
ಅಲ್ಪಸಂಖ್ಯಾತರ ಓಲೈಕೆ ಎಂದು ಯಾಕ್ರೀ ಎದೆ ಬಡ್ಕೊಳ್ತೀರಾ? ಇಂತಹವರೆಲ್ಲ ನಮ್ಮ ಸಂಸದರು!
ಸರಿಯಾಗಿ ಓದಿಕೊಳ್ಳಿ, ರಾಜ್ಯದಲ್ಲಿ ಮುಸ್ಲಿಮ್, ಕ್ರಿಶ್ಚಿಯನ್, ಜೈನರು, ಬೌದ್ದರು ಮತ್ತು ಸಿಖ್ಖರು ಸೇರಿದಂತೆ ಅಲ್ಪಸಂಖ್ಯಾತರ ಒಟ್ಟು ಜನಸಂಖ್ಯೆ 15.79% ಎಂದು ತಿವಿದಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದ ಕರ್ನಾಟಕ ರಾಜ್ಯ ಬಜೆಟ್ ಗಾತ್ರ- ರೂ.4.48 ಲಕ್ಷ ಕೋಟಿ, ಈ ಲೆಕ್ಕದಲ್ಲಿ ಶೇಕಡಾ 15.79ರಷ್ಟಿರುವ ಅಲ್ಪಸಂಖ್ಯಾತ ಸಮುದಾಯಕ್ಕೆ ರೂ. 25,000 ಕೋಟಿಯಷ್ಟಾದರೂ ಕೊಡಬೇಕಾಗುತ್ತದೆ. ಈ ವರ್ಷದ ಬಜೆಟ್ ನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಮೀಸಲಿಟ್ಟಿರುವ ಹಣ 4,761 ಕೋಟಿ ರೂಪಾಯಿ, ಕಳೆದ ವರ್ಷ ನೀಡಿದ್ದು ರೂ.4384 ಕೋಟಿ ಎಂದು ಅಂಕಿ ಆಂಶ ಬಹಿರಂಗ ಪಡಿಸಿದ್ದಾರೆ.
ಸಾಮಾಜಿಕ ನ್ಯಾಯ ಎಂದರೆ ಒಬ್ಬರಿಂದ ಕಿತ್ತುಕೊಂಡು ಮತ್ತೊಬ್ಬರಿಗೆ ಹಂಚುವುದಲ್ಲ, ಇದ್ದುದನ್ನು ಸಮನಾಗಿ ಹಂಚಿಕೊಂಡು ತಿನ್ನುವುದು. ಉದಾಹರಣೆಗೆ ರಾಜ್ಯದ ಜನಸಂಖ್ಯೆಯಲ್ಲಿ ಶೇಕಡಾ 24ರಷ್ಟಿರುವ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಬಜೆಟ್ನಲ್ಲಿ ಎಸ್ಸಿಎಸ್ಪಿ/ಟಿಎಸ್ಪಿ ಕಾಯ್ದೆಯಡಿ ನೀಡಲಾಗಿರುವ ಹಣ- ರೂ.44,632 ಕೋಟಿ ಎಂದು ತಿಳಿಸಿದ್ದಾರೆ.

ಮಾನ್ಯ ಮುಖ್ಯಮಂತ್ರಿಗಳೇ, ಇದು ‘ಸರ್ವರಿಗೂ ಸಮಪಾಲು’ ಅಲ್ಲ, ಕೇವಲ ‘ಅಲ್ಪಸಂಖ್ಯಾತರಿಗೆ ಮಾತ್ರ ಬೊಕ್ಕಸದ ಪಾಲು’! ಅಲ್ಪಸಂಖ್ಯಾತರಿಗೆ 1000 ಕೋಟಿ ವೆಚ್ಚದಲ್ಲಿ ಶಾಲಾ ಉನ್ನತೀಕರಣ, ಆದರೆ ಹಿಂದೂಗಳ ದೇವಸ್ಥಾನದ ದುರಸ್ತಿಗೆ ಹಣವಿಲ್ಲವೇ? ಅಲ್ಪಸಂಖ್ಯಾತ ನಿರುದ್ಯೋಗಿಗಳಿಗೆ ₹3 ಲಕ್ಷ ಸಹಾಯಧನ, ಆದ್ರೆ ಸಾಮಾನ್ಯ ವರ್ಗದ ನಿರುದ್ಯೋಗಿಗಳಿಗೆ ಬರಿ ಭರವಸೆಯ ಹುತ್ತವೇ? ಎಂದು ಸಂಸದ ತೇಜಸ್ವಿ ಸೂರ್ಯ ಪ್ರಶ್ನಿಸಿದ್ದರು.

ಹುಬ್ಬಳ್ಳಿ-ಕಲಬುರಗಿಯಲ್ಲಿ ಹಜ್ ಭವನ ಕಟ್ಟುವ ನಿಮಗೆ, ಹಿಂದೂ ಧಾರ್ಮಿಕ ಕೇಂದ್ರಗಳ ಮೂಲಸೌಕರ್ಯ ನೆನಪಾಗುವುದೇ ಇಲ್ಲ! ಅಲ್ಪಸಂಖ್ಯಾತರಿಗೆ ಮೃಷ್ಟಾನ್ನ ಭೋಜನ, ಬಹುಸಂಖ್ಯಾತ ಹಿಂದೂಗಳಿಗೆ ಬಜೆಟ್ನಲ್ಲಿ ಶೂನ್ಯ ದರ್ಶನ! ಮಾನ್ಯ ಸಿದ್ದರಾಮಯ್ಯನವರೇ, ನೀವು ಕೇವಲ ಒಂದು ಸಮುದಾಯದ ಮುಖ್ಯಮಂತ್ರಿಯೇ? ಬೊಕ್ಕಸದ ಬಹುಪಾಲನ್ನು ಒಂದು ನಿರ್ದಿಷ್ಟ ಸಮುದಾಯಕ್ಕೆ ಬರೆದುಕೊಡುತ್ತಿರುವ ಸಾಲ ರಾಮಯ್ಯ ಅವರೇ, ನಿಮ್ಮ ಈ ಅತಿರೇಕದ ಓಲೈಕೆ ರಾಜಕಾರಣಕ್ಕೆ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ತೇಜಸ್ವಿ ಸೂರ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ರಾಜ್ಯ ಸರ್ಕಾರದ ಬಜೆಟ್ ಎಂದು ಟೀಕಿಸಿದ್ದರು.






