ದೇಶದಲ್ಲಿ ಜಾತಿವ್ಯವಸ್ಥೆ ಎಂಬುವುದು ಆಳವಾಗಿ ಬೇರೂರಿರುವ ಪಿಡುಗು. ಇತರೆ ಎಲ್ಲಾ ಧರ್ಮಗಳಿಗಿಂತಲೂ ಹಿಂದೂ ಧರ್ಮಗಳಲ್ಲಿ ಹುಟ್ಟುವ ಪ್ರತಿಯೋಬ್ಬರು ಕೂಡ ಸಾಯುವವರೆಗೂ ಈ ಜಾತಿವ್ಯವಸ್ಥೆಯಲ್ಲೇ ಬದುಕು ಕಟ್ಟಿಕೊಳ್ಳಬೇಕು. ದೇಶ ಹಲವು ಸಾಮಾಜಿಕ ಸುದಾರಣೆಗಳಿಗೆ, ಆಧುನಿಕತೆಗೆ ಹಾಗೂ ಬಂಡವಾಳಶಾಹಿ ವಿಸ್ತರಣೆಗೆ ಸಾಕ್ಷಿಯಾಗುತ್ತಲೇ ಇದ್ದರೂ ಇಲ್ಲಿನ ಜಾತಿ ವ್ಯವಸ್ಥೆಗಳು ಕೂಡ ಅದಕ್ಕೆ ಅಂಟಿಕೊಂಡೇ ಬಂದಿದೆ. ಪ್ರತಿ ದಿನವೂ ಒಂದಲ್ಲಾ ಒಂದು ರೀತಿಯಲ್ಲಿ ಈ ಜಾತಿವ್ಯವಸ್ಥೆ ಮರುಹುಟ್ಟು ಪಡೆಯುತ್ತಲೇ ಇರುತ್ತದೆ. ಇದೇ ಕಾರಣಕ್ಕೆ ಜಾತಿ ಪದ್ದತಿಯ ನಿರ್ಮೂಲನೆ, ಬಿಜೆಪಿ ಸೇರಿದಂತೆ ದೇಶದ ಯಾವ ರಾಜಕೀಯ ಪಕ್ಷಗಳ ಉದ್ದೇಶವೂ ಅಲ್ಲ.
ಇದೇ ಕಾರಣಕ್ಕೆ ಎನ್ಇಇಟಿ ನಲ್ಲಿ ಮೀಸಲಾತಿ ಘೋಷಿಸುವ ಬಿಜೆಪಿಯ ನಡೆ ಅಚ್ಚರಿ ಮೂಡಿಸುವಂತದ್ದಲ್ಲ. ಇದು ಬಿಜೆಪಿ ಮುಂಬರುವ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯನ್ನು ಮುಂದಿಟ್ಟು ನಡೆಸಿದ `ರಾಜಕೀಯ ಷಡ್ಯಂತ್ರ’ ಎಂಬುವುದು ಸ್ಪಷ್ಟ. ಸದ್ಯ ಭಾಜಪಕ್ಕೆ ಉತ್ತರ ಭಾರತದ ರಾಜ್ಯಗಳಲ್ಲಿ ಆಗುತ್ತಿರುವ ಏರಿಳಿತವನ್ನು ಹತೋಟಿಗೆ ತೆಗೆದುಕೊಳ್ಳಲು ಈ ಭಾಗದ ಹಿಂದುಳಿದ ವರ್ಗಗಳನ್ನು ಓಲೈಸಿಕೊಳ್ಳುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ನರೇಂದ್ರ ಮೋದಿಯವರನ್ನು ಮುಂದಿಟ್ಟುಕೊಂಡು ಆರ್ಎಓಸ್ಎದಸ್, ಬಿಜೆಪಿ ಎಂದಿಗೂ ದಲಿತರ ಹಾಗೂ ಬಹುಜನರ ಹಿತಾಸಕ್ತಿ ಕಾಪಾಡಲು ಬದ್ಧವಾಗಿದೆ ಎಂಬ ಸಂದೇಶವನ್ನು ಸಾರಲು ಇಂಥಾ ಪ್ರಯತ್ನಗಳನ್ನು ಮಾಡುತ್ತಿದೆ. ಮತ್ತಿದು ಅವರಿಗೆ ಅನಿವಾರ್ಯಕೂಡ. ಅದಾಗ್ಯೂ, ಸಾಮಾಜಿಕ ನ್ಯಾಯ ಇತ್ಯಾದಿ ಇತ್ಯಾದಿ ಎಲ್ಲವೂ ಕೇವಲ ಚುನಾವಣೆ ಗೆಲ್ಲಲಿರುವ ಅಸ್ತ್ರವಾಗಿಯೇ ಉಳಿದಿಕೊಂಡಿರುವುದು ದೇಶದ ದುರಂತ.
