ನವದೆಹಲಿ : ದೇಶದ ಹಲವು ರಾಜ್ಯಗಳಲ್ಲಿ ಮುಂಗಾರು ಅಬ್ಬರ ಮುಂದುವರೆದಿದ್ದು, ಬೆಟ್ಟಗುಡ್ಡದ ರಾಜ್ಯಗಳಾದ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಹೆಚ್ಚಿನ ಭೂಕುಸಿತಗಳು ಸಂಭವಿಸಿದ್ದು, ಪ್ರಮುಖ ಹೆದ್ದಾರಿಗಳು ಬಂದ್ ಆಗಿವೆ. ಅಲ್ಲದೆ ಈಶಾನ್ಯ ರಾಜ್ಯಗಳಲ್ಲಿ ನದಿಗಳು ಉಕ್ಕಿ ಹರಿಯುತ್ತಿದ್ದು, ಅಧಿಕಾರಿಗಳು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯ ಮಾಡುತ್ತಿದ್ದಾರೆ.

ಮುಖ್ಯವಾಗಿ ದೆಹಲಿ-ಎನ್ಸಿಆರ್ ಮತ್ತು ರಾಜಸ್ಥಾನ ಸೇರಿದಂತೆ ದೇಶದ ಕೆಲವು ಭಾಗಗಳು ದಿನಗಟ್ಟಲೆ ನಿರಂತರ ಭಾರೀ ಮಳೆ ಸುರಿಯುತ್ತಿದೆ. ಇದರಿಂದ ಸಂಭವಿಸಿರುವ ವಿವಿಧ ಅನಾಹುತಗಳಲ್ಲಿ 5 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಹಿಮಾಚಲ ಪ್ರದೇಶದ ಹಲವು ಭಾಗಗಳಲ್ಲಿ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ರಸ್ತೆಗಳು ಜಲಾವೃತಗೊಂಡಿವೆ, ಸೇತುವೆಗಳಿಗೆ ಹಾನಿಯಾಗಿದೆ ಮತ್ತು ಮರಗಳು ಉರುಳಿಬಿದ್ದಿವೆ. ರಾಜ್ಯದ ಹಲವು ಭಾಗಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇಲ್ಲಿನ ಕುಲ್ಲುವಿನ ಬುವಾಂಡಾ-ಚ್ವಾಯ್ ರಸ್ತೆಗೆ ಬೆಟ್ಟದ ಇಳಿಜಾರಿನಿಂದ ಬಿದ್ದ ಬಂಡೆಗಳು ಡಿಕ್ಕಿ ಹೊಡೆದು 70 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಸೋಲನ್ ಜಿಲ್ಲೆಯ ಅರ್ಕಿ ಪ್ರದೇಶದಲ್ಲಿ ಬಂಡೆಯೊಂದು ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ. ಹೀಗೆ ಉತ್ತರ ಭಾರತದಲ್ಲಿ ಮಳೆಯಿಂದ ಸಾಲು ಸಾಲು ಅವಾಂತರಗಳು ಸಂಭವಿಸುತ್ತಿವೆ.
ಇದನ್ನೂ ಓದಿ : ಕ್ರೌರ್ಯಕ್ಕೆ ಮಿತಿಯಿಲ್ಲ ಹಿಂಸೆಗೆ ಕೊನೆಯಿಲ್ಲ
ಇನ್ನೂ ಶಿಮ್ಲಾದಲ್ಲಿ, 27 ಪ್ರಮುಖ ರಸ್ತೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ, ಆದರೆ ಸುರಕ್ಷತೆಯ ದೃಷ್ಟಿಯಿಂದ ಇದು ಅನಿವಾರ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹ, ಭೂಕುಸಿತ, ಜನರಿಗೆ ಸಂಕಷ್ಟ..!
