ರಾಜ್ಯ ರಾಜಕಾರಣದಲ್ಲಿ ಮುಡಾ ಹಗರಣ (Muda scam) ದಿನಕ್ಕೊಂದು ತಿರುವು ಪಡೆದುಕೊಳ್ತಿರುವ ಸಮಯದಲ್ಲಿ ವಿಪಕ್ಷ ನಾಯಕ ಅಶೋಕ್ (R Ashok) ವಿರುದ್ಧ ಜಮೀನು ಹಗರಣ ಆರೋಪ ಕೇಳಿಬಂದಿದೆ. ಕಾಂಗ್ರೆಸ್ ಸಚಿವರಾದ ಪರಮೇಶ್ವರ್, ಕೃಷ್ಣಬೈರೇಗೌಡ, ಹೆಚ್ಕೆ ಪಾಟೀಲ್ ಜಂಟಿ ಮಾಧ್ಯಮಗೋಷ್ಠಿ ನಡೆಸಿ ದಾಖಲೆಗಳ ಸಮೇತ ಆರೋಪ ಮಾಡಿದ್ದಾರೆ.
ಬೆಂಗಳೂರಿನ (Bangalore) ಲೊಟ್ಟೆಗೊಲ್ಲಹಳ್ಳಿಯಲ್ಲಿ ನೂರಾರು ಕೋಟಿ ರೂಪಾಯಿ ಮೌಲ್ಯದ ಜಮೀನು ಹಗರಣ ನಡೆದಿದ್ದು ಅದನ್ನು ದಾಖಲೆ ಸಮೇತ ಹೇಳುತ್ತೇವೆ ಅಂತ ಪರಮೇಶ್ವರ್ ದಾಖಲೆ ಬಿಚ್ಚಿಟ್ಟಿದ್ದಾರೆ. ಸರ್ವೇ ನಂಬರ್ 10/11 ಎಫ್ 1 ಹಾಗೂ ಎಫ್ 2ರಲ್ಲಿರುವ ಜಮೀನು ಹಗರಣ ನಡೆದಿದೆ ಎಂದು ಆರೋಪಿಸಿದ್ದಾರೆ.
ಬಿಡಿಎ (BDA) ಭೂಮಿ ಸ್ವಾಧೀನಪಡಿಸಿಕೊಂಡು ಪುನಃ ಭೂಮಿ ವಾಪಸ್ ನೀಡಿದ ಬಗ್ಗೆ ಮಾತನಾಡಬೇಕು ಅಂತ ಆರ್.ಅಶೋಕ್ ಸೇರಿ ಬಿಜೆಪಿ (Bjp), ನಾಯಕರಿಗೆ ಆಗ್ರಹಿಸಿದ್ದಾರೆ. ಮಾತ್ರವಲ್ಲದೆ ಕೃಷ್ಣಬೈರೇಗೌಡ ಒಂದು ಹೆಜ್ಜೆ ಮುಂದೆ ಹೋಗಿ ಅಶೋಕ್ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಆದ್ರೆ ಈ ಬಗ್ಗೆ ಇಂದು ಬೆಳಿಗ್ಗೆ 9:45ಕ್ಕೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುತ್ತೇನೆ ಅಂತ ಅಶೋಕ್ ಹೇಳಿದ್ದಾರೆ.