ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಆಗಸ್ಟ್ ತಿಂಗಳಲ್ಲಿ 134 ಸಭೆ, ಸಮಾರಂಭ, ಸಮಾವೇಶಗಳಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಹಲವು ಮಹತ್ವದ ವಿಷಯಗಳು ಚರ್ಚೆಯಾಗಿವೆ ಎಂದು ವರದಿಯಾಗಿದೆ.
ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರದ ತಮ್ಮ ಮೂರನೆಯ ತಿಂಗಳ ಕಾರ್ಯ ವರದಿ (ವರ್ಕ್ ರಿಪೋರ್ಟ್) ಬಿಡುಗಡೆ ಮಾಡಿರುವ ಸಚಿವರು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವಾಲಯದ ಕಚೇರಿಯನ್ನು ಜನಸಾಮಾನ್ಯರಿಗೆ ಮತ್ತಷ್ಟು ಹತ್ತಿರಗೊಳಿಸಲು ಕ್ಯೂ.ಆರ್ ಕೋಡ್ ಆಧಾರಿತ ʼಕಲಬುರಗಿ ಕನೆಕ್ಟ್ʼ ಸೇರಿದಂತೆ ಹಲವಾರು ಮಹತ್ವಯುತ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಕಲಬುರಗಿಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ್ದಾರೆ.
ಸರ್ಕಾರದ ಮಟ್ಟದಲ್ಲಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ವಿವಿಧ ಇಲಾಖೆಯ ಸಚಿವರೊಂದಿಗೆ 13 ಸಭೆಗಳಲ್ಲಿ ಪಾಲ್ಗೊಂಡಿದ್ದ ಸಚಿವರು ಸ್ಥಳೀಯ ಮತ್ತು ವಿದೇಶಿ ಗಣ್ಯರು ಹಾಗೂ ನಿಯೋಗಗಳೊಂದಿಗೆ 33 ಸಭೆಗಳನ್ನು ನಡೆಸಿದ್ದು ಗ್ರಾಮೀಣಾಭಿವೃದ್ಧಿ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದಾರೆ.
ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳೊಂದಿಗೆ 16 ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ 16 ಸೇರಿದಂತೆ ಒಟ್ಟು 33 ಸಭೆಗಳನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ನಡೆಸಿದ್ದಾರೆ. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲಾಡಳಿತಕ್ಕೆ ಸಂಬಂಧಪಟ್ಟಂತೆ 23 ಸಭೆಗಳಲ್ಲಿ ಪಾಲ್ಗೊಂಡ ಸಚಿವರು ಜಿಲ್ಲಾಡಳಿತಕ್ಕೆ ಸೂಕ್ತ ಮಾರ್ಗದರ್ಶನ ನೀಡಿ ಹಲವು ಸಮಸ್ಯೆಗಳನ್ನು ಪರಿಹರಿಸಿದ್ದಾರೆ.
ತಮ್ಮ ಖಾತೆಗಳಿಗೆ ಸಂಬಂಧಿಸಿದ ಹಾಗೂ ಇನ್ನಿತರ 8 ಸಮಾವೇಶಗಳಲ್ಲಿ ಮತ್ತು ಪಕ್ಷದ ಚಟುವಟಿಕೆಗಳ ಕುರಿತಂತೆ ನಡೆದ 6 ಸಭೆಗಳಲ್ಲಿ ಸಚಿವರು ಭಾಗಿಯಾಗಿದ್ದಾರೆ. ಸಚಿವರು 4 ಬಾರಿ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. 15 ಮಾಧ್ಯಮ ಸಂದರ್ಶನ ಹಾಗೂ ಸಂವಾದಗಳಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಪಾಲ್ಗೊಂಡಿದ್ದಾರೆ.
ಕೇಂದ್ರ ಸ್ಥಾನದಲ್ಲಿ ಹಾಗೂ ಕಲಬುರಗಿ ಮತ್ತು ಚಿತ್ತಾಪುರಕ್ಕೆ ಭೇಟಿ ನೀಡಿದ ಸಂದರ್ಭಗಳಲ್ಲಿ ಸ್ಥಳೀಯವಾಗಿ ಸಾರ್ವಜನಿಕರು, ಪಕ್ಷದ ಕಾರ್ಯಕರ್ತರು, ವಿವಿಧ ಸಂಘಟನೆಗಳು ಹಾಗೂ ಸರ್ಕಾರಿ ನೌಕರರಿಂದ ಅಹವಾಲು ಸ್ವೀಕಾರಿಸಿ, ನೇರ ಮಾತುಕತೆಯಲ್ಲಿ ಪಾಲ್ಗೊಂಡಿದ್ದಾರೆ. ಸಾರ್ವಜನಿಕರ ಬಹಳಷ್ಟು ಕುಂದುಕೊರತೆಗಳನ್ನು ಸ್ಥಳದಲ್ಲೇ ಪರಿಹರಿಸಿದ್ದಾರೆ.
2023ರ ಆಗಸ್ಟ್ ತಿಂಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಇಲಾಖಾ ವತಿಯಿಂದ ಕೈಗೊಂಡಿರುವ ಪ್ರಮುಖ ನಿರ್ಧಾರಗಳು
•ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಸಹಭಾಗಿತ್ವದಲ್ಲಿ ಕಕ ಭಾಗದಲ್ಲಿ ಹೆಚ್ಚು “ಅರಿವು ಕೇಂದ್ರ” ಹಾಗೂ ಮಹಿಳಾ ಸಮುದಾಯ ಶೌಚಾಲಯ ಸ್ಥಾಪನೆಗೆ ಕ್ರಮ.
