ಇಂಡಿಗೊ ವಿಮಾನ ಪ್ರಯಾಣದ ವೇಳೆ ಹವಾ ನಿಯಂತ್ರಣ (ಎಸಿ) ಇಲ್ಲದೆ ತಮಗೆ ಆದ ಕಹಿ ಅನುಭವವನ್ನು ಪಂಜಾಬ್ ಕಾಂಗ್ರೆಸ್ ಶಾಸಕ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಹಂಚಿಕೊಂಡಿದ್ದಾರೆ.
ಈ ಕುರಿತು ಅಮರಿಂದರ್ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದು ತಾವು ಸೇರಿ ಇತರ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ಇಂಡಿಗೊ ವಿಮಾನಯಾನ ಸಂಸ್ಥೆ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ ಕೋರಿದ್ದಾರೆ.
ಅಸಮರ್ಪಕ ನಿರ್ವಹಣೆಗಾಗಿ ಇಂಡಿಗೊ ವಿಮಾನ ಸಂಸ್ಥೆ ವಿರುದ್ಧ ಅಮರಿಂದರ್ ಕಿಡಿಕಾರಿದ್ದಾರೆ. ಇಂಡಿಯಾ ಸಂಸ್ಥೆಯು ತನ್ನಿಂದಾದ ಅನಾನುಕೂಲತೆಗೆ ಕ್ಷಮೆ ಕೋರಿದೆ.
“ಇಂದು ಇಂಡಿಗೊದ 6ಇ7261 ವಿಮಾನದಲ್ಲಿ ಚಂಡೀಗಢದಿಂದ ಜೈಪುರಕ್ಕೆ ಪ್ರಯಾಣ ಮಾಡಿದ್ದೇನೆ. ಇದೊಂದು ಭೀಕರ ಅನುಭವ ಎಂದು ಹೇಳಬಹುದು. ಮೊದಲಿಗೆ ಸುಡುವ ಬಿಸಿಲಿನಲ್ಲಿ 10ರಿಂದ 15 ನಿಮಿಷ ನಿಲ್ಲಿಸಿದರು. ವಿಮಾನದಲ್ಲಿ ಎಸಿ ವ್ಯವಸ್ಥೆ ಸರಿಯಾಗಿ ಕೆಲಸ ಮಾಡದೇ ಇರುವುದರಿಂದ ವಿಮಾನದೊಳಗೆ ಪ್ರಯಾಣಿಕರೆಲ್ಲ ಬೆವೆತು ಹೋದರು. ಇಷ್ಟಾದರೂ ಯಾರು ಪ್ರಯಾಣಕರ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣಲಿಲ್ಲ” ಎಂದು ಟ್ವೀಟ್ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
“ಇಂಡಿಗೊ ವಿಮಾನ ಪ್ರಯಾಣದಲ್ಲಿ ಎಸಿ ಇಲ್ಲದೇ ಪ್ರಯಾಣಿಕರು ಕುಳಿತಲ್ಲಿಯೇ ಬೆವರುತ್ತಿದ್ದರು. ಏನೂ ನಡೆದಿಲ್ಲ ಎಂಬಂತೆ ಗಗನಸಖಿಯರು ಬೆವರನ್ನು ಒರೆಸಿಕೊಳ್ಳುವಂತೆ ಟಿಶ್ಯೂ ಪೇಪರ್ ಹಂಚುತ್ತಿದ್ದರು. ಮಕ್ಕಳು ಮತ್ತು ಮಹಿಳೆಯರು ಇದರಿಂದ ಸಾಕಷ್ಟು ತೊಂದರೆ ಅನುಭವಿಸಿದರು. ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಇರುವುದು ಖಂಡಿತ. ಅದು ಸಮಸ್ಯೆಯೆಂದು ಯಾರಿಗೂ ಅನ್ನಿಸುತ್ತಿಲ್ಲ. ಇಷ್ಟೆಲ್ಲ ಸಮಸ್ಯೆಯಾದರೂ ಸಂಸ್ಥೆಯ ಅಧಿಕಾರಿಗಳು ಪ್ರಯಾಣ ದರ ಕಡಿತಗೊಳಿಸುವುದಾಗಿ ಹೇಳುತ್ತಾರೆ. ದರ ಕಡಿತಗೊಳಿಸಲು ಪ್ರಯಾಣಿಕರು ತಮ್ಮ ಜೀವವನ್ನೇ ಪಣಕ್ಕಿಡಬೇಕಾಯಿತು” ಎಂದು ಅಮರಿಂದರ್ ಕಿಡಿಕಾರಿದ್ದಾರೆ.
