
ʼಒಆರ್ಆರ್ʼ (ORR) ಕಾರಿಡಾರ್ನ ಮೂಲಸೌಕರ್ಯ ಸಮಸ್ಯೆಗಳನ್ನು ವಿಳಂಬ ಮಾಡದೆ ಪರಿಹರಿಸಲು ಸರ್ಕಾರ ಬದ್ಧ: ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾನ.
ನಗರದ ಹೊರ ವರ್ತುಲ ರಸ್ತೆ ಕಾರಿಡಾರ್ನಲ್ಲಿ ಉದ್ಭವಿಸಿರುವ ಮೂಲಸೌಕರ್ಯಗಳ ಕೊರತೆಗಳಿಗೆ ಕಾಲಮಿತಿಯ ಪರಿಹಾರ ಒದಗಿಸುವುದಾಗಿ ರಾಜ್ಯ ಸರ್ಕಾರವು ಪ್ರಮುಖ ಕಂಪನಿಗಳ ಪ್ರತಿನಿಧಿಗಳಿಗೆ ಇಂದು ಇಲ್ಲಿ ಭರವಸೆ ನೀಡಿದೆ. ಬೆಂಗಳೂರಿನ ಹೊರ ವರ್ತುಲ ರಸ್ತೆ ಕಂಪನಿಗಳ ಸಂಘವು (ORRCO) ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಈ ವಾಗ್ದಾನ ನೀಡಲಾಗಿದೆ.

ಐಟಿ/ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಶ್ರೀ ಪ್ರಿಯಾಂಕ್ ಎಂ ಖರ್ಗೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಮುಖ್ಯ ಆಯುಕ್ತ ಶ್ರೀ ಮಹೇಶ್ವರ ರಾವ್ ಸೇರಿದಂತೆ ಹಿರಿಯ ಸರ್ಕಾರಿ ಅಧಿಕಾರಿಗಳ ಜೊತೆಗೆ ನಡೆದ ಸಭೆಯಲ್ಲಿ ಕಾರ್ಪೋರೇಟ್ ಸಂಸ್ಥೆಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಾಯಿತು. ನಗರದ ಪ್ರಮುಖ ತಂತ್ರಜ್ಞಾನ ಮತ್ತು ವಾಣಿಜ್ಯ ಕಾರಿಡಾರ್ ಎದುರಿಸುತ್ತಿರುವ ಗಂಭೀರ ಸ್ವರೂಪದ ಮೂಲಸೌಕರ್ಯ, ನಾಗರಿಕ ಸೌಲಭ್ಯ ಮತ್ತು ಸಂಚಾರ ದಟ್ಟಣೆ ಸವಾಲುಗಳನ್ನು ಪರಿಹರಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.

