ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರವು ಕಳೆದ ವರ್ಷ ಜನವರಿ 22 ರಂದು ಲೋಕಾರ್ಪಣೆಗೊಂಡಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ರಾಮಲಲ್ಲಾ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಗಿತ್ತು. ಆದರೆ ಈ ಸಂದರ್ಭದಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಅಪೂರ್ಣವಾಗಿತ್ತು.

ಇದೀಗ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಇಂದು ಪ್ರಧಾನಿ ಮೋದಿ ರಾಮಮಂದಿರ ಗೋಪುರ ಮೇಲೆ ಭಗವಾ ಧ್ವಜಾರೋಹಣ ನೆರವೇರಿಸಿದ್ದಾರೆ. ರಾಮಮಂದಿರ ಗೋಪುರ ಮೇಲೆ 22 ಅಡಿ ಎತ್ತರದ ಭಗವಾ ಧ್ವಜಾರೋಹಣ ಮಾಡಲಾಗಿದೆ. ಈ ಮೂಲಕ ಅಯೋಧ್ಯೆ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ.

ಪ್ರಸಿದ್ಧ ಕಾಶಿ ವಿದ್ವಾಂಸ ಗಣೇಶ್ವರ್ ಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ಅಯೋಧ್ಯೆ ಭಗವಾ ಧ್ವಜಾರೋಹಣ ನೆರವೇರಿದೆ. ರಾಮಮಂದಿರ ಗೋಪುರ ಮೇಲೆ ರಾರಾಜಿಸುತ್ತಿರುವ ತ್ರಿಕೋನ ಕೇಸರಿ ಧ್ವಜ, ಓಂ ಚಿಹ್ನೆ ಹಾಗೂ ಸೂರ್ಯನ ಸಂಕೇತವನ್ನು ಹೊಂದಿದೆ. ಇದು ರಾಮನಿಗೆ ಸಂಬಂಧಿಸಿದ ಎಲ್ಲಾ ಗುಣಗಳನ್ನು ಪ್ರತಿನಿಧಿಸುತ್ತದೆ ಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ.











