ಬೆಳಗಾವಿ : ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಶಿಕ್ಷಕನೊಬ್ಬ ಶಾಲೆಗೆ ಚಕ್ಕರ್ ಹೊಡೆದು, ತನ್ನ ಬದಲಿಗೆ ಪಾಠ ಮಾಡಲು ಖಾಸಗಿ ಶಿಕ್ಷಕನೊಬ್ಬನನ್ನು ನೇಮಿಸಿರುವ ಆಘಾತಕಾರಿ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ಕೆಸ್ಕರ್ ದಡ್ಡಿಯಲ್ಲಿ ಬೆಳಕಿಗೆ ಬಂದಿದೆ. ಈ ‘ಕಳ್ಳಾಟ’ವನ್ನು ಬಯಲು ಮಾಡಿರುವ ಗ್ರಾಮಸ್ಥರು, ಸರ್ಕಾರಿ ಹಾಗೂ ಖಾಸಗಿ ಶಿಕ್ಷಕರಿಬ್ಬರನ್ನೂ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಕೋಹಳ್ಳಿ ಗ್ರಾಮದ ಕೇಸ್ಕರದಡ್ಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಅಪ್ಪಾಸಾಹೇಬ್ ತೆಲಸಂಗ್ ಎಂಬುವವರೇ ಈ ಬೇಜವಾಬ್ದಾರಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಕಳೆದ ಹಲವು ದಿನಗಳಿಂದ ಶಾಲೆಗೆ ಗೈರಾಗುತ್ತಿದ್ದರು. ಆದರೆ, ಇವರ ಬದಲಿಗೆ ಬೇರೊಬ್ಬ ಖಾಸಗಿ ವ್ಯಕ್ತಿ ಪ್ರತಿದಿನ ಶಾಲೆಗೆ ಬಂದು ಮಕ್ಕಳಿಗೆ ಪಾಠ ಮಾಡುತ್ತಿದ್ದನು. ಈ ಬಗ್ಗೆ ಅನುಮಾನಗೊಂಡ ಗ್ರಾಮಸ್ಥರು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಶಿಕ್ಷಕನ ನಿಜ ಬಣ್ಣ ಬಯಲಾಗಿದೆ.
ಸರ್ಕಾರಕ್ಕೆ ಪಂಗನಾಮ, ಖಾಸಗಿ ಕೆಲಸಕ್ಕೆ ಹಾಜರ್..!
ಸರ್ಕಾರದಿಂದ ಸಾವಿರಾರು ರೂಪಾಯಿ ಸಂಬಳ ಪಡೆಯುವ ಶಿಕ್ಷಕ ಅಪ್ಪಾಸಾಹೇಬ್, ಸರ್ಕಾರದ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ. ಬಡ ಮಕ್ಕಳು ಕಲಿಯುವ ಸರ್ಕಾರಿ ಶಾಲೆಗೆ ಬೇರೊಬ್ಬನನ್ನು ನೇಮಿಸಿ, ತಾವು ಮಾತ್ರ ತಮ್ಮದೇ ಒಡೆತನದ ಖಾಸಗಿ ಶಾಲೆಯಲ್ಲಿ ಕಾಲ ಕಳೆಯುತ್ತಿದ್ದರು ಎಂದು ಗ್ರಾಮಸ್ಥರು ಗಂಭೀರವಾಗಿ ಆರೋಪಿಸಿದ್ದಾರೆ.
ಶಿಕ್ಷಕನ ಈ ಬೇಜವಾಬ್ದಾರಿತನದಿಂದ ರೊಚ್ಚಿಗೆದ್ದ ಗ್ರಾಮಸ್ಥರು, ಕೂಡಲೇ ಮೂಲ ಸರ್ಕಾರಿ ಶಿಕ್ಷಕನನ್ನು ಶಾಲೆಗೆ ಕರೆಯಿಸಿಕೊಂಡು, ಖಾಸಗಿ ಶಿಕ್ಷಕ (ವ್ಯಕ್ತಿ) ಹಾಗೂ ಸರ್ಕಾರಿ ಶಿಕ್ಷಕರಿಬ್ಬರಿಗೂ ಚಳಿ ಬಿಡಿಸಿದ್ದಾರೆ. “ಬಡ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುವ ಹಕ್ಕು ನಿಮಗ್ಯಾರಿಗೆ ಕೊಟ್ಟಿದ್ದು?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಮುಸ್ಲಿಂ ಓಲೈಕೆ ಬಜೆಟ್ ಎಂದಿದ್ದ ತೇಜಸ್ವಿ ಸೂರ್ಯಗೆ ದಾಖಲೆ ಸಮೇತ ಅಮೀನ್ ಮಟ್ಟು ತಿರುಗೇಟು..!
ಇನ್ನೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೂಡಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕರ್ತವ್ಯಲೋಪ ಎಸಗಿರುವ ಹಾಗೂ ಬಡವರ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಕಂಟಕವಾಗಿರುವ ಈ ಶಿಕ್ಷಕ ಅಪ್ಪಾಸಾಹೇಬ್ ತೆಲಸಂಗ್ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸ್ಥಳಿಯರಾದ ಮನೋಜ ಸರಗರ ಸೇರಿದಂತೆ ಗ್ರಾಮಸ್ಥರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಶಿಕ್ಷಣ ಅಧಿಕಾರಿಗಳ ಬೇಜವಾಬ್ದಾರಿಯೂ ಕೂಡ ಕಾಣುತ್ತಿದೆ,..
ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ಶಿಕ್ಷಕ ಅಪ್ಪಾಸಾಹೇಬ್ ತೆಲಸಂಗ ಕರ್ತವ್ಯ ಲೋಪದ ಬಗ್ಗೆ ನನ್ನ ಗಮನಕ್ಕೆ ಬಂದಿದೆ, ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವರದಿ ನೀಡುವಂತೆ ಕೇಳಿದ್ದೇನೆ, ಇಲ್ಲಿ ಸ್ಥಳಿಯ ಶಿಕ್ಷಣ ಅಧಿಕಾರಿಗಳ ಬೇಜವಾಬ್ದಾರಿಯೂ ಕೂಡ ಕಾಣುತ್ತಿದೆ, ಈ ವಿಚಾರವನ್ನು ನಾನು ಗಂಭೀರವಾಗಿ ತೆಗೆದುಕೊಂಡಿದ್ದೇನೆ, ನಮ್ಮ ಮೇಲಾಧಿಕಾರಿಗಳಿಗೆ ಈ ಕುರಿತು ವರದಿಯನ್ನು ಸಲ್ಲಿಸುತ್ತೇನೆ ಎಂದು ಪ್ರತಿಧ್ವನಿ ನ್ಯೂಸ್ಗೆ ಭರವಸೆ ನೀಡಿದ್ದಾರೆ.
– ಸೀತಾರಮು, ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಚಿಕ್ಕೋಡಿ
ಒಂದನೇ ತರಗತಿಯಿಂದ 5ನೇ ತರಗತಿಯವರೆಗೆ ಇರುವ ಶಾಲೆಯಲ್ಲಿ 45 ಮಕ್ಕಳಿದ್ದು, ಗಡಿಭಾಗದ ಗ್ರಾಮವಾಗಿರುವ ಕಾರಣ ಮರಾಠಿ ಪ್ರಭಾವದ ಜನರಿದ್ದಾರೆ. ಇಲ್ಲಿ ಕನ್ನಡದ ಕಂಪನ್ನು ಹರಬೇಕಿದ್ದ ಶಿಕ್ಷಕ ತನ್ನ ಜವಾಬ್ದಾರಿಯನ್ನು ಮರೆತು ವಿದ್ಯಾರ್ಥಿಗಳಿಗೆ ಅನ್ಯಾಯವೆಸಗಿದ್ದಾರೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.
ಜನರ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡಿದ್ದ ಶಿಕ್ಷಕ..
ಶಿಕ್ಷಕ ಅಪ್ಪಾಸಾಹೇಬ್, ತಮ್ಮದೇ ಆದ ಸ್ವಂತ ಖಾಸಗಿ ಶಾಲೆಯಲ್ಲೇ ಇರುತ್ತಿದ್ದರು ಎಂಬ ವಿಚಾರದಲ್ಲಿ ಅಲ್ಲಿನ ಗ್ರಾಮಸ್ಥರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೃಷಿಕರು, ಕೂಲಿ ಕಾರರ ಮಕ್ಕಳೇ ಹೆಚ್ಚಾಗಿ ಗಡಿಭಾಗವಾಗಿರುವ ಈ ಗ್ರಾಮದ ಸರ್ಕಾರಿ ಶಾಲೆಗೆ ಆಗಮಿಸುತ್ತಾರೆ.
ಪೋಷಕರು ತಮ್ಮ ದಿನ ನಿತ್ಯದ ಕಾರ್ಯಗಳಲ್ಲಿ ತೊಡಗಿಕೊಂಡು, ಶಾಲೆಯಲ್ಲಿ ಮಕ್ಕಳಿಕೆ ಒಳ್ಳೆಯ ಶಿಕ್ಷಣ ದೊರೆಯುತ್ತಿದೆ ಎಂದು ಭಾವಿಸಿದ್ದರು. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಈ ಶಿಕ್ಷಕ ಸರ್ಕಾರಿ ಶಾಲೆಗೆ ಚಕ್ಕರ್, ಖಾಸಗಿ ಶಾಲೆಗೆ ಹಾಜರ್ ಎಂಬಂತೆ ವರ್ತಿಸುತ್ತಿದ್ದರು ಎಂಬ ಆರೋಪಗಳು ವ್ಯಕ್ತವಾಗುತ್ತಿವೆ.
ಸರ್ಕಾರಿ ಸಂಬಳ ಪಡೆಯುವ ಕ್ಷೇತ್ರ ಶಿಕ್ಷಣಾಧಿಕಾರಿ ಏನ್ಮಾಡ್ತಿದ್ದಾರೆ..?
ಮುಖ್ಯವಾಗಿ ಚಿಕ್ಕೋಡಿ ಉಪನಿರ್ದೇಶಕರೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಬಗ್ಗೆ ಅಸಮಾಧಾನ ಹೊರಹಾಕಿರುವುದು ಆತಂಕಕಾರಿ ವಿಚಾರ. ಶೈಕ್ಷಣಿಕ ಜಿಲ್ಲೆಯ ಉನ್ನತ ಮಟ್ಟದ ಅಧಿಕಾರಿಗಳೇ ಹೀಗೆ ಕೆಳ ಹಂತದ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಮಾತನಾಡುವ ಹಂತಕ್ಕೆ ತಲುಪಿದರೆ ಅಥಣಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಏನು ಮಾಡುತ್ತಿದ್ದಾರೆ..? ಈ ರೀತಿಯ ಪ್ರಕರಣಗಳು ಅವರ ಗಮನಕ್ಕೆ ಬಂದಿಲ್ಲವೇ? ಅಥವಾ ಎಲ್ಲಾ ಗೊತ್ತಿದ್ದೂ ಕೂಡ ಸೈಲೆಂಟ್ ಆಗಿದ್ದಾರಾ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಮೂಡುತ್ತಿದೆ.
ಇನ್ನಾದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಈ ರೀತಿಯ ಬೇಜವಾಬ್ದಾರಿಯಾಗಿ ನಡೆದುಕೊಳ್ಳುವ ಶಿಕ್ಷಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ.







