ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ನೇರ ಹಣ ವರ್ಗಾವಣೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ನ ಮಾಜಿ ವಿಧಾನಪರಿಷತ್ ಸದಸ್ಯ ರಮೇಶ್ ಬಾಬು ಆರೋಪಿಸಿದ್ದಾರೆ ಈ ಕುರಿತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ರಮೇಶ್ ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ.
1.ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ನೇರ ಹಣ ವರ್ಗಾವಣೆ (ಡಿಬಿಟಿ) ಮಾಡುವಲ್ಲಿ ಸತತ ವೈಫಲ್ಯವನ್ನು ಕಾಣುತ್ತಿದೆ. ಕೇಂದ್ರ ಸರ್ಕಾರದ ಯೋಜನೆಯನ್ನು ಸರ್ಕಾರದ ಆಯ್ದ ಇಲಾಖೆಯ ಫಲಾನುಭವಿಗಳಿಗೆ ನೇರ ವರ್ಗಾವಣೆ ಮುಖಾಂತರ ಅವರ ಖಾತೆಗಳಿಗೆ ಪಾವತಿಮಾಡಬೇಕಾಗಿರುತ್ತದೆ. ಮೂರು ದಿನಗಳಿಂದ ಮಾನ್ಯ ಮುಖ್ಯಮಂತ್ರಿಗಳು ರಾಜ್ಯದ ನೇಕಾರರಿಗೆ ನೇರ ಹಣ ಪಾವತಿ ಮುಖಾಂತರ ಸಹಾಯಧನವನ್ನು ನೀಡುವುದಾಗಿ ಹೇಳಿರುತ್ತಾರೆ. ಆದರೆ ಲೆಕ್ಕ ಪರಿಶೋಧನಾ ಇಲಾಖೆಯು ಮಾರ್ಚ್ 30, 2021 ಕ್ಕೆ ಒಳಗೊಂಡಂತೆ ನೀಡಿರುವ ವರದಿಯಲ್ಲಿ ರಾಜ್ಯ ಇಲಾಖೆಯ ಬಹುತೇಕ ಇಲಾಖೆಗಳಲ್ಲಿ ಫಲಾನುಭವಿಗಳಿಗೆ ನೇರ ವರ್ಗಾವಣೆ ಯೋಜನೆಯ ಹಣ ಪಾವತಿ ಆಗಿಲ್ಲವೆಂದು ಮತ್ತು ಬಹುತೇಕ ಅವ್ಯವಹಾರಗಳು ನಡೆದಿದೆ ಎಂದು ತಿಳಿಸಿರುತ್ತದೆ.
2. ಡಿಬಿಟಿ ಯೋಜನೆಯಲ್ಲಿ ಪಶುಸಂಗೋಪನಾ ಇಲಾಖೆಯಲ್ಲಿ ವೈಪಲ್ಯವಾಗಿದ್ದು, ರಾಜ್ಯ ಹಾಲು ಒಕ್ಕೂಟದ (KMF) ಮುಖಾಂತರ ರಾಜ್ಯದ ರೈತರಿಗೆ ನೀಡುವ ಪ್ರೋತ್ಸಾಹ ಧನದಲ್ಲಿ ಹಲವಾರು ಅಕ್ರಮಗಳನ್ನು ಎಸಗಿದ್ದು ಕೋಟ್ಯಂತರ ರೂಪಾಯಿ ದುರುಪಯೋಗ ಆಗಿದೆ ಎಂದು ತಿಳಿಸಿರುತ್ತದೆ. ಕರ್ನಾಟಕ ರಾಜ್ಯ ಸರ್ಕಾರವು ಕೃಷಿ ಇಲಾಖೆಯಲ್ಲಿ ಪ್ರಾರಂಭಿಸಿರುವ ರೈತ ಸಿರಿ ಯೋಜನೆಯ ಆರ್ಥಿಕ ನೆರವು ಪೂರ್ಣ ಮಟ್ಟದಲ್ಲಿ ತಲುಪಿಲ್ಲವೆಂದು ತಿಳಿಸಿದ್ದು ಮಾರ್ಚ್ 2020ಕ್ಕೆ ಸುಮಾರು 5513 ಫಲಾನುಭವಿಗಳಿಗೆ ಪರಿಹಾರವನ್ನು ಪಾವತಿಸಿಲ್ಲವೆಂದು ತಿಳಿಸಿರುತ್ತದೆ. ಅದೇ ರೀತಿ ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ಯೋಜನೆಯಲ್ಲಿ ಸುಮಾರು 15,510 ಫಲಾನುಭವಿಗಳಿಗೆ ಪರಿಹಾರ ಮೊತ್ತವನ್ನು ಪಾವತಿ ಮಾಡಿಲ್ಲವೆಂದು ತಿಳಿಸಿರುತ್ತದೆ. ಅಲ್ಲದೆ ರಾಜ್ಯ ಸರ್ಕಾರ ಈ ಯೋಜನೆಯಲ್ಲಿ ಸಮರ್ಪಕವಾಗಿ ನಿಯಂತ್ರಣವನ್ನು ಹೊಂದಿರುವುದಿಲ್ಲ ಎಂದು ತಿಳಿಸಿರುತ್ತದೆ. ಈ ಯೋಜನೆಯಲ್ಲಿ 13,132 ಫಲಾನುಭವಿಗಳಿಗೆ ಡಿಬಿಟಿ ಯೋಜನೆಯ ಬದಲು ಸರ್ಕಾರದ ಖಜಾನೆಗೆ ಹಣ ಪಾವತಿಸಲಾಗಿದೆ ಎಂದು ತಿಳಿಸಿರುತ್ತದೆ.

