ಕನ್ನಡ ಚಿತ್ರರಂಗದ ಮೇರು ಪ್ರತಿಭೆ ದರ್ಶನ್ ತೂಗುದೀಪ ಅಥವಾ ಅಭಿಮಾನಿಗಳ ಡಿ ಬಾಸ್. ದರ್ಶನ್ ಹಾಗೂ ಮಾಧ್ಯಮಗಳ ನಡುವಿನ ಸಂಬಂಧ ಹಳಿಸಿತ್ತು ಎನ್ನುವುದು ಹಳೆಯ ಸುದ್ದಿ. ಈಗಿನ ಹೊಸತೇನು ಎಂದರೆ ದರ್ಶನ್ ಎಲ್ಲಾ ಮಾಧ್ಯಮಗಳ ಸಂಪಾದಕರಿಗೆ ಕ್ಷಮಾಪಣೆ ಪತ್ರ ಬರೆದಿದ್ದಾರೆ ಎನ್ನುವುದು. ಕೆಲವು ತಿಂಗಳುಗಳ ಕೆಳಗೆ ಮಾಧ್ಯಮಗಳ ಬಗ್ಗೆ ದರ್ಶನ್ ಮಾತನಾಡಿದ್ದಾರೆ ಎನ್ನಲಾಗುವ ಒಂದು ಆಡಿಯೋ ವೈರಲ್ ಆಗಿತ್ತು. ಆ ಆಡಿಯೋ ತುಣುಕನ್ನಿಟ್ಟು ಮಾಧ್ಯಮಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಬಾಯ್ಕಾಟ್ ಮಾಡಿತ್ತು. ಅಲ್ಲಿಂದ ಇಲ್ಲಿವರೆಗೆ ಟಿವಿ ಪರದೆಮೇಲೆ ದರ್ಶನ್ ಅವರ ಮುಖ ತೋರಿಸಲೇ ಬಾರದು ಎನ್ನುವ ಹಠಕ್ಕೆ ಬಿದ್ದು, ಜಿದ್ದು ಸಾಧಿಸಿಕೊಂಡಿತು. ವಾಸ್ತವದಲ್ಲಿ ಮಾಧ್ಯಮಗಳನ್ನು ಖಂಡಂ ತುಂಡಮಾಗಿ ಉಗಿದು ಬೈದವರ ಪಟ್ಟಿ ಸಣ್ಣದೇನಿಲ್ಲ. ಈಗ ಕರ್ನಾಟಕದ ಟಾಪ್ ಲೆವಲ್ ಟಿವಿ ಚಾನೆಲ್ ಗಳ ಉನ್ನತ ಹುದ್ದೆಯಲ್ಲಿರುವ ಹಲವು ಹಿರಿಯ ಪತ್ರಕರ್ತರನ್ನು ಇಲ್ಲಿನ ಅನೇಕ ರಾಜಕಾರಣಿಗಳು ನಕಶಿಕಾಂತ ಬೈದು ಕಳಿಸಿದಿದ್ದೆ. ಅದಾಗಿಯೂ ದರ್ಶನ್ ಧ್ವನಿ ಇದೆ ಎನ್ನಲಾದ ಆಡಿಯೋ ಆಧಾರವಾಗಿಟ್ಟುಕೊಂಡು ಮಾಧ್ಯಮಗಳು ಒಕ್ಕೊರಲಿನಿಂದ ದರ್ಶನ್ ಬಾಯ್ಕಾಟ್ ಮಾಡಿ ಗೆದ್ದಿದೆ.
