ಗಣರಾಜ್ಯೋತ್ಸವದ ಪರೇಡ್ 2022ರ ಅತ್ಯುತ್ತಮ ಸ್ತಬ್ಧಚಿತ್ರ ಮತ್ತು ಅತ್ಯುತ್ತಮ ಮೆರವಣಿಗೆ ಸ್ಪರ್ಧೆಯ ಫಲಿತಾಂಶಗಳನ್ನು ಕೇಂದ್ರ ಸರ್ಕಾರ ಘೋಷಿಸಿದ್ದು ಕರ್ನಾಟಕದ ಕರಕುಶಲ ಕಲೆಗಳ ತೊಟ್ಟಿಲು ಶೀರ್ಷಿಕೆಯಡಿ ಪ್ರದರ್ಶನಗೊಂಡಿದ್ದ ಸ್ತಬ್ಧಚಿತ್ರಕ್ಕೆ ದ್ವಿತೀಯ ಸ್ಥಾನ ದೊರೆತಿದೆ. ಈ ಕುರಿತು ವಾರ್ತಾ ಇಲಾಖೆ ಆಯುಕ್ತ ಪಿ.ಎಸ್. ಹರ್ಷ ಸಂತಸ ವ್ಯಕ್ತಪಡಿಸಿದ್ದಾರೆ.
ಹೌದು, ಜನವರಿ 26ರಂದು ದೆಹಲಿಯ ಇಂಡಿಯಾ ಗೇಟ್ನಿಂದ ರಾಜಪಥ ವರಗೆ ನಡೆದಿದ್ದ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಿದ್ದ ರಾಜ್ಯದ ಸ್ತಬ್ಧಚಿತ್ರಕ್ಕೆ ಅತ್ಯುತ್ತಮ ಸ್ತಬ್ಧಚಿತ್ರ ವಿಭಾಗದಲ್ಲಿ ದ್ವಿತೀಯ ಸ್ಥಾನ ದೊರೆತಿದೆ. ಕರ್ನಾಟಕ ಕರಕುಶಲ ಸ್ತಬ್ಧಚಿತ್ರ ಸಿಕ್ಕಿರೋದಕ್ಕೆ ವಾರ್ತಾ ಇಲಾಖೆ ಆಯುಕ್ತ ಪಿ.ಎಸ್. ಹರ್ಷ ಸಂತಸ ವ್ಯಕ್ತಪಡಿಸಿದ್ದು ಖಾಸಗಿ ವಾಯಿನಿಒಯೊಂದರ ಜೊತೆ ಮಾತನಾಡಿದ್ದು, ಆರು ತಿಂಗಳ ಸತತ ಪ್ರಯತ್ನದಿಂದ ವಿಶೇಷವಾದ ಟ್ಯಾಬ್ಲೋ ಸಿದ್ಧಪಡಿಸಲಾಗಿತ್ತು. ದೆಹಲಿಯ ಕೊರೆಯುವ ಚಳಿಯಲ್ಲಿ ರಾಜ್ಯದ 16 ಕಲಾಪ್ರಕಾರಗಳನ್ನ ಸಿದ್ಧಗೊಳಿಸಲಾಗಿದ್ದ ಕಲಾವಿದರಿಗೆ ಧನ್ಯವಾದಗಳು ಎಂದು ಅಭಿನಂದನೆ ಸಲ್ಲಿಸಿದ್ದಾರೆ.
ಉತ್ತರ ಪ್ರದೇಶದ ಕಾಶಿ ವಿಶ್ವನಾಥ ಕಾರಿಡಾರ್ ಕುರಿತ ಸ್ತಬ್ಧಚಿತ್ರ ಪ್ರಥಮ ಸ್ಥಾನ ಪಡೆದಿದ್ದು, ಸಾಂಪ್ರದಾಯಿಕ ಕರಕುಶಲ ವಸ್ತುಗಳ ತೊಟ್ಟಿಲು ಆಧಾರಿತ ಟ್ಯಾಬ್ಲೋಗಾಗಿ ಕರ್ನಾಟಕಕ್ಕೆ ಎರಡನೇ ಸ್ಥಾನ ಲಭಿಸಿದ್ದರೆ, ಮೇಘಾಲಯದ 50 ವರ್ಷಗಳ ರಾಜ್ಯತ್ವ ಮತ್ತು ಮಹಿಳಾ ನೇತೃತ್ವದ ಸಹಕಾರಿ ಸಂಘಗಳು ಮತ್ತು ಸ್ವಸಹಾಯ ಸಂಘಗಳಿಗೆ ರಾಜತ್ವದ ಕೊಡುಗೆ ಎಂಬ ವಿಷಯಕ್ಕೆ ಮೂರನೇ ಸ್ಥಾನ ಲಭಿಸಿದೆ.
ಜನಪ್ರಿಯ ಆಯ್ಕೆಯ ವಿಭಾಗದಲ್ಲಿ ಮಹಾರಾಷ್ಟ್ರದ ಸ್ತಬ್ಧಚಿತ್ರವನ್ನು ಅತ್ಯುತ್ತಮ ಸ್ತಬ್ಧಚಿತ್ರ ಎಂದು ಆಯ್ಕೆ ಮಾಡಲಾಗಿದ್ದು, ‘ಮಹಾರಾಷ್ಟ್ರದ ಜೀವವೈವಿಧ್ಯ ಮತ್ತು ರಾಜ್ಯ ಜೈವಿಕ ಚಿಹ್ನೆಗಳು’ ಎಂಬ ವಿಷಯವನ್ನು ಆಧರಿಸಿತ್ತು.