ಐತಿಹಾಸಿಕ ಕ್ಷೇತ್ರ ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಆವರಣದಲ್ಲಿ ಅಪರೂಪದ ಸಾಮಾನ್ಯ ಬಿಳಿ ಮಣ್ಣು ಮುಕ್ಕ ಹಾವು ಪತ್ತೆಯಾಗಿದ್ದು, ಈ ಹಾವು ಯಾವ ಪ್ರಭೇದದ್ದು ಎಂದು ಗುರುತಿಸಲಾಗದೇ ಅಲ್ಲಿನ ಭದ್ರಾತ ಸಿಬ್ಬಂದಿಗಳು ಹಾಗೂ ಪ್ರವಾಸಿಗರು ಗೊಂದಲಕ್ಕೀಡಾಗಿದ್ದರು. ವಿಷಯ ತಿಳಿದ ಕಮಲಾಪುರದ ಹಾವು(ಉರಗ) ಮತ್ತು ವನ್ಯಜೀವಿ ರಕ್ಷಕ ಮಲ್ಲಿಕಾರ್ಜುನ ಜಿ ಬಿ ಸ್ಥಳಕ್ಕೆ ಬಂದು ಈ ಹಾವನ್ನು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಅನಿಮಲ್ ಕನ್ಸರ್ವೇಷನ್ ಸಂಸ್ಥೆಯ ಮುಖ್ಯಸ್ಥರು ಹಾಗೂ ಹಾವು(ಉರಗ) ಮತ್ತು ವನ್ಯ ಜೀವಿ ರಕ್ಷಕ ವೇಣುಗೋಪಾಲ್ ನಾಯ್ಡು, “ಇದು ಬೇರೆಯ ಜಾತಿ ಹಾವಲ್ಲ. ಚರ್ಮಕ್ಕೆ ಬಣ್ಣ ನೀಡುವ ವರ್ಣ ದ್ರವ್ಯ ಗ್ರಂಥಿ ಅಂದರೆ ಮೆಲಾಲಿನ್ ಅಥವಾ ಪಿಗ್ಮೆಂಟ್ ಕೊರತೆಯಿಂದ ಚರ್ಮಕ್ಕೆ ಬಣ್ಣ ಬರದೇ ಈ ರೀತಿ ಬಿಳಿ ಬಣ್ಣಕ್ಕೆ ಕಾರಣವಾಗುತ್ತದೆ. ಇದನ್ನು ಅಲ್ಬಿನೋ ಸ್ನೇಕ್ಸ್ ಎಂದು ಕೂಡಾ ಕರೆಯುತ್ತಾರೆ.
ಇದು ಆನುವಂಶಿಕ ಅಸಹಜತೆಯಾಗಿದೆ, ಇವುಗಳ ಅಸಹಜತೆ, ವರ್ಣದ್ರವ್ಯ ಮತ್ತು ಬಣ್ಣದಿಂದಾಗಿ ಈ ಹಾವುಗಳನ್ನು ‘ಅಪರೂಪ’ ಎಂದು ಕರೆಯುತ್ತಾರೆ. ಬಹುಶಃ ಕರ್ನಾಟಕದಲ್ಲಿ ಮೊದಲನೇ ಬಾರಿಗೆ ಇಂತಹ ಅಪರೂಪದ ಸಾಮಾನ್ಯ ಬಿಳಿ ಮಣ್ಣು ಮುಕ್ಕ ಹಾವು (albino Common Sand Boa) ಕಂಡುಬಂದಿದೆ ಮತ್ತು ಈ ಹಾವುಗಳು ವಿಷಕಾರಿಯಲ್ಲದ ಹವಾಗಿದ್ದು ಈ ಮಣ್ಣು ಮುಕ್ಕ ಹಾವುಗಳಲ್ಲಿ ಮೂರು ಜಾತಿಯ ಹಾವುಳಿದ್ದು, ಸಾಮಾನ್ಯ ಮಣ್ಣು ಮುಕ್ಕ ಹಾವು (Common Sand Boa), ಕೆಂಪು ಮಣ್ಣು ಮುಕ್ಕ ಹಾವು (Red Sand Boa), ಹಾಗೂ ವೇಟೆಕಾರ್ ಮಣ್ಣು ಮುಕ್ಕ (Whitaker’s Boa) ಹಾವುಗಳಿವೆ ಎಂದು ಉರಗ ರಕ್ಷಕ ಮಲ್ಲಿಕಾರ್ಜುನ್ ಅಭಿಪ್ರಾಯವಾಗಿದೆ.






