NCB ಅಧಿಕಾರಿ ಸಮೀರ್ ವಾಂಖೆಡೆ ಹಾಗೂ NCP ನಾಯಕ ನವಾಬ್ ಮಲಿಕ್ ನಡುವಿನ ಸಮರ ಈಗ ಪರಸ್ಪರ ಸವಾಲೆಸೆಯುವ ಮಟ್ಟಕ್ಕೆ ಏರಿದೆ. ಸಮೀರ್ ವಾಂಖೆಡೆ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಸರ್ಕಾರಿ ನೌಕರಿ ಪಡೆದಿದ್ದಾರೆ ಎಂದು ಮಲಿಕ್ ಆರೋಪಿಸಿದ್ದರೆ, ಅದಕ್ಕೆ ಪೂರಕ ದಾಖಲೆ ನೀಡಿ ಎಂದು ವಾಂಖೆಡೆ ಸವಾಲೆಸಿದ್ದಾರೆ.
ಸಮೀರ್ ಮದುವೆ ಕುರಿತ ಸಾಕ್ಷ್ಯಾಧಾರಗಳನ್ನು ಬಿಡುಗಡೆ ಮಾಡಿರುವ ಮಲಿಕ್, ಡಾ. ಶಬಾನಾ ಖುರೇಶಿ ಅವರೊಂದಿಗಿನ ಮದುವೆಯ ‘ನಿಖಾಹ್ ನಾಮ’ವನ್ನು ಟ್ವಿಟರ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ರೂ.33,000‘ಮೆಹೆರ್’ ನೀಡಿ ಸಮೀರ್ ದಾವುದ್ ವಾಂಖೆಡೆ ಅವರು ಶಬಾನಾ ಖುರೇಶಿ ಅವರೊಂದಿಗೆ ವಿವಾಹವಾಗಿದ್ದರು. ಇವರ ವಿವಾಹಕ್ಕೆ ಸಾಕ್ಷಿಯಾಗಿ ಸಮೀರ್ ವಾಂಖೆಡೆ ಅಕ್ಕ ಯಾಸ್ಮಿನ್ ದಾವುದ್ ವಾಂಖೆಡೆಯ ಪತಿ ಅಜೀಜ್ ಖಾನ್ ನಿಖಾಹ್ ನಾಮದಲ್ಲಿ ಸಹಿಯನ್ನೂ ಹಾಕಿದ್ದರು ಎಂದು ಮಿಲ್ ಹೇಳಿದ್ದಾರೆ.
“ನಾನು ಬಿಡುಗಡೆ ಮಾಡಿರುವ ನಿಖಾಹ್ ನಾಮ ಅಥವಾ ಜನ್ಮ ಪ್ರಮಾಣ ಪತ್ರ ನಕಲಿಯಾಗಿದ್ದಲ್ಲಿ ನಾನು ರಾಜಕೀಯ ತೊರೆಯುತ್ತೇನೆ. ನನ್ನ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ. ಆದರೆ, ಸಮೀರ್ ವಾಂಖೆಡೆ ಬಳಿ ರಾಜಿನಾಮೆಯನ್ನು ನಾನು ಕೇಳುವುದಿಲ್ಲ. ಕಾನೂನಿನನ್ವಯ ಅವರು ಕೆಲಸ ಕಳೆದುಕೊಳ್ಳಲಿದ್ದಾರೆ,” ಎಂದು ಮಲಿಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಮೀರ್ ವಾಂಖೆಡೆ ಅವರು ಸುಳ್ಳು ಪ್ರಕರಣ ದಾಖಲಿಸಿ ಅಮಾಯಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಕುರಿತು NCB ಮುಖ್ಯಸ್ಥರಿಗೆ ಅನಾಮಧೇಯ ಅಧಿಕಾರಿಯಿಂದ ಪತ್ರ ಬಂದಿತ್ತು. ಈ ಪತ್ರ ಬಹಿರಂಗಗೊಂಡ ಮರುದಿನವೇ, ಮಲಿಕ್ ಅವರು ನಿಖಾಹ್ ನಾಮವನ್ನು ಬಹಿಂಗಪಡಿಸಿ ಸಮೀರ್ ವಾಂಖೆಡೆಯನ್ನು ಮುಜುಗರಕ್ಕೀಡು ಮಾಡುವ ಪ್ರಯತ್ನ ಮಾಡಿದ್ದಾರೆ.

ನಾನು ಹುಟ್ಟಿನಿಂದಲೇ ಹಿಂದು- ಸಮೀರ್
ಮಲಿಕ್ ಅವರ ಆರೋಪಗಳಿಗೆ ಉತ್ತರಿಸಿರುವ ಸಮೀರ್ ವಾಂಖೆಡೆ, ನಾನು ದಲಿತ ಹಿಂದೂ ಕುಟುಂಬದಲ್ಲಿ ಹುಟ್ಟಿದವನು. ನಾನು ಇವತ್ತಿಗೂ ಹಿಂದೂ. ನಾನೂ ಮತಾಂತರಗೊಂಡಿಲ್ಲ. ಭಾರತವೊಂದು ಜಾತ್ಯಾತೀತ ರಾಷ್ಟ್ರ ಇದರ ಬಗ್ಗೆ ನನಗೆ ಅಭಿಮಾನವಿದೆ, ಎಂದಿದ್ದಾರೆ.
ನನ್ನ ತಂದೆ ಹಿಂದೂ, ನನ್ನ ತಾಯಿ ಮುಸ್ಲಿಂ. ನಾನು ಮುಸ್ಲಿಂ ಸಂಪ್ರದಾಯದ ಪ್ರಕಾರ ವಿವಾಹವಾಗಬೇಕೆಂದು ತಾಯಿಯ ಆಸೆಯಾಗಿತ್ತು. ಅದೇ ತಿಂಗಳು, ವಿಶೇಷ ವಿವಾಹ ಕಾಯ್ದೆಯಡಿ ನನ್ನ ಮದುವೆಯನ್ನು ನೋಂದಣಿ ಮಾಡಲಾಗಿತ್ತು. ಬಳಿಕ ಕಾನೂನಾತ್ಮಕವಾಗಿ ವಿಚ್ಛೇದನ ಪಡೆದಿದ್ದೇವೆ, ಎಂದು ಹೇಳಿದ್ದಾರೆ.
“ನಾನು ಬೇರೆ ಧರ್ಮಕ್ಕೆ ಮತಾಂತರವಾಗಿದ್ದರೆ ಅದಕ್ಕೆ ಪೂರಕವಾದ ದಾಖಲೆಗಳನ್ನು ನವಾಬ್ ಮಲಿಕ್ ನೀಡಬೇಕು. ಒಂದು ವೇಳೆ ಅವರು ದಾಖಲೆ ನೀಡಿದರೆ, ವಿಶೇಷ ವಿವಾಹ ಕಾಯ್ದೆಯಡಿ ನನ್ನ ಮದುವೆ ನೋಂದಣಿಯಾದ ದಾಖಲೆಗಳನ್ನು ನನ್ನ ತಂದೆ ಬಿಡುಗಡೆ ಮಾಡಲಿದ್ದಾರೆ,” ಎಂದು ಮಲಿಕ್ ಅವರಿಗೆ ಸವಾಲೆಸೆದಿದ್ದಾರೆ.
ಸಮೀರ್ ವಿರುದ್ದ ತನಿಖೆಯಿಲ್ಲ ಎಂದ NCB:
ಅನಾಮಧೇಯ ವ್ಯಕ್ತಿ ಪತ್ರ ಬರೆದು ದೂರು ನೀಡಿರುವ ವಿಚಾರದ ಕುರಿತು ಸಮೀರ್ ವಾಂಖೆಡೆ ವಿರುದ್ದ ಯಾವುದೇ ರೀತಿಯ ತನಿಖೆ ಕೈಗೊಳ್ಳುವುದಿಲ್ಲ ಎಂದು NCB ಮಹಾ ನಿರ್ದೇಶಕರಾದ ಎಸ್ ಎನ್ ಪ್ರಧಾನ್ ಹೇಳಿದ್ದಾರೆ. ಪತ್ರದಲ್ಲಿ ಯಾರ ಸಹಿಯೂ ಇರದ ಕಾರಣ ದೂರನ್ನು ಊರ್ಜಿತಗೊಳಿಸಲು ಸಾದ್ಯವಿಲ್ಲ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದನವಾಬ್ ಮಲಿಕ್NCB ಮೊದಲು ತನಿಖೆ ನಡೆಸುವುದಾಗಿ ಹೇಳಿತ್ತು. ಆ ಬಳಿಕ ತನಿಖೆ ನಡೆಸುವುದಿಲ್ಲ ಎಂದು ಹೇಳಿದೆ. ಇದರಿಂದಾಗಿ ಸಂಪೂರ್ಣ NCB ಮೇಲೆ ಸಂದೇಹ ಪಡುವಂತಾಗಿದೆ, ಎಂದಿದ್ದಾರೆ.
“ಎಲೆಕ್ಟ್ರಾನಿಕ್ ಆಧಾರದ ಮೇಲೆ ತನಿಖೆ ನಡೆಸುವುದಾಗಿ NCB ಹೇಳುತ್ತಲೇ ಬಂದಿದೆ. ಸಮೀರ್ ವಾಂಖೆಡೆ, ಪ್ರಭಾಕರ್ ಸೈಲ್, ಕಿರಣ್ ಗೋಸಾವಿ, ಹಾಗೂ ಸಮೀರ್ ವಾಂಖೆಡೆ ಡ್ರೈವರ್ ಮಾನೆ ಅವರ ಕಾಲ್ ರೆಕಾರ್ಡ್ಸ್ NCB ಪಡೆದರೆ ಎಲ್ಲಾ ಸಂದೇಹಗಳು ನಿವಾರಣೆಯಾಗುವುದು,” ಎಂದು ಮಲಿಕ್ ಹೇಳಿದ್ದಾರೆ.
ಸಮೀರ್ ವಾಂಖೆಡೆ ಪರ ಸೋಶಿಯಲ್ ಮೀಡಿಯಾ ಅಭಿಯಾನ:
ನವಾಬ್ ಮಲಿಕ್ ಮತ್ತು ಸಮೀರ್ ವಾಂಖೆಡೆ ನಡುವಿನ ಸವಾಲಿನ ಸಮರಕ್ಕೆ ಸಾಮಾಜಿಕ ಜಾಲತಾಣವೂ ಸಾಥ್ ನೀಡಿದೆ. ನಾರ್ಕೋಟಿಕ್ಸ್ ಬ್ಯೂರೋ ಕಚೇರಿ ಎದುರು ಸಮೀರ್ ಪರ ಹಲವಾರು ಜನರು ಬೆಂಬಲ ಸೂಚಿಸಿದ ಘಟನೆಯು ನಡೆದಿದೆ. ನವಾಬ್ ಮಲಿಕ್, ಅವರು ಸಮೀರ್ ವಾಂಖೆಡೆ ವಿರುದ್ದ ಸುಳ್ಳು ದಾಖಲೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿ ಸಮೀರ್ ಪರ #supportSameervankhede ಅಭಿಯಾನವನ್ನೂ ನಡೆಸಲಾಗುತ್ತಿದೆ.