3. ಲೆಕ್ಕ ಪತ್ರದ ವರದಿಯ ದತ್ತಾಂಶದಲ್ಲಿ ಅಸಮಂಜತೆಗಳು ಇದ್ದು, ದಾಖಲೆಗಳ ಹೊಂದಾಣಿಕೆ ಇರುವುದಿಲ್ಲ ಎಂದು ತನ್ನ ಆಕ್ಷೇಪಣೆಯನ್ನು ದಾಖಲು ಮಾಡಿರುತ್ತದೆ. ಭಾರತ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ರಾಜ್ಯದ ಫಲಾನುಭವಿಗಳಿಗೆ ಎರಡು ಕಂತುಗಳಲ್ಲಿ ರಾಜ್ಯದ ನಿಧಿಯ ಅಡಿಯಲ್ಲಿ 4000 ರೂಪಾಯಿಗಳನ್ನು ಪಾವತಿ ಮಾಡಬೇಕಾಗಿತ್ತು. ಆದರೆ ಸುಮಾರು 1,62,370 ಮತ್ತು 67,379 (ಒಟ್ಟು 2,29,749) ಫಲಾನುಭವಿಗಳಿಗೆ ಆಧಾರ್ ಮತ್ತು ಬ್ಯಾಂಕು ಖಾತೆ ಹೊಂದಾಣಿಕೆ ಆಗಿಲ್ಲವೆಂದು ಹಣ ಪಾವತಿ ಮಾಡಿರುವುದಿಲ್ಲ (2019-20 ನೇ ಸಾಲಿನಲ್ಲಿ). ಅದೇ ರೀತಿ 2020-21ನೇ ಸಾಲಿನಲ್ಲಿ 1,51,912 ಮತ್ತು 78,288 ( ಒಟ್ಟು 2,30,200 ) ಫಲಾನುಭವಿಗಳಿಗೆ ಪಾವತಿಗಳನ್ನು ಮಾಡಿರುವುದಿಲ್ಲ. ಎರಡು ವರ್ಷಗಳಲ್ಲಿ ಸುಮಾರು 69 ಕೋಟಿ ರೂಪಾಯಿಗಳನ್ನು ಪಾವತಿ ಮಾಡದೇ ವಂಚಿಸಿರುತ್ತಾರೆ.
4. ಕರ್ನಾಟಕ ರಾಜ್ಯ ಸರ್ಕಾರವು ಒಂದು ಕಡೆ ನೇರ ಹಣ ವರ್ಗಾವಣೆ ಮುಖಾಂತರ ವಿವಿಧ ಇಲಾಖೆಯ ಫಲಾನುಭವಿಗಳಿಗೆ ನೇರ ಹಣ ಪಾವತಿ ಮಾಡುತ್ತಿರುವುದಾಗಿ ಅಂಕಿ ಅಂಶಗಳನ್ನು ನೀಡುವುದರ ಮೂಲಕ ಹೇಳಿಕೆ ನೀಡುತ್ತದೆ. ಆದರೆ ಲೆಕ್ಕ ಪರಿಶೋಧನಾ ಇಲಾಖೆಯು ಕರ್ನಾಟಕ ರಾಜ್ಯ ಸರ್ಕಾರವು ಫಲಾನುಭವಿಗಳಿಗೆ ನೇರ ಹಣ ವರ್ಗಾವಣೆ ಮಾಡುವ ವಿಧಾನದಲ್ಲಿ ವೈಫಲ್ಯವನ್ನು ಕಂಡಿದ್ದು ರಾಜ್ಯದ ರೈತರು, ಮಹಿಳೆಯರು ಹಾಗೂ ದಲಿತ ವರ್ಗದವರಿಗೆ ಡಿಬಿಟಿ ಯೋಜನೆಯ ಪ್ರಯೋಜನಗಳು ದೊರೆತಿರುವುದಿಲ್ಲವೆಂದು ತನ್ನ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಿರುತ್ತದೆ. ಕರ್ನಾಟಕ ರಾಜ್ಯದ ಬಿಜೆಪಿ ಸರ್ಕಾರವು ಸುಳ್ಳು ಅಂಕಿ ಅಂಶಗಳ ಮೂಲಕ ರಾಜ್ಯದ ಜನರನ್ನು ದಾರಿತಪ್ಪಿಸುವುದು ಬೇಡ. ಮಾನ್ಯ ಮುಖ್ಯಮಂತ್ರಿಗಳು ನೇರ ಹಣ ವರ್ಗಾವಣೆಯಲ್ಲಿ ಆಗಿರುವ ಲೋಪವನ್ನು ಒಪ್ಪಿಕೊಂಡು ಫಲಾನುಭವಿಗಳ ಖಾತೆಗಳಿಗೆ ಕೂಡಲೇ ಹಣ ಪಾವತಿ ಮಾಡಬೇಕೆಂದು ಪ್ರದೇಶ ಕಾಂಗ್ರೆಸ್ ಸಮಿತಿಯು ಒತ್ತಾಯಿಸುತ್ತದೆ.