ಅಮರಿಂದರ್ ಅವರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಇಂಡಿಗೊ ಸಂಸ್ಥೆಯು ಈ ಬಗ್ಗೆ ಕ್ಷಮೆಯಾಚಿಸಿದೆ. ತಾಪಮಾನದಲ್ಲಿ ಹೆಚ್ಚಳ ಇದ್ದಿದ್ದರಿಂದ ಹವಾಮಾನ ನಿಯಂತ್ರಣ ವ್ಯವಸ್ಥೆಯಲ್ಲಿ ತಾಂತ್ರಿಕ ಸಮಸ್ಯೆಯಿಂದ ಹೀಗೆ ಆಗಿದೆ ಎಂದು ಇಂಡಿಗೊ ಹೇಳಿದೆ.
“ನಮ್ಮ ವಿಮಾನದಲ್ಲಿ ನಿಮಗೆ ಇತ್ತೀಚೆಗೆ ಆದ ತೊಂದರೆಗೆ ನಾವು ಕ್ಷಮೆಯಾಚಿಸುತ್ತೇವೆ. ಪ್ರಯಾಣಿಕರ ಸೌಕರ್ಯದಲ್ಲಿ ತೃಪ್ತಿ ಇರುವಂತೆ ನಾವು ಎಚ್ಚರವಹಿಸುಸುತ್ತೇವೆ. ಚಂಡೀಗಢದಿಂದ ಜೈಪುರಕ್ಕೆ ಪ್ರಯಾಣಿಸುವಾಗ ನಿಮಗೆ ಆದ ಅನಾನುಕೂಲಕ್ಕೆ ನಾವು ವಿಷಾದಿಸುತ್ತೇವೆ” ಎಂದು ಇಂಡಿಗೊ ವಿಮಾನ ಸಂಸ್ಥೆ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ದೇಶದ 508 ರೈಲು ನಿಲ್ದಾಣಗಳ ನವೀಕರಣಕ್ಕೆ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಶಂಕುಸ್ಥಾಪನೆ
“ವಿಮಾನವು ಜೈಪುರದಲ್ಲಿ ಇಳಿದ ನಂತರ ಅದರ ಹವಾಮಾನ ನಿಯಂತ್ರಣ ವ್ಯವಸ್ಥೆಯನ್ನು ಪರಿಶೀಲಿಸಲಾಗಿದೆ. ಸಂಪೂರ್ಣ ತಪಾಸಣೆ ನಂತರ ಅಲ್ಲಿಂದ ವಿಮಾನಗಳನ್ನು ಹಾರಿಸಲಾಗಿದೆ” ಎಂದು ಇಂಡಿಗೊ ಮಾಹಿತಿ ನೀಡಿದೆ.
2018ರಲ್ಲಿಯೂ ಇಂಡಿಗೊ ವಿಮಾಮ ಅಸಮರ್ಪಕ ನಿರ್ವಹಣೆ ಬಗ್ಗೆ ದೂರು ಕೇಳಿಬಂದಿತ್ತು. ಅಸಮರ್ಪಕ ಹವಾ ನಿಯಂತ್ರಣ ವ್ಯವಸ್ಥೆಯಿಂದ ದೆಹಲಿಯಿಂದ ಕೋಲ್ಕತ್ತಾಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಅಗ ಉಸಿರಾಟದ ತೊಂದರೆ ಅನುಭವಿಸಿದ್ದರು.