•ಕಲಬುರಗಿ ಜಿಲ್ಲೆಯಲ್ಲಿ ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ QR ಕೋಡ್ ಆಧಾರಿತ “ಜನಸ್ನೇಹಿ” ಅಭಿಪ್ರಾಯ ಸಂಗ್ರಹ ಅಭಿಯಾನ ಜಾರಿ
•ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳ ಗ್ರಂಥಾಲಯಗಳನ್ನು ಸದೃಡಗೊಳಿಸಲು ಗ್ರಂಥಪಾಲಕರ ಸೇವಾ ಸಮಯ ಹೆಚ್ಚಿಸಿ, ರಾಜ್ಯದ ಎಲ್ಲಾ ಗ್ರಂಥಪಾಲಕರಿಗೆ ಕನಿಷ್ಠ ಮೂಲವೇತನ ನಿಗದಿಪಡಿಸಿ ಮಹತ್ವಾಕಾಂಕ್ಷಿ ಆದೇಶ
•ರಾಜ್ಯದಲ್ಲಿ ಎಲ್ಲಾ ನೀರಿನ ಮೂಲ ಪತ್ತೆ ಹಚ್ಚಿ ದಾಖಲಿಸಿಲು ವಾಟರ್ ಆಡಿಟ್ ಸಮಿತಿ ರಚನೆಗೆ ಕ್ರಮ
•ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪಂಚಾಯತಿ ಆಸ್ತಿಗಳನ್ನು ಸೂಕ್ತವಾಗಿ ದಾಖಲಿಸಲು ವಿಶೇಷ ʼಬುಕ್ ಬಿಲ್ಡಿಂಗ್ ಪ್ರಕ್ರಿಯೆʼ ಜಾರಿಗೆ ಕ್ರಮ
•ಗ್ರಾಮೀಣ ಆಡಳಿತದಲ್ಲಿ ಸುಧಾರಣೆ, ದಕ್ಷತೆ ಹಾಗೂ ಪಾರದರ್ಶಕತೆ ತರುವ ನಿಟ್ಟಿನಲ್ಲಿ ʼಪಂಚತಂತ್ರ-2ʼ ಜಾರಿಗೆ ಕ್ರಮ
*ಪಂಚಾಯತಿ ಮಟ್ಟದಲ್ಲಿ ವ್ಯವಸ್ಥಿತ ತೆರಿಗೆ ಸಂಗ್ರಹಣೆಗೆ ವಿಶೇಷ ರೂಪುರೇಷೆ
•ಗ್ರಾಮ ಪಂಚಾಯತಿ ತೆರಿಗೆ ಸಂಗ್ರಹಣೆ ಸುಲಭವಾಗಿಸಲು ವಿಶೇಷ ಶ್ರಮ, ಈ ನಿಟ್ಟಿನಲ್ಲಿ ಈಗಾಗಲೇ “Point of Sales” ಮಷೀನ್ಸ್ ಮೂಲಕವೇ 100 ಕೋಟಿ ರೂ. ತೆರಿಗೆ ಸಂಗ್ರಹಣೆ.
•ಸರ್ಕಾರಿ ಸೇವೆಗಳನ್ನು ಗ್ರಾಮೀಣ ಭಾಗದ ಜನರಿಗೆ ಮತ್ತಷ್ಟು ಹತ್ತಿರಗೊಳಿಸಲು ಬಾಪೂಜಿ ಸೇವಾ ಕೇಂದ್ರಗಳನ್ನ ಸದೃಡಗೊಳಿಸಲು ವಿಶೇಷ ಒತ್ತು
•ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳ ಬಾಪೂಜಿ ಸೇವಾ ಕೇಂದ್ರದಲ್ಲಿ ʼಮೋಜಿಣಿʼ ಸೇವೆಗಳ ಜಾರಿ
•ಬಾಪೂಜಿ ಸೇವಾ ಕೇಂದ್ರಗಳಲ್ಲಿ ಗೃಹಲಕ್ಷ್ಮಿ ಯೋಜನೆಗೆ 30 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಂದ ನೋಂದಣಿ
•ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಕೆ.ಆರ್.ಐ.ಡಿ.ಎಲ್ ಸಂಸ್ಥೆಯು ಟೆಂಡರ್ಗಳಲ್ಲಿ ಭಾಗಿಯಾಗಲು ವಿಶೇಷ ಸಮಿತಿ ರಚನೆ.
•4,000 ಕೋಟಿ ರೂ. ವೆಚ್ಚದಲ್ಲಿ ಮೈಸೂರಿನಲ್ಲಿ ಸೆಮಿಕಂಡಕ್ಟರ್ ತಯಾರಿಕಾ ಘಟಕ ಸ್ಥಾಪನೆಗಾಗಿ ಕೇನ್ಸ್ ಟೆಕ್ನಾಲಜೀಸ್ ಸಂಸ್ಥೆಯೊಂದಿಗೆ ಒಪ್ಪಂದ ಸಹಿ.
•ಕರ್ನಾಟಕ ರಾಜ್ಯವನ್ನು ಜಾಗತಿಕ ಗೇಮಿಂಗ್ ಹಬ್ ಆಗಿ ಪರಿವರ್ತಿಸಿ, ಬೆಳೆಸಲು ವಿಶೇಷ ಕಾರ್ಯಯೋಜನೆಗೆ ಕ್ರಮ