ಗಾಂಧೀಜಿ, ನೆಹರೂ ಮುಂತಾದವರನ್ಯಾಕೆ ಅಂಡಮಾನ್ ಜೈಲಿಗೆ ಹಾಕಿದ್ದಿಲ್ಲ ಎಂದು ಕೇಳುವವರಿಗೆ. ಬ್ರಿಟೀಷರು ಬರೀ ಗಾಂಧೀಜಿ, ನೆಹರೂ ಮಾತ್ರವಲ್ಲ ಸರ್ದಾರ್ ವಲ್ಲಭ್ಭಾಯ್ ಪಟೇಲ್, ಸುಭಾಶ್ ಚಂದ್ರ ಬೋಸ್, ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರಪಾಲ್, ಲಾಲಾ ಲಜಪತ್ ರಾಯ್, ಗೋಪಾಲ ಕೃಷ್ಣ ಗೋಖಲೆ, ಭಗತ್ ಸಿಂಗ್, ರಾಜ್ಗುರು, ಚಂದ್ರಶೇಖರ್ ಆಝಾದ್ ಹೀಗೆ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಯಾವುದೇ ನಾಯಕರನ್ನು ಅಂಡಮಾನಿನ ಕಾಲಾಪಾನಿ ಜೈಲಿಗೆ ಕಳುಹಿಸಿಲ್ಲ. ಈ ಸೇನಾನಿಗಳು ಭಾರತದೆಲ್ಲೆಡೆ ಜನಪ್ರಿಯರಾಗಿದ್ದರು ಹಾಗೂ ಜನಮಾನಸದಲ್ಲಿ ಅವರು ಸ್ವಾತಂತ್ರ್ಯಕ್ಕಾಗಿ ಕೈಗೆತ್ತಿಕೊಂಡ, ಸಂಘಟಿಸಿದ ಹೋರಾಟಗಳ ಅರಿವಿತ್ತು. ಹಾಗಾಗಿ ಅವರನ್ನು ಅಂಡಮಾನಿಗೆ ಕಳುಹಿಸಿದ್ದರೆ ಜನರೇ ದಂಗೆಯೇಳುವ ಪರಿಸ್ಥಿತಿ ಇತ್ತು.
ಇನ್ನು ಗಾಂಧೀಜಿ ಹಾಗೂ ನೆಹರೂ ಬರೀ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಬಹಳ ಜನಪ್ರಿಯರಾಗಿದ್ದರು. ಇಬ್ಬರೂ ಇಂಗ್ಲೆಂಡಿನ ದೊಡ್ಡ ಕಾನೂನು ವಿದ್ಯಾಲಯಗಳಲ್ಲಿ ಪದವಿ ಪಡೆದವರು ಹಾಗೂ ಒಂದು ಕಾಲದಲ್ಲಿ ಅಲ್ಲಿನ ಪ್ರತಿಷ್ಟಿತ ಬ್ಯಾರಿಸ್ಟರ್ ಸಂಘವಾದ Inner Temple’ನ ಸದಸ್ಯರಾಗಿದ್ದರು. ಬ್ರಿಟನ್ನಿನ ಅನೇಕ ಪ್ರಧಾನ ಮಂತ್ರಿಗಳು ಹಾಗೂ ವಿಶ್ವದ ಅನೇಕ ದೇಶಗಳ ಪ್ರಧಾನ ಮಂತ್ರಿಗಳು, ಅಧ್ಯಕ್ಷರು ಈ Inner Templeನಿಂದ ಬಂದವರು. ಇನ್ನು ಗಾಂಧೀಜಿ ಅಮೇರಿಕಾ, ದಕ್ಷಿಣ ಆಫ್ರೀಕಾ ಮುಂತಾದೆಡೆಯಲ್ಲೂ ಬಹಳ ಅಪಾರ ಬೆಂಬಲಿಗರನ್ನು ಹೊಂದಿದ್ದರು. 1930ರ ದಶಕದಲ್ಲಿ ಗಾಂಧೀಜಿಯನ್ನು ಮೂರು ಬಾರಿ ನೋಬೇಲ್ ಪ್ರಶಸ್ತಿಗೆ ನಾಮಿನೇಟ್ ಮಾಡಲಾಗಿತ್ತು. ಆದರೆ ಮೂರೂ ಬಾರಿ ಬ್ರಿಟೀಷ್ ಸರಕಾರ ಗಾಂಧೀಜಿಗೆ ನೋಬೇಲ್ ಸಿಗದ ಹಾಗೆ ನೋಡಿಕೊಂಡಿತ್ತು. ಅದರೂ 1931ರಲ್ಲಿ ಅಮೇರಿಕಾದ ಟೈಮ್ ವರುಷದ ವ್ಯಕ್ತಿಯಾಗಿ ಗಾಂಧೀಜಿ ಆಯ್ಕೆಯಾಗಿದ್ದರು. ಈ ಪ್ರತಿಷ್ಟಿತ ಪ್ರಶಸ್ತಿ ಪಡೆದ ಮೊಟ್ಟಮೊದಲ ವಿದೇಶಿಗ ಗಾಂಧೀಜಿ. ಇನ್ನು ನೆಹರೂ, ನೇತಾಜಿಯವರೊಂದಿಗೆ ವಿದೇಶದಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಬಿಂಬವಾಗಿದ್ದರು. ನೆಹರೂ ಫ್ಯಾಸಿಸ್ಟ್ ಶಕ್ತಿಗಳ ವಿರುದ್ದ ಪ್ರಜಾಪ್ರಭುತ್ವದಲ್ಲಿ ನಂಬುತ್ತಿದ್ದವರನ್ನು ಬೆಂಬಲಿಸಲು ಸ್ಪೇನ್ ತನಕ ಹೋಗಿಬಂದಿದ್ದರು.