![](https://pratidhvani.com/wp-content/uploads/2023/04/darshandh-1173273-1671505427-1024x576.jpg)
ರಾಬರ್ಟ್ ಬಳಿಕ ತೆರೆ ಕಂಡ ಕ್ರಾಂತಿ ಬಾಕ್ಸ್ ಆಫೀಸ್ ನಲ್ಲಿ ಮಿನಿಮಲ್ ರೆಸ್ಪಾನ್ಸ್ ಪಡೆಯೋದಕ್ಕೂ ಹಿಂದೆ ಬಿದ್ದಿತು. ಅಲ್ಲಿಗೆ ಮಾಧ್ಯಮಗಳು ಗಹಗಹಿಸಿ ನಕ್ಕು, ಮೀಸೆ ತಿರುವಿಕೊಂಡವು. ಅದಾಗಿಯೂ ದರ್ಶನ್ ಹೀಗೊಂದು ಪತ್ರ ಬರೆದು ಮಾಧ್ಯಮಗಳು ಹಾಗೂ ತನ್ನ ನಡುವೆ ಇರುವ ಅಂತರವನ್ನು ಕಡಿತ ಮಾಡುವ ಊಸಾಬಾರಿಗೆ ಕೈಹಾಕಿರಲಿಲ್ಲ. ಆದರೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸ್ಟಾರ್ ಪ್ರಚಾರಕರ ಜಾಗ ಗಿಟ್ಟಿಸಿಕೊಳ್ಳುವ ರೇಸ್ ನಲ್ಲಿದ್ದ ದರ್ಶನ್ ಗೆ ಹೊಡೆತ ಕೊಟ್ಟಿದ್ದು ಇದೇ ಮಾಧ್ಯಮಗಳು. ಸಿಎಂ ಬೊಮ್ಮಾಯಿ ಒಂದ್ಕಡೆ ಸುದೀಪ್ ಅವರನ್ನು ಅಧಿಕೃತವಾಗಿ ಸ್ಟಾರ್ ಕಾಂಪೇನರ್ ಎಂದು ಘೋಷಿಸಿ ನಂತರದಲ್ಲೇ ದರ್ಶನ್ ಜೊತೆಗೂಡಿ ಪ್ರೆಸ್ ಮಾಡಿ ನಡೆಸಿ ದರ್ಶನ್ ಅವರನ್ನೂ ಸ್ಟಾರ್ ಪ್ರಚಾರಕನಾಗಿ ಘೋಷಿಸುವುದಿತ್ತು. ಆದರೆ ವಿಷಯ ತಿಳಿಯುತ್ತಿದ್ದಂತೆ ಮಾಧ್ಯಮಗಳು ಸಿಎಂ ಬೊಮ್ಮಾಯಿ ಕರೆದಿದ್ದ ಆ ಪತ್ರಿಕಾಗೋಷ್ಠಿಗೆ ಗೈರಾಗಿ ಮತ್ತೊಮ್ಮೆ ತಮ್ಮ ಅಸಹನೆ ತೋರಿದವು. ಇದು ದರ್ಶನ್ ಗೆ ಮತ್ತಷ್ಟು ಮುಖಭಂಗ ಉಂಟು ಮಾಡಿತು. ಅದಾಗಿ ಕೆಲ ದಿನಗಳ ಬಳಿಕ ಈಗ ನಡೆದ ಬೆಳವಣಿಗೆಯೇ ದರ್ಶನ್ ಮಾಧ್ಯಮಗಳಿಗೆ ಬರೆದ ಈ ಕ್ಷಮಾಪಣೆ ಪತ್ರ.
![](https://pratidhvani.com/wp-content/uploads/2023/04/Darshan-Kiccha.webp)
ಅಷ್ಟಕ್ಕೂ ಈ ಪತ್ರ ಬರೆಯುವ ದರ್ದು ದರ್ಶನ್ ಗೇನಿತ್ತು ಎನ್ನುವುದು ಈಗಲೂ ರಾಜಕೀಯ ಹಾಗೂ ಚಿತ್ರರಂಗದಲ್ಲಿರುವ ಹಲವರ ಪ್ರಶ್ನೆ. ಆದರೆ ವಾಸ್ತವ ಏನು ಎಂದರೆ ಈ ಪತ್ರ ಬರೆಯುವ ಐಡಿಯಾ ಕೊಟ್ಟಿದ್ದೇ ರಾಜ್ಯದ ಹಿರಿಯ ಪತ್ರಕರ್ತ ಎಂದೆನಿಸಿಕೊಂಡವರು. ದರ್ಶನ್ ಕರೆದು