ಮೈಸೂರು: ಕೇಂದ್ರ ಕಾರಾಗೃಹದ ಮೇಲೆ ಬುಧವಾರ ಸಂಜೆ ದಿಢೀರ್ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 20 ಗ್ರಾಂ ಗಾಂಜಾ, 8 ಮಾರಕಾಸ್ತ್ರ ಹಾಗೂ 15 ಸಾವಿರ ರೂ. ನಗದನ್ನು ವಶಕ್ಕೆ ಪಡೆದಿದ್ದಾರೆ.
ಅಕ್ರಮ ಚಟುವಟಿಕೆ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ನೇತೃತ್ವದಲ್ಲಿ ಡಿಸಿಪಿಗಳಾದ ಎಂ.ಮುತ್ತುರಾಜು, ಎಸ್.ಜಾಹ್ನವಿ ಸೇರಿದಂತೆ ಎಲ್ಲ ವಿಭಾಗದ ಎಸಿಪಿ, ಇನ್ಸ್ಪೆಕ್ಟರ್, ಸಬ್ಇನ್ಸ್ಪೆಕ್ಟರ್ಗಳು ಕಾರ್ಯಾಚರಣೆ ನಡೆಸಿದರು.
ಕಮಾಂಡೋ ಪಡೆ ಹಾಗೂ ಮಾದಕ ವಸ್ತು ಪತ್ತೆ ಹಚ್ಚುವ ಶ್ವಾನದಳವೂ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು.

ಈ ಕುರಿತು ಗುರುವಾರ ಸುದ್ದಿಗಾರರಿಗೆ ಮಾಹಿತಿ ನೀಡಿ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಅನಿರೀಕ್ಷಿತ ದಾಳಿ ನಡೆಸಿ ತಪಾಸಣೆ ನಡೆಸಿದ್ದೇವೆ. ಗಾಂಜಾ, ನಗದು ಸೇರಿದಂತೆ ಚಮಚದಿಂದ ಮಾಡಿದ 8 ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಲ್ಲಿಂದ ವಸ್ತುಗಳು ಜೈಲಿಗೆ ಸರಬರಾಜಾಗುತ್ತಿತ್ತು ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರಾಗೃಹಕ್ಕೆ ಹೊಂದಿಕೊಂಡಿರುವ ಸ್ಮಶಾನದ ಕಡೆಯಿಂದ ಪೂರೈಕೆಯಾಗುತ್ತಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಜೈಲಿನಲ್ಲಿ ಮಾದಕವಸ್ತು, ಮೊಬೈಲ್’ಗಳು ಸಿಗುವುದು ಗಂಭೀರ ವಿಷಯ. ಮೊಬೈಲ್ ಇದ್ದರೆ ಹೊರಗಿನವರಿಗೆ, ಸಾಕ್ಷ್ಯಗಳಿಗೆ ಬೆದರಿಕೆ ಒಡ್ಡುತ್ತಾರೆ. ಹೀಗಾಗಿ ವಸ್ತುಗಳು ಹೇಗೆ ಬಂದಿವೆ, ಯಾರಾದರೂ ತಂದುಕೊಟ್ಟಿದ್ದಾರಾ ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಗೆ ವರದಿ ನೀಡಲಾಗುವುದು ಎಂದರು.
ಬಿಕ್ಷಾಟನೆ ನೆಪದಲ್ಲಿ ಹಣ ವಸೂಲಿ ಮಾಡುತ್ತಿದ್ದ 30 ಮಂದಿ ವಶಕ್ಕೆ:
ನಗರದ ಪ್ರಮುಖ ವೃತ್ತಗಳು, ಟ್ರಾಫಿಕ್ ಸಿಗ್ನಲ್, ಪ್ರಮುಖ ಸ್ಥಳಗಳಲ್ಲಿ ಭಿಕ್ಷಾಟನೆ ನೆಪದಲ್ಲಿ ಬಲವಂತವಾಗಿ ನಾಗರಿಕರಿಂದ ಹಣ ವಸೂಲಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಕಾರ್ಯಾಚರಣೆ ನಡೆಸಿ 8 ಮಂದಿ ಆರೋಪಿಗಳನ್ನು ಹಾಗೂ 22 ತೃತೀಯ ಲಿಂಗಿ ವ್ಯಕ್ತಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
8 ಮಂದಿಯನ್ನು ಎಚ್ಚರಿಕೆ ನೀಡಿ ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. 22 ಮಂದಿ ತೃತೀಯ ಲಿಂಗಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.