ಈ ನಾಯಕರಿಗೆ ಇದ್ದ ಜನಪ್ರಿಯತೆ ಬ್ರಿಟೀಷರನ್ನೂ ದಂಗುಬಡಿಸಿತ್ತು. ಸಾಮಾನ್ಯ ಜನರ ದನಿಯಾಗಿದ್ದ ಈ ಮುಂಚೂಣಿಯ ನಾಯಕರನ್ನು ಕಾಲಾಪಾನಿ ಶಿಕ್ಷೆಗೊಳಪಡಿಸಿದ್ದರೆ, ದೇಶದಲ್ಲಿ ದಂಗೆಗಳಾಗುವ ಸಂಭವಿದ್ದುದ್ದರಿಂದ ಈ ನಾಯಕರನ್ನು ನೇರವಾಗಿ ಎದುರಿಗಾಕಿಕೊಳ್ಳುವ ಪ್ರಮೇಯವಿದ್ದಿಲ್ಲ. ಭಗತ್ಸಿಂಗ್, ರಾಜ್ಗುರು ಮುಂತಾದವರು ಅತ್ಯಂತ ಉಗ್ರವಾಗಿ ಬ್ರಿಟೀಷರನ್ನು ವಿರೋಧಿಸಿದ್ದರೂ ಅವರನ್ನೂ ಕಾಲಾಪಾನಿಗೆ ಕಳುಹಿಸಲಿಲ್ಲ ಯಾಕೆಂದರೆ ಅವರಿಗಿದ್ದ ದೊಡ್ಡ ಜನಬೆಂಬಲ. ಅಂಡಮಾನ್ ಜೈಲಿಗಾಕಲ್ಪಟ್ಟ ಹೆಚ್ಚಿನ ಹೋರಾಟಗಾರರು ಬ್ರಿಟೀಷರ ವಿರುದ್ದ ಉಗ್ರವಾಗಿ ತೊಡೆತಟ್ಟಿದವರು, ನೇರವಾಗಿ ಬ್ರಿಟೀಷ ಅಧಿಕಾರಗಳ ಮೇಲೆ ಹಲ್ಲೆ ಮಾಡಿದವರು ಅಥವಾ ಕೊಂದವರು.
ಸಾವರ್ಕರ್ ಇದ್ಯಾವುದೂ ಮಾಡಿದ್ದಿಲ್ಲ. ಆದರೂ ಕಾಲಾಪಾನಿಗೆ ಹೋಗಬೇಕಾಯ್ತು. ಅವರು ನೇರವಾಗಿ ಯಾವುದೇ ಸ್ವಾತಂತ್ರ್ಯ ಹೋರಾಟಗಳಲ್ಲಿ ಭಾಗಿಯಾಗಿದ್ದಿಲ್ಲ. ಇಂಗ್ಲೆಂಡಿನಲ್ಲಿ ಕಾನೂನು ಓದುತ್ತಿದ್ದಾಗ ಮೇಡಂ ಕಾಮಾ ಹಾಗೂ ಇನ್ನಿತರ ದೇಶಪ್ರೇಮಿಗಳ ಸಂಗಾತಿಯಾಗಿದ್ದರು. ಅದನ್ನು ಹೊರತುಪಡಿಸಿದರೆ ಅವರ ವಿರುದ್ಧ ಆರೋಪ ಕೇಳಿಬಂದಿದ್ದು ನಾಸಿಕ್ನ ಕಲೆಕ್ಟರ್ ಹಾಗೂ ಇನ್ನಿಬ್ಬರು ಬ್ರಿಟೀಷರ್ ಅಧಿಕಾರಿಗಳನ್ನು ಕೊಂದ ಅಭಿನವ್ ಭಾರತ್ ಸಂಘಟನೆಯ ಕಾರ್ಯಕರ್ತರಿಗೆ ಪಿಸ್ತೂಲನ್ನು ಸರಬರಾಜು ಮಾಡಿದ್ದರೆಂದು. ಆದರೆ ಬ್ರಿಟೀಷರನ್ನು ಕೆರಳಿಸಿ, ಅವರನ್ನು ಕಾಲಾಪಾನಿಗೆ ಕಳುಹಿಸಲು ಪ್ರೇರೆಪಿಸಿದ್ದು ಮಾತ್ರ ಫ್ರಾನ್ಸ್ ದೇಶದಲ್ಲಿ ನಡೆದ ಘಟನೆ.
