ಬೆಳಗಾವಿ: ಬೆಳಗಾವಿಯ ಆಂಜನೇಯ ನಗರದ ರಿಯಲ್ ಎಸ್ಟೇಟ್ ಉದ್ಯಮಿ ಸಂತೋಷ ದುಂಡಪ್ಪ ಪದ್ಮಣ್ಣವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಳಮಾರುತಿ ಠಾಣೆ ಪೋಲೀಸರು ಗುರುವಾರ ಪತ್ನಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಉದ್ಯಮಿ ಪತ್ನಿ ಉಮಾ ಪದ್ಮಣ್ಣವರ (41), ಅವರ ಫೇಸ್ಬುಕ್ ಸ್ನೇಹಿತ, ಶನಿವಾರಸಂತೆ ಗ್ರಾಮದ ಶೋಭಿತ್ ಗೌಡ (30) ಮತ್ತು ಶನಿವಾರಸಂತೆಯ ಪವನ್ (27) ಬಂಧಿತ ಆರೋಪಿಗಳು.ಈಗ ಮೂವರನ್ನು ಹಿಂಡಲಗಾದಲ್ಲಿರುವ ಬೆಳಗಾವಿ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ.
ನಗರದ ರಿಯಲ್ ಎಸ್ಟೇಟ್ ಉದ್ಯಮಿ ಸಂತೋಷ್ ಪದ್ದಣ್ಣನವರ (47) ಅಕ್ಟೋಬರ್ ೯ ರ ಸಂಜೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅಕ್ಟೋಬರ್ 10 ರಂದು ವೀರಶೈವ ಸಂಪ್ರದಾಯದಂತೆ ಅಂತ್ಯ ಕ್ರಿಯೆಯೂ ನಡೆದಿತ್ತು. ಮೃತರ ದುಖಃ ತಪ್ತ ಮಗಳಾದ ಬೆಂಗಳೂರಿನಲ್ಲಿ ಮೊದಲ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಸಂಜನಾ ಗೆ ಅಪ್ಪನ ಕೊನೆ ಕ್ಷಣಗಳನ್ನು ನೋಡುವ ಉತ್ಕಟ ಕುತೂಹಲ ಆಗಿದೆ. ಆಕೆ ಅಕ್ಟೋಬರ್ ೧೨ ರಂದು ತಾಯಿಯೊಡನೆ ಅಂದಿನ ಕ್ಷಣಗಳ ವೀಡಿಯೋ ತೋರಿಸಲು ಒತ್ತಾಯಿಸಿದ್ದಾಳೆ. ಆಗ ತಾಯಿ ಅದಕ್ಕೇನು ಈಗಲೇ ಅರ್ಜೆಂಟ್ ? ಸ್ನಾನ ಮಾಡಿ ಊಟ ಮಾಡಿ ಬಾ ನಂತರ ನೋಡದರಾಯ್ತು ಅಂದಿದ್ದಾಳೆ. ಆದರೆ ಮಗಳು ಬರುವಷ್ಟರಲ್ಲಿ ೮ ನೇ ತರಗತಿ ಒದುತ್ತಿರುವ ಮಗನಿಗೆ ಹೇಳಿ ಅಂದಿನ ಸಂಪೂರ್ಣ ಸಿಸಿಟಿವಿ ವೀಡಿಯೋಗಳನ್ನು ಡಿಲೀಟ್ ಮಾಡಿಸಿದ್ದಾಳೆ. ಉದ್ಯಮಿಯ ಮೂರು ಅಂತಸ್ತಿನ ಮನೆಯಲ್ಲೇ ಸುಮಾರು 15 ಸಿಸಿ ಟಿವಿ ಕ್ಯಾಮೆರಾ ಅಳವಡಿಸಿಕೊಂಡಿದ್ದರು.
