ರಾಜ್ಯದ ಉದ್ದಗಲಕ್ಕೆ ರಸ್ತೆ, ವೃತ್ತ, ಪಾರ್ಕುಗಳಿಗೆ ಪುನೀತ್ ರಾಜಕುಮಾರ್ ಹೆಸರಿಟ್ಟು ಅಭಿಮಾನಿಗಳು ಅವರ ನೆನಪು ಹಸಿರಾಗಿರಿಸುವ ಯತ್ನ ಮಾಡುತ್ತಿದ್ದಾರೆ. ಅದೇ ಮಾದರಿಯಲ್ಲಿ ರಾಜ್ಯದ ಜನಪ್ರಿಯ ಆನೆ ಬಿಡಾರವಾದ ಸಕ್ರೆಬೈಲಿನ ಮರಿಯಾನೆಯೊಂದಕ್ಕೆ ಪುನೀತ್ ಅವರ ಹೆಸರಿಡಲು ಶಿವಮೊಗ್ಗ ವನ್ಯಜೀವಿ ವಿಭಾಗ ತೀರ್ಮಾನಿಸಿದೆ.
ಸಾಮಾನ್ಯವಾಗಿ ಆನೆ ಬಿಡಾರದಲ್ಲಿ ಹುಟ್ಟುವ ಮರಿಗಳಿಗೆ ದೇವರ ಹೆಸರು ಇಡುವುದು ವಾಡಿಕೆ. ಕೆಲವೊಮ್ಮೆ ಹಿರಿಯ ಅಧಿಕಾರಿಗಳ ಹೆಸರನ್ನು ಇಡುವುದೂ ಇದೆ. ಆದರೆ ಇದೇ ಮೊದಲ ಬಾರಿಗೆ ಸಕ್ರೆಬೈಲ್ ಆನೆ ಬಿಡಾರದ ಆಡಳಿತ, ಗಂಡು ಮರಿಯಾನೆಯೊಂದಕ್ಕೆ ‘ಪುನೀತ್’ ನಾಮಕರಣ ಮಾಡಿದೆ.
ಅದಕ್ಕೆ ಕಾರಣ, ಪುನೀತ್ ಅವರಿಗೆ ವನ್ಯಜೀವಿಗಳ ಮೇಲೆ ಇದ್ದ ಪ್ರೀತಿ. ಕೆಲವು ದಿನಗಳ ಹಿಂದಷ್ಟೇ ಸಕ್ರೆಬೈಲಿಗೆ ಡಾಕ್ಯುಮೆಂಟರಿಯೊಂದರ ಶೂಟಿಂಗ್ ಗಾಗಿ ಬಂದಿದ್ದ ಪುನೀತ್ ಆಗತಾನೇ ಜನಿಸಿದ್ದ ಆ ಪುಟ್ಟ ಮರಿಯಾನೆಯನ್ನು ಅಪ್ಪಿ ಮುದ್ದಾಡಿದ್ದರು. ಅದೇ ಮೊದಲ ಸಲ ಸಕ್ರೆಬೈಲಿನ ಆನೆ ಬಿಡಾರಕ್ಕೆ ಭೇಟಿ ನೀಡಿದ್ದ ಅಪ್ಪು, ಅಲ್ಲಿದ್ದ ಎಳೆಯ ಆ ಮರಿಯಾನೆಯನ್ನು ಕಂಡು ಮಗುವಂತೆ ಮುದ್ದಾಡಿದ್ದರು. ಆ ಹಿನ್ನೆಲೆಯಲ್ಲೇ ಇದೀಗ, ಅಪ್ಪು ಅಗಲಿಕೆಯ ಬಳಿಕ ಅದೇ ಮರಿಯಾನೆಗೆ ಪುನೀತ್ ಎಂದು ನಾಮಕಾರಣ ಮಾಡಲಾಗಿದೆ.