ಅಮೇರಿಕಾ ಹಾಗೂ ಕೆನೆಡಾದ ಒಟ್ಟು ಜನಸಂಖ್ಯೆಗೆ ಹೋಲಿಸಿಕೊಂಡರೂ ಭಾರತದ ಹಿಂದುಳಿದ ವರ್ಗಗಳ ಸಂಖ್ಯೆ ದೊಡ್ಡದೇ ಇದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅಸ್ತಿತ್ವಕ್ಕೆ ಬಂದ ಎಲ್ಲಾ ಸರ್ಕಾರಗಳು ಕೂಡ ದೇಶದ ಹಿಂದುಳಿದ ವರ್ಗಗಳ ನಿಖರ ಜನಗಣತಿ ನಡೆಸುವಲ್ಲಿ ವಿಫಲವಾಗಿದೆ. ಇದೇ ಕಾರಣಕ್ಕೆ ಓಬಿಸಿಯ ನಿಖರವಾದ ಸಂಖ್ಯೆ ಎಲ್ಲೂ ದಾಖಲಾಗಿಲ್ಲ. ಅದಾಗ್ಯೂ ಹಲವು ಸಂಘ -ಸಂಸ್ಥೆಗಳ ಸಹಯೋಗದೊಂದಿಗೆ ಹಾಗೂ ಹಲವು ಕಮಿಷನ್ಗ್ಳ ಸ್ಥಾಪಿಸುವುದರ ಮೂಲಕ ಭಾರತದಲ್ಲಿ ಓಬಿಸಿಗಳ ಸಂಖ್ಯೆ ದೇಶದ ಜನ ಸಂಖ್ಯೆಯ ಅರ್ಧದಷ್ಟಿದೆ ಎಂದು ಅಂದಾಜಿಸಲಾಗಿದೆ. ಆದರೆ ವಿಪರ್ಯಾಸ ಎಂದರೆ ರಾಜಕೀಯ, ಸಾಂಸ್ಕೃತಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಇಂಥಾ ದೊಡ್ಡ ಜನಸಂಖ್ಯೆಯ ಪ್ರಾತನಿಧ್ಯ ತೀರ ಕಡಿಮೆ. ಮತ್ತು ಇಂಥಾ ಸಾರ್ವಜನಿಕ ವ್ಯವಹಾರಗಳನ್ನು ನಿಯಂತ್ರಿಸುತ್ತಿರುವುದು `ಕೈ ಬೆರಳೆಣಿಕೆಯಷ್ಟೇ’ ಇರುವ ಕೆಲವೇ ಕೆಲವು ಸಂಖ್ಯೆ ಹೊಂದಿರುವ ಸಮುದಾಯದಿಂದ ಎನ್ನುವುದು ವಿಷಾಧ.

ಸಾಮಾಜಿಕ ನ್ಯಾಯದ ಹೋರಾಟದ ವೈಫಲ್ಯ.!!
ಸ್ವತಂತ್ರ ಭಾರತದಲ್ಲಿನ ಇಂಥಾ ಸಾಂಪ್ರದಾಯಿಕ ಆಡಳಿತ ವರ್ಗಗಳ ವಿರುದ್ಧದ ಹೋರಾಟವನ್ನು ತಮಿಳುನಾಡಿನ ಪೆರಿಯಾರ್ ರಾಮಸ್ವಾಮಿ ನಾಯಕತ್ವದಲ್ಲಿ ರೂಪಿಸಲಾಯ್ತು. ಪೆರಿಯಾರ್ ಕಟ್ಟಿದ ಈ ಚಳವಳಿಯಿಂದಾಗಿ ಬ್ರಾಹ್ಮಣರು ಸೇರಿದಂತೆ ಮೇಲ್ಜಾತಿಗಳು ಕಟು ವಿಮರ್ಶೆಯನ್ನು ಎದುರಿಸುವಂತಾಯ್ತು. ಅಲ್ದೆ ಸಾಮಾಜಿಕ ಕ್ಷೇತ್ರಗಳಲ್ಲಿನ ಪ್ರಾತಿನಿಧ್ಯ ಅವರಿಗೆ ಸವಾಲಾಗಿ ಪರಿಣಮಿಸಲು ಶುರುವಾಯ್ತು. 1970ರ ಮಧ್ಯದಲ್ಲಿ ಜೆಪಿ ನಾರಾಯಣ್ ಅವರ ನೇತೃತ್ವದಲ್ಲಿ ಉತ್ತರ ಪ್ರದೇಶ, ಬಿಹಾರ, ಹರಿಯಾಣ ಮತ್ತು ಕರ್ನಾಟಕದ ಹಿಂದುಳಿದ ಜಾತಿಗಳನ್ನು ಒಗ್ಗೂಡಿಸುವ ಕೆಲಸ ನಡೆಯಿತು. ಅಲ್ದೆ `ಸಂಪೂರ್ಣ ಕ್ರಾಂತಿ’ (Total Revelution) ಎಂಬ ಘೋಷವಾಕ್ಯದೊಂದಿಗೆ ಹೋರಾಟಕ್ಕೆ ಆದಿಯಾಯ್ತು. ಚೌಧರಿ ಚರಣ್ ಸಿಂಗ್, ಲಾಲು ಪ್ರಸಾದ್, ಮುಲಾಯಂ ಸಿಂಗ್ ಯಾದವ್, ದೇವಿ ಲಾಲ್ ಮತ್ತು ರಾಮ್ ವಿಲಾಸ್ ಪಸ್ವಾನ್ ರಂಥಾ ಸಮಾಜವಾದಿಗಳ ಬೆಳವಣಿಗೆ ದಲಿತ ಮತ್ತು ಬಹುಜನರ ಸಾಮಾಜಿಕ ನ್ಯಾಯಕ್ಕಾಗಿ ಕಟ್ಟಿರುವ ಹೋರಾಟವನ್ನು ಮತ್ತಷ್ಟು ಗಟ್ಟಿಗೊಳಿಸಿತು. ಮತ್ತು ಭರವಸೆ ಮೂಡುವಂತೆ ಮಾಡಿತು. ಅದಾಗಿಯೂ ಕಳೆದ ಎರಡು ದಶಕಗಳಿಂದ ಈ ನೆಲೆಗಟ್ಟಿನಲ್ಲಿ ಅಸ್ತಿತ್ವಕ್ಕೆ ಬಂದ ಜನತಾ ಪಕ್ಷ, ಜನತಾ ದಳ, ಸಮಾಜವಾದಿ ಪಕ್ಷ ಮುಂತಾದ ರಾಜಕೀಯ ಪಕ್ಷಗಳು ಹೊಡೆದು ಹಲವಾಗಿ ಹೋರಾಟದ ಮುಖ್ಯ ಧೋರಣೆಯನ್ನೇ ಮರೆಯುವಂತೆ ಮಾಡಿತು. ಈ ಬೆಳವಣಿಗೆಗಳು ಪ್ರಬಲ ಸಂಖ್ಯೆಯಲ್ಲಿದ್ದ ದಲಿತ ಮತ್ತು ಬಹುಜನರು ದೇಶವನ್ನು ಮುನ್ನಡೆಸಲಿದ್ದಾರೆ ಎಂಬ ಆಶಾಭಾವನೆಯನ್ನು ಭಗ್ನಗೊಳಿಸಿತು.
`ಸಾಮಾಜಿಕ ನ್ಯಾಯ ಚಳವಳಿ’ಯನ್ನು ಬಲಹೀನಗೊಳಿಸುತ್ತಿರುವ ಬಿಜೆಪಿಯ ಬೆಳವಣಿಗೆ.!!
ಈ ಸಾಮಾಜಿಕ ನ್ಯಾಯದ ಚಳವಳಿಯ ವೈಫಲ್ಯವೂ ಬಲಪಂಥೀಯ ಪಕ್ಷವೊಂದಕ್ಕೆ ದಲಿತ ಹಾಗೂ ಬಹುಜನರಿಗೆ ಪರ್ಯಾಯವಾಗಿ ಹೊರಹೊಮ್ಮಲು ಅವಕಾಶ ಮಾಡಿಕೊಟ್ಟಿತು. ಇದೇ ಕಾರಣಕ್ಕೆ ಬಿಜೆಪಿ ಹಿಂದುಳಿದ ವರ್ಗಗಳ ಓಲೈಕೆ ಮಾಡಿ, ಮುಸ್ಲಿಂ ವಿರೋಧಿ ಕಾರ್ಯಸೂಚಿಯೊಂದಿಗೆ ರಾಜಕೀಯ ಪ್ರಚಾರಕ್ಕೆ ಇಳಿಯಿತು. ಇದರ ದೊಡ್ಡ ಲಾಭ ಬಿಜೆಪಿಗೆ ಧಕ್ಕಿದ್ದು 2014ರ ಲೋಕಸಭಾ ಚುನಾವಣೆಯಲ್ಲಿ. ಆಗ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯಾಗಿಸಿ ಹಿಂದುತ್ವದ ಮಾಸ್ ಲೀಡರ್ನಂ್ತೆ ಬಿಂಬಿಸಲಾಯ್ತು. ಅದು ಯಶ ಕಂಡಿತು ಕೂಡ. ಇದರ ಬಳಿಕ ಸಾಮಾಜಿಕ ನ್ಯಾಯದ ಹೋರಾಟದ ಡೆಫಿನಿಷನ್ ಮರುವ್ಯಾಖ್ಯಾನಿಸಿದ ಬಿಜೆಪಿ ತಮ್ಮ ನವ ಉದಾರವಾದಿ ಬಂಡವಾಳಶಾಹಿ ಸಿದ್ಧಾಂತಕ್ಕೆ ಆಧ್ಯತೆ ಕೊಟ್ಟು, ಮೊದಲು ನಗರದಲ್ಲಿನ ಮಧ್ಯಮ ವರ್ಗಗಳನ್ನು ಹಾಗೂ ದೇಶದ ಯುವ ಸಮುದಾಯವನ್ನು ತಮ್ಮ ಹತೋಟಿಗೆ ತೆಗೆದುಕೊಂಡರು. ಇದರ ಬಳಿಕ ಎರಡನೇಯದ್ದಾಗಿ `ಸೋಶಿಯಲ್ ಇಂಜಿನಿಯರಿಂಗ್’ ಎಂಬ ಪರಿಕಲ್ಪನೆಯೊಂದಿಗೆ ದೇಶದ ಬಹುದೊಡ್ಡ ಸಂಖ್ಯೆಯಲ್ಲಿರುವ ದಲಿತ ಮತ್ತು ಬಹುಜನರ ನಡುವೆ ತಮ್ಮ ಪ್ರಭಾವ ಗಟ್ಟಿ ಮಾಡಿಕೊಂಡಿತು. ಬಿಜೆಪಿಯ ಇಂಥಾ ಹೊಸ ಜಾತಿ ರಾಜಕಾರಣವೇ ಉತ್ತರ ಪ್ರದೇಶ , ಬಿಹಾರ್ ಸೇರಿದಂತೆ ಹಲವೆಡೆ ಕಳೆದ ಎರಡು ಚುನಾವಣೆಗಳಲ್ಲಿ ಭಾಜಪಕ್ಕೆ ಅಮೋಘ ಗೆಲುವು ತಂದುಕೊಟ್ಟಿತು.
ಆದರೆ ಬಿಜೆಪಿಯ ಈ ರೀತಿಯಾದ ಬೆಳವಣಿಗೆ ದೇಶದ ಹಿಂದುಳಿದ ವರ್ಗಗಳ ಭವಿಷ್ಯವನ್ನು ಕೆಡಿಸಿದೆ ಅನ್ನುವುದು ಮಾತ್ರ ಸತ್ಯ. ಬಿಜೆಪಿ ರೂಪಿಸಿರುವ `ಸೋಶಿಯಲ್ ಇಂಜಿನಿಯರಿಂಗ್’ ಎಂಬ ಪರಿಕಲ್ಪನೆ ವಾಸ್ತವದಲ್ಲಿ ದಲಿತ ಮತ್ತು ಬಹುಜರನ್ನು ಉದ್ಧಾರಕ್ಕಾಗಿ ಅಲ್ಲ. ಬದಲಿಗೆ ರಾಜಕೀಯ ಲಾಭಕ್ಕಾಗಿ ಮಾತ್ರ ಇರುವಂತದ್ದಾಗಿದೆ. ಉದಾಹರಣೆಗೆ, ಉತ್ತರಪ್ರದೇಶದಲ್ಲಿ ಬಹುಜನ ಸಮಾಜ್ ಪಾರ್ಟಿಯನ್ನು ಮೂಲೆಗುಂಪು ಮಾಡಲು ಬಿಜೆಪಿ, ರಾಜಭರ್, ಪಾಸಿ, ಧೋಭಿ, ಖಾತಿಕ್ ಮತ್ತು ಇತರ ದಲಿತ ಜಾತಿ ಮತ್ತು ಉಪಜಾತಿಗಳಿಗಾಗಿ ವಿಶೇಷ ಕಾರ್ಯಕ್ರಮವನ್ನು ರೂಪಿಸಿದ್ದು. ಇದೇ ರೀತಿ ಮೌರ್ಯರು, ಕೂರ್ಮಿಗಳು ಮತ್ತು ಲೋಧರನ್ನು ಅಲ್ಲಿನ ಪ್ರಬಲ ಯಾದವರ ವಿರುದ್ಧ ಎತ್ತಿಕಟ್ಟಿ ಹಿಂದುತ್ವದ ಸೇವಕರಂತೆ ಬಿಂಬಿಸಿ ರಾಜಕೀಯ ಲಾಭವನ್ನು ಬಿಜೆಪಿ ಪಡೆಯಿತು. ಈ ರೀತಿಯಾದ ಕುತಂತ್ರದ ರಾಜಕೀಯ ಸಾಮಾಜಿಕ ನ್ಯಾಯವನ್ನು ಕೆಡಿಸಿ ಜಾತಿ ರಾಜಕೀಯವನ್ನು ಉಳಿಸಿಕೊಂಡು ರಾಜಕೀಯವಾಗಿ ಲಾಭ ಪಡೆದು ಅಧಿಕಾರದಲ್ಲಿರುತ್ತವೆ. ಮತ್ತು ಇದರ ಪ್ರಭಾವ ದೇಶದ ದೊಡ್ಡ ದೊಡ್ಡ ಉದ್ಯಮಗಳು, ಮಾಧ್ಯಮ, ಸಿನಿಮಾ, ಕ್ರೀಡೆ ಹಾಗೂ ಇದೇ ರೀತಿಯಾದ ಇತರೆ ಕ್ಷೇತ್ರಗಳ ಮೇಲೆಯೂ ಪ್ರಭಾವ ಬೀರುತ್ತದೆ. ಈ ರೀತಿಯಾದ ಬಲಪಂಥೀಯ ನಿಲುವುಗಳು ಮತ್ತೊಮ್ಮೆ ದೇಶದಲ್ಲಿ ಶ್ರೇಣೀಕೃತ ವ್ಯವಸ್ಥೆಯನ್ನು ಹುಟ್ಟುಹಾಕುವುದರಲ್ಲಿ ಯಾವುದೇ ಅನುಮಾನವಿಲ್ಲ.

`ಸಬಲೀಕರಣದ ಉನ್ಮಾದ’ದಲ್ಲೇ ತೇಲುತ್ತಿರುವ ಓಬಿಸಿಗಳು.!!
ತಮ್ಮ ಸಿದ್ಧಾಂತಗಳು ಹಾಗೂ ಕೆಲಸಗಳು ತಳಮಟ್ಟದ ಮತ್ತು ದುರ್ಬಲ ದಲಿತ – ಬಹುಜನ ಸಮುದಾಯವನ್ನು, ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಗಟ್ಟಿಗೊಳಿಸುತ್ತಿದೆ ಎಂದು ಬಿಜೆಪಿ ಹೇಳಿಕೊಂಡರೂ ನಿಜಾರ್ಥದಲ್ಲಿ ಯಾವುದೇ ರೀತಿಯ ಬದಲಾವಣೆ ಈ ಕ್ಷೇತ್ರಗಳಲ್ಲಿ ಈ ಸಮುದಾಯಗಳು ಕಂಡುಕೊಂಡಿಲ್ಲ. ಈ ಎಲ್ಲಾ ಸಮುದಾಯಗಳು ಮೌಖಿಕವಾಗಿಯಷ್ಟೇ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ಎಂದಿನಂತೆ ಸಾಮಾಜಿಕ ಅಭದ್ರತೆ ಎದುರಿಸುತ್ತಾ, ಸ್ಲಂಗಳಂಥಾ ಅನಿಶ್ಚಿತ ಪರಿಸ್ಥಿತಿಗಳಲ್ಲಿಯೇ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಈ ಕೊರೋನಾ ಕಾಲದಲ್ಲಿ ಇವರ ಸ್ಥಿತಿ ಮತ್ತಷ್ಟು ಶೋಚನೀಯ ಮಟ್ಟಕ್ಕೆ ತಲುಪಿದ್ದಲ್ಲದೆ, ಇಂಥಾ ವಿಷಮ ಸ್ಥಿತಿಯಲ್ಲೂ ಘನತೆಯ ಉಳಿವಿಗಾಗಿ ಮೂಲ ಸೌಕಯಗಳು ಮತ್ತು ಭದ್ರತೆಯನ್ನು ಒದಗಿಸುವಲ್ಲಿ ಈ ಬಿಜೆಪಿ ಸರ್ಕಾರ ವಿಫಲವಾಗಿದೆ.
ಇದರ ಜೊತೆಗೆ ತಮ್ಮ ಉದ್ದೇಶ ಈಡೇರಿಸಿಕೊಳ್ಳುವುದಲ್ಲದೆ ಮುಂಬರುವ ದಿನಗಳಲ್ಲಿ ಹಿಂದುಳಿದ ವರ್ಗಗಳು ರಾಜಕೀಯವಾಗಿ ಪ್ರಾಬಲ್ಯ ಸಾಧಿಸುವುದನ್ನೂ ಕೂಡ ಬಿಜೆಪಿ ಇದರ ಜತೆ-ಜತೆಗೇ ಇಲ್ಲವಾಗಿಸಿದೆ. ಹೇಗೆ ಎಂದರೆ, ಈ ನೀಟ್ ಮೀಸಲಾತಿ ಎಂಬುವುದು ಹಿಂದುಳಿದ ವರ್ಗಗಳ ಓಲೈಕೆಗಾಗಿಯೇ ಮಾಡಿದೆಯಾದರು, ಕೇಂದ್ರ ಸರ್ಕಾರದ ಕ್ಯಾಬಿನೆಟ್ನುಲ್ಲಿರುವ 28 ಓಬಿಸಿ ಸದಸ್ಯರುಗಳು ಕೂಡ ಚಕಾರ ಎತ್ತದೆ ಒಪ್ಪಿಕೊಳ್ಳುವಂತೆ ಮಾಡಿರುವ ಹಾಗೆ. ಇದೇ ವೇಳೆ ಅಧಿಕಾರದ ಪ್ರಮುಖ ಹುದ್ದೆಗಳಾದ ಮುಖ್ಯಮಂತ್ರಿ, ಗೃಹಮಂತ್ರಿ ಮುಂತಾದವುಗಳಿಂದ ಇವರನ್ನು ಉದ್ದೇಶಪೂರ್ವವಾಗಿ ದೂರ ಇಟ್ಟುಕೊಂಡಿದೆ. ಇದರ ಜೊತೆಗೆ ಕಟ್ಟರ್ ಹಿಂದುತ್ವ ವಾದಿಗಳಾದ ಕೆಲವು ಹಿಂದುತ್ವವಾದಿಗಳನ್ನು ಪ್ರಧಾನ' ಹುದ್ದೆಗೆ ಆಯ್ಕೆ ಮಾಡಿ ತಮ್ಮ ಹಿಡನ್ ಅಜೆಂಡಾ ಬಹಿರಂಗವಾಗದಂತೆ ನೋಡಿಕೊಳ್ಳುವ ಕೆಲಸವನ್ನೂ ಮಾಡಲಾಗುತ್ತಿದೆ. ಹೀಗೆ ಬಿಜೆಪಿ ಸೋಶಿಯಲ್ ಇಂಜಿನಿಯರಿಂಗ್ ಎಂಬ ಒಕ್ಕಣೆ ಅಡಿಯಲ್ಲಿ ಹಿಂದುಳಿದ ವರ್ಗಗಳನ್ನು ತಮ್ಮ
ಸೈದ್ದಾಂತಿಕ ಸೈನಿಕ’ರನ್ನಾಗಿ ಮಾಡಿಕೊಳ್ಳುತ್ತಿದೆ.

ಆದರೆ ಪೆರಿಯಾರ್ ರಂಥಾ ಸೋಶಿಯಲ್ ಜಸ್ಟಿಸ್ ಚಳವಳಿಗಳನ್ನು ಕಟ್ಟಿದವರ ಉದ್ದೇಶ ಈ ಹಿಂದುಳಿದವರ ಕೈಯಲ್ಲೇ ಅಧಿಕಾರ ಮತ್ತು ಅವರೇ ಹೈಕಮಾಂಡ್' ಎಂಬ ನಿಲುವು ಹೊಂದಿತ್ತು. ದೇಶದ ಬಹುಪಾಲು ಜನರು ಹಿಂದುಳಿದ ವರ್ಗಗಳೇ ಆಗಿರುವ ಕಾರಣ ಇದು ಸಾಧ್ಯವಾಗುವ ಕೆಲಸವೇ ಆಗಿತ್ತು. ಆದರೆ ನೀಟ್ನಿಲ್ಲಿ ಮೀಸಲಾತಿಯಂಥಾ ಬಲಪಂಥೀಯ ಪ್ರಯೋಗಗಳು ಹಿಂದುಳಿದ ವರ್ಗಗಳನ್ನು
ಸಬಲೀಕರಣದ ಉನ್ಮಾದ’ದಲ್ಲೇ ತೇಲಿಸಿ ಬಿಡುತ್ತದೆ. ಅದುವೇ ಬಿಜೆಪಿಯ ಮುಖ್ಯ ಉದ್ದೇಶ ಕೂಡ.