ಇಂಗ್ಲೆಂಡಿನಲ್ಲಿ ಬಂಧಿಸಲ್ಪಡುವ ಸಾಧ್ಯತೆಗಳಿದ್ದುದ್ದರಿಂದ ಸಾವರ್ಕರ್ ಪ್ಯಾರೀಸ್ನಲ್ಲಿದ್ದ ಮೇಡಂ ಕಾಮಾರವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ ಬ್ರಿಟೀಷರು ಅವರನ್ನು ಬಂಧಿಸಿದರು. ಅದಾದ ಬಳಿಕ ಅವರನ್ನು ಭಾರತಕ್ಕೆ ಗಡೀಪಾರು ಮಾಡಲು ನಿರ್ಧರಿಸಲಾಯಿತು. ಅವರನ್ನು ಗಡೀಪಾರು ಮಾಡುತ್ತಿದ್ದ SS Morea ಹಡಗು ಫ್ರಾನ್ಸಿನ ಮಾರ್ಸೇ ಬಂದರಿನಲ್ಲಿ ತಂಗಿದ್ದಾಗ ಸಾವರ್ಕರು ತಮ್ಮ ಸೆಲ್ಲಿನಿಂದ ತಪ್ಪಿಸಿಕೊಂಡಿದ್ದರು. ಅವರ ಮಿತ್ರರೊಬ್ಬರು ಬಂದರಿಗೆ ಕಾರಿನಲ್ಲಿ ಬಂದು ಅವರನ್ನು ತಪ್ಪಿಸಿಕೊಳ್ಳಲು ಸಹಾಯ ಮಾಡುವ ಯೋಜನೆ ಸಿದ್ದವಾಗಿತ್ತು. ಅದರಂತೆ ಸಾವರ್ಕರ್ ತಮ್ಮ ಸೆಲ್ಲಿನಿಂದ ತಪ್ಪಿಸಿ, ಹಡಗಿನಿಂದ ಹೊರಬಂದು ಬಂದರಿನಲ್ಲಿ ತನ್ನ ಮಿತ್ರನಿಗಾಗಿ ಕಾಯುತ್ತಿದ್ದರು. ಆದರೆ ಅವರ ಮಿತ್ರ ಸರಿಯಾದ ಸಮಯಕ್ಕೆ ಬರಲಿಲ್ಲ. ಸಾವರ್ಕರ್ರನ್ನು ಪುನ: ಬಂಧಿಸಲಾಯಿತು ಹಾಗೂ ಅವರ ಮೇಲೆ ಇನ್ನೊಂದು ಕೇಸ್ ಜಡಿಯಲಾಯಿತು.
ಆದರೆ ಇದೆಲ್ಲವೂ ಫ್ರಾನ್ಸ್ ನೆಲದಲ್ಲಿ ನಡೆದುದ್ದರಿಂದ ಫ್ರಾನ್ಸ್ ಬ್ರಿಟನ್ ವಿರುದ್ಧ ಅಂತರಾಷ್ಟ್ರೀಯ ನ್ಯಾಯಾಲಕ್ಕೆ ಹೋಯಿತು. ತನ್ನ ನೆಲದಲ್ಲಿ, ತನ್ನ ಅನುಮತಿ ಇಲ್ಲದೇ ಬ್ರಿಟೀಷರು ನಡೆಸಿದ ಕಾರ್ಯಾಚರಣೆ ತಪ್ಪೆಂದು ವಾದಿಸಿದರು. ವಿಶ್ವದ ವಿವಿಧ ದೇಶಗಳಲ್ಲಿ ಇದರ ಸುದ್ದಿಯಾಯಿತು. ಪ್ರತಿಷ್ಟಿತ ನ್ಯೂಯಾರ್ಕ್ ಟೈಮ್ಸ್ ಈ ಪ್ರಕರಣದ ಮಾಹಿತಿಗಳನ್ನು ಹೊರಹಾಕಿದರು. ಕೇಸ್ ನಡೆದು ಬ್ರಿಟನ್ ಪರ ತೀರ್ಪು ಬಂದರೂ, ಯಕಶ್ಚಿತ್ ಓರ್ವ ಭಾರತೀಯ ಕೈದಿಯ ಕಾರಣದಿಂದಾಗಿ ತನ್ನ ಬದ್ದವೈರಿ ಫ್ರಾನ್ಸ್ ಕೈಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅವಮಾನಗೀಡಾಗಿದ್ದು ಬ್ರಿಟೀಷರಿಗೆ ಸಹಿಸಲಾಗಲಿಲ್ಲ. ಇದೇ ಕಾರಣಕ್ಕೆ ಕೇವಲ ಪಿಸ್ತೂಲ್ ಸರಬರಾಜು ಮಾಡಿದ ಪ್ರಕರಣದಲ್ಲಿ ಬಂಧಿಯಾಗಿದ್ದ ಸಾವರ್ಕರ್ರನ್ನು ಬ್ರಿಟೀಷರು ಐವತ್ತು ವರುಷಗಳ ಸಜೆಗೊಳಪಡಿಸಿದರು. ಈ ಪಿಸ್ತೂಲ್ ಸರಬರಾಜು ಮಾಡಿದ ಪ್ರಕರಣದ ಜೊತೆ ಐಪಿಸಿ 121-Aರ ಅಡಿಯಲ್ಲಿಯಲ್ಲಿಯೂ ಪ್ರಕರಣ ದಾಖಲಾಗಿದ್ದು ಬಿಟ್ಟರೆ ಸಾವರ್ಕರ್ ವಿರುದ್ದ ಇನ್ಯಾವುದೇ ಆರೋಪಯಿದ್ದಿಲ್ಲ. ಅಂಡಮಾನಿನ ಜೈಲಿಗೆ ಕಳುಹಿಸುವ ಮೊದಲೇ ಸಾವರ್ಕರ್ ಜೈಲಿನಲ್ಲಿ ತನಗೆ ಕೊಡಬೇಕಾಗಿದ್ದ ಕೆಲವು ವಿನಾಯತಿಗಳ ಬಗ್ಗೆ ಬ್ರಿಟೀಷರಿಗೆ ಪತ್ರ ಬರೆದಿದ್ದರು. ಆದರೆ ಬ್ರಿಟೀಷ್ ಸರಕಾರ ತನ್ನ ಎಪ್ರಿಲ್ 4, 1911ರ ಅಧಿಕೃತ ಪತ್ರ ಸಂಖ್ಯೆ 2022ರಲ್ಲಿ ಹೇಳಿದ್ದಂತೆ ಸಾವರ್ಕರ್ ಕೇಳಿದ್ದ ವಿನಾಯತಿಗಳನ್ನು ಕೊಡಲಿಲ್ಲ. ಇದಾಗಿ ಮೂರು ತಿಂಗಳ ಬಳಿಕ ಸಾವರ್ಕರ್ರನ್ನು ಅಂಡಮಾನಿಗೆ ಕಳುಹಿಸಲಾಗಿತ್ತು. ಅಂಡಮಾನಿಗೆ ಬಂದು ಒಂದೇ ತಿಂಗಳಲ್ಲಿ ಅಂದರೆ ಆಗಸ್ಟ್ 30, 1911 ರಂದು ಸಾವರ್ಕರ್ ಮೊಟ್ಟಮೊದಲ ಕ್ಷಮೆ ಅರ್ಜಿಯನ್ನು ಸಲ್ಲಿಸಿದ್ದು. ಬ್ರಿಟೀಷರು ಸುಮಾರು 600 ಸ್ವಾತಂತ್ರ್ಯ ಹೋರಾಟಗಾರರನ್ನು ಕಾಲಾಪಾನಿ ಸಜೆಗೊಳಪಡಿಸಿತ್ತು. ಇದರಲ್ಲಿ ಸಾವರ್ಕರ್ ಒಬ್ಬರನ್ನು ಬಿಟ್ಟರೆ ಇನ್ಯಾರೂ ಬ್ರಿಟೀಷರ ಬಳಿ ಕ್ಷಮೆಯ ಭಿಕ್ಷೆ ಕೇಳಿದ್ದಿಲ್ಲ. ಯೋಗೇಶ್ ಶುಕ್ಲಾರಂತ ಕೆಲವರು ಕಾಲಾಪಾನಿ ಸಜೆ ಮುಗಿದ ನಂತರ ವಾಪಸು ಬಂದು ಮತ್ತೊಮ್ಮೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ್ದರು. ಆದರೆ ಸಾವರ್ಕರ್ ಮಾತ್ರ ಒಮ್ಮೆ ಜೈಲಿಗೋದ ನಂತರ ಬ್ರಿಟೀಷರ್ ವಿರುದ್ದ ಕಮಕ್-ಕಿಮಕ್ ಎಂದಿದ್ದೇ ಇಲ್ಲ, ಹೋರಾಟ ದೂರದ ಮಾತು.