ಪುನೀತ್ ಭೇಟಿ ನೀಡಿದಾಗ ಕ್ರಾಲ್ ನಲ್ಲಿದ್ದ ನೇತ್ರ ಹೆಣ್ಣಾನೆ ಮತ್ತು ಅದರ ಮರಿಯಾನೆಯನ್ನು ಕಂಡ ಅವರು, ಆ ತಾಯಿ ಮಗುವಿನ ಬಗ್ಗೆ ಮಾಹುತರಿಂದ ಮತ್ತು ವನ್ಯಜೀವಿ ವೈದ್ಯರಿಂದ ಮಾಹಿತಿ ಪಡೆದುಕೊಂಡಿದ್ದರು.
ಈ ನಡುವೆ ಬುಧವಾರ ಸಕ್ರೆಬೈಲು ಆನೆ ಬಿಡಾರದಲ್ಲಿ ನೇತ್ರ ಮತ್ತು ಮರಿಯಾನೆಯನ್ನು ಬೇರ್ಪಡಿಸುವ ವೀನಿಂಗ್ ಕಾರ್ಯ ಕೈಗೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ತಾಯಿಯಿಂದ ಬೇರ್ಪಡುವ ಮರಿಯಾನೆಗೆ ಪುನೀತ್ ರಾಜ್ ಕುಮಾರ್ ಎಂದು ನಾಮಕರಣ ಮಾಡಲಾಗಿದೆ. ಇದು ವನ್ಯಜೀವಿ ವಿಭಾಗ, ವನ್ಯಜೀವಿ ಪ್ರೇಮಿ ಪುನೀತ್ ಅವರಿಗೆ ತೋರಿದ ದೊಡ್ಡ ಗೌರವ.
ವಿಶೇಷ ಅಂದರೆ, ಹೀಗೆ ಮರಿಯಾನೆಗಳಿಗೆ ಹೆಸರಿಡುವ ಪ್ರಕ್ರಿಯೆಯೇ ವಿಶೀಷ್ಟ. ಸಾಮಾನ್ಯವಾಗಿ ಮರಿಯಾನೆ ಹುಟ್ಟಿದ ಕೂಡಲೇ ಅದಕ್ಕೊಂದು ಹೆಸರಿಟ್ಟು ಕೂಗುವ ಪದ್ದತಿಯಿಲ್ಲ. ಬದಲಾಗಿ ಮರಿಯಾನೆಯನ್ನು ಅದರ ತಾಯಿ ಆನೆಯಿಂದ ಬೇರ್ಪಡಿಸುವ ಪ್ರಕ್ರಿಯೆ ನಡೆಸಿ, ಅದನ್ನು ಪ್ರತ್ಯೇಕವಾಗಿ ಇರಿಸಿದ ನಂತರವಷ್ಟೆ ಮರಿಯಾನೆಗೆ ಹೆಸರನ್ನ ಇಡಲಾಗುತ್ತದೆ. ಎಳೆ ಮರಿಗೆ ಸ್ತತಂತ್ರವಾಗಿ ಬದುಕುವ ತರಬೇತಿ ನೀಡುವ ಸಲುವಾಗಿ ಅದರ ತಾಯಿಯಿಂದ ಬೇರ್ಪಡಿಸುವ ಪ್ರಕ್ರಿಯೆಗೆ ವೀನಿಂಗ್ ಎನ್ನಲಾಗುತ್ತದೆ.
ಬುಧವಾರ ಸಕ್ರೆಬೈಲಿನ ಕ್ರಾಲ್ ನಲ್ಲಿ ನೇತ್ರ ಮತ್ತು ಅದರ ಮರಿ ಪುನೀತ್ ರನ್ನು ವೀನಿಂಗ್ ಮೂಲಕ ಬೇರ್ಪಡಿಸಲಾಯಿತು ಮತ್ತು ಇದೇ ಸಂದರ್ಭದಲ್ಲಿ ಮುದ್ದಿನ ಮರಿಗೆ ಪುನೀತ್ ಹೆಸರನ್ನು ನಾಮಕರಣಮಾಡಲಾಯಿತು!