ಸಂವಾದದಲ್ಲಿ ಮಾತನಾಡಿದ ಉದ್ಯಮದ ಪ್ರತಿನಿಧಿಗಳು ಮೆಟ್ರೊ ನಿಲ್ದಾಣಗಳಿಗೆ ಕೊನೆಯ ಹಂತದ ಸಂಪರ್ಕ, ಸರ್ವೀಸ್ ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳ ದುಃಸ್ಥಿತಿ, ಪ್ರಮುಖ ಜಂಕ್ಷನ್ಗಳಲ್ಲಿನ ಸಂಚಾರ ದಟ್ಟಣೆ, ಹೆಚ್ಚಿನ ಜನಸಾಂದ್ರತೆಯ ಪ್ರದೇಶಗಳಲ್ಲಿ ಕಸ ಸಂಗ್ರಹ, ನಿರಂತರ ನಿರ್ಮಾಣ ಚಟುವಟಿಕೆಗಳಿಂದ ಉದ್ಭವಿಸಿರುವ ದೂರಸಂಪರ್ಕ ಅಡಚಣೆಗಳು ಮತ್ತು ವಿವಿಧ ಸಮೂಹ ಸಾರಿಗೆ ಸೌಲಭ್ಯಗಳ ಮಧ್ಯೆ ಸಮನ್ವಯತೆಯಂತಹ ಪ್ರಮುಖ ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ಸಭೆ ಉದ್ದೇಶಿಸಿ ಮಾತನಾಡಿದ ಸಚಿವ ಶ್ರೀ ಪ್ರಿಯಾಂಕ್ ಎಂ. ಖರ್ಗೆ ಅವರು ʼಒಆರ್ಆರ್ ಕಾರಿಡಾರ್ ರಾಜ್ಯದ ಜಾಗತಿಕ ತಂತ್ರಜ್ಞಾನ ಆರ್ಥಿಕತೆಯ ಕೇಂದ್ರಬಿಂದುವಾಗಿದೆ. ಸಮಸ್ಯೆಗಳನ್ನು ಸರಿಪಡಿಸಲು ಕಾಲಮಿತಿ ಹೊಂದಿದ ಹಾಗೂ ಹೆಚ್ಚಿನ ಪರಿಣಾಮ ಬೀರುವ ಕ್ರಮಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಲು ರಾಜ್ಯ ಸರ್ಕಾರ ಬದ್ಧರಾಗಿದೆʼ ಎಂದು ಹೇಳಿದರು.

ಈ ಪ್ರದೇಶದ ಸಂಚಾರ ಮತ್ತು ಮೂಲಸೌಕರ್ಯ ಅಡಚಣೆಗಳಿಗೆ ದೀರ್ಘಕಾಲೀನ ಪರಿಹಾರಗಳನ್ನು ಕಾಲಮಿತಿ ಒಳಗೆ ಒದಗಿಸುವ ಸಲುವಾಗಿ ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿರುವುದನ್ನು ಸಭೆಯ ಗಮನಕ್ಕೆ ತರಲಾಯಿತು.
ʼಗ್ರೇಟರ್ ಬೆಂಗಳೂರು ಪ್ರಾಧಿಕಾರದ ರಚನೆಯಿಂದ ಈಗಾಗಲೇ ವಿವಿಧ ಇಲಾಖೆಗಳಲ್ಲಿ ಸಮನ್ವಯತೆ ಹೆಚ್ಚಿದೆ. ಮೂಲಸೌಕರ್ಯ ಯೋಜನೆಗಳನ್ನು ಕಾರ್ಯಗತಗೊಳಿಸುವುದರ ವೇಗವೂ ಹೆಚ್ಚಳಗೊಂಡಿದೆʼ ಎಂದು ʼಜಿಬಿಎʼ ಮುಖ್ಯ ಆಯುಕ್ತ ಶ್ರೀ ಮಹೇಶ್ವರ ರಾವ್ ಹೇಳಿದರು. ʼವಿಶೇಷವಾಗಿ ಕಾಡುಬೀಸನಹಳ್ಳಿ, ಬೆಳ್ಳಂದೂರು ಮತ್ತು ಮಾರತ್ತಹಳ್ಳಿಯಂತಹ ಹೆಚ್ಚಿನ ದಟ್ಟಣೆಯ ಸ್ಥಳಗಳಲ್ಲಿ ಯೋಜನೆಗಳ ಸುಗಮ ಅನುಷ್ಠಾನ ಖಚಿತಪಡಿಸಿಕೊಳ್ಳಲು ಬಿಬಿಎಂಪಿ, ಬಿಎಂಆರ್ಸಿಎಲ್, ಸಂಚಾರ ಪೊಲೀಸರು ಮತ್ತು ಇತರ ಏಜೆನ್ಸಿಗಳ ನಡುವೆ ಸಮನ್ವಯ ಸಾಧಿಸಲಾಗುತ್ತಿದೆʼ ಎಂದರು.

ಐಟಿ-ಬಿಟಿ ಇಲಾಖೆಯ ಕಾರ್ಯದರ್ಶಿ ಡಾ. ಮಂಜುಳಾ ಎನ್, ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ರವಿಶಂಕರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