ಕೂರಿಸಿ ಹೀಗೊಂದು ಪತ್ರ ಬರೆದು ಪೋಸ್ಟ್ ಮಾಡಿದರೆ ಸಾಕು ಅಲ್ಲಿಗೆ ಎಲ್ಲವೂ ತಣ್ಣಗಾಗಲಿದೆ ಎಂದು ಆ ಪತ್ರಕರ್ತರು ದರ್ಶನ್ ಗೆ ಮನವರಿಕೆ ಮಾಡಿದರು. ಹೀಗೆ ಮಾಡೋದರಲ್ಲಿ ಅವರಿಗೇನು ಲಾಭ ಎನ್ನುವುದು ಮತ್ತೊಂದು ಪ್ರಶ್ನೆ. ಇನ್ನೇನು ನಿವೃತ್ತಿ ದಿನಗಳನ್ನು ಎದುರು ನೋಡಿ ಕೂರುತ್ತಿರುವ ಆ ಹಿರಿಯ ಎಂದೆನಿಸಿಕೊಂಡಿರುವ ಪತ್ರಕರ್ತರಿಗೆ ಹೀಗೆ ಮೀಡಿಯೇಟರ್ ಕೆಲಸ ಮಾಡೋದರಿಂದ ಆಡಳಿತಾರೂಢ ಪಕ್ಷದ ಕನಿಕರಕ್ಕೆ ಪಾತ್ರವಾಗಬಹುದೇನೋ ಎನ್ನುವ ಅಭಿಲಾಷೆ. ಯಾಕೆಂದರೆ ಮಾಧ್ಯಮಗಳ ಜೊತೆಗಿನ ದರ್ಶನ್ ಮುನಿಸು ಕೊನೆಗೊಳ್ಳಬೇಕಿರುವುದು ಕೇವಲ ದರ್ಶನ್ ಬೇಡಿಕೆ ಮಾತ್ರ ಅಲ್ಲ. ಬದಲಿಗೆ ಈ ಚುನಾವಣೆ ಹೊತ್ತಲ್ಲಿ ಸುದೀಪ್ ರೀತಿಯಲ್ಲೇ ಸ್ಟಾರ್ ಕಾಂಪೇನರ್ ಆಗಿ ಬಳಸಿಕೊಳ್ಳುವ ಲೆಕ್ಕಾಚಾರ ಆಡಳಿತಾ ರೂಢ ಪಕ್ಷದ್ದು. ಇದೇ ಕಾರಣಕ್ಕೆ ಇದನ್ನು ಬಗೆ ಹರಿಸಲು ಆ ಪಕ್ಷದಿಂದ ನೇಮಕಗೊಂಡವರೇ ಆ ಹಿರಿಯ ಪತ್ರಕರ್ತರು ಎನ್ನುವುದು ಈಗ ರಾಜಕೀಯ, ಚಿತ್ರರಂಗ ಹಾಗೂ ಪತ್ರಿಕಾ ವಲಯದಲ್ಲಿ ನಡೆಯುತ್ತಿರುವ ಬಿಸಿಬಿಸಿ ಚರ್ಚೆ.
![](https://pratidhvani.com/wp-content/uploads/2023/04/download-1.png)
ಅದೇನೆ ಇದ್ದರೂ ನಿರ್ಲಕ್ಷಿಸಿ ಬಿಡಬಹುದಾಗಿದ್ದ ವಿಚಾರವೊಂದನ್ನು ಮುಂದಿಟ್ಟುಕೊಂಡು ದರ್ಶನ್ ಎಂಬ ಕನ್ನಡದ ಪ್ರತಿಭೆಯನ್ನು ಎಷ್ಟು ಕುಗ್ಗಿಸಲು ಸಾಧ್ಯವೋ ಅಷ್ಟು ಕುಗ್ಗಿಸುವ ಕೆಲಸ ಈ ಮಾಧ್ಯಮಗಳು ಮಾಡಿವೆ. ತಮ್ಮನ್ನೇ ಒಂದು ಪಕ್ಷಕ್ಕೆ ಮಾರಿಕೊಂಡು ಊರಿಗೆ ಬುದ್ಧಿ ಹೇಳುವ ನಕಲಿ ನೈತಿಕತೆಯ ಮಾಧ್ಯಮಗಳ ಹಿಪೋಕ್ರೆಸಿ ಇಲ್ಲಿಗೆ ಮುಗಿಯುವ ಹಾಗೆ ಕಾಣುವುದಿಲ್ಲ. ಎಲ್ಲದರ ಆಚೆಗೆ ಇಲ್ಲಿ ಧರ್ಮ ಹಾಗೂ ಜಾತಿ ಕೆಲಸ ಮಾಡಿದೆ ಎನ್ನುವುದು ಗಮನಾರ್ಹ
![](https://pratidhvani.com/wp-content/uploads/2023/04/darshan_new_DN.jpg)