ಕಲ್ಕಾ-ಶಿಮ್ಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ, ವಕ್ನಾಘಾಟ್ ಮತ್ತು ಕಂದಘಾಟ್ ನಡುವೆ, ಧರಂಪುರ ಮತ್ತು ಚಕ್ಕಿ ಮೋಡ್ ನಡುವೆ ಬಂಡೆಗಳು ಉರುಳಿ ಬಿದ್ದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕಿನ್ನೌರ್ ಜಿಲ್ಲೆಯ ಸಾಂಗ್ಲಾ ಸೇತುವೆಯ ಮೇಲೆ ಭೂಕುಸಿತದ ಅಪಾಯವಿದ್ದು, ಕಳೆದ ವರ್ಷ ಬಿಆರ್ಓ ಮತ್ತು ಭಾರತೀಯ ಸೇನೆಯ ನೆರವಿನಿಂದ ಇದನ್ನು ನಿರ್ಮಿಸಲಾಗಿತ್ತು. ಇದಕ್ಕೆ ಅಪಾಯ ಎದುರಾದರೆ ಸಾಂಗ್ಲಾ ಕಣಿವೆಯ ಸಂಪರ್ಕ ಕಡಿತಗೊಳ್ಳಬಹುದು. ಅಷ್ಟೇ ಅಲ್ಲದೆ ಗುರುವಾರ ಸಂಜೆಯಿಂದಲೇ ಸಿರ್ಮೌರ್ ಮತ್ತು ಸೋಲನ್ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ ಎಂದು ಸ್ಥಳೀಯ ಹವಾಮಾನ ಇಲಾಖೆ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ ಉತ್ತರಾಖಂಡದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿ, ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ರಾಜ್ಯಾದ್ಯಂತ 118 ರಸ್ತೆಗಳು ಬಂದ್ ಆಗಿವೆ. ಇದರಿಂದ ಜನರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದು, ಹಲವು ಜನರು ಗಾಯಗೊಂಡಿದ್ದಾರೆ, ಶಾಲೆಗಳನ್ನು ಮುಚ್ಚಲಾಗಿದೆ. ಇನ್ನೂ ಮುಂದಿನ ಕೆಲವು ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.
ಉತ್ತರಕಾಶಿ ಜಿಲ್ಲೆಯ ಸಯಾನಚಟ್ಟಿ ಬಳಿಯ ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯ 100 ಮೀಟರ್ ಉದ್ದದ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದೆ. ರಸ್ತೆಯ ದುರಸ್ತಿ ಕಾರ್ಯ ಸ್ಥಳದಲ್ಲಿ ಪ್ರಗತಿಯಲ್ಲಿದೆ. ನಾಗುನ್ ಮತ್ತು ನಲು ಪಾನಿಯಲ್ಲಿ ಬಂಡೆಗಳು ಮತ್ತು ಕಲ್ಲುಗಳು ಬೀಳುವುದರಿಂದ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯು ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂಬ ಕಾರಣಕ್ಕೆ ವಾಹನಗಳು ಸಂಚರಿಸುತ್ತಿಲ್ಲ. ನಿರಂತರ ಮಳೆಯಿಂದಾಗಿ ಗಂಗಾ, ಯಮುನಾ ಮತ್ತು ಅವುಗಳ ಉಪನದಿಗಳು – ಹಲವಾರು ಸಣ್ಣ ನದಿಗಳ ಜೊತೆಗೆ – ಉಕ್ಕಿ ಹರಿಯುತ್ತಿವೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧರ್ ಉಪವಿಭಾಗದ ಅರಿ ಪ್ರದೇಶದಲ್ಲಿ ಭಾರೀ ಮಳೆಯಿಂದ ಎದುರಾಗಿರುವ ಪ್ರವಾಹದ ನೀರು ಮನೆಗಳಿಗೆ ನುಗ್ಗಿ ಹಾನಿ ಮಾಡಿದ್ದು, ಈ ಪ್ರವಾಹದಲ್ಲಿ ಹಲವಾರು ಜನರು ಸಿಲುಕಿಕೊಂಡಿದ್ದಾರೆ. ಇವರ ರಕ್ಷಣೆಗೆ ತಂಡಗಳು ಕಾರ್ಯ ಪ್ರವೃತ್ತವಾಗಿವೆ. ಹೀಗೆ ವರುಣ ದೇಶದ ವಿವಿಧೆಡೆ ತನ್ನ ರೌದ್ರ ನರ್ತನ ಮುಂದುವರೆಸಿದ್ದು, ಜನರ ಜೀವ ರಕ್ಷಣೆಗಾಗಿ ಸರ್ಕಾರಗಳು ಇನ್ನಿಲ್ಲದ ಕಸರತ್ತನ್ನು ಮುಂದುವರೆಸಿವೆ.






