News

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ
Top Story

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

by ಪ್ರತಿಧ್ವನಿ
June 28, 2025
Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
Top Story

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
June 27, 2025
Top Story

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

by ಪ್ರತಿಧ್ವನಿ
June 27, 2025
Top Story

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

by ಪ್ರತಿಧ್ವನಿ
June 27, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

June 28, 2025

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada