ಬೆಂಗಳೂರು : ತೀವ್ರ ಕುತೂಹಲ ಕೆರಳಿಸಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಮತಎಣಿಕೆಗೆ ಸಂಬಂಧಿಸಿದಂತೆ ನಿನ್ನೇ ರಾತ್ರಿಯಿಡೀ ಹೈಡ್ರಾಮಾ ನಡೆದಿದೆ. ಈ ಮೂಲಕ ಕಾಂಗ್ರೆಸ್ ಶಾಸಕರ ವಶದಲ್ಲಿದ್ದ ಶೃಂಗೇರಿಯಲ್ಲಿ ಮತಎಣಿಕೆಯು ಮತ್ತೊಂದು ಮಹತ್ವದ ತಿರುವು ಪಡೆದಿದೆ. ಹೈಕೋರ್ಟ್ ಆದೇಶದಂತೆ ನಡೆದ ಅಂಚೆ ಮತಗಳ (Postal Ballots) ಮರು ಎಣಿಕೆಯಲ್ಲಿ ಗೆಲುವಾಗಿದೆ ಎಂದು ಘೋಷಿಸಲಾಗಿದ್ದ ಹಾಲಿ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡರಿಗೆ ಹಿನ್ನಡೆಯಾಗಿದೆ.

ನಿನ್ನೆ ನಡೆದ ಅಂಚೆ ಮತಗಳ ಎಣಿಕೆಯಲ್ಲಿ ರಾಜೇಗೌಡ ಗೆಲುವು ಸಾಧಿಸಿದ್ದರು ಎನ್ನಲಾಗಿತ್ತು. ನಂತರ ನಡೆದ ಬೆಳವಣಿಗೆಯಲ್ಲಿ ಗೊಂದಲ ಉಂಟಾಗಿದ್ದ ಕಾರಣ ಬೆಳಿಗ್ಗೆ 7 ಗಂಟೆಗೆ ಆರಂಭವಾಗಿದ್ದ ಮತ ಎಣಿಕೆ ಕಾರ್ಯವು ತಡರಾತ್ರಿಯವರೆಗೆ ನಡೆದಿದೆ. ಇದರಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿರುವ ಡಿ.ಎನ್. ಜೀವರಾಜ್ಗೆ ಮುನ್ನಡೆಯಾಗಿದೆ. ಆದರೆ ಇದಾದ ಬಳಿಕ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಆರೋಪ – ಪ್ರತ್ಯಾರೋಪಗಳು ಜೋರಾಗಿಯೇ ನಡೆಯುತ್ತಿವೆ.
ಇದನ್ನೂ ಓದಿ : ಅಸಾಮಾನ್ಯ ಬಿಸಿಲು–ಅನಿಲ ಸಂಕಷ್ಟ: ಏಪ್ರಿಲ್ನಲ್ಲಿ ರಾಜ್ಯದ ವಿದ್ಯುತ್ ಬಳಕೆ ಭಾರೀ ಏರಿಕೆ
ಇನ್ನೂ ಅಂಚೆ ಮತಗಳಲ್ಲಿ ಮುನ್ನಡೆ ಸಾಧಿಸಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಜೀವರಾಜ್, ಆರಂಭದಿಂದಲೂ ಸ್ಟ್ರಾಂಗ್ ರೂಂನಿಂದ ಹಿಡಿದು ಗೊಂದಲ ಶುರುವಾಗಿದ್ದು, ಇವಿಎಂಗಳನ್ನು ಇರಿಸಿರುವ ಕೋಣೆಯಲ್ಲಿ ಅನಗತ್ಯ ಸಮಸ್ಯೆಗಳು ಸೃಷ್ಟಿಯಾಗಿವೆ. ಬೇಡದ ಸಮಸ್ಯೆಗಳು ನಿರ್ಮಾಣವಾಗುತ್ತಿವೆ. ಒಂಬತ್ತು ಗಂಟೆಗೆ ಎಲ್ಲಾ 22 ಟ್ರಂಕ್ಗಳನ್ನು ತೆರೆದು ಬ್ಯಾಲೆಟ್ಗಳನ್ನು ಎಣಿಕೆ ಮಾಡಲಾಗಿದೆ. ಅದರಲ್ಲಿ ಅಮಾನ್ಯ ಎಂದು ಪರಿಗಣಿಸಲಾಗಿದ್ದ ಮತಗಳಲ್ಲಿ ಡಿಕ್ಲರೇಶನ್ ಕೊರತೆಯಿಂದ ಕೆಲವು ಮತಗಳನ್ನು ಕೈಬಿಡಲಾಗಿದೆ ಎಂದು ಹೇಳಿದ್ದಾರೆ.
ಮಾನ್ಯತೆ ಪಡೆದಿರುವ ಮತಗಳು ಹಾಗೂ ತಮ್ಮ ಎದುರಾಳಿ ಅಭ್ಯರ್ಥಿಯ ಉರ್ಜಿತ ಮತಗಳನ್ನು ಲೆಕ್ಕ ಹಾಕಿದಾಗ, ಪ್ರಸ್ತುತ ಪರಿಸ್ಥಿತಿಯಲ್ಲಿ ನಮಗೆ ಬಹುಮತ ಬರುತ್ತಿದೆ. ಈ ಅಂಕಿಅಂಶಗಳನ್ನು ಚುನಾವಣಾ ಆಯೋಗಕ್ಕೆ ಕಳುಹಿಸಲಾಗುವುದು ಮತ್ತು ಆಯೋಗದ ನಿರ್ಧಾರಕ್ಕಾಗಿ ಕಾಯುತ್ತಿದ್ದೇನೆ. ಈ ವಿಚಾರವಾಗಿ ನಾನು ಕಳೆದ ಮೂರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇನೆ. ಆದರೆ ಅದಕ್ಕೆ ಈಗ ಜಯ ಸಿಕ್ಕಿದೆ. ಆದರೂ ಸಹ, ಚುನಾವಣಾ ಆಯೋಗ ಇಂದೇ ಫಲಿತಾಂಶ ಘೋಷಿಸುವ ನಿರೀಕ್ಷೆಯಲ್ಲಿದ್ದೇನೆ ಎಂದು ಜೀವರಾಜ್ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.