ಇದರಿಂದ ಸಂದೇಹ ಮತ್ತು ಸಿಟ್ಟುಗೊಂಡ ಮಗಳು ಸಾವಿನ ತನಿಖೆ ನಡೆಸುವಂತೆ ಪೋಲೀಸರಿಗೆ ಅಕ್ಟೋಬರ್ ೧೫ ರಂದು ದೂರು ಕೊಟ್ಟಿದ್ದಾಳೆ. ಕ್ಷಿಪ್ರ ತನಿಖೆ ಕೈಗೊಂಡ ಪೋಲೀಸರು ಎದುರು ಮನೆಯ ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ೧೬ ರಂದೇ ಮೂವರನ್ನೂ ಬಂಧಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಮಾಳಮಾರುತಿ ಇನ್ಸ್ಪೆಕ್ಟರ್ ಜಾಕೀರ್ ಅವರು ಕೆಲ ತಿಂಗಳ ಬಳಿಕ ಪುನಃ ಇಬ್ಬರೂ ಸಂಪರ್ಕದಲ್ಲಿ ಇದ್ದಾರೆ. ಪತಿಯಿಂದ ಸಂಪರ್ಕಕ್ಕೆ ಅಡ್ಡಿ ಎಂದು ಭಾವಿಸಿದ ಪತ್ನಿ ಆತನನ್ನೆ ಮುಗಿಸಿಬಿಡಲು ಯೋಜನೆ ರೂಪಿಸಿದ್ದಾಳೆ. ಅದರಂತೆ ಶೋಭಿತ್ ಮತ್ತು ಆತನ ಸ್ನೇಹಿತ ರಾಮನ್ ಕುಟ್ಟಿ ಎಂಬುವವರ ಮಗ ಪವನ್ ನನ್ನು ಕರೆದುಕೊಂಡು ಬೆಳಗಾವಿಗೆ ಅಕ್ಟೋಬರ್ ೭ ರಂದೇ ಬಂದು ಲಾಡ್ಜ್ ನಲ್ಲಿ ಉಳಿದುಕೊಂಡಿದ್ದಾರೆ. ಅಕ್ಟೋಬರ್ ೯ ರಂದು ಮದ್ಯಾಹ್ನ ಊಟದಲ್ಲಿ ನಿದ್ರೆ ಮಾತ್ರೆ ಹಾಕಿಕೊಟ್ಟಿದ್ದರಿಂದ ನಿದ್ರೆಗೆ ಜಾರಿದ್ದ ಉದ್ಯಮಿಯನ್ನು ಈರ್ವರೂ 7 ಘಂಟೆಗೆ ಮನೆಗೆ ತೆರಳಿ ಉಸಿರುಗಟ್ಟಿಸಿ ಕೊಂದು 7.55 ಕ್ಕೆ ಹೊರಬಂದಿದ್ದಾರೆ. ಇದು ಎದುರು ಮನೆ ಸಿಸಿ ಟಿವಿಯಲ್ಲಿ ದಾಖಲಾಗಿದೆ ಎಂದು ಜಾಕೀರ್ ತಿಳಿಸಿದರು.
ಇದೀಗ ಬುಧವಾರ ಹೂತಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೂವರೂ ಆರೋಪಿಗಳಿಗೂ ೧೪ ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆಧುನಿಕ ತಂತ್ರಜ್ಞಾನದಿಂದ ಡಿಲೀಟ್ ಮಾಡಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಮರು ಪಡೆಯುವುದಾಗಿ ತಿಳಿಸಿದ ಇನ್ಸಪೆಕ್ಟರ್ ಜಾಕೀರ್ ಅವರು ಅದರಲ್ಲಿ ಕೊಲೆಯ ನೇರ ದ್ಶಶ್ಯಾವಳಿಯೂ ಸಿಗಲಿದೆ ಎಂದು ತಿಳಿಸಿದರು. ಕೊಲೆ ನಡೆಸಿ ಇಬ್ಬರೂ ಆರೋಪಿಗಳೂ ಲಾಡ್ಜ್ ನಲ್ಲಿಯೇ ಇದ್ದುದರಿಂದ ಬೆಳಗಾವಿ ಪೋಲೀಸರು ಆರೋಪಿಗಳನ್ನು ಅಲ್ಲಿಯೇ ಬಂಧಿಸಿದ್ದಾರೆ.ಮೃತರ ಬಗ್ಗೆ ಅಕ್ಕ ಪಕ್ಕದ ನಿವಾಸಿಗಳಲ್ಲಿ ಅಷ್ಟೇನೂ ಒಳ್ಳೆ ಅಭಿಪ್ರಾಯ ಇರಲಿಲ್ಲ. ಖಾಸಗೀ ಲೇವಾದೇವಿ ಮಾಡುತಿದ್ದ ಉದ್ಯಮಿ ಮೀಟರ್ ಬಡ್ಡಿ ವಸೂಲಿ ಮಾಡುತಿದ್ದರೆಂಬ ಆರೋಪಗಳೂ ಇದ